ArticlesLatest

ಕೊಡಗಿನಲ್ಲಿ ಮಳೆಗಾಲದ ಆ ದಿನಗಳು ಹೇಗಿರುತ್ತಿತ್ತು ಗೊತ್ತಾ? ಮಳೆಯಲಿ.. ಜೊತೆಯಲಿ… ನಿತ್ಯದ ಬದುಕು

ಕಾಲ ಬದಲಾಗಿದೆ… ಮಳೆಗಾಲದಲ್ಲಿಯೂ ಒಂದಷ್ಟು ಬದಲಾವಣೆಗಳಾಗಿವೆ.. ಈಗಿನ ಮಳೆಯನ್ನಾಗಲೀ ಮಳೆಗಾಲವನ್ನಾಗಲೀ ಊಹಿಸುವುದು ಕಷ್ಟವಾಗುತ್ತಿದೆ… ಹೀಗಾಗಿ ಹಿಂದಿನ ಆ ಮಳೆಗಾಲದ ದಿನಗಳನ್ನು ನೆನಪು ಮಾಡಿಕೊಳ್ಳುವಾಗಲೆಲ್ಲ ದುರಂತಕ್ಕಿಂತ ಹೆಚ್ಚಾಗಿ ಖುಷಿಯ ಕ್ಷಣಗಳೇ ಕಣ್ಮುಂದೆ ಬರುತ್ತವೆ… ಈಗ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದೇವೆ. ಹೀಗಾಗಿ ಪ್ರಕೃತಿಯ ಮೇಲೆ ಪರಿಣಾಮಗಳಾಗುತ್ತಿವೆ. ಅದರ ಏರುಪೇರುಗಳು ನಮ್ಮನ್ನು ವಿವಿಧ ರೀತಿಯಲ್ಲಿ ಕಾಡಿಸಲಾರಂಭಿಸಿದೆ.

ಈಗ ಮಳೆ ಬಂತೆಂದರೆ ಅನಾಹುತಗಳ ಸರಮಾಲೆಗಳೇ ನಮ್ಮ ಮುಂದೆ ಬಂದು ನಿಲ್ಲುತ್ತವೆ. ಹೀಗಾಗಿ ನಗರಗಳಿಂದ ಆರಂಭವಾಗಿ ಗ್ರಾಮೀಣ ಪ್ರದೇಶದಲ್ಲಿ ತೋಟದ ನಡುವೆ, ನದಿ ತಟದ ಪ್ರದೇಶಗಳಲ್ಲಿ, ಬೆಟ್ಟಗುಡ್ಡಗಳ ತಪ್ಪಲಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುವವರೆಲ್ಲರೂ ಬೆಚ್ಚಿ ಬೀಳುವಂತಾಗಿದೆ. ಪ್ರತಿ ಮಳೆಯೂ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ ನೀಡುತ್ತವೆ. ಇತ್ತೀಚೆಗಿನ ವರ್ಷಗಳಲ್ಲಿ ಮಳೆಯ ಬಗ್ಗೆಯಾಗಲೀ, ಮಳೆಗಾಲದ ಬಗ್ಗೆ ಯಾಗಲೀ ಹೇಳುವುದೇ ಕಷ್ಟವಾಗುತ್ತದೆ. ಯಾವಾಗ? ಯಾವ ರೀತಿಯಲ್ಲಿ ಮಳೆ ಸುರಿಯುತ್ತದೆ ಎನ್ನುವುದನ್ನು ಹೇಳಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾರಾನುಗಟ್ಟಲೆ ಸುರಿಯುವ ಮಳೆ ಒಮ್ಮೆಲೆ ಸುರಿದು ಸಂಕಷ್ಟವನ್ನು ತಂದೊಡ್ಡುತ್ತಿದೆ.

ಹಿಂದಿನ ಕಾಲದಲ್ಲಿ ಮಳೆಗಾಲ ಹೀಗಿತ್ತಾ? ಈ ಬಗ್ಗೆ ಹಿರಿಯರನ್ನು ಕೇಳಿದರೆ ಅವತ್ತಿನ ಮಳೆಗಾಲದ ಬಗ್ಗೆ ಖುಷಿ, ಖುಷಿಯಾಗಿ ಹೇಳುತ್ತಾರೆ. ಆಗಿನ ಕಾಲದಲ್ಲಿ ಮಳೆಗಾಲವೆಂದರೆ ಗದ್ದೆ ಕೆಲಸವನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ. ಮಳೆಗಾಲ ಆರಂಭದಲ್ಲಿ ಗದ್ದೆ ಕೆಲಸವನ್ನು (ಭತ್ತದ ಕೃಷಿ) ಆರಂಭಿಸಿದರೆ ಅದು ಮುಗಿಯುವ ಹೊತ್ತಿಗೆ ಮಳೆಯೂ ತಣ್ಣಗಾಗಿ ಬಿಡುತ್ತಿತ್ತು. ಜನರಿಗೂ ಗದ್ದೆ ಕೆಲಸವೇ ಪ್ರಮುಖವಾಗಿತ್ತು.  ಅವತ್ತು ಜಿಟಿ ಜಿಟಿ ಸುರಿಯುತ್ತಾ ಮಳೆ ವೇಗ ಪಡೆದುಕೊಳ್ಳುತ್ತಿತ್ತು. ಜುಲೈ ತಿಂಗಳ ಹೊತ್ತಿಗೆ ಎಲ್ಲೆಂದರರಲ್ಲಿ ಅಂತರ್ಜಲಗಳು ಹೆಚ್ಚಾಗಿ ನೀರಾಗಿ ಹರಿಯಲಾರಂಭಿಸುತ್ತಿದ್ದವು. ಇದರಿಂದ ಮಳೆ ಕಡಿಮೆಯಾದರೂ ಜಲ ನೀರು ನದಿಗಳನ್ನು ಸೇರುತ್ತಿದ್ದರಿಂದ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರಲಿಲ್ಲ. ಆದರೀಗ ಒಮ್ಮೆಲೆ ಮಳೆ ಸುರಿದಾಗ ನೀರು ಕೂಡ ಎಲ್ಲೆಂದರಲ್ಲಿ ಹರಿದು ಬರುತ್ತದೆ. ಮಳೆ ಕಡಿಮೆಯಾಗುತ್ತಿದ್ದಂತೆಯೇ ನದಿಗಳಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿ ಬಿಡುತ್ತಿದೆ.

ಇನ್ನು ಮಳೆಗಾಲದಲ್ಲಿ ರಸ್ತೆಗಳು ಕೆಸರುಮಯವಾಗಿ ಓಡಾಡುವುದೇ ಕಷ್ಟವಾಗುತ್ತದೆ. ಇದರ ಜತೆಗೆ ಬೆಟ್ಟಗುಡ್ಡ, ಕಂದಕಗಳಲ್ಲಿ ಮನೆ ಮಾಡಿಕೊಂಡಿರುವವರಲ್ಲಿಗೆ ವಾಹನಗಳೇ ತೆರಳುವುದಿಲ್ಲ. ಕೆಲವು ಕಡೆಗಳಲ್ಲಿ ನದಿ ತುಂಬಿ ಹರಿದಾಗ ಸಂಪರ್ಕವೇ ಕಡಿತಗೊಳ್ಳುತ್ತದೆ. ಆಗಾಗ್ಗೆ ಮರಗಳು ಬೀಳುವುದು, ವಿದ್ಯುತ್‍ ಕಂಬಗಳು ಮುರಿಯುವುದು ಹೀಗೆ ಹಲವು ಸಮಸ್ಯೆಗಳಿಂದಾಗಿ ವಿದ್ಯುತ್ ಕೈಕೊಡುತ್ತದೆ. ಮಳೆಯಲ್ಲಿಯೇ ಗದ್ದೆ ತೋಟಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ. ಹೀಗೆ ಹತ್ತಾರು ಜಂಜಾಟಗಳ ನಡುವೆ ಇಲ್ಲಿನವರ ಬದುಕು ಸಾಗುತ್ತದೆ.

ಇವತ್ತು ಮೊದಲಿಗೆ ಹೋಲಿಸಿದರೆ ಭತ್ತದ ಕೃಷಿ ಕಡಿಮೆಯಾಗಿದೆ. ಜತೆಗೆ ಎತ್ತುಗಳಿಂದ ಉಳುಮೆ ಮಾಡುವವರು ಕಡಿಮೆಯಾಗಿದ್ದಾರೆ. ಟ್ರ್ಯಾಕ್ಟರ್ ಮತ್ತು ಟಿಲ್ಲರ್ ಮೂಲಕ ಉಳುಮೆ ಮಾಡಿ ಯಂತ್ರದ ಮೂಲಕ ನಾಟಿಯನ್ನು ಕೆಲವೆಡೆ ಮಾಡಿದರೂ ಇನ್ನು ಕೆಲವು ಕಡೆಗಳಲ್ಲಿ ಜನರೇ ನಾಟಿ ನೆಡುತ್ತಾರೆ. ಈ ನಾಟಿ ಕಾರ್ಯವನ್ನು ಸಡಗರ ಸಂಭ್ರಮದಿಂದ ಮಾಡುತ್ತಾರೆ.  ಇದರ ಜತೆಗೆ ಹಿಂದಿನ ಕಾಲದ ಹಿರಿಯರು ಆಚರಿಸಿಕೊಂಡು ಬಂದಿರುವ ಆಚರಣೆಯನ್ನು ಇವತ್ತಿಗೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಮಳೆಗಾಲದಲ್ಲಿ ಕೆಲಸದ ನಡುವೆ ಪೇಟೆ ಪಟ್ಟಣಗಳತ್ತ ಮುಖ ಮಾಡಲು ಸಾಧ್ಯವಾಗದ ಕಾಲವಿತ್ತು. ಅವತ್ತಿನ ದಿನಗಳಲ್ಲಿ ಶರೀರವನ್ನು ಶೀತದಿಂದ ರಕ್ಷಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕಾಗಿತ್ತು. ಹೀಗಾಗಿ ಅವತ್ತು ಎಲ್ಲೆಡೆಯೂ ಸುಲಭವಾಗಿ ಬೆಳೆಯುತ್ತಿದ್ದ ಗಿಡಮೂಲಿಕೆಗಳಲ್ಲಿರುವ ಆರೋಗ್ಯಕಾರಿ ಗುಣ ಮತ್ತು ರುಚಿಯನ್ನು ಅರಿತು ಅವುಗಳನ್ನು ಬಳಕೆ ಮಾಡುತ್ತಾ ಬಂದರು. ಅದು ಇಂದಿಗೂ ಮುಂದುವರೆದಿದೆ. ಮಳೆಗಾಲದ ತಿನಿಸಾಗಿ ತಮ್ಮ ಸುತ್ತಮುತ್ತ ಸಿಗುವ ಏಡಿ, ಅಣಬೆ, ಬಿದಿರು ಕಣಿಲೆ, ಮರದಲ್ಲಿ ಬೆಳೆಯುವ ಕೆಸದ ಪತ್ರೊಡೆ, ನಾಟಿಕೋಳಿಯನ್ನು ಹೆಚ್ಚು ಹೆಚ್ಚಾಗಿ ಸೇವಿಸುತ್ತಿದ್ದರು. ಅದು ಈಗಲೂ ನಡೆಯುತ್ತಿದೆ.

ಯಾವತ್ತಾದರೂ ಒಂದು ದಿನ ಕೊಡಗಿಗೆ ತೆರಳಿ ಮಳೆಗೆ ಮೈಕೊಟ್ಟು, ಚಳಿಗೆ ಬೆಚ್ಚಗಿನ ಕಾಫಿ ಹೀರಿದಾಗ ಹಾಯೆನಿಸುತ್ತದೆ. ಆದರೆ ಬಿಡುವಿಲ್ಲದ ಮಳೆಗೆ ಮೈಕೊಟ್ಟು ನಿತ್ಯ ಕೆಲಸ ಕಾರ್ಯಗಳನ್ನು ಮಾಡುವುದು ಸುಲಭವೇನಲ್ಲ. ಆದರೂ ಧಾರಾಕಾರ ಮಳೆ ಸುರಿದರೂ ಅದನ್ನು ಎದುರಿಸಿ ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ಇಲ್ಲಿನವರು ತೊಡಗಿಸಿಕೊಳ್ಳುತ್ತಾರೆ. ಇದು ಇಲ್ಲಿನವರಿಗೆ ಅಭ್ಯಾಸವಾಗಿ ಹೋಗಿದೆ. ಈಗೀಗ ಮಳೆಗಾಲವನ್ನು ಎದುರಿಸುವುದಕ್ಕಿಂತ ಮಳೆಗಾಲದಲ್ಲಿ ನಡೆಯುವ ದುರಂತಗಳನ್ನು ಎದುರಿಸುವುದೇ ಕಷ್ಟವಾಗಿ ಪರಿಣಮಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

admin
the authoradmin

Leave a Reply