ಮೈಸೂರು ಜಿಲ್ಲೆಯಲ್ಲಿ ಮಕ್ಕಳಿಗೆ ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ನೆರವಾದ ಮ-ನರೇಗಾ ನೆರವು… ಏನಿದು?

ಮೈಸೂರು: ಅಂಗನವಾಡಿ, ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಇಂದಿನ ಅಗತ್ಯವಾಗಿದ್ದು ಎಲ್ಲೆಡೆ ಸುಸಜ್ಜಿತವಾದ ಶೌಚಾಲಯಗಳನ್ನು ನಿರ್ಮಿಸುವ ಕೆಲಸಗಳು ನಡೆಯುತ್ತಲೇ ಇವೆ. ಇದೀಗ ಮೈಸೂರು ಜಿಲ್ಲೆಯಲ್ಲಿ ಮಕ್ಕಳಿಗೆ ಸುಸಜ್ಜಿತವಾದ ಶೌಚಾಲಯವನ್ನು ಮ-ನರೇಗಾ ನೆರವಿನೊಂದಿಗೆ ನಿರ್ಮಿಸಲಾಗಿದ್ದು, ಅಂಗನವಾಡಿ ಮಕ್ಕಳು ಇದನ್ನು ಖುಷಿ, ಖುಷಿಯಾಗಿ ಬಳಸಿ ಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಈಗ ಅಂಗನವಾಡಿ ಹಾಗೂ ಶಾಲೆಗಳು ತೆರೆದುಕೊಂಡಿವೆ. ಮಕ್ಕಳು ಮನೆಯಿಂದ ಹೊರಬರುತ್ತಿದ್ದು, ಈ ಹೊತ್ತಲ್ಲಿ ಅಲ್ಲೊಂದು ಪ್ರಾಥಮಿಕ ಶಾಲಾ ಕೇಂದ್ರದಲ್ಲಿ ನೂತನ ಶೌಚಾಲಯಗಳೊಂದಿಗೆ ಚಿಣ್ಣರನ್ನು ಬರ ಮಾಡಿಕೊಂಡಿದ್ದು, ಇದಕ್ಕೆ ನರೇಗಾ ನೆರವಾಗಿ ನಿಂತಿರುವುದು ಗಮನಾರ್ಹವಾಗಿದೆ. ಮಹಾತ್ಮಗಾಂಧಿಯವರ ಕನಸಿನಂತೆ ಅಭಿವೃದ್ಧಿ ಎಂಬುದು ಗ್ರಾಮಗಳಿಂದಲೇ ಆಗಬೇಕೆಂಬ ಪರಿಕಲ್ಪನೆಯಲ್ಲೇ ಮುಂದೆ ಸಾಗುತ್ತಿರುವ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಶಾಲೆಗಳ ಅಭಿವೃದ್ಧಿಯ ನೆರವಿಗೆ ಸಹಕಾರಿಯಾಗಿದೆ. ಇಂತಹದೊಂದು ಪ್ರಯತ್ನ ಯಶಸ್ವಿಯಾಗಿರುವುದು ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಮಲಿಯೂರು ಗ್ರಾಮ ಪಂಚಾಯಿತಿಯ ಮೇಗಳಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಗಿದೆ.
ದುಸ್ಥಿತಿಯಲ್ಲಿದ್ದ ಶೌಚಾಲಯ: ಹಲವು ವರ್ಷಗಳಿಂದ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಿದ್ದು, 15 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಶೌಚಾಲಯ, ಪ್ರಸ್ತುತ ಬಳಕೆಗೆ ಯೋಗ್ಯವಾಗಿರಲಿಲ್ಲ, ಅಲ್ಲದೇ ಶೌಚಾಲಯಕ್ಕೆ ನೀರಿನ ವ್ಯವಸ್ಥೆಯ ಇರಲಿಲ್ಲ, ಮಕ್ಕಳು ಬಳಸಲು ಕಷ್ಟ ಸಾಧ್ಯವಾಗಿತ್ತು. ಇದನ್ನು ಅರಿತ ಮುಖ್ಯೋಪಾಧ್ಯಾಯರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಗಮನಕ್ಕೆ ತಂದು ಶೌಚಾಲಯ ನಿರ್ಮಾಣಕ್ಕೆ ಮುಂದಡಿಯಿಟ್ಟರು.
ಇದರ ಪ್ರತಿಫಲದ ಫಲವಾಗಿ 2023-24ನೇ ಸಾಲಿನಲ್ಲಿ 5.20 ಲಕ್ಷ ರೂ.ಗಳ ಕ್ರಿಯಾ ಯೋಜನೆ ಸಿದ್ದಪಡಿಸಿ ಪುರುಷ ಹಾಗೂ ಹೆಣ್ಣು ಮಕ್ಕಳ ಸುಸಜ್ಜಿತ ಶೌಚಾಲಯಗಳ ನಿರ್ಮಾಣಕ್ಕೆ ಚಾಲನೆ ನೀಡಿದರು. ಇದರ ಪ್ರತಿಫಲವಾಗಿ 2024-25ನೇ ಸಾಲಿಗೆ ಕಾಮಗಾರಿ ಪೂರ್ಣಗೊಂಡು, ಈ ಸಾಲಿನಲ್ಲಿ ಆಗಮಿಸಿದ ಚಿಣ್ಣರು, ಮಕ್ಕಳನ್ನು ನೂತನ ಶೌಚಾಲಯಗಳು ಸಂತಸದಿಂದ ಸ್ವಾಗತಿಸಿದೆ. ನೂತನ ಶೌಚ ಕಂಡ ಮಕ್ಕಳು ಸಂತಸದಿಂದಲೇ ನಮ್ಮ ಶಾಲೆ ಯಾವುದಕ್ಕೂ ಕಮ್ಮಿ ಇಲ್ಲ ಎಂಬಂತೆ ಸಂಭ್ರಮಿಸುವ ಮೂಲಕ ಮ-ನರೇಗಾ ಯೋಜನೆ ಅನುಷ್ಠಾನದ ಸದ್ದಿಲ್ಲದೆ ತನ್ನ ಸಾಧನೆ ಮಾಡಿ ತೋರಿಸಿದೆ.
ಇನ್ನು ಶೌಚಾಲಯ ನಿರ್ಮಾಣ ಮಾಡಿರುವುದರಿಂದ ಶಾಲಾ ಶಿಕ್ಷಕರು, ಮಕ್ಕಳು ಖುಷಿಯಾಗಿದ್ದಾರೆ ಈ ಕುರಿತಂತೆ ಮೇಗಳಕೊಪ್ಪಲು ಗ್ರಾಮದ ಸ.ಕಿ.ಪ್ರಾ.ಶಾಲೆಯ ಶಿಕ್ಷಕ ರಾಮು ಮಾತನಾಡಿ, ಸರ್ಕಾರಿ ಶಾಲೆಗಳತ್ತ ಮಕ್ಕಳು ಬರುವುದಿಲ್ಲ ಎನ್ನುವ ನಾವು ಮೊದಲು ಶಾಲೆಯಲ್ಲಿ ಮಕ್ಕಳಿಗೆ ಖಾಸಗಿ ಶಾಲೆಯ ಮಾದರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ದಿಸೆಯಲ್ಲಿ ಮ-ನರೇಗಾ ನಮ್ಮ ಶಾಲ್ಲೆಯಲ್ಲಿ 30 ಮಂದಿ ಮಕ್ಕಳಿದ್ದು, ಈಗ ಶೌಚಾಲಯದಲ್ಲಿ ಹೊಸ ಹೆಜ್ಜೆ ಇರಿಸಿರುವುದು ಸಂತಸ ತರಿಸಿದೆ ಎಂದಿದ್ದಾರೆ.
ತಿ.ನರಸೀಪುರ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಅನಂತರಾಜು ಪಿ.ಎಸ್ ಮಾತನಾಡಿ, ಶಾಲಾ ಮುಖ್ಯ ಶಿಕ್ಷಕಿಯವರು ಇಂತಹದೊಂದು ಸಮಸ್ಯೆ ತಿಳಿಸಿದಾಗ ಬಳಿಕ ಮ-ನರೇಗಾ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಅದರಿಂದ ಕಾಮಗಾರಿ ಪ್ರಾರಂಭಿಸಿ ಈಗ ಮಕ್ಕಳಿಗೆ ಹೊಸ ಶೌಚಾಲಯ ಲಭ್ಯಕ್ಕೆ ಸಿಕ್ಕಿರುವುದರಿಂದ ಎಲ್ಲರಿಗೂ ಖುಷಿಯಾಗಿದೆ. ಶಾಲಾ ಶೌಚಾಲಯ, ಕಾಂಪೌಂಡ್ ಹಾಗೂ ಕಟ್ಟಡದಲ್ಲಿಯೂ ನರೇಗಾ ಅನುದಾನ ಬಳಕೆ ಮಾಡಿಕೊಂಡು ಶಾಲೆಗಳ ಅಭಿವೃದ್ಧಿ ಸಾಧಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದಿದ್ದಾರೆ.