ಗಿನ್ನೆಸ್ ದಾಖಲೆ ಬರೆದ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಬೋನ್ಸಾಯ್ ಗಾರ್ಡನ್.. ಏನಿದರ ವಿಶೇಷ?

ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮವು ಹಲವು ವಿಶೇಷತೆಗಳನ್ನು ಹೊಂದಿದ್ದು ಈ ಪೈಕಿ ಇಲ್ಲಿರುವ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ಗಮನಾರ್ಹವಾಗಿದ್ದು, ಸಹಸ್ರಾರು ಕುಬ್ಜ ಸಸ್ಯ ಸಂಕುಲಗಳ ಮೂಲಕ ಮನಸೆಳೆಯುತ್ತಿದೆ. ಇದೀಗ ಈ ಬೋನ್ಸಾಯ್ ಗಾರ್ಡನ್ ಅತಿ ಹೆಚ್ಚು ಕುಬ್ಜ ವೃಕ್ಷಗಳಿಂದ ಕೂಡಿದ ವೃಕ್ಷ ವನವಾಗಿ ಗಿನ್ನೆಸ್ ದಾಖಲೆ ಬರೆದಿದೆ. ಆ ಮೂಲಕ ವಿಶ್ವವೇ ಇತ್ತ ತಿರುಗಿ ನೋಡುವಂತೆ ಮಾಡಿದೆ.
ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ನಲ್ಲಿ ಸುಮಾರು 10,836 ಬೋನ್ಸಾಯ್ ವೃಕ್ಷಗಳಿದ್ದು, ವರ್ಷದಿಂದ ವರ್ಷಕ್ಕೆ ಈ ಗಾರ್ಡನ್ ಗೆ ಹೊಸ ಸಸ್ಯಗಳ ಸೇರ್ಪಡೆಯಾಗುತ್ತಲೇ ಹೋಗುತ್ತಿರುವುದು ಇವತ್ತು ದಾಖಲೆ ಬರೆಯಲು ಕಾರಣವಾಗಿದೆ. ಈ ಗಾರ್ಡನ್ ನಲ್ಲಿರುವ ಪ್ರತಿ ಸಸ್ಯಗಳು ಅಮೂಲ್ಯವಾಗಿದ್ದು, ಇಲ್ಲೊಂದು ಸುತ್ತು ಬಂದರೆ ದೈವಿಕ ಭಾವನೆ ಬರುತ್ತದೆ. ಇಲ್ಲಿರುವ ವೃಕ್ಷಗಳಲ್ಲಿ ದೈವತ್ವ ಕಾಣಿಸುತ್ತದೆ. ಅವುಗಳಿಗೂ ದೇವತಾ ಹೆಸರುಗಳಿರುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ. ವಿವಿಧ ರಾಜ್ಯ, ದೇಶಗಳ ಸಸ್ಯಗಳು ಇಲ್ಲಿ ಆಶ್ರಯ ಪಡೆದುಕೊಂಡು ನೋಡುಗರನ್ನು ಆಕರ್ಷಿಸುತ್ತಿವೆ.
ಬೋನ್ಸಾಯ್ ಗಾರ್ಡನ್ ಗೆ ಕಾಲಿಟ್ಟರೆ ಇಂತಹವೊಂದು ಅಪರೂಪದ ಗಾರ್ಡನ್ ನಾವೆಲ್ಲರೂ ಬೇರೆಲ್ಲೂ ನೋಡಲು ಸಾಧ್ಯವಿಲ್ಲದ ಭಾವ ಮೂಡುತ್ತದೆ. ಇದನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ತಾವು ಭೇಟಿ ನೀಡಿದ ದೇಶವಿದೇಶಗಳಲ್ಲಿ, ತಾವು ನೋಡಿದ ಅಪರೂಪವಾದಂತಹ ಸಸ್ಯಗಳನ್ನೆಲ್ಲಾ ತಂದು ಈ ಸುಂದರ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ನಿರ್ಮಿಸಿದ್ದಾರೆ. ಇಲ್ಲಿ ನಮ್ಮ ಸುತ್ತ ಮುತ್ತ ಕಾಣಸಿಗುವ ಬೇಲಿ ಗಿಡಗಳಿಂದ ಹಿಡಿದು ವರ್ಷದ ಎಲ್ಲಾ ಕಾಲದಲ್ಲೂ ಹೂಬಿಟ್ಟು ಕಂಗೊಳಿಸುವ ಅಪರೂಪದ “ಅಮೃತಪುಷ್ಪ”ದವರೆಗೆ ದೇಶ ವಿದೇಶಗಳ ವೃಕ್ಷಗಳು ಮೈದಾಳಿ ನಿಂತಿವೆ.
ವಿಶಾಲ ಪ್ರದೇಶದಲ್ಲಿ ನೆಲೆನಿಂತಿರುವ ಬೋನ್ಸಾಯ್ ಗಾರ್ಡನ್ಗೆ ಭೇಟಿ ನೀಡಿದವರು ಈ ಗಾರ್ಡನ್ನಲ್ಲಿ ಕಂಡು ಬರುವ ಸುಂದರ ದೃಶ್ಯಗಳಿಗೆ ಮನಸೋಲದಿರಲಾರರು. ಏಕೆಂದರೆ ಬೋನ್ಸಾಯ್ ಗಾರ್ಡನ್ನ ನಿರ್ಮಾಣವೇ ವಿಶಿಷ್ಟವಾಗಿದೆ. ಪ್ರತಿ ಸಸ್ಯ ಕುಂಡಗಳನ್ನು ಜೋಡಿಸಿಟ್ಟ ರೀತಿ ಅದ್ಭುತವಾಗಿದೆ. ಸುಂದರ ಹಚ್ಚ ಹಸುರಿನ ಹುಲ್ಲುಹಾಸಿನ ಮಧ್ಯೆ ಕೃತಕವಾಗಿ ನಿರ್ಮಿಸಿದ ತೊರೆ. ಅದರಲ್ಲಿ ಜುಳುಜುಳು ನಿನಾದಗೈಯ್ಯುತ್ತಾ ಹರಿಯುವ ನೀರು. ಭೋರ್ಗರೆದು ಧುಮುಕುವ ಪುಟ್ಟ ಜಲಧಾರೆಗಳು… ಸ್ಪಟಿಕದಂತೆ ಹೊಳೆಯುವ ಪುಟ್ಟಕೊಳಗಳು… ಅಲ್ಲಲ್ಲಿ ಸಿಮೆಂಟ್ ಕಲ್ಲುಗಳು ಅವುಗಳ ಮೇಲೆ ಬೃಹತ್ ಕುಂಡದಲ್ಲಿ ವೀರಾಜಮಾನವಾದ ವಿವಿಧ ದೇಶಗಳ, ವಿವಿಧ ಜಾತಿಯ ಕುಬ್ಜ ಗಿಡಗಳು… ಮರಗಳು… ಗಮನಸೆಳೆಯುತ್ತವೆ.
ಬೋನ್ಸಾಯ್ ಗಾರ್ಡನ್ ಒಳಗೊಂದು ಸುತ್ತು ಬಂದದ್ದೇ ಅದರೆ ಈ ಗಾರ್ಡನ್ ಮಹತ್ವ ಅರಿವಾಗುತ್ತದೆ. ಈ ಗಾರ್ಡನ್ನಲ್ಲಿ ವಿದೇಶದ ಜಪಾನ್, ಚೀನಾ, ಅಮೇರಿಕ, ವೆಸ್ಟ್ ಇಂಡೀಸ್, ಕೆನಡಾ, ಇಂಗ್ಲೆಂಡ್, ಮಲೇಶಿಯಾ, ಇಂಡೋನೇಶಿಯಾ, ಯುರೋಪ್ ಹೀಗೆ ಹಲವು ದೇಶಗಳಿಂದ ತಂದಂತಹ ಅಪರೂಪದ ಸಸ್ಯಗಳಿವೆ. ಅವುಗಳನ್ನು ಜತನದಿಂದ ಆರೈಕೆ ಮಾಡಿಕೊಂಡು ಬರಲಾಗುತ್ತಿದೆ. ಪ್ರತಿಯೊಂದು ಗಿಡದ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಗಿದೆ. ಇದರಿಂದ ವೀಕ್ಷಿಸುವ ಪ್ರವಾಸಿಗನಿಗೆ ಸಸ್ಯದ ಪರಿಚಯ ಸುಲಭವಾಗಿ ಆಗುತ್ತದೆ. ಜತೆಗೆ ದೇವತಾ ಹೆಸರುಗಳಿಂದ ಸಸ್ಯಗಳು ಸೆಳೆಯುತ್ತವೆ.
ಗಾರ್ಡನ್ ಮಧ್ಯೆ ನಡೆದಾಡಲು ಕಾಲುದಾರಿಗಳಿದ್ದು, ಅದರಲ್ಲಿ ನಡೆಯುತ್ತಾ ಹೋದರೆ ಕಾಲುವೆಯಲ್ಲಿ ಹರಿಯುವ ನೀರು, ಪುಟ್ಟ ಜಲಧಾರೆ, ಸಣ್ಣಪುಟ್ಟ ಸುಂದರ ಕಲ್ಲುಗಳಿಂದ ನಿರ್ಮಿಸಿದ ಸುಂದರ ಕೊಳಗಳು. ಅವುಗಳನ್ನು ಹಾದು ಹೋಗಲೆಂದೇ ನಿರ್ಮಾಣಗೊಂಡ ಸೇತುವೆಗಳು ಕಾಣಸಿಗುತ್ತವೆ. ಈ ಗಾರ್ಡನ್ನ ಮತ್ತೊಂದು ವಿಶೇಷತೆಯೆಂದರೆ ಇಲ್ಲಿನ ಸಸ್ಯವೊಂದನ್ನು ಸಮುದ್ರದಡದಿಂದ ತರಲಾಗಿದೆ. ಹಾಗಾಗಿ ಈ ಸಸ್ಯಕ್ಕೆ ಸಿಹಿ ನೀರಿನ ಬದಲಾಗಿ ಉಪ್ಪು ನೀರನ್ನೇ ನೀಡಿ ಬೆಳೆಸಲಾಗುತ್ತಿದೆ. “ಅಮೃತಪುಷ್ಪ” ಹೆಸರಿನ ಸಸ್ಯದ ಮತ್ತೊಂದು ವಿಶೇಷತೆ ವರ್ಷದ ಎಲ್ಲಾ ಕಾಲದಲ್ಲಿಯೂ ತಿಂಗಳಿಗೊಮ್ಮೆ ಹೂ ಬಿಡುತ್ತದೆ. ಈ ಹೂವಿನ ಮೊತ್ತ ಒಂದು ಲಕ್ಷವಂತೆ!. ಈ ಸಸ್ಯ ಹೂ ಬಿಡುವುದು ಮಾತ್ರವಲ್ಲ ಇದರಲ್ಲಿ ಔಷಧೀಯ ಗುಣಗಳೂ ಇವೆಯಂತೆ.
ಈ ಅಪರೂಪದ ಬೊನ್ಸಾಯ್ ಗಾರ್ಡನ್ ಸ್ವಾಮಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಕನಸಿನ ಕೂಸು. ಇದನ್ನು ಭಾರತದಲ್ಲಿಯೇ ಪ್ರಥಮವಾಗಿ, ಅದ್ಭುತವಾಗಿ ನಿರ್ಮಿಸುವಲ್ಲಿ ಅವರ ಶ್ರಮ ನಿಜಕ್ಕೂ ಶ್ಲಾಘನೀಯ. ಇಲ್ಲಿ ಶತಮಾನಗಳನ್ನು ಕಂಡ ಕುಬ್ಜ ಮರಗಳು ಇವೆ ಎನ್ನುವುದೇ ವಿಸ್ಮಯ. ಜೊತೆಗೆ ಪುಟ್ಟ ಕೊಳದಲ್ಲಿ ತೇಲುವ ರಾಮಶಿಲೆಯೂ ಅದ್ಭುತ. ಈ ಬೋನ್ಸಾಯ್ ಗಾರ್ಡನ್ ಗೊಂದು ಸುತ್ತುಹೊಡೆದರೆ ಇದರ ಮಹತ್ವ ಅರಿವಾಗುತ್ತದೆ. ಇನ್ನು 2006ರಲ್ಲಿ ಇದನ್ನು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಆರಂಭಿಸಿದ್ದು, ಆರಂಭದಲ್ಲಿ ನೂರೋ ಇನ್ನೂರೋ ಇದ್ದ ವೃಕ್ಷಗಳು ಇದೀಗ 10,836ಕ್ಕೆ ತಲುಪಿದೆ ಎಂದರೆ ಇದೊಂದು ಮಹಾಸಾಧನೆಯೇ..
ಇನ್ನು ಬೋನ್ಸಾಯ್ ಬಗೆಗೆ ತಿಳಿಯುತ್ತಾ ಹೋದರೆ ಅವುಗಳ ಹುಟ್ಟೇ ರೋಚಕ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಹಲವು ಮಾಹಿತಿಗಳು ಲಭ್ಯವಾಗುತ್ತವೆ. ಕ್ರಿ.ಶ. ಮೂರನೇ ಶತಮಾನದಲ್ಲಿಯೇ ಬೋನ್ಸಾಯ್ ಗಿಡಗಳು ಇದ್ದವೆಂದು ಹೇಳಲಾಗಿದೆ. “ಬೋನ್” ಎಂದರೆ ಕುಂಡ “ಸಾಯ್” ಎಂದರೆ ಮರ ಎಂದು ಹೇಳಲಾಗುತ್ತಿದೆ. ಬೋನ್ಸಾಯ್ ಪದ್ಧತಿಯಲ್ಲಿ ಬೆಳೆಸುವ ಮರಗಳಿಗೆ “ಕುಬ್ಜವೃಕ್ಷ” ಎಂದು ಕರೆಯಲಾಗುತ್ತದೆ. ಚೀನಾ ದೇಶದಲ್ಲಿ ಈ ಕುಬ್ಜ ವೃಕ್ಷಗಳನ್ನು ಬೆಳೆಸಲಾಗುತ್ತಿತ್ತು ಎನ್ನುವುದಕ್ಕೆ ಆಧಾರಗಳಿವೆ. ಪ್ರಾಚೀನ ಚೀನಿ ವೈದ್ಯರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುತ್ತಿದ್ದಾಗ ಜೀವಂತ ಔಷಧಿ ಸಸ್ಯಗಳನ್ನು ಕೊಂಡೊಯ್ಯಲು ಅನುಕೂಲವಾಗುವ ದೃಷ್ಟಿಯಿಂದ ಬೋನ್ಸಾಯ್ ಕಲೆಯನ್ನು ಕರಗತ ಮಾಡಿಕೊಂಡಿದ್ದರು ಎನ್ನಲಾಗಿದೆ.
ಮತ್ತೊಂದು ಮೂಲದ ಪ್ರಕಾರ ಚೀನಿ ವೈದ್ಯರು ಔಷಧಿಗಾಗಿ ಸಸ್ಯಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಕೊಂಡೊಯ್ಯುತ್ತಿದ್ದರಲ್ಲದೆ, ಆಗಾಗ್ಗೆ ಅದರ ಎಲೆಗಳನ್ನು ಔಷಧಿಗೆ ಬಳಸುತ್ತಿದ್ದರಿಂದ ಕಾಂಡ ಮತ್ತು ಬೇರುಗಳು ದಪ್ಪವಾಗಿ ಬೆಳೆಯುತ್ತಿದ್ದವು. ಇದನ್ನು ಗಮನಿಸಿದ ಗಿಡಮೂಲಿಕಾ ವೈದ್ಯರು ಬೋನ್ಸಾಯ್ ಹುಟ್ಟಿಗೆ ಕಾರಣರಾದರು ಎಂದು ಹೇಳಲಾಗುತ್ತದೆ. ಇಂದು ಬಹಳಷ್ಟು ಗಿಡಮೂಲಿಕೆಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಆದುದರಿಂದ ಬೋನ್ಸಾಯ್ ಗಾರ್ಡನ್ ಮೂಲಕ ಆ ಕಾರ್ಯವನ್ನು ನಾವು ಮಾಡಬಹುದು ಎಂಬುವುದನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ತಮ್ಮ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರಿಗೊಂದು ನಮ್ಮ ನಮನ.
B.M.Lavakumar