ಮಂಡ್ಯ: ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯುವ ಸಲುವಾಗಿ ಕೆಲವರು ಅಕ್ರಮವಾಗಿಡುತ್ತಿರುವ ನಾಡ ಬಾಂಬ್ ಸಾಕು ಪ್ರಾಣಿಗಳ ಜೀವಕ್ಕೆ ಕುತ್ತು ತರುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದು, ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗದ ಕಾರಣದಿಂದಾಗಿ ಆಗಾಗ್ಗೆ ಜಾನುವಾರುಗಳು ಮೇಯುವಾಗ ಸ್ಪೋಟಿಸಿ ಸಾವನ್ನಪ್ಪುತ್ತಿವೆ.
ಇದೀಗ ಇಂತಹದ್ದೇ ಘಟನೆ ಜಿಲ್ಲೆಯ ಭಾರತೀನಗರದ ಮಾದರಹಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆದಿದ್ದು, ಮುಖಛಿದ್ರವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ. ಹರಳಹಳ್ಳಿ ಗ್ರಾಮದ ರಾಜಮಣಿ ಎಂಬುವವರ ಸೇರಿದ ಹಸು ಇದಾಗಿದೆ.

ರಾಜಮಣಿ ಎಂಬುವವರು ಮಾದರಹಳ್ಳಿ ಎಲ್ಲೆಯಲ್ಲಿ ಬೆಳೆ ಇಲ್ಲದೆ ಪಾಳು ಬಿದಿದ್ದ ಜಮೀನೊಂದರಲ್ಲಿ ಹಸುವನ್ನು ಮೇಯಿಸುತ್ತಿದ್ದಾಗ ಅಚಾನಕ್ಕಾಗಿ ಈ ಘಟನೆ ಜರುಗಿದೆ. ಈ ನಾಡಬಾಂಬ್ ತೇವಗೊಂಡ ತಕ್ಷಣ ಸ್ಟೋಟಿಸುತ್ತದೆ ಎಂದು ಹೇಳಲಾಗಿದೆ. ಸ್ಟೋಟದ ರಭಸಕ್ಕೆ ಹಸುವಿನ ಬಾಯಿ ಛಿದ್ರಗೊಂಡಿದೆ. ಕಾಡು ಹಂದಿಗಳ ಹಾವಳಿಯನ್ನು ತಪ್ಪಿಸಲು ಅಥವಾ ಹಂದಿಗಳನ್ನು ಬೇಟೆಯಾಡಲು ಯಾರೋ ಕಿಡಿಗೇಡಿಗಳು ಈ ನಾಡಬಾಂಬ್ ಇಟ್ಟಿರಬಹುದೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ಯಶ್ವಂತ್ ಕುಮಾರ್ ಹಾಗೂ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ರಾಜಮಣಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.








