ಮೈಸೂರು: ಇಂದು ಕನ್ನಡದ ಅವನತಿಗೆ ಕನ್ನಡಿಗರೇ ಕಾರಣವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಹಿರಿಯ ಚಲನಚಿತ್ರ ನಟ ಶಂಕರ್ ಅಶ್ವತ್ ಅವರು ಕನ್ನಡಿಗರು ಕನ್ನಡ ಭಾಷಾ ಉಚ್ಚಾರಣೆ, ಕನ್ನಡ ಬಳಕೆ ಮಾಡುವುದರಿಂದ ಹಿಂದೆ ಸರಿಯುವುದನ್ನು ಬಿಡಬೇಕಲ್ಲದೆ, ಕನ್ನಡವನ್ನು ಮೊದಲು ಬಳಸಿ ಎಂದು ಕರೆ ನೀಡಿದರು.
ನಗರದ ನಮನ ಕಲಮಂಟಪದಲ್ಲಿ ನನ್ನವ್ವ ಸಾಂಸ್ಕೃತಿಕ ಕಲಾತಂಡ ಆಯೋಜಿಸಿದ್ದ ಎಂಟನೇ ತಿಂಗಳ ನಿರಂತರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ರವರ ಸಾಮಾಜಿಕ ಕಾರ್ಯ ಕುರಿತು ವಿಚಾರ ಸಂಕಿರಣ, ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಡಾ. ಪುನೀತ್ ರಾಜಕುಮಾರ್ ರವರ ಸ್ಮರಣಾರ್ಥ ವಿಚಾರ ಸಂಕೀರಣ, ಸಂವಾದ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಪುನೀತ್ ರವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಅಪಾರ ಸಾಮಾಜಿಕ ಜನಸೇವಾ ಕಾರ್ಯಗಳನ್ನು ನಡೆಸಿರುವುದು ಅವರ ಮರಣ ನಂತರ ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಅವರೊಡನೆ ಅಭಿನಯಿಸಿದ್ದು ಅದರಲ್ಲೂ ಡಾ.ರಾಜ್, ಸೋಮ್ಯಾನ್, ಯುವರತ್ನ ಚಿತ್ರಗಳಲ್ಲಿ ನಟಿಸಿದ್ದೇನೆ. ಅಂಥವರ ಹೆಸರಿನಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಲು ನನ್ನನ್ನು ಆಹ್ವಾನಿಸಿದ್ದು ಬಹಳ ಸಂತೋಷ ತಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕರಾದ ಡಾ. ಗಂಗಾಧರಪ್ಪ ವಹಿಸಿದ್ದರು. ಸಾಹಿತಿಗಳು ಹಾಗೂ ಪತ್ರಕರ್ತರಾದ ಕುಸುಮ ಆಯರಹಳ್ಳಿ, ಸಾಹಿತಿ ಪ್ರಭಾ ಶಾಸ್ತ್ರಿ, ಶ್ರೀಮತಿ ಶಾಂತಕುಮಾರಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಮಳವಳ್ಳಿ ತಾಲೂಕಿನ ಬೀಜಿಪುರ ಗ್ರಾಮದಲ್ಲಿ ಡಾ. ಪುನೀತ್ ರಾಜಕುಮಾರ್ ಫೌಂಡೇಶನ್ ಸ್ಥಾಪಿಸಿ ಅದರ ಅಧ್ಯಕ್ಷರಾದ ಶಾಂತಕುಮಾರ್ ರವರ ಹತ್ತಾರು ಸಾಮಾಜಿಕ ಕಾರ್ಯವನ್ನು ಗುರುತಿಸಿ ಡಾ. ಪುನೀತ್ ರಾಜಕುಮಾರ್ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದರೊಂದಿಗೆ ಐವತ್ತಕ್ಕೂ ಹೆಚ್ಚು ಉದಯೋನ್ಮುಖರಿಂದ ಪುನೀತ್ ರಾಜಕುಮಾರ್ ಸಾಮಾಜಿಕ ಕಾರ್ಯ ಕುರಿತು ವಿಚಾರ ಸಂಕಿರಣ ಸಂವಾದ ಕಾರ್ಯಕ್ರಮ ಕವಿಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು
ಕಾರ್ಯಕ್ರಮದಲ್ಲಿ ನನ್ನವ್ವ ಸಾಂಸ್ಕೃತಿಕ ಕಲಾತಂಡದ ಮುಖ್ಯಸ್ಥರಾದ ಯಾಚೇನಹಳ್ಳಿ ಮಹದೇವ್, ಸಮಾಜ ಸೇವಕಿ ಎಸ್. ಆರ್. ಸುಜಾತ, ನಿಟ್ರೆ ಮಹದೇವಯ್ಯ, ಕೋಮಲ ಟಿ ನರಸೀಪುರ, ನಿರೂಪಕಿ ಪದ್ಮ ಸಿ ಮೈಸೂರು ಇತರರು ಹಾಜರಿದ್ದರು








