ArticlesLatest

ಇತಿಹಾಸದ ಕಥೆ ಹೇಳುವ ತೊಣ್ಣೂರು ಕೆರೆ.. ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ತಲೆದೂಗದವರಿಲ್ಲ.. ಒಮ್ಮೆ ಬನ್ನಿ…

ನಮ್ಮ ರಾಜ್ಯದಲ್ಲಿ ಸಾವಿರಾರು ಕೆರೆಗಳಿದ್ದು, ಇವು ನಾಡಿನ ಜೀವನಾಡಿಯಾಗಿವೆ. ಕೇವಲ ನೀರನ್ನೊದಗಿಸುವುದಲ್ಲದೆ ಬಹಳಷ್ಟು ಕೆರೆಗಳಿಗೆ ತನ್ನದೇ ಆದ  ಇತಿಹಾಸ ಮತ್ತು ಪೌರಾಣಿಕ ಐಹಿತ್ಯ ಇರುವುದನ್ನು ನಾವು ಕಾಣಬಹುದಾಗಿದೆ. ರಾಜ ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡ ಕೆರೆಗಳು ಇವತ್ತಿಗೂ  ಇದ್ದು ಅವು ರೈತರು ಸೇರಿದಂತೆ ಜನರಿಗೆ ನಿರೋದಗಿಸುತ್ತಾ ಬಂದಿವೆ. ಇಂತಹ ಕೆರೆಗಳು ಪ್ರವಾಸಿ ತಾಣಗಳಾಗಿಯೂ ಗಮನಸೆಳೆಯುತ್ತಿವೆ. ಇಂತಹ ಕೆರೆಗಳ ನಡುವೆ ಇರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಕೆರೆತೊಣ್ಣೂರು ಒಂದಾಗಿದೆ. ಈ ಮುತ್ತಿನ ಕೆರೆಯ ವಿಶೇಷತೆ ಇಲ್ಲಿದೆ.

ಸಾಮಾನ್ಯವಾಗಿ ಇತಿಹಾಸ ಪ್ರಸಿದ್ಧ ಮೇಲುಕೋಟೆಗೆ ಭಕ್ತರು, ಪ್ರವಾಸಿಗರು ಹೀಗೆ ಭೇಟಿ ನೀಡುತ್ತಲೇ ಇರುತ್ತಾರೆ. ಹೀಗೆ ತೆರಳುವವರು ಸಮೀಪದಲ್ಲಿರುವ ಕೆರೆತೊಣ್ಣೂರಿಗೂ ಭೇಟಿ ನೀಡಿ ಬಂದರೆ ಮೈಮನ ಹಗುರವಾಗುವುದರಲ್ಲಿ ಎರಡು ಮಾತಿಲ್ಲ. ಹೆಚ್ಚಿನವರು  ನಗರದ ಜಂಜಾಟದಲ್ಲಿಯೇ ಬದುಕನ್ನು ಕಟ್ಟಿಕೊಂಡಿದ್ದು ಅಂಥವರು  ಒಂದಷ್ಟು ಸಮಯ ಪ್ರಶಾಂತ ಸ್ಥಳದಲ್ಲಿದ್ದು ಬರಲು ಬಯಸುತ್ತಾರೆ. ಇಂಥವರಿಗೆ ಕೆರೆತೊಣ್ಣೂರು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಗೆ ತೆರಳಿದವರು ಇಲ್ಲಿಂದ ಕಂಡು ಬರುವ ಪ್ರಕೃತಿ ರಮಣೀಯ ದೃಶ್ಯಗಳಿಗೆ ಮೈಮರೆಯುವುದಂತು ನಿಜ

ಕೆರೆತೊಣ್ಣೂರು ಪ್ರಕೃತಿ ಪ್ರೇಮಿಗಳಿಗೆ ಮುದನೀಡುವ ತಾಣವಾದರೆ ಭಕ್ತಿಯಿಂದ ಬರುವವರಿಗೆ ಇಷ್ಟಾರ್ಥ ನೆರವೇರಿಸುವ ಪರಮ ಪವಿತ್ರ ತಾಣವಾಗಿದೆ. ಮೇಲ್ನೋಟಕ್ಕೆ  ಈ ತಾಣ  ಆಸ್ತಿಕ, ನಾಸ್ತಿಕ ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ತಾಣವಾಗಿ ಗಮನಸೆಳೆಯುತ್ತಿದೆ. ಹೀಗಾಗಿ  ಸದಾ ಜನರು ಇದ್ದೇ ಇರುತ್ತಾರೆ.  ಕೆರೆತೊಣ್ಣೂರು ಪಾಂಡವಪುರದಿಂದ 9ಕಿಮೀ ದೂರದಲ್ಲಿದ್ದು, ಸ್ವಂತ ವಾಹನ ಇಲ್ಲದವರು ಪಾಂಡವಪುರದಿಂದ ಆಟೋ, ಟೆಂಪೋ, ಬಸ್ಸುಗಳಲ್ಲಿ ತೆರಳಬಹುದಾಗಿದೆ. ಕೆರೆಯದಂಡೆಯಲ್ಲಿ ’ನಿಕುಂಬಿನಿ’  ದೇವಿಯ ದೇವಾಲಯವಿದ್ದು, ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ವಿಶೇಷ ಪೂಜೆಗಳು ನಡೆಯುವುದರಿಂದ ಆ ದಿನಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದನ್ನು ಕಾಣಬಹುದಾಗಿದೆ.

ಇನ್ನು ಕೆರೆತೊಣ್ಣೂರು ಬಗ್ಗೆ ಹೇಳುವುದಾದರೆ, ವಿಶಾಲವಾಗಿ ಹರಡಿರುವ ಸ್ಪಟಿಕದಂತೆ ಹೊಳೆಯುವ ಈ ಕೆರೆಯನ್ನು ಮುತ್ತಿನಕೆರೆ ಎಂದು ಸುಬೇದಾರನ ಪುತ್ರ ನಾಸಿರ್‌ಸಿಂಗ್ ಎಂಬಾತ ಕರೆದಿದ್ದನು. ಈತ 1746ರಲ್ಲಿ ಕೆರೆತೊಣ್ಣೂರಿನಲ್ಲಿ ನೆಲೆಸಿದ್ದಾಗ ಒಮ್ಮೆ ಅಂದಿನ ರಾಜ ಪರಿವಾರಕ್ಕೆ ಸೇರಿದ ಮಹಿಳೆಯೊಬ್ಬರ ಮುತ್ತಿನ ಆಭರಣ ಕೈಜಾರಿ ಈ ಕೆರೆಯೊಳಗೆ ಬಿತ್ತಂತೆ. ಆದರೆ ಅದು ಕೆರೆಯ ತಳ ಸೇರಿದರೂ ತಿಳಿ ನೀರಿನಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದುದರಿಂದ ಈಜುಗಾರರು ನೀರಿನಲ್ಲಿ ಮುಳುಗಿ ಹೊರತೆಗೆದರಂತೆ. ಇದನ್ನು ನೋಡಿದ ನಾಸಿರ್‌ಸಿಂಗ್  ಖುಷಿಯಿಂದ ಮೋತಿ ತಲಾಬ್ (ಮುತ್ತಿನ ಕೆರೆ) ಎಂದು ಕರೆದನು ಎನ್ನುವುದು ಪ್ರಚಲಿತದಲ್ಲಿದೆ.

ಈ ಕೆರೆಯನ್ನು ಎರಡು ಗುಡ್ಡಗಳಿಗೆ ’ಕಟ್ಟೆ’ ಕಟ್ಟಿ ನಿರ್ಮಿಸಲಾಗಿದ್ದು, ಆಳ, ಅಗಲವಿದ್ದು, ಈ ಕೆರೆಯನ್ನು ಯಾವಾಗ ನಿರ್ಮಿಸಲಾಯಿತು ಎಂಬುವುದಕ್ಕೆ ಸೂಕ್ತ ದಾಖಲೆಗಳು ಸಿಗುತ್ತಿಲ್ಲವಾದರೂ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಯಾದವ ಸಮುದ್ರ  ಇದಾಗಿರಬಹುದೆಂಬ ಅಭಿಪ್ರಾಯವೂ ಇದೆ. ಕ್ರಿ.ಶ. 1326ರಲ್ಲಿ ಹೊಯ್ಸಳರ ರಾಜಧಾನಿ ದ್ವಾರಸಮುದ್ರದ ಮೇಲೆ ಮುಸಲ್ಮಾನ ದೊರೆಗಳು ದಾಳಿ ಮಾಡಿದ ಸಂದರ್ಭ ತಮ್ಮ ರಕ್ಷಣೆಗೆ ಕೆರೆತೊಣ್ಣೂರನ್ನು ಆಶ್ರಯಿಸಿದರು ಹೇಳಲಾಗಿದೆ. ಹೊಯ್ಸಳರ ಕಾಲದಲ್ಲಿ ಈ ಸ್ಥಳ ಪ್ರಸಿದ್ಧ ಅಗ್ರಹಾರವಾಗಿತ್ತಂತೆ. ಕೆರೆತೊಣ್ಣೂರನ್ನು ತೊಂಡನೂರು ಅಗ್ರಹಾರ, ಯಾದವಪುರ, ಯಾದವನಾರಾಯಣ ಚತುರ್ವೇದಿಮಂಗಲ,  ’ತೊಂಡೂರು’ ಹೀಗೆ ಹಲವು ಹೆಸರಿನಿಂದಲೂ ಕರೆಯಲಾಗುತ್ತದೆ.

ಇಷ್ಟೇ ಅಲ್ಲದೆ ಶ್ರೀರಾಮಾನುಜಚಾರ್ಯರು ಮೇಲುಕೋಟೆಗೆ ತೆರಳುವ ಸಂದರ್ಭ  ಕೆಲ ಕಾಲ ಇಲ್ಲಿಯೇ ನೆಲೆಸಿದ್ದರೆಂದೂ ಅಲ್ಲದೆ ಇಲ್ಲಿನ ಕೆರೆಯನ್ನು  ’ತಿರುಮಲಸಾಗರ’ಎಂಬ ಹೆಸರಿನಿಂದ ಕರೆದಿದ್ದರು ಎಂದು ಹೇಳಲಾಗಿದೆ.  ಕೆರೆಯ ಬಳಿಯೇ ಮೇಲಿನಿಂದ ಕೆಳಕ್ಕೆ ಧುಮುಕುವ ಮದಗವಿದ್ದು, ಇಲ್ಲಿ ತಲೆಕೊಟ್ಟು ಸ್ನಾನ ಮಾಡಿದರೆ ಜನ್ಮ ಪಾವನವಾಗುತ್ತದೆ ಎಂಬ ನಂಬಿಕೆಯಿದೆ. ಇಷ್ಟೇ ಅಲ್ಲದೆ, ವಿಷ್ಣುವರ್ಧನನ ತಾಯಿ ಮೊದಲ ಮಹಾದೇವಿ ಇಲ್ಲಿ ತುಪ್ಪಲೇಶ್ವರ ಎಂಬ ಶಿವದೇವಾಲಯವೊಂದನ್ನು ಕಟ್ಟಿಸಿದಳೆಂದೂ.. ಅದಕ್ಕೆ ವಿಷ್ಣುವರ್ಧನ ದತ್ತಿ ಬಿಟ್ಟಿದ್ದನೆಂದೂ.. ಮತ್ತೊಂದೆಡೆ ವಿಷ್ಣುವರ್ಧನ ಯುವರಾಜನಾಗಿದ್ದ ಸಂದರ್ಭ ಕೆರೆತೊಣ್ಣೂರನ್ನು ಅಗ್ರಹಾರವನ್ನಾಗಿ ಪರಿವರ್ತಿಸಿದನೆಂದೂ ಈತ ನಿರ್ಮಿಸಿದ  ಐದು ದೇವಾಲಯಗಳಲ್ಲಿ ಇಲ್ಲಿರುವ ಲಕ್ಷ್ಮಿನಾರಾಯಣ ದೇವಾಲಯ ಒಂದಾಗಿರಬಹುದೆಂದು ಹೇಳಲಾಗುತ್ತಿದೆ.

ಒಂದನೆಯ ನರಸಿಂಹನ ಕಾಲದಲ್ಲಿ ಕೃಷ್ಣನ ದೇವಾಲಯವನ್ನೂ ಹಾಗೂ ಕೈಲಾಸೇಶ್ವರ ದೇವಾಲಯ, ನರಸಿಂಹನ ದೇವಾಲಯವನ್ನು ಕೂಡ ನಿರ್ಮಿಸಲಾಗಿದೆ  ಎನ್ನಲಾಗುತ್ತಿದ್ದು, ಇಮ್ಮಡಿ ಬಲ್ಲಾಳನ ಕಾಲದಲ್ಲಿ ಈ ದೇವಾಲಯಗಳ ಅಭಿವೃದ್ಧಿಯಾಗಿದ್ದು, ಹೊಯ್ಸಳರ ಆಳ್ವಿಕೆಯ ಕೊನೆಗಾಲದಲ್ಲಿ ರಾಜ ಮುಮ್ಮಡಿ ಬಲ್ಲಾಳ ಕೆಲವು ಸಮಯ ಇಲ್ಲಿದ್ದನಂತೆ. ಇಲ್ಲಿರುವ ದೇವಾಲಯಗಳ ಅಭಿವೃದ್ಧಿಯನ್ನು ವಿಜಯನಗರ ಮತ್ತು ಮೈಸೂರು ಅರಸರ ಕಾಲದಲ್ಲಿ ಮಾಡಲಾಯಿತು ಎಂಬ ಮಾತುಗಳು ಪ್ರಚಲಿತದಲ್ಲಿವೆ. ಕೃಷ್ಣದೇವಾಲಯ ಕೂಡ ವೈಶಿಷ್ಟ್ಯಪೂರ್ಣವಾಗಿದ್ದು, ಇದಕ್ಕೆ ಬೃಹತ್ ಪ್ರವೇಶ ದ್ವಾರವಿದೆ. ಗೋಪುರವು ಬಲ್ಲಾಳರ ಕಾಲದಲ್ಲಿ ನಿರ್ಮಿಸಲಾಗಿರಬಹುದು ಎನ್ನಲಾಗುತ್ತಿದೆ.

ದೇಗುಲದ ಗೋಪುರವನ್ನು ವೀರಬಲ್ಲಾಳನ ಗೋಪುರ ಎಂದು ಕರೆಯುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಕೃಷ್ಣನ ದೊಡ್ಡ ಮೂರ್ತಿ ಪಕ್ಕದಲ್ಲಿ ರುಕ್ಮಿಣಿ ಸತ್ಯಭಾಮೆಯರ ಚಿಕ್ಕಮೂರ್ತಿಗಳಿವೆ. ವೇಣುಗೋಪಾಲ, ರುಕ್ಮಿಣಿ, ಸತ್ಯಭಾಮೆಯರ ಲೋಹದ ಉತ್ಸವ ಮೂರ್ತಿಗಳೂ ಕೂಡ ಗಮನಸೆಳೆಯುತ್ತವೆ. ಕೆರೆಯದಂಡೆಯಲ್ಲಿ ’ನಿಕುಂಬಿನಿ’ ಎಂಬ ದೇವಿಯ ದೇವಾಲಯವಿದ್ದು, ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಶಾಹ ಸಲಾ ಮಸೂದ್ ಘಾಸಿಯ ದರ್ಗಾವೂ ಇಲ್ಲಿದೆ.

ಕೆರೆಯ ದಂಡೆಯನ್ನು ಮೆಟ್ಟಿಲಿನಿಂದ ನಿರ್ಮಿಸಲಾಗಿದ್ದು ಒಂದೊಂದೇ ಮೆಟ್ಟಿಲನ್ನು ಇಳಿಯುತ್ತಾ ನೀರಿನಲ್ಲಿ ಆಟವಾಡಬಹುದು. ಕೆರೆಯ ಒಂದು ದಡದಲ್ಲಿ ಸ್ನಾನಘಟ್ಟ ಹಾಗೂ ಮಂಟಪವಿದ್ದು ಇದು ಕೆರೆಗೆ ಕಳೆಗಟ್ಟಿದೆ. ಆದರೆ ಸೌಂದರ್ಯಕ್ಕೆ ಮಣಿದು ಈಜಲು ಹೋಗಬಾರದಷ್ಟೆ. ಏಕೆಂದರೆ ಎಚ್ಚರ ತಪ್ಪಿದರೆ ಪ್ರಾಣಾಪಾಯ ಖಚಿತ.  ಇನ್ನು ಇಲ್ಲಿ ಧುಮ್ಮಿಕ್ಕುವ ಮದಗ ಗಮನಸೆಳೆಯುತ್ತದೆ. ಜಲಪಾತದಂತೆ ಧುಮ್ಮಿಕ್ಕುವ ಜಲಧಾರೆಯನ್ನು ನೋಡುವುದೇ ಕಣ್ಣಿಗೆ ಆನಂದವಾಗುತ್ತದೆ. ಎಷ್ಟೇ ಬರಗಾಲ ಬಂದರೂ ಈ ಕೆರೆ ಬತ್ತಿದ ನಿದರ್ಶನಗಳಿಲ್ಲ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕೆರೆತೊಣ್ಣೂರು ನಿಸರ್ಗ ಸುಂದರ ತಾಣವಾಗಿದ್ದು, ಎಲ್ಲರಿಗೂ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

B M Lavakumar

admin
the authoradmin

Leave a Reply