ಭಾರತೀಯ ಸಂಸ್ಕೃತಿಯ ವೈಭವದಲ್ಲಿ ಹಬ್ಬಗಳು ಕೇವಲ ಆಚರಣೆಗಳಲ್ಲ; ಅವು ಆಧ್ಯಾತ್ಮಿಕತೆ, ನಂಬಿಕೆ ಮತ್ತು ನೈತಿಕ ಮೌಲ್ಯಗಳ ಪ್ರತಿರೂಪಗಳಾಗಿವೆ. ಹಿಂದೂಗಳು ದಿನ ನಿತ್ಯವೂ ಆರಾಧಿಸಿದರೆ ನಿತ್ಯ ಪ್ರತಿ ಹಬ್ಬಗಳಿರುವುದು ಸರಿಯಷ್ಟೆ. ಅಂತಹ ಪವಿತ್ರ ಹಬ್ಬಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿರುವುದು ಮಹಾಶಿವರಾತ್ರಿ. ದೇವಾದಿದೇವನಾದ ಶಿವನಆರಾಧನೆಗೆ ಸಮರ್ಪಿತವಾದ ಈ ದಿನವು ಭಕ್ತಿಭಾವ, ಉಪವಾಸ, ಜಾಗರಣೆ ಮತ್ತು ಧ್ಯಾನಗಳ ಮೂಲಕ ಜೀವನದ ಒಳಾರ್ಥವನ್ನು ಅರಿಯಲು ಪ್ರೇರೇಪಿಸುತ್ತದೆ.

ಫಾಲ್ಗುಣ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಮಹಾಶಿವರಾತ್ರಿ, ಆತ್ಮಶುದ್ಧಿ ಮತ್ತು ಆತ್ಮಸಾಕ್ಷಾತ್ಕಾರದ ದಿವ್ಯ ಸಂಧಿಯಾಗಿರುತ್ತದೆ. ಈ ರಾತ್ರಿ ಜಾಗರಣೆ ಮಾಡುವುದರಿಂದ ಅಜ್ಞಾನ ಎಂಬ ಅಂಧಕಾರ ನಿವಾರಣೆಯಾಗಿ ಜ್ಞಾನ ಎಂಬ ಬೆಳಕು ಉದಯಿಸುತ್ತದೆ ಎಂಬ ನಂಬಿಕೆ ಇದೆ. ಸಮುದ್ರಮಥನದ ಸಂದರ್ಭದಲ್ಲಿ ಹೊರಬಂದ ಹಾಲಾಹಲ ವಿಷವನ್ನು ಪಾನ ಮಾಡಿ ಲೋಕವನ್ನು ರಕ್ಷಿಸಿದ ಶಿವನತ್ಯಾಗ ಮಹಿಮೆಯೂ ಈ ಹಬ್ಬದ ನೆನಪಿನಲ್ಲಿ ಅಡಕವಾಗಿದೆ. ಆದ್ದರಿಂದ ಮಹಾಶಿವರಾತ್ರಿ ಕೇವಲ ಹಬ್ಬವಲ್ಲ; ಅದು ಭಕ್ತಿ, ಶರಣಾಗತಿ ಮತ್ತು ಮಾನವ ಜೀವನದ ಶ್ರೇಷ್ಠತೆಯ ಸಂದೇಶವನ್ನು ಸಾರುವ ಆಧ್ಯಾತ್ಮಿಕ ಉತ್ಸವವಾಗಿದೆ. ನಮ್ಮಅನೇಕ ಆಚಾರ– ವಿಚಾರ, ಸಂಪ್ರದಾಯ– ಸಂಸ್ಕೃತಿಗಳ ಸಂಗಮಸ್ಥಳವಾಗಿರುವ ಈ ಪುಣ್ಯಭೂಮಿಯಲ್ಲಿ ಹಿಂದೂ ಧರ್ಮವು ಅತ್ಯಂತ ಸನಾತನ ಧರ್ಮವಾಗಿಮೆರೆಯುತ್ತಿದೆ.
ಈ ಧರ್ಮದ ತತ್ತ್ವಮೂಲದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಪ್ರಮುಖ ಆರಾಧ್ಯ ದೇವತೆಗಳಾಗಿ ಪೂಜಿಸಲ್ಪಡುತ್ತಾರೆ. ಬ್ರಹ್ಮನು ಸೃಷ್ಟಿಕರ್ತ, ವಿಷ್ಣು ಪಾಲಕ, ಶಿವನು ಲಯಕರ್ತ. ಸೃಷ್ಟಿಯ ಆರಂಭವೂ ಅಂತ್ಯವೂ ಪರಮತತ್ತ್ವದ ಇಚ್ಛೆಯಲ್ಲೇ ಅಡಕವಾಗಿವೆ ಎಂಬ ಸಂದೇಶವನ್ನು ತ್ರಿಮೂರ್ತಿಗಳ ತತ್ತ್ವವು ಸಾರುತ್ತದೆ. ಈ ಲಯಕರ್ತನಾದ ಶಿವನಆರಾಧನೆಯೇ ಶಿವರಾತ್ರಿ; ಅವನ ಮಹಿಮೆಯನ್ನು ಸ್ಮರಿಸುವ ಪರಮಪಾವನ ರಾತ್ರಿಯೇ ಮಹಾಶಿವರಾತ್ರಿ.

ಮಹಾಶಿವರಾತ್ರಿಯು ಹಿಂದೂಗಳ ಪ್ರಮುಖ ಆಚರಣೆಗಳಲ್ಲಿ ಒಂದು. ಮಾಘ ಮಾಸದ ಬಹುಳ ಚತುರ್ದಶಿಯಂದುಆಚರಿಸಲ್ಪಡುವ ಈ ಹಬ್ಬ ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಬರುತ್ತದೆ. ಶಿವನಿಗೆ ವಿಶೇಷ ಭಕ್ತಿ ಸಲ್ಲಿಸುವ ಈ ದಿನ ಉಪವಾಸ, ಜಾಗರಣೆ, ಜಪ–ತಪ, ಅಭಿಷೇಕ–ಅರ್ಚನೆಗಳ ಮೂಲಕ ಭಕ್ತರು ತಮ್ಮ ಆತ್ಮವನ್ನುಶುದ್ಧೀಕರಿಸಿಕೊಳ್ಳುತ್ತಾರೆ. ಶಿವರಾತ್ರಿಗಳಲ್ಲಿ ನಿತ್ಯ ಶಿವರಾತ್ರಿ, ಪಕ್ಷ ಶಿವರಾತ್ರಿ, ಮಾಸ ಶಿವರಾತ್ರಿ, ಯೋಗ ಶಿವರಾತ್ರಿ ಮತ್ತು ಮಹಾ ಶಿವರಾತ್ರಿ ಎಂಬ ಐದು ವಿಧಗಳಿವೆ. ಅವುಗಳಲ್ಲಿ ಮಹಾಶಿವರಾತ್ರಿಯೇ ಅತ್ಯಂತ ವೈಭವಶಾಲಿ ಹಾಗೂ ಮಹತ್ವಪೂರ್ಣ ಆಚರಣೆ.
ಶಿವನೆಂದರೆ ಮಂಗಳ, ಕಲ್ಯಾಣ, ಜ್ಞಾನ, ಚೇತನ, ಸತ್ಯ ಎಂಬ ಅರ್ಥಗಳು. ಅವನು ರೂಪರೂಪಾತೀತ. ವಿಗ್ರಹ ರೂಪದಲ್ಲಿಯೂ, ಲಿಂಗ ರೂಪದಲ್ಲಿಯೂ, ನಿರಾಕಾರ ತತ್ತ್ವದಲ್ಲಿಯೂ ಅವನು ಆರಾಧಿತ. ವೇದಗಳಲ್ಲಿ ಶಿವನು ರುದ್ರ ರೂಪದಲ್ಲಿ ವರ್ಣಿಸಲ್ಪಟ್ಟಿದ್ದಾನೆ. ವಿಶೇಷವಾಗಿ ಋಗ್ವೇದದಲ್ಲಿ ರುದ್ರನನ್ನುಉಗ್ರದೇವತೆಯಾಗಿ ಚಿತ್ರಿಸಲಾಗಿದ್ದು, ಅಥರ್ವವೇದದಲ್ಲಿ ಮಹಾದೇವನಾಗಿ, ನಿರಂಜನ, ನಿರ್ವಿಕಾರ, ನಿತ್ಯಸತ್ಯಸ್ವರೂಪನಾಗಿ ಕೀರ್ತಿಸಲಾಗಿದೆ. “ರುದ್ರ” ಎಂಬ ಪದವು ದುಃಖವನ್ನು ದ್ರಾವಿಸುವವನು, ಅಂದರೆ ನಾಶಮಾಡುವವನು ಎಂಬ ಅರ್ಥವನ್ನು ನೀಡುತ್ತದೆ. ಕಾಲ ಕ್ರಮೇಣ ರುದ್ರನು ಭಯಂಕರನಲ್ಲ, ದಯಾಮಯನಾದ ಶಿವನೆಂದು ಭಕ್ತರು ನಂಬಿ ಆರಾಧನೆ ಆರಂಭಿಸಿದರು.

ಸಿಂಧೂ ಸಂಸ್ಕೃತಿಯ ಅವಶೇಷಗಳಲ್ಲಿ ದೊರಕಿದ ಲಿಂಗಾಕಾರ ಚಿಹ್ನೆಗಳು, ಕೊಂಬುಗಳಿರುವ ದೇವತಾಮೂರ್ತಿಗಳು ಶಿವೋಪಾಸನೆಯ ಪ್ರಾಚೀನತೆಯನ್ನು ಸಾರುತ್ತವೆ. ಹರಪ್ಪ–ಮಹೆಂಜೋದಾರೋ ಸಂಸ್ಕೃತಿಯ ಮುದ್ರಿಕೆಗಳುಶಿವತತ್ತ್ವವು ವೇದಪೂರ್ವವಾಗಿಯೇ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಸಾಕ್ಷಿಯಾಗಿವೆ. ಆದಿ ಪುರುಷನಾದಶಿವನು ಲಿಂಗ ರೂಪದಲ್ಲಿ ಪ್ರಕಾಶಿಸಿದನು ಎಂಬ ನಂಬಿಕೆ ಲಿಂಗಾರ್ಚನೆಯ ಮಹತ್ವವನ್ನು ಹೆಚ್ಚಿಸಿದೆ. ಲಿಂಗವು ಚಿನ್ಮಯ ಪರಬ್ರಹ್ಮನ ಸಂಕೇತ; ಪೀಠವು ಪ್ರಕೃತಿಯ ಪ್ರತೀಕ. ಪ್ರಕೃತಿ ಸಂಯೋಗದ ತತ್ತ್ವವನ್ನು ಲಿಂಗಪೂಜೆ ಸೂಚಿಸುತ್ತದೆ.
ಶಿವನಆರಾಧನೆಗೆ ಸಂಬಂಧಿಸಿದ ಆಗಮಗಳನ್ನು ಶಿವಾಗಮಗಳು ಎನ್ನುತ್ತಾರೆ. ಇವು ಜ್ಞಾನ, ಕ್ರಿಯಾ, ಯೋಗ ಮತ್ತು ಚರ್ಯೆ ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿವೆ. ಪರಂಪರೆಯ ಪ್ರಕಾರ ಶಿವನುಪಾರ್ವತಿಗೆ ಬೋಧಿಸಿದ ಉಪದೇಶಗಳೇ ಆಗಮಗಳಸಾರವೆಂದು ಪರಿಗಣಿಸಲಾಗಿದೆ. ಶಿವನ ಪಂಚಮುಖ ರೂಪಗಳು ಸೃಷ್ಟಿ, ಸ್ಥಿತಿ, ಸಂಹಾರ, ತಿರೋಭವ(ಮರೆಮಾಡುವಿಕೆ) ಮತ್ತು ಅನುಗ್ರಹ ಎಂಬ ಪಂಚಕಾರ್ಯಗಳನ್ನು ಸೂಚಿಸುತ್ತವೆ. ಈ ಐದು ಕಾರ್ಯಗಳೂ ಜಗತ್ತಿನ ಚಕ್ರವನ್ನು ಚಲಿಸುವಂತೆ ಮಾಡುತ್ತವೆ.

ಮಹಾಶಿವರಾತ್ರಿಗೆ ಸಂಬಂಧಿಸಿದ ಅನೇಕ ಪುರಾಣಕಥೆಗಳು ಪ್ರಸಿದ್ಧ. ಮಹಾಭಾರತದಲ್ಲಿ ವನವಾಸದಲ್ಲಿದ್ದ ಅರ್ಜುನನು ಇಂದ್ರಕೀಲ ಪರ್ವತದಲ್ಲಿ ತಪಸ್ಸು ಮಾಡಿ ಶಿವನ ಅನುಗ್ರಹ ಪಡೆದ ಕಥೆ ಪ್ರಸಿದ್ಧ. ಶಿವನು ಕಿರಾತ ರೂಪದಲ್ಲಿ ಬಂದು ಅರ್ಜುನನ ಧೈರ್ಯವನ್ನು ಪರೀಕ್ಷಿಸಿ, ಅಂತಿಮವಾಗಿ ತನ್ನ ನಿಜರೂಪವನ್ನು ತೋರಿಸಿ ಪಾಶುಪತಾಸ್ತ್ರವನ್ನುನೀಡುತ್ತಾನೆ. ಈ ಘಟನೆಯ ಸ್ಮರಣಾರ್ಥ ಶಿವರಾತ್ರಿಯನ್ನು ಆಚರಿಸಲಾಗುತ್ತದೆ ಎಂಬ ನಂಬಿಕೆ ಇದೆ.
ಇನ್ನೊಂದು ದಂತಕಥೆಯಲ್ಲಿ ಒಬ್ಬ ಬೇಡನು ಬೇಟೆಗಾಗಿ ಕಾಡಿನಲ್ಲಿ ಅಲೆದು ಕೊನೆಗೆ ಬಿಲ್ವಮರದ ಮೇಲೆ ಏರಿ ಜಾಗರಣೆ ಮಾಡುತ್ತಾನೆ. ಅವನಿಗೆ ತಿಳಿಯದೆ ಬಿಲ್ವಪತ್ರೆಗಳು ಕೆಳಗಿನ ಶಿವಲಿಂಗದ ಮೇಲೆ ಬೀಳುತ್ತವೆ. ಹೀಗೆ ಅವನು ಅಜ್ಞಾನದಲ್ಲಿಯೇ ಶಿವಾರ್ಚನೆ ಮಾಡಿದ ಫಲವಾಗಿ ಶಿವನಕೃಪೆಗೆಪಾತ್ರನಾಗುತ್ತಾನೆ. ಈ ಕಥೆ ಭಕ್ತಿಯ ಸರಳತೆಯನ್ನು ಸಾರುತ್ತದೆ. ಉದ್ದೇಶ ಶುದ್ಧವಾಗಿದ್ದರೆ ದೇವರ ಅನುಗ್ರಹ ಲಭಿಸುವುದಕ್ಕೆ ಅಡಚಣೆಗಳಿಲ್ಲ ಎಂಬ ಸಂದೇಶವನ್ನು ನೀಡುತ್ತದೆ.

ಮಹಾಶಿವರಾತ್ರಿಯಂದು ಭಕ್ತರು ಉಪವಾಸವಿದ್ದು ಇಡೀರಾತ್ರಿ ಜಾಗರಣೆ ಮಾಡುತ್ತಾರೆ. ಶಿವನಾಮಸ್ಮರಣೆ, ಪಂಚಾಕ್ಷರ ಜಪ, ಶಿವಪುರಾಣ ಪಠಣ, ಭಜನೆ–ಕೀರ್ತನೆಗಳುನಡೆಯುತ್ತವೆ. ಬಿಲ್ವಪತ್ರೆ, ದತ್ತೂರಿ, ದಾಸವಾಳ, ಕಮಲ ಮುಂತಾದ ಹೂವುಗಳಿಂದ ಅಭಿಷೇಕ–ಅರ್ಚನೆ ನಡೆಯುತ್ತದೆ. ಗಂಗಾಜಲ, ಹಾಲು, ತುಪ್ಪ, ಜೇನು, ಬೆಲ್ಲದ ನೀರು ಇತ್ಯಾದಿಗಳಿಂದ ಅಭಿಷೇಕ ಮಾಡುವ ಮೂಲಕ ಭಕ್ತರು ತಮ್ಮ ಮನಸ್ಸನ್ನು ಶುದ್ಧಗೊಳಿಸಿಕೊಳ್ಳುತ್ತಾರೆ.
ಶಿವನಆಭರಣಗಳಲ್ಲಿಯೂ ಆಳವಾದ ತತ್ತ್ವಸೂಚನೆ ಇದೆ. ಗಜಚರ್ಮವು ಅಹಂಕಾರದ ನಿಗ್ರಹವನ್ನು, ವ್ಯಾಘ್ರ ಚರ್ಮವು ಕಾಮನಿಗ್ರಹವನ್ನು, ಸರ್ಪಧಾರಣೆ ಕ್ರೋಧ ನಿಗ್ರಹವನ್ನು ಸೂಚಿಸುತ್ತದೆ. ಜಟೆಯಲ್ಲಿ ಹರಿಯುವ ಗಂಗೆಯು ಪಾವಿತ್ರ್ಯ ಮತ್ತು ಮೋಕ್ಷದ ಸಂಕೇತ. ಡಮರು ಸೃಷ್ಟಿನಾದವನ್ನು ಪ್ರತಿನಿಧಿಸಿದರೆ, ವೃಷಭವು ಧರ್ಮದ ಪ್ರತೀಕ. ಶಿವನತೃತೀಯ ನೇತ್ರ ಜ್ಞಾನ ಚಕ್ಷು; ಅದು ಅಜ್ಞಾನವನ್ನುದಹಿಸುವ ಶಕ್ತಿ.

ಮಹಾಶಿವರಾತ್ರಿ ಕೇವಲ ಆಚರಣೆ ಮಾತ್ರವಲ್ಲ; ಅದು ಆತ್ಮಪರಿಶುದ್ಧಿಯ ಮಹೋತ್ಸವ. ಮೃತ್ಯುವಿನಿಂದ ಅಮರತ್ವದ ಕಡೆಗೆ ಸಾಗುವ ಧ್ಯಾನದ ದಾರಿ. ಜಾಗರಣೆ ಎಂದರೆ ಕೇವಲ ನಿದ್ರಾಹೀನತೆ ಅಲ್ಲ; ಅದು ಅಜ್ಞಾನ ನಿದ್ರೆಯಿಂದ ಜ್ಞಾನಪ್ರಕಾಶದ ಕಡೆಗೆ ಎಚ್ಚರಗೊಳ್ಳುವ ಸಂಕೇತ. ಉಪವಾಸ ಎಂದರೆ ಕೇವಲ ಅನ್ನವಿರತಿ ಅಲ್ಲ; ಅದು ಇಂದ್ರಿಯಗಳ ನಿಯಂತ್ರಣ. ಶಿವಧ್ಯಾನ ಎಂದರೆ ಕೇವಲ ಮಂತ್ರೋಚ್ಚಾರಣೆ ಅಲ್ಲ; ಅದು ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವ ಸಾಧನೆ.
ಹೀಗಾಗಿ ಮಹಾಶಿವರಾತ್ರಿಯು ಭಕ್ತಿಯಪರಾಕಾಷ್ಠೆಯೂ, ತತ್ತ್ವಚಿಂತನೆಯೂ, ಆತ್ಮಸಾಕ್ಷಾತ್ಕಾರದಪಥವೂ ಆಗಿದೆ. ಶಿವನುಲಯಕರ್ತನಾಗಿದ್ದರೂ, ಅವನ ಲಯವು ನಾಶವಲ್ಲ; ಅದು ಪುನರುತ್ಥಾನದ ಮುನ್ನುಡಿ. ಜೀವನದ ಎಲ್ಲ ದುಃಖ–ಸಂಕಟಗಳನ್ನು ದಾಟಿ ಮಂಗಳಮಯವಾದ ಶಾಂತಿಯ ಕಡೆಗೆ ಸಾಗುವ ಸಂದೇಶವನ್ನು ಶಿವರಾತ್ರಿ ಸಾರುತ್ತದೆ.

“ಓಂ ನಮಃಶಿವಾಯ” ಎಂಬ ಪಂಚಾಕ್ಷರ ಮಂತ್ರದ ನಾದದಲ್ಲಿ ಲೀನವಾದ ಮನಸ್ಸು ಅಜ್ಞಾನಾಂಧಕಾರವನ್ನು ದೂರ ಮಾಡಿ, ಆತ್ಮಜ್ಯೋತಿಯನ್ನು ಬೆಳಗಿಸುತ್ತದೆ. ಈ ಮಹಾಪವಿತ್ರ ರಾತ್ರಿಯ ಮಹಿಮೆ ಮಾನವನನ್ನು ಅಧ್ಯಾತ್ಮಿಕ ಶಿಖರದತ್ತ ಕೊಂಡೊಯ್ಯುವ ದಿವ್ಯ ಸೇತುವೆಯಾಗಿದೆ. ಶಿವರಾತ್ರಿಯು ಕೇವಲ ಹಬ್ಬವಲ್ಲ—ಅದು ಜೀವನದ ಲಯ–ತಾಳವನ್ನು ಸರಿಗಟ್ಟುವ ಆತ್ಮೋತ್ಸವ.
ಮಹಾಶಿವರಾತ್ರಿ ಹಬ್ಬವುಭಕ್ತಿಯ ಭಾವನೆಗಳನ್ನು ಗಾಢ ಗೊಳಿಸುವುದರೊಂದಿಗೆ ಆತ್ಮಪರಿಶೀಲನೆಗೆ ದಾರಿ ತೋರಿಸುವ ಮಹತ್ವದ ಆಧ್ಯಾತ್ಮಿಕ ಸಂಭ್ರಮವಾಗಿದೆ. ಈ ದಿನದ ಉಪವಾಸ, ಜಾಗರಣೆ ಮತ್ತು ರುದ್ರಾಭಿಷೇಕಗಳ ಮೂಲಕ ಭಕ್ತರು ತಮ್ಮ ಅಂತರಂಗವನ್ನು ಶುದ್ಧಗೊಳಿಸಿ ಧರ್ಮಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನು ಕೈಗೊಳ್ಳುತ್ತಾರೆ. ದೇವಾದಿ ದೇವನಾದ ಶಿವನ ತ್ಯಾಗ, ಸಹನೆ ಮತ್ತು ಸಮತ್ವದ ಗುಣಗಳು ಮಾನವ ಜೀವನಕ್ಕೆ ಆದರ್ಶಪ್ರಾಯವಾಗಿವೆ.

ಮಹಾಶಿವರಾತ್ರಿ ನಮಗೆ ಅಜ್ಞಾನ, ಅಹಂಕಾರ ಮತ್ತು ದುರ್ಮಾರ್ಗಗಳಿಂದ ದೂರವಾಗಿ ಸತ್ಯ, ಶಾಂತಿ ಮತ್ತು ನೈತಿಕ ಮೌಲ್ಯಗಳತ್ತ ಹೆಜ್ಜೆ ಹಾಕುವಂತೆ ಪ್ರೇರೇಪಿಸುತ್ತದೆ. ಕತ್ತಲೆಯ ಮಧ್ಯೆ ಬೆಳಕಿನ ಅರಿವು ನೀಡುವ ಈ ಪವಿತ್ರ ರಾತ್ರಿ, ಜೀವನದ ನಿಜವಾದ ಅರ್ಥವನ್ನು ತಿಳಿಯುವ ಅವಕಾಶವಾಗಿದೆ. ಹೀಗಾಗಿ ಮಹಾಶಿವರಾತ್ರಿ ಹಬ್ಬವು ಕೇವಲ ಆಚರಣೆಗಷ್ಟೇಸೀಮಿತವಾಗದೆ, ಮಾನವನ ಒಳಗಿರುವ ದಿವ್ಯತೆಯನ್ನು ಜಾಗೃತಗೊಳಿಸುವ ಮಹೋತ್ಸವವಾಗಿ ಸದಾ ನಮ್ಮ ಬದುಕನ್ನು ಪ್ರಭಾವಿಸಲಿ ಎಂಬುದೇ ಮಹಾಶಿವರಾತ್ರಿ ಹಬ್ಬದ ಉದ್ದೇಶವಾಗಿದೆ.









