ಮೈಸೂರು: ನಗರದ ಪ್ರತಿಷ್ಠಿತ ಮಹಾರಾಜ ಕಾಲೇಜು ಮೈದಾನದ ಆವರಣದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಮೈಸೂರು ಸಂತೆ’(Mysore Sante) ಕಾರ್ಯಕ್ರಮವು ಶುಕ್ರವಾರ ಉದ್ಘಾಟನೆಯಾಯಿತು. ಕಾರ್ಯಕ್ರಮಕ್ಕೆ ಗಣ್ಯರು ಹಾಗೂ ಅತಿಥಿಗಳ ಸಮ್ಮುಖ ದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಮೂರು ದಿನಗಳ ಕಾಲ ನಡೆಯುತ್ತಿರುವ ಈ ಸಂತೆ ನೀವೂ ಆಗಮಿಸಿ ಸಂಭ್ರಮಿಸಿ..
ಮೈಸೂರು ಸಂತೆಯಲ್ಲಿ ಗ್ರಾಮೀಣ ಕೈಗಾರಿಕೆಗಳು, ಹಸ್ತಕಲಾ ವಸ್ತುಗಳು, ಜೈವಿಕ ಉತ್ಪನ್ನಗಳು, ಮನೆಮದ್ದು ಆಹಾರ ಪದಾರ್ಥಗಳು, ಸ್ವಯಂ ಸಹಾಯ ಸಂಘಗಳ ತಯಾರಿತ ವಸ್ತುಗಳು ಸೇರಿದಂತೆ ವಿವಿಧ ಸ್ಥಳೀಯ ಉತ್ಪನ್ನಗಳ ಮಳಿಗೆಗಳನ್ನು ಏರ್ಪಾಟು ಮಾಡಲಾಗಿದೆ. ಆರಂಭದ ದಿನವೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಖರೀದಿಗೆ ಮುನ್ನುಡಿ ಬರೆದಿದ್ದಾರೆ.

ಮೈಸೂರು ಸಂತೆಗೆ ಚಾಲನೆ ನೀಡಿ ಮಾತನಾಡಿದ ಅತಿಥಿಗಳು ಸ್ಥಳೀಯ ಉತ್ಪನ್ನಗಳ ಪ್ರೋತ್ಸಾಹದಿಂದ ಸ್ವಯಂ ಉದ್ಯೋಗ ಹಾಗೂ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಇಂತಹ ಸಂತೆಯು ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ನೇರ ಮಾರುಕಟ್ಟೆ ಒದಗಿಸುವ ಮಹತ್ವದ ವೇದಿಕೆಯಾಗಿದೆ ಎಂದು ಹೇಳಿದರು.
ಸಂತೆಯು ಇನ್ನೂ ಎರಡು ದಿನ(ಶನಿವಾರ-ಭಾನುವಾರ)ಗಳ ಕಾಲ ಸಾರ್ವಜನಿಕರಿಗೆ ತೆರೆಯಲಾಗಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಸ್ಥಳೀಯ ವ್ಯಾಪಾರಿಗಳಿಗೆ ಉತ್ತೇಜನ ನೀಡುವ ಈ ‘ಮೈಸೂರು ಸಂತೆ’ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಮಧು ಚಂದನ್, ಗ್ಲೋಬಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಜಯಚಂದ್ರ ರಾಜು, ದಕ್ಷ ಕಾಲೇಜಿನ ನಿರ್ದೇಶಕರಾದ ಹರೀಶ್, ಪಾಲಿಕೆ ಉಪ ಆಯುಕ್ತೆ ಪ್ರತಿಭಾ, ನಟಿ ಮಿಸ್ ಜಾನ್ವಿ, ಆರ್ ವಿವಿ ಉಪಕುಲಪತಿ ಪ್ರೊ. ಉನಿಯಾಲ್, ಮೈಸೂರು ಸಂತೆ ತಂಡದ ಸದಸ್ಯರೊಂದಿಗೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತೆಗೆ ಮೆರಗು ತಂದಿದ್ದಾರೆ… ವೀಕೆಂಡ್ ಕಳೆಯಲು ನೀವೂ ಬನ್ನಿ…








