ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಶತಮಾನಗಳ ಐತಿಹಾಸಿಕವಿರುವ ಹುಣಸೂರು ಪಟ್ಟಣಕ್ಕೆ ಹೊಂದಿಕೊಂಡಂತಿರುವ ರಾಮೇನಹಳ್ಳಿ ಗ್ರಾಮದ ಬೆಟ್ಟದ ಮೇಲಿನ ಚೋಳರ ಕಾಲದ ಶ್ರೀ ಓಂಕಾರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.15ರಿಂದ ಫೆ.19ರವರೆಗೆ ನಡೆಯಲಿದೆ.
ಲಕ್ಷ್ಮಣತೀರ್ಥ ನದಿ ದಂಡೆಯ ಬೆಟ್ಟದ ಮೇಲಿನ ದೇವಾಲಯದಲ್ಲಿ ಅನಾದಿ ಕಾಲದಿಂದಲೂ ಪ್ರತಿ ಶಿವರಾತ್ರಿ ಹಬ್ಬದಂದು ಇಡೀ ರಾತ್ರಿ ಜಾಗರಣೆ. ಮಾರನೆ ದಿನ ಬೆಳಗ್ಗೆ ಬೆಟ್ಟದ ತಪ್ಪಲಲ್ಲಿ ರಥೋತ್ಸವ ನಡೆಯಲಿದೆ. ಇತ್ತೀಚೆಗಷ್ಟೆ ದಾನಿಗಳ ನೆರವಿನಿಂದ ಒಂದೂವರೆ ಕೋಟಿ ರೂ. ವೆಚ್ಚದ ಭವ್ಯ ದೇಗುಲ ನಿರ್ಮಾಣಗೊಂಡಿದೆ. ದೇಗುಲದ ಮುಂಭಾಗದಲ್ಲಿ ಬಂಡೆಕಲ್ಲು ಗಳಿಂದಲೇ ತಡೆಗೋಡೆ ನಿರ್ಮಿಸಿದ್ದು, ಇದರ ಮೇಲೆ ವಿಶಾಲ ಆವರಣ ಸುಂದರವಾಗಿ ಕಾಣುತ್ತಿದೆ. ಕುಡಿಯುವ ನೀರು, ವಿದ್ಯುದ್ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ.

426ಎಕರೆ ವಿಸ್ತೀರ್ಣ ಹೊಂದಿರುವ ಬೆಟ್ಟವು ದೊಡ್ಡ ದೊಡ್ಡ ಬಂಡೆ ಕಲ್ಲುಗಳಿಂದ ಆವೃತವಾಗಿದ್ದು, ಹರಕೆ ಹೊತ್ತವರ ಮತ್ತು ದಾನಿಗಳ ನೆರವಿನಿಂದ ಚಪ್ಪಡಿ ಕಲ್ಲು ಹಾಸಿನ ಮೆಟ್ಟಿಲು ನಿರ್ಮಿಸಲಾಗಿದೆ. ಪಕ್ಕದಲ್ಲಿ ಸುಸಜ್ಜಿತ ರಸ್ತೆ ದೇವಸ್ಥಾನದವರೆಗೂ ನಿರ್ಮಾಣವಾಗಿದೆ. ಇನ್ನು ಜಾತ್ರೆ ಎಂದರೆ ಇಡೀ ಊರು ಸಂಭ್ರಮಿಸುತ್ತದೆ. ಅಂದು ಊರ ಜನರೆಲ್ಲಾ ಹೊಸ ಬಟ್ಟೆ ತೊಡುವರು, ವಾರಕಾಲ ಮಾಂಸದ ಅಡುಗೆ ಮಾಡುವಂತಿಲ್ಲ. ಜಾತಿ ಬೇಧ, ಪಕ್ಷ ಬೇಧ ಮರೆತು ಒಗ್ಗೂಡುತ್ತಾರೆ. ಗ್ರಾಮಸ್ಥರು ಪ್ರತಿವರ್ಷ ಮನೆಗೆ ಸುಣ್ಣ ಬಣ್ಣ ಹಚ್ಚುತ್ತಾರೆ, ಮಡಕೆ ತೆಗೆಯುತ್ತಾರೆ.
ಶಿವರಾತ್ರಿಯಂದು ಸುತ್ತಮುತ್ತಲ ಗ್ರಾಮಸ್ಥರು ಬೆಟ್ಟದ ಮೇಲೆ ವಿಶೇಷ ಪೂಜೆ ಸಲ್ಲಿಸಿ, ಕಳಶ ಸ್ಥಾಪಿಸಿ ಬೆಳಗಿನ ಜಾವದವರೆಗೂ ಜಾಗರಣೆ ಮಾಡುತ್ತಾರೆ. ಮಾರನೇ ದಿನ ರಥೋತ್ಸವ, ಅದೇ ದಿನ ಹರಕೆ ಹೊತ್ತವರು, ಗ್ರಾಮಸ್ಥರು ಲಕ್ಷ್ಮಣತೀರ್ಥ ನದಿಯಲ್ಲಿ ಮಿಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಮುಡಿ ಕೊಟ್ಟು ಬಾಯಿ ಬೀಗ, ಉರುಳು ಸೇವೆ ಸಲ್ಲಿಸುತ್ತಾರೆ. ದನಗಳ ಕಾಯಿಲೆಗೆ ಹರಕೆ ಹೊತ್ತವರು ಹರಕೆ ತೀರಿಸುತ್ತಾರೆ. ಪಾರಟೋತ್ಸವದಂದು ಬೆಟ್ಟದ ಕೆಳಗಿರುವ ದೇವರ ಮಂಟಪಕ್ಕೆ ಉತ್ಸವ ಮೂರ್ತಿಯನ್ನು ತೊಟ್ಟಿಲಲ್ಲಿರಿಸಿ ತೂಗುತ್ತಾರೆ.
ರಥೋತ್ಸವದಂದು ಬೆಟ್ಟದ ಕೆಳಗಿನ ವಿಶಾಲ ಪ್ರದೇಶದಲ್ಲಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸಮಿತಿ ವತಿಯಿಂದ ೧೦ ಸಾವಿರ ಮಂದಿಗೆ ಅನ್ನದಾಸೋಹ ವ್ಯವಸ್ಥೆ ಇರಲಿದೆ. ಕಳೆದ ಹಲವಾರು ವರ್ಷಗಳಿಂದ ಜಾನುವಾರುಗಳನ್ನು ಕಟ್ಟುವ ಮೂಲಕ ಜಾತ್ರೆಗೆ ಕಳೆ ಬಂದಿದೆ. ಉತ್ತಮ ರಾಸುಗಳಿಗೆ ಬಹುಮಾನ ನೀಡುವ ಪದ್ಧತಿಯೂ ಇದೆ.

ಯಾವ ದಿನ, ಏನೇನು ಕಾರ್ಯಕ್ರಮಗಳಿವೆ ಎಂಬುದನ್ನು ನೋಡಿದ್ದೇ ಆದರೆ -ಫೆ.15ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸ್ವಾಮಿಗೆ ನಾನಾ ಕಳಶ ಪೂಜೆ ಹಾಗೂ ರಾತ್ರಿ 9.05ರಿಂದ ಬೆಳಗ್ಗೆ 6.30ರವರೆಗೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಜಾಗರಣೋತ್ಸವ. ಫೆ.16ರ ಬೆಳಗ್ಗೆ 9ರಿಂದ 9.30ರವರೆಗೆ ಓಂಕಾರೇಶ್ವರ ಸ್ವಾಮಿ ರಥೋತ್ಸವ ಹಾಗೂ ಭಕ್ತಾದಿಗಳಿಂದ ಬಾಯಿಬೀಗ, ತಲೆ ಮುಡಿ ಹರಕೆ ಕಾರ್ಯ, ಸಂಜೆ 5.30ಕ್ಕೆ ರಥವನ್ನು ಸ್ವಸ್ಥಾನಕ್ಕೆ ತರುವುದು. ಮಧ್ಯಾಹ್ನದಿಂದ ಸಂಜೆ 6ರವರೆಗೆ ಅನ್ನ ಸಂತರ್ಪಣೆ, -ಫೆ 17ರಂದು ಮಧ್ಯಾಹ್ನ 1ರಿಂದ ಸಂಜೆ 4.30ಕ್ಕೆ ಪಾರಟೋತ್ಸವ, -ಫೆ 18: ಸಂಜೆ 4.30 ರಿಂದ 8.30ರವರೆಗೆ ರಾಮೇನಳ್ಳಿಯಲ್ಲಿ ಸ್ವಾಮಿಯ ಮೆರವಣಿಗೆ ನಂತರ ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ.
ಜಾತ್ರೆ ಕುರಿತಂತೆ ಮಾಹಿತಿ ನೀಡಿರುವ ರಾಮೇನಹಳ್ಳಿ ಗ್ರಾಮದ ಯಜಮಾನರಾದ ರಾಜೇಶ್ ಗೌಡರವರು, ಪೂರ್ವಿಕರ ಕಾಲದಿಂದಲೂ ಜಾತ್ರಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು ಇಂದಿಗೂ ಹಿರಿಯರ ಮಾರ್ಗದರ್ಶನ ಒಗ್ಗಟ್ಟಿನಿಂದ ಇಂದಿನ ಎಲ್ಲಾ ಸಮಾಜದ ಯುವಕರೊಂದಿಗೆ ಜಾತ್ರಾ ಮಹೋತ್ಸವವನ್ನು ನೆರವೇರಿಸಿಕೊಂಡು ಬರುತ್ತಿದ್ದು ಪ್ರತಿವರ್ಷವೂ ಅದ್ಧೂರಿಯಾಗಿ ನಡೆಸುವ ಮೂಲಕ ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಿದ್ದಾರೆ.








