CinemaLatest

ರಾಜಮಹಾರಾಜರು, ಬ್ರಿಟೀಷ್ ಅಧಿಕಾರಿಗಳನ್ನೇ ನಟನೆಯಿಂದ ನಿಬ್ಬೆರಗಾಗಿಸಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ.. ಯಾರಿವರು ಗೊತ್ತಾ?

ಅವತ್ತಿನ ಕಾಲದಲ್ಲಿಯೇ ತನ್ನದೇ ಆದ ನಟನೆಯ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ ಇವರಿಗೆ ರಂಗಭೂಮಿಯಿಂದ ಚಿತ್ರರಂಗಪ್ರವೇಶ ಮಾಡಲಿಲ್ಲವಾದರೂ ಮಗನನ್ನು ಚಿತ್ರರಂಗಕ್ಕೆ ತರಬೇಕೆಂದು ಕನಸು ಕಂಡಿದ್ದರು. ಅದಕ್ಕಾಗಿ ಮದ್ರಾಸ್ ವರೆಗೂ ಹೋಗಿ ಬಂದಿದ್ದರು. ಅವರು ಚಿತ್ರರಂಗಕ್ಕೆ ಬರಲು ಸಾಧ್ಯವಾಗದೆ ಹೋದರೂ ಮೇರುಪರ್ವತದಂತಹ ನಟನನ್ನು ಮಗನಾಗಿ ಚಿತ್ರರಂಗಕ್ಕೆ ನೀಡಿದರು ಇದಕ್ಕಿಂತ ಕೊಡುಗೆ ಇನ್ನೇನು ಬೇಕು?

ಇವತ್ತು ನಮ್ಮೊಂದಿಗೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರಿಲ್ಲ. ಆದರೆ ಅವರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅವರ ಬಣ್ಣದ ಬದುಕಿನ ಬಗ್ಗೆ ಮೆಲುಕು ಹಾಕುವ ಕೆಲಸವನ್ನು ಚಂದನವನದ ಬಗ್ಗೆ ಕಳೆದ 55 ವರ್ಷಗಳಿಂದ ನೂರಾರು ಲೇಖನಗಳನ್ನು ಬರೆದಿರುವ ಕುಮಾರಕವಿ ನಟರಾಜ ಅವರು ಮಾಡಿದ್ದಾರೆ. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರ ಬಣ್ಣದ ಬದುಕು ಹೇಗಿತ್ತು? ಅವರು ನಟಿಸಿದ ಚಿತ್ರಗಳು ಯಾವುವು? ಇಲ್ಲಿದೆ ಮಾಹಿತಿ

1899ರಲ್ಲಿ ಕೊಳ್ಳೇಗಾಲ ಸಮೀಪದ ಸಿಂಗಾನಲ್ಲೂರು ಪುಟ್ಟಗ್ರಾಮದಲ್ಲಿ ಪುಟ್ಟಸ್ವಾಮಯ್ಯ ಜನಿಸಿದರು. ಇವರ ಪತ್ನಿ ಲಕ್ಷ್ಮಮ್ಮ ಅಂದಿನ ಮದ್ರಾಸ್ ಸಂಸ್ಥಾನ, ಇಂದಿನ ತಮಿಳುನಾಡು ತಾಳವಾಡಿ ಬಳಿ ಗಾಜನೂರಿನವರು. ಕಿರಿಯವಯಸ್ಸಿನಲ್ಲೆ ಅಭಿನಯ ಕಲೆಯನ್ನು ಕರತಲಾಮಲಕ ಮಾಡಿಕೊಂಡ ಪುಟ್ಟಸ್ವಾಮಯ್ಯ ತಮ್ಮ ರಕ್ತದ ಕಣಕಣದಲ್ಲಿ ಕಲೆಯನ್ನು ಕರಗಿಸಿಕೊಂಡ ಅಪ್ರತಿಮ ಕಲಾವಿದ. ಹಳೇ ಮೈಸೂರು ರಾಜ್ಯದಾದ್ಯಂತ ಪ್ರದರ್ಶನಗೊಂಡ ಅನೇಕ ಪೌರಾಣಿಕ- ಐತಿಹಾಸಿಕ ನಾಟಕದ ವಿವಿಧ ಪಾತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸುತ್ತಿದ್ದ ಅಪರೂಪದ ನಟ ಇವರಾಗಿದ್ದರು.

ವಿಶೇಷವಾಗಿ ಕಂಸ, ರಾವಣ, ಹಿರಣ್ಯಾಕ್ಷ ಮುಂತಾದ ಪಾತ್ರಗಳಲ್ಲಿ ಇವರ ಅಮೋಘ ಅಭಿನಯವನ್ನು ನೋಡಿದ ಪ್ರೇಕ್ಷಕ ಸಾಮಾನ್ಯರು, ರಾಜಮಹಾರಾಜರು, ದಿವಾನರು, ಬ್ರಿಟಿಷ್ ಅಧಿಕಾರಿಗಳು, ಮನಸಾರೆ ಕೊಂಡಾಡುತ್ತಿದ್ದರು. ರಂಗಭೂಮಿಯನ್ನು ಬಹುವಾಗಿ ನೆಚ್ಚಿಕೊಂಡಿದ್ದ ಪುಟ್ಟಸ್ವಾಮಯ್ಯ ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಆಸಕ್ತಿ ತೋರದೆ, ಮಕ್ಕಳನ್ನೂ ರಂಗಭೂಮಿಗೆ ಕರೆತಂದು ಬಣ್ಣ ಹಚ್ಚಿಸಿದರು. ಪ್ರಾರಂಭದಲ್ಲಿ ಹಿರಿಮಗ ಮುತ್ತುರಾಜ ಬಾಲನಟನಾಗಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತ, ಕ್ರಮೇಣ ಅಭಿಮನ್ಯು ಅರ್ಜುನ ಮುಂತಾದ ಮುಖ್ಯಪಾತ್ರಗಳನ್ನು ಮಾಡುವ ಹಂತ ತಲುಪಿದರು.

ಭಕ್ತ ಅಂಬರೀಷ ನಾಟಕದ ರಮಾಕಾಂತನಾಗಿ ಅಪ್ರತಿಮ ಹಾಡುಗಾರಿಕೆ ಮತ್ತು ಅಭಿನಯದಿಂದ ಎಲ್ಲರ ಮೆಚ್ಚುಗೆ ಪಡೆದು ಡ್ರಾಮಾ ಕಂಪನಿಯ ಆಧಾರ ಕಂಬವಾದ ಮುತ್ತುರಾಜನ ನಟನಾ ಪ್ರತಿಭೆ ಮತ್ತು ಗಾಯನ ಚಾತುರ್ಯ ಕಂಡ ಪುಟ್ಟಸ್ವಾಮಯ್ಯ ತಮ್ಮ ಮಗನನ್ನು ಸಿನಿಮಾರಂಗ ಸೇರಿಸಲು ಮದ್ರಾಸಿಗೆ ಕರೆ ತಂದರು. ತನ್ನಂತೆ ಮಗನು ಕೇವಲ ನಾಟಕದಲ್ಲಿ ಮಾತ್ರ ಬೆಳೆದರಷ್ಟೇ ಸಾಲದು ಸಿನಿಮಾದಲ್ಲೂ ಎತ್ತರಕ್ಕೆ ಬೆಳೆದು ಬಾಳಿ ಬದುಕಬೇಕೆಂಬ ಮಹದಾಸೆಯಿಂದ ಚಿತ್ರರಂಗದ ದಿಗ್ಗಜರ ಕೈಕಾಲು ಹಿಡಿದರು, ಆದರೆ ಎಲ್ಲವೂ ನಿಷ್ಪ್ರಯೋಜನವಾಯ್ತು. ಆಗ, ನಾಟಕರಂಗದ ಮೇರುನಟರಾದ ತನ್ನ ತಂದೆ ಅವರಿವರನ್ನ ಬೇಡುವುದನ್ನು ಕಂಡು ಕಸಿವಿಸಿಗೊಂಡು ಮನನೊಂದ ಮುತ್ತುರಾಜ ಮೊದಲ ಬಾರಿ ಕೆಂಡಾಮಂಡಲವಾದರು. ವಿಧಿವಿಲಾಸ ಎಂಬಂತೆ ತಂದೆ- ಮಗ ಇಬ್ಬರೂ ಬಂದ ದಾರಿಗೆ ಸುಂಕವಿಲ್ಲ ಎನ್ನುತ್ತ  ಕನ್ನಡನಾಡಿಗೆ ಹಿಂದಿರುಗಿದರು!

ಇದಾದನಂತರ ಪುಟ್ಟಸ್ವಾಮಯ್ಯ ಬಹುಕಾಲ ಬದುಕಲಿಲ್ಲ, ಮಗನನ್ನು ಚಿತ್ರರಂಗದಲ್ಲಿ ನೆಲೆಯಾಗಿಸಲು ಸಾಧ್ಯವಾಗಲಿಲ್ಲ ಎ೦ಬ ಕೊರಗು ಇವರನ್ನು ಕಡೆ ತನಕ ಕಾಡುತ್ತಲೇ ಇತ್ತು. ಕಾಲಕ್ರಮೇಣ ಅಸ್ತಮ ಕಾಯಿಲೆ ಇವರನ್ನ ನುಂಗಿತ್ತು. ಕೊರಗು ಮತ್ತು ರೋಗ ಎರಡೂ ಸೇರಿ ಪುಟ್ಟಸ್ವಾಮಯ್ಯನವರ ಜೀವನ ಮತ್ತು ವೃತ್ತಿ ಜೀವನ ಎರಡನ್ನೂ ಬಲಿ ತೆಗೆದುಕೊಂಡಿತು! ಯಾವ ಕಾಲಕ್ಕೆ ಏನು ಜರುಗುವುದೋ ಬಲ್ಲವರಾರು? ಮುತ್ತುರಾಜ ತಮ್ಮ ತಂದೆಯವರು ಸ್ವರ್ಗಸ್ಥರಾದ ನಂತರವೇ ಕರ್ನಾಟಕ ಫಿಲಂಸ್ ತಯಾರಿಸಿದ ಬೇಡರಕಣ್ಣಪ್ಪ ಚಿತ್ರಕ್ಕೆನಾಯಕನಾದರು!

ಇಲ್ಲಿಂದ ಪ್ರಾರಂಭಿಸಿದ ಸಿನಿಪಯಣದಲ್ಲಿ ಒಮ್ಮೆಯೂ ಹಿಂದಿರುಗಿ ನೋಡದೆ ಹಿಮಾಲಯದೆತ್ತರಕ್ಕೆ ಬೆಳೆದರು. ಕಡೆಗೂ ತಂದೆಯವರ ಆಸೆಯಂತೆ ಚಂದನವನ ಸಾಮ್ರಾಟನಾಗಿ ಮೆರೆದು ತಮ್ಮಜತೆಗೆ ಇತರರನ್ನೂ ಬೆಳೆಸಿ ದೇವತಾಮನುಷ್ಯ ಡಾ.ರಾಜ್ ಕುಮಾರ್ ಆದರು.  ಮಗನ ವೈಭವವನ್ನು ಕಣ್ಣಾರೆ ಕಂಡಿದ್ದರೆ ಹೇಗಿರುತ್ತಿತ್ತು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ತನುಮನ ಗತ್ತು ಗಮ್ಮತ್ತು?!

ಪುಟ್ಟಸ್ವಾಮಯ್ಯನವರು ಮೈಸೂರು ಆಸ್ಪತ್ರೆಯಲ್ಲಿ ತೀರಿಕೊಂಡಾಗ ಸಿಂಗಾನಲ್ಲೂರಿಗೆ ಶವ ತೆಗೆದುಕೊಂಡು ಹೋಗಲು ಕಾರು ಬಾಡಿಗೆಗೆ ಹಣಸಾಲದೇ ಇದ್ದಾಗ ಶ್ರೀನಿವಾಸ ಇಂಡಸ್ಟ್ರೀಸ್ ಮತ್ತು ಗಣೇಶ ಟಾಕೀಸ್ ಮಾಲೀಕರಾಗಿದ್ದ ತಮ್ಮಣ್ಣಗೌಡರನ್ನು ಸಹಾಯ ಕೋರಿದಾಗ ಸದರಿಯವರು ಸಾರಾಸಗಟಾಗಿ ತಿರಸ್ಕರಿಸಿ ಕಳಿಸಿದರು? ತತ್ಪರಿಣಾಮ, ಅನಿವಾರ್ಯವಾಗಿ ಪುಟ್ಟಸ್ವಾಮಯ್ಯನವರ ಶವಸಂಸ್ಕಾರವನ್ನು ಮೈಸೂರು ಬನ್ನಿಮಂಟಪ ಜೋಡಿತೆಂಗಿನಮರ  ಸ್ಮಶಾನದಲ್ಲಿ ಮಾಡಲಾಯಿತು. ವರನಟ ಬದುಕಿದ್ದಷ್ಟು ಕಾಲ ಮೈಸೂರಿನ ಸುಜಾತ ಹೋಟೆಲಲ್ಲಿ ತಂಗಿದ್ದಾಗಲೆಲ್ಲ ಮುಂಜಾನೆ ಸುಮಾರು 4ಗಂಟೆ ಹೊತ್ತಿನಲ್ಲಿ ಸ್ಮಶಾನದಲ್ಲಿದ್ದ ತಂದೆಯವರ ಅಂತಿಮ ಸಂಸ್ಕಾರ ಬೃಂದಾವನ ಬಳಿ ತೆರಳಿಭಾವುಕರಾಗಿ ಕುಳಿತು ಕೆಲಕಾಲ ತಂದೆಯವರ ಸ್ಮರಣೆ ಮಾಡುತ್ತಿದ್ದರಂತೆ..!

ಪುಟ್ಟಸ್ವಾಮಯ್ಯನವರ ನಟನೆಯನ್ನು ಕಂಡ ಪ್ರತಿಯೊಬ್ಬರು ‘ಹುಟ್ಟುಕಲಾವಿದನೆಂದರೆ ಪುಟ್ಟಸ್ವಾಮಯ್ಯ’ ಎಂದು ಉದ್ಘರಿಸುತ್ತಿದ್ದರು. ಭಕ್ತಪ್ರಹ್ಲಾದ ನಾಟಕ ಪ್ರದರ್ಶನಗಳಲ್ಲಿ ಹಿರಣ್ಯಾಕ್ಷ ಪಾತ್ರನಟಿಸುವಾಗ ಪ್ರಹ್ಲಾದನ ಪಾತ್ರವನ್ನು ತಮ್ಮ ಮಗ ಮುತ್ತುರಾಜ ಅಭಿನಯಿಸಿದ ಸಂದರ್ಭಗಳಲ್ಲಿ ನೆರೆದಿದ್ದ ಪ್ರೇಕ್ಷಕರು ಆನಂದದಿಂದ ಶಿಳ್ಳೆ-ಚಪ್ಪಾಳೆ ಮೂಲಕ ಶ್ಲಾಘನೆ-ಸಂತಸ ವ್ಯಕ್ತಪಡಿಸುತ್ತಿದ್ದರು. ಬಾಲಕ ರಾಜಕುಮಾರ್ ಪ್ರಹ್ಲಾದನ ಪಾತ್ರವನ್ನ ತಂದೆ ಎದುರು ಭಯಭಕ್ತಿಯಿಂದ ಅಭಿನಯಿಸುವಾಗ ರೋಮಾಂಚನಗೊಳ್ಳುತ್ತಿದ್ದರಂತೆ. ಕನ್ನಡಚಿತ್ರರಂಗದ ಮೂಕಿ-ಟಾಕೀಕಾಲದಲ್ಲಿ ಪುಟ್ಟಸ್ವಾಮಯ್ಯನವರ ಸಮಕಾಲೀನರಾದ ಬಾಲಕೃಷ್ಣ, ಆರ್.ನಾಗೇಂದ್ರರಾವ್, ಗುಬ್ಬಿವೀರಣ್ಣ, ಸುಬ್ಬಯ್ಯನಾಯ್ಡು ಮುಂತಾದವರು ರಂಗಭೂಮಿ ಜತೆಗೇ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದರು.

ಏಕೋ ಏನೋ ಪುಟ್ಟಸ್ವಾಮಯ್ಯ ಸಿನಿಮಾದಲ್ಲಿ ನಟಿಸಲು ಮನಸ್ಸುಮಾಡಲೇಇಲ್ಲ? ಸಹೋದ್ಯೋಗಿ, ಆಪ್ತಮಿತ್ರರ ಸಲಹೆಸೂಚನೆಗೂ ಕಿವಿಗೊಡಲಿಲ್ಲ, ಕಡೆವರೆಗೂ ನಿರಾಸಕ್ತರಾಗೇ ಉಳಿದುಬಿಟ್ಟರು. ಪುಟ್ಟಸ್ವಾಮಯ್ಯನವರ ಸಹೋದ್ಯೋಗಿಗಳು ಅಭಿಮಾನಿಗಳು ನಿರ್ಮಾಪಕ-ನಿರ್ದೇಶಕರು ಕೆಲವು ಚಿತ್ರಗಳಲ್ಲಿ ಹಲವಾರು ಪಾತ್ರ ಅಭಿನಯಿಸುವಂತೆ ಪ್ರೋತ್ಸಾಹನೀಡಿ ಅವಕಾಶಕೊಟ್ಟರೂ ಅವುಗಳನ್ನು ನಯವಾಗಿತಿರಸ್ಕರಿಸಿದ್ದರು. ಬಹುಶ: ತಾವು ಸಾಯುವವರೆಗೂ ರಂಗಭೂಮಿ ಕಲಾವಿದನಾಗೆ ಉಳಿಯಬೇಕೆಂದು ನಿರ್ಧರಿಸಿದ್ದ ಇವರು ಚಿತ್ರದಲ್ಲಿ ಅಭಿನಯಿಸಲೇ ಇಲ್ಲ, ಎಂಬ ಕೊರಗು ಕೋಟ್ಯಾಂತರ ಕನ್ನಡಿಗರಿಗಷ್ಟೆ ಅಲ್ಲದೇ ಪುಟ್ಟಸ್ವಾಮಯ್ಯ ಕುಟುಂಬವರ್ಗದವರಿಗೂ ಕಾಡುತ್ತಿತು. 1950-51 ಆಸುಪಾಸಲ್ಲಿ ಪುಟ್ಟಸ್ವಾಮಯ್ಯ ದೈವಾಧೀನರಾಗಿ ನಾಟಕ(ಚಿತ್ರ) ರಂಗಕ್ಕೆ  ತುಂಬಲಾರದ ನಷ್ಟವಾಯಿತು

ಕ್ಯಾಮರಾ ಎದುರಿಸಿ ಆ ಘಟನೆ ಅವರ ಬದುಕಿನಲ್ಲಿ ಮರೆಯಲಾರದ್ದಾಗಿದೆ. ಸಿನಿಮಾದಲ್ಲಿ ನಟಿಸುವಂತೆ ದುಂಬಾಲು ಬಿದ್ದ ಸಹೋದ್ಯೋಗಿ ನಾಟಕ- ಸಿನಿಮಾ ಕಲಾವಿದರು ಹಿಮ್ಮೇಳದವರು ಆಪ್ತಮಿತ್ರ ಬಂಧುಬಳಗ ನೂರಾರು. ಈ ಪೈಕಿ 25ಕ್ಕೂ ಹೆಚ್ಚು ಹಿರಿ-ಕಿರಿಸಹೋದ್ಯೋಗಿ ನಟರು ತಮ್ಮೊಳಗೇ ತೀರ್ಮಾನಿಸಿದ್ದು ಹೀಗೆ.. ಶತಾಯಗತಾಯ ಒಪ್ಪಿಸಲೇಬೇಕೆಂಬ ಛಲಬಲದಿಂದ ಚತುರೋಪಾಯಗಳ ಮೂಲಕ ನೂರಾರು ದಿನಗಳ ಕಾಲ ಕುಂತಲ್ಲಿ ನಿಂತಲ್ಲಿ ಬಿಟ್ಟೂ ಬಿಡದಂತೆ ಸತಾಯಿಸಿ ಪುಟ್ಟಸ್ವಾಮಯ್ಯನವರನ್ನು ಗೋಳು ಹೊಯ್ದು ಕೊಂಡ ಪರಿಣಾಮವಾಗಿ ಒಂದು ಒಪ್ಪಂದದ ಪ್ರತಿಜ್ಞೆ ಮೂಡಿತ್ತು.

ಇನ್ನೆಂದು ನಾನು ಸಿನಿಮಾದಲ್ಲಿ ನಟಿಸುವುದಿಲ್ಲ ಎಂಬ ಷರತ್ತು ಮೂಲಕ ಅವರಿಂದ ಆಣೆಪ್ರಮಾಣ ಮಾಡಿಸಿಕೊಂಡ ಬಳಿಕ ಕಡೆಗೂ ಒಪ್ಪಿದರು. ಜೀವನ ನಾಟಕ ಚಿತ್ರದಲ್ಲಿ ಕೇವಲ20 ನಿಮಿಷ ಅವಧಿಯ 2 ದೃಶ್ಯದಲ್ಲಿ ಕಾಣಿಸುವ ಪಾತ್ರವನ್ನು ಒಂದೇ ಟೇಕ್ ಮೂಲಕ ಯಶಸ್ವಿಯಾಗಿ ಶೂಟಿಂಗ್ ಮುಗಿಸಿ ಪ್ರತಿಯೊಬ್ಬರ ಶ್ಲಾಘನೆ ಪಡೆದರು. ತಮ್ಮ ಜೀವಮಾನದಲ್ಲೆ ಮೊಟ್ಟ ಮೊದಲು ಕ್ಯಾಮರ ಮುಂದೆ ನಿಂತಿದ್ದರಿಂದ ಪ್ರಾರಂಭದ ಕೆಲವು ಘಳಿಗೆ ವಿಚಲಿತರಾದರು. ಆದರೆ ಅರ್ಧ ಗಂಟೆಯಲ್ಲೆ ಸಮಚಿತ್ತ ಕಾಯ್ದುಕೊಂಡು ಎಲ್ಲರೂ ದಿಗ್ಭ್ರಮೆಗೊಂಡು ಕಣ್ಕಣ್ ಬಿಡುವಂತೆ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಅಭಿನಯಿಸಿ ಎಲ್ಲರ ಮೆಚ್ಚುಗೆ ಪಡೆದರು.

ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ 1942ರ ಜೀವನನಾಟಕ ಇವರು ನಟಿಸಿದ ಏಕೈಕ ಸಿನಿಮಾ.. ಕನ್ನಡನಾಡಿನ ಶೂರಧೀರ, ಪೂಜನೀಯ, ನಟಭಯಂಕರ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ದಿಲೆಜಂಡ್-ಆಫ್-ಲೆಜಂಡ್ಸ್‌ ಆಚಂದ್ರಾರ್ಕ ಅಜರಾಮರ.. ಆದರೆ ಅವರು ಅವತ್ತು ಹಚ್ಚಿದ ಬಣ್ಣದ ಬದುಕು ಇವತ್ತಿಗೂ ಮಗ, ಮೊಮ್ಮಗ, ಮರಿ ಮಕ್ಕಳು ಎಂಬಂತೆ ಮುಂದುವರೆಯುತ್ತಿದ್ದು ಕನ್ನಡದ ಸಿನಿ ಜಗತ್ತಿನಲ್ಲಿ ದೊಡ್ಮನೆಯಾಗಿ ಉಳಿದಿದೆ ಎನ್ನುವುದು ಖುಷಿಯ ಸಂಗತಿ…

 

admin
the authoradmin

1 Comment

Leave a Reply