ಸಫಾರಿ ಆರಂಭವನ್ನು ವಿರೋಧಿಸಿ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಪ್ರತಿಭಟನೆಗೆ ನಿರ್ಧಾರ

ಮೈಸೂರು: ಕಳೆದ ನವೆಂಬರ್ ನಿಂದ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಮತ್ತೆ ಫೆಬ್ರವರಿ 19ರಿಂದ ಆರಂಭಿಸಲು ಸರ್ಕಾರ ತೀರ್ಮಾನ ಕೈಗೊಂಡಿರುವುದು ರೈತರು ಸೇರಿದಂತೆ ಪ್ರಕೃತಿ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಸಫಾರಿ ಬಂದ್ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಫೆ.19ರಂದು ಗುರುವಾರ ಬೆಳಿಗ್ಗೆ 11.45ಕ್ಕೆ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನ ಕೈಗೊಳ್ಳಲಾಗಿದೆ.
ನಗರದ ಅಶೋಕಪುರಂನಲ್ಲಿರುವ ಮೈಸೂರಿನ ಅರಣ್ಯ ಭವನದ ಮುಖ್ಯ ದ್ವಾರದಿಂದ ಮೆರವಣಿಗೆ ಹೊರಟು ಅರಣ್ಯ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಒಳಗೆರೆ ಗಣೇಶ್ ತಿಳಿಸಿದ್ದಾರೆ. ಬಂದ್ ಮಾಡಿದ್ದ ಸಫಾರಿಯನ್ನು ಮತ್ತೆ ಆರಂಭಿಸುವಂತೆ ಮೇಲಿಂದ ಮೇಲೆ ಒತ್ತಡಗಳು ಬರುತ್ತಿದ್ದರೂ ಈ ಬಗ್ಗೆ ರೈತಸಂಘ ಸೇರಿದಂತೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಸಫಾರಿ ಆರಂಭಿಸದಂತೆ ಹೋರಾಟ ನಡೆಸಿದ್ದವು ಆದರೀಗ ಸರ್ಕಾರ ಮಣಿದಿದ್ದು ಸಫಾರಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಫೆ.19ರಿಂದ ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಪುನರಾರಂಭ ಆಗಲಿದ್ದು, ರಾಜ್ಯ ಸರ್ಕಾರ ಕೇವಲ 50ರಷ್ಟು ಸಫಾರಿ ಪ್ರಾರಂಭಕ್ಕೆ ಅನುಮತಿ ನೀಡಿದೆ ಎಂದು ಹೇಳಿದ್ದು, ಅಕ್ಟೋಬರ್ ತಿಂಗಳಲ್ಲಿ ನಾಗರಹೊಳೆ, ಬಂಡೀಪುರದಲ್ಲಿ ಹುಲಿ ದಾಳಿಯಿಂದ ಅನೇಕ ಜನರು ಸಾವನ್ನಪ್ಪಿದ್ದರು. ನಮ್ಮ ಸರ್ಕಾರದ ಆದ್ಯತೆ ಮಾನವ ಜೀವ. ಪ್ರತಿ ಜೀವ ಅತ್ಯಮೂಲ್ಯವಾದದ್ದು. ಯಾವುದೇ ಜೀವಕ್ಕೆ ಹಾನಿಯಾಗಬಾರದು ಎಂದು ನ.7ರಿಂದ ಸಫಾರಿ ಬಂದ್ ಮಾಡಿ, ಆದೇಶ ಮಾಡಿದ್ದೆವು. ಇದೀಗ ಮತ್ತೆ ನಾಗರಹೊಳೆ, ಬಂಡೀಪುರದಲ್ಲಿಸಫಾರಿ ಪುನರಾರಂಭ ಮಾಡುತ್ತಿರುವುದಾಗಿ ಹೇಳಿದ್ದಾರೆ.







