ರಾಜಕೀಯ ಬದಿಗಿಟ್ಟು ದೇಶದ ಬಗ್ಗೆ ಚಿಂತಿಸಿ…. ರಾಜಕೀಯ ಪಕ್ಷಗಳಿಗೆ ಅಧಿಕಾರ ಇವತ್ತು ಇದ್ದು ನಾಳೆ ಹೋಗಬಹುದು… ದೇಶವಷ್ಟೇ ಮುಖ್ಯ

ನವದೆಹಲಿ: ಪಹಲ್ಗಾಮ್ ನಲ್ಲಿ ಪ್ರವಾಸಿಗರ ನರಮೇಧದ ನಂತರ ಉಗ್ರರ ಪೋಷಕ ದೇಶ ಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರದ ಮೂಲಕ ಭಾರತ ಎದಿರೇಟು ನೀಡಿದೆ. ಅದರ ಹೊಡೆತದಿಂದ ಹೊರಗೆ ಬರಬೇಕಾದರೆ ಇನ್ನಷ್ಟು ಸಮಯ ಬೇಕಾಗುತ್ತದೆ. ಅಷ್ಟೇ ಅಲ್ಲದೆ ಪಾಕಿಸ್ತಾನದ ಭಯೋತ್ಪಾದನೆಯನ್ನು ಜಗತ್ತಿಗೆ ಸಾರುವ ಕೆಲಸವನ್ನು ಭಾರತದ ನಾಯಕರು ಪಕ್ಷಭೇಧ ಮರೆತು ನಿಯೋಗದ ಮೂಲಕ ವಿದೇಶಗಳಿಗೆ ತೆರಳಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ.
ಇದು ಭಾರತದ ಶಕ್ತಿಯನ್ನು ತೋರಿಸುತ್ತಿದೆ. ಬಿಜೆಪಿಯನ್ನು, ನರೇಂದ್ರ ಮೋದಿಯನ್ನು ರಾಜಕೀಯವಾಗಿ ಹೇಗೆ ಬೇಕಾದರೂ ಟೀಕಿಸುವ ಹಕ್ಕು ವಿಪಕ್ಷಗಳಿಗಿವೆ. ಆದರೆ ದೇಶದ ವಿಚಾರ ಬಂದಾಗ ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ. ಆ ಕೆಲಸವನ್ನು ಅಸಾದುದ್ದೀನ್ ಓವೈಸಿ, ಶಶಿತರೂರ್ ಸೇರಿದಂತೆ ನಿಯೋಗದಲ್ಲಿ ತೆರಳಿದ ಪ್ರತಿಯೊಬ್ಬರು ಮಾಡುತ್ತಿರುವುದು ಖುಷಿಕೊಟ್ಟಿದೆ. ಇದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ದೊಡ್ಡದೊಂದು ಸೋಲು ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಭಾರತ ಶಕ್ತಿ ಮತ್ತು ಯುಕ್ತಿಯನ್ನು ಬಳಸಿ ಪಾಕಿಸ್ತಾನ ಮಾರ್ಮಾಘಾತ ನೀಡುತ್ತಿದೆ.
ಆಪರೇಷನ್ ಸಿಂದೂರದ ನಂತರ ಭಾರತದಲ್ಲಿ ಒಂದಷ್ಟು ರಾಜಕೀಯ ನಡೆಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಅದನ್ನು ಮುಂದಿಟ್ಟು ಕೊಂಡು ವಿಪಕ್ಷಗಳು ದಾಳಿ ನಡೆಸುತ್ತಾರೆ. ಅದು ಅನಿವಾರ್ಯವೂ ಹೌದು. ಪಾಕಿಸ್ತಾನದ ಬಗ್ಗೆ ಮೆದು ಧೋರಣೆ ತಾಳಿದರೆ ಇಲ್ಲಿ ಒಂದು ವರ್ಗದ ಮತವನ್ನು ಗಟ್ಟಿಯಾಗಿಟ್ಟುಕೊಳ್ಳಬಹುದು ಎಂಬುದು ಕೆಲವು ರಾಜಕೀಯ ಪಕ್ಷಗಳಿಗೆ ಕೆಟ್ಟ ನಂಬಿಕೆಯಿದೆ. ಹೀಗಾಗಿಯೇ ಕೆಲವು ರಾಜಕೀಯ ನಾಯಕರು ಆ ಕುರಿತಂತೆ ಮಾತನಾಡುತ್ತಿದ್ದಾರೆ.
ಒಂದೆಡೆ ಗಡಿಯಲ್ಲಿ ಸೇನೆ ಸರ್ವ ಸನ್ನದ್ಧವಾಗಿದೆ. ಪಾಪಿ ಪಾಕಿಸ್ತಾನ ಯಾವಾಗ ಬೇಕಾದರೂ ನರಿ ಬುದ್ದಿ ತೋರಿಸಬಹುದು. ಆಗ ಅದಕ್ಕೆ ಉತ್ತರಕೊಡಲೇ ಬೇಕಾಗುತ್ತದೆ. ಆಪರೇಷನ್ ಸಿಂಧೂರದ ನಂತರ ಭಾರತ ಮೊದಲಿನಂತಿಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಸಾಬೀತು ಮಾಡಿದೆ. ಇದು ಪಾಕಿಸ್ತಾನಕ್ಕೂ ಈಗ ಗೊತ್ತಾಗಿದೆ. ಇನ್ನೊಂದೆಡೆ ಉಗ್ರರನ್ನು ಸಾಕಿಸಲಹಿದಕ್ಕೆ ತಕ್ಕ ಶಾಸ್ತಿ ಮಾಡಿಸಿಕೊಳ್ಳಬೇಕಾದ ಸ್ಥಿತಿಗೆ ತಲುಪಿದೆ. ಇಡೀ ಜಗತ್ತಿಗೆ ಗೊತ್ತಿದೆ. ಉಗ್ರವಾದ ಯಾವತ್ತು ಯಾರನ್ನೂ ಸುಖವಾಗಿಡುವುದಿಲ್ಲವೆಂದು. ಅದನ್ನು ನಿರ್ಮೂಲನೆ ಮಾಡದ ಹೊರತು ಯಾರಿಗೂ ನೆಮ್ಮದಿಯಿಲ್ಲ.
ಸದ್ಯ ಹೊರಗಿನ ಪಾಕಿಸ್ತಾನವನ್ನು ಎದುರಿಸುವುದು ಕಷ್ಟವೇನಲ್ಲ. ಆದರೆ ದೇಶದೊಳಗೆ ಅಡಗಿರುವ ಉಗ್ರರನ್ನು ಸದೆ ಬಡಿಯುವುದು ಈಗ ಭಾರತಕ್ಕೆ ಸವಾಲ್ ಆಗಿದೆ. ಇಲ್ಲಿನ ಅನ್ನ ತಿಂದು ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿರುವ ಕ್ರಿಮಿಗಳನ್ನು ಹುಡುಕಿ ಹೊಡೆಯುವ ಕೆಲಸ ಪರಿಣಾಮಕಾರಿಯಾಗಿ ಮಾಡಬೇಕಾಗಿದೆ. ಈಗಾಗಲೇ ಆ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದ್ದು ಹಲವರನ್ನು ಎತ್ತಿಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ. ಇದು ನಿರಂತರವಾಗಿ ನಡೆಯುವ ಮೂಲಕ ನಿರ್ಮೂಲನೆಗೊಳಿಸುವ ಕೆಲಸ ನಡೆಯಬೇಕಾಗಿದೆ.
ನಾವು ಶಾಂತಿಯ ಮಂತ್ರ ಜಪಿಸುತ್ತಾ ಅವರ ದಬ್ಬಾಳಿಕೆಯನ್ನು ಸಹಿಸಿಕೊಂಡೇ ಬಂದಿದ್ದೇವೆ. ಸ್ವಾತಂತ್ರ್ಯ ನಂತರ ಪಾಕಿಸ್ತಾನ ಭಾರತದ ಮೇಲೆ ಮಾಡಿದ ದಾಳಿ, ಉಗ್ರ ಚಟುವಟಿಕೆ ಒಂದೇ ಎರಡೇ? ಎಲ್ಲವನ್ನೂ ಸಹಿಸಿಕೊಂಡು ಉತ್ತರ ಕೊಡುವಲ್ಲಿ ಕೊಡುತ್ತಾ ಬಂದಿದೆ. ಆದರೆ ಯಾವತ್ತೂ ನಮ್ಮ ದೇಶ ಅವರಂತೆ ಹೇಡಿತನದ ಕೃತ್ಯಗಳನ್ನು ಮಾಡಲೇ ಇಲ್ಲ. ಹೀಗಾಗಿಯೇ ಅವರು ಮೇಲಿಂದ ಮೇಲೆ ದಾಳಿ ಮಾಡುತ್ತಲೇ ಬಂದರು. ಕಾಶ್ಮೀರದಲ್ಲಿ ಎಷ್ಟು ನರಮೇಧ ನಡೆಯಿತು? ಅಲ್ಲಿನ ಕಾಶ್ಮೀರಿ ಪಂಡಿತರ ಬದುಕು ಏನಾಯಿತು? ಎಲ್ಲವೂ ನಮ್ಮ ಮುಂದೆಯೇ ಇದೆ. ಆದರೆ ಇಷ್ಟೆಲ್ಲ ಆಗಿದ್ದರೂ ಇವತ್ತು ಕೆಲವು ರಾಜಕಾರಣಿಗಳ ನಡೆ ಮತ್ತು ಅವರ ಹೇಳಿಕೆಗಳು ರಾಜಕೀಯ ಪ್ರೇರಿತವಾಗುತ್ತಿರುವುದು ಅಚ್ಚರಿ ಮೂಡಿಸುತ್ತಿವೆ.
ಇಷ್ಟಕ್ಕೂ ಕೆಲವು ರಾಜಕೀಯ ಪಕ್ಷಗಳಿಗೆ ಅಧಿಕಾರವೇ ಮುಖ್ಯವಾಗಿರುವುದರಿಂದ ಮತಬ್ಯಾಂಕ್ ನ್ನು ಈ ಸಮಯದಲ್ಲಿಯೂ ಕಾಪಾಡಿಕೊಳ್ಳಲು ಹವಣಿಸುತ್ತಿರುವುದು ನಿಜಕ್ಕೂ ಬೇಸರ ಮೂಡಿಸುತ್ತಿದೆ. ಪಾಕಿಸ್ತಾನದ ವಿರುದ್ಧ ಮಾತನಾಡಿದರೆ ದೇಶದ ಪ್ರಜೆಯಾಗಿರುವ ಮುಸ್ಲಿಮರಿಗೆ ಬೇಸರವಾಗಬಹುದು. ಅವರು ನಮಗೆ ಮತ ಹಾಕದೆ ಹೋಗಬಹುದು ಎಂದು ಕೆಲವು ನಾಯಕರು ಅಂದುಕೊಳ್ಳುತ್ತಿರುವುದು ಮತ್ತು ಅವರನ್ನು ಓಲೈಸುವ ಸಲುವಾಗಿ ನಮ್ಮ ದೇಶದ ಬಗ್ಗೆಯೇ ಹಗುರವಾಗಿ ಮಾತನಾಡುತ್ತಿರುವುದು ಕ್ಷಮಿಸಲಾರದ್ದಾಗಿದೆ.
ಈಗ ನಾವು ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ. ಇನ್ನು ಮತಬ್ಯಾಂಕ್ ಗಾಗಿ ಕಣ್ಣಿಗೆ ಕಂಡ ಸತ್ಯವನ್ನು ಮುಚ್ಚಿಟ್ಟು ಕೇವಲ ಮತಕ್ಕಾಗಿ ನಾಯಕರು ರಾಜಕೀಯ ಮಾಡಿದರೆ ಅದನ್ನು ಯಾರೂ ಸಹಿಸಲಾರರು. ಇಲ್ಲಿ ನಾಯಕರು ಇವತ್ತು ಇರಬಹುದು.. ನಾಳೆ ಹೋಗಬಹುದು.. ಆದರೆ ದೇಶವನ್ನು ಕಾಪಾಡದೆ ಹೋದರೆ ಈ ದೇಶದ ಜನ ನಿಮ್ಮನ್ನು ಖಂಡಿತಾ ಕ್ಷಮಿಸಲಾರರು.