LatestSports

ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ… ಇವರ ಸಾಧನೆಗಳೇನು?

ವಿದ್ಯಾರ್ಥಿ ದೆಸೆಯಲ್ಲಿಯೇ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಿ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅಥ್ಲೆಟಿಕ್ ನಲ್ಲಿ ಸಾಧನೆ ಮಾಡುತ್ತಾ ಇದಾದ ನಂತರ  ಬಾಕ್ಸಿಂಗ್ ನತ್ತ ಗಮನಹರಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ  ಮಿಂಚುವ ಸಲುವಾಗಿ ಕಠಿಣ ಪರಿಶ್ರಮ ಪಡುತ್ತಿರುವ ಭರವಸೆಯ ಕ್ರೀಡಾ ವಿದ್ಯಾರ್ಥಿನಿ ಮೈಸೂರಿನ ಮಹಾರಾಜ ಕಾಲೇಜಿನ ಸಿ.ಹೆಚ್.ಸ್ಪೂರ್ತಿ…

ನಿಜಹೇಳಬೇಕೆಂದರೆ ಕ್ರೀಡೆ ಎನ್ನುವುದು ಒಂದು ದಿನದಲ್ಲಿ ಮುಗಿದು ಹೋಗುವುದಲ್ಲ. ಇದು ನಿರಂತರ ಪ್ರಕ್ರಿಯೆ… ಇದಕ್ಕಾಗಿ ಪ್ರತಿದಿನವೂ ಕಠಿಣ ತರಬೇತಿಯೊಂದಿಗೆ ಅಭ್ಯಾಸ ಮಾಡುತ್ತಲೇ ಇರಬೇಕಾಗುತ್ತದೆ. ಹೀಗಾಗಿ ಇದೊಂದು ತಪಸ್ಸು ಎಂದರೆ ತಪ್ಪಾಗಲಾರದು. ಕ್ರೀಡೆಯನ್ನು ಅದರಲ್ಲೂ ಅಥ್ಲೆಟಿಕ್ ನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡುವುದು ಸುಲಭದ ಕೆಲಸವಲ್ಲ. ಜತೆಗೆ ಅದರಲ್ಲಿ ಅವಕಾಶ ಗಿಟ್ಟಿಸಿಕೊಂಡು ಮುನ್ನಡೆಯುವುದು ಸವಾಲ್ ಆಗಿದೆ.

ಸಾಮಾನ್ಯವಾಗಿ  ಬಾಲ್ಯದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ  ಕ್ರೀಡಾ ಬದುಕು ಓಟದಿಂದಲೇ ಆರಂಭವಾಗುತ್ತದೆ. ಆ ನಂತರ ಅದು ಮಗ್ಗಲು ಬದಲಿಸಿ ತಮಗೆ ಇಷ್ಟವಾಗಿದ್ದನ್ನು ಆಯ್ಕೆ ಮಾಡುವ ಹಂತಕ್ಕೆ ಹೋಗುತ್ತದೆ. ಆದರೆ ಪ್ರತಿಯೊಬ್ಬ ಕ್ರೀಡಾಪಟು ಓಟವನ್ನು ಬದಿಗಿಟ್ಟು ಮುನ್ನಡೆಯುವುದು ಕಷ್ಟ. ಓಡುತ್ತಲೇ ಕ್ರೀಡಾ ಬದುಕಿನ ಓಟವನ್ನು ಮುನ್ನಡೆಸುವುದು ಅನಿವಾರ್ಯವಾಗುತ್ತದೆ. ಇವತ್ತು ವಿದ್ಯಾರ್ಥಿನಿ ಸ್ಪೂರ್ತಿ ಅವರ ಕ್ರೀಡಾ ಬದುಕಿನ ಪುಟಗಳನ್ನು ತಿರುವಿ ಹಾಕಿದರೆ ಅವರು ಮಾಡಿರುವ ಸಾಧನೆ ಮತ್ತು ಮುಂದೆಯೂ ಸಾಧಿಸಿಬೇಕೆನ್ನುವ ಛಲ ಎದ್ದು ಕಾಣಿಸುತ್ತದೆ.

ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಚಿಕ್ಕೋನಹಳ್ಳಿ ಗ್ರಾಮದ ನಿವಾಸಿ ಹನುಮೇಗೌಡ  ಮತ್ತು ನಳಿನಾ ದಂಪತಿ ಪುತ್ರಿಯಾದ ಸ್ಪೂರ್ತಿ ಹಾಸನದ ಕುಂದೂರು ಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮಾಡಿದ್ದು, ಈ ವೇಳೆಯಲ್ಲಿ  ಕ್ರೀಡೆಯ ಬಗ್ಗೆ ಆಸಕ್ತಿ ಬಂದಿತ್ತು. ಶಾಲಾ ದಿನಗಳಲ್ಲಿ ಕಬಡ್ಡಿ, ಖೋ ಖೋ ಸೇರಿದಂತೆ ಹಲವು ಕ್ರೀಡೆಗಳಲ್ಲಿ  ಭಾಗವಹಿಸಿದ್ದರೂ ಅಥ್ಲೆಟಿಕ್ ನತ್ತ ಹೆಚ್ಚಿನ ಒಲವನ್ನು ಹೊಂದಿದ್ದರು. ಈ ವೇಳೆ ಅಥ್ಲೆಟಿಕ್ ನ 400 ಮತ್ತು 200 ಮೀಟರ್ ನಲ್ಲಿ ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದದ್ದು ಇವರ ಕ್ರೀಡಾ ಸಾಧನೆಗೆ ಬರೆದ ಮುನ್ನುಡಿಯಾಗಿದೆ.

ಪ್ರೌಢಶಾಲಾ ಶಿಕ್ಷಣದ ನಂತರ ಪಿಯುಸಿಯನ್ನು ಹಾಸನ ಗೋಲ್ಡನ್ ಪಿಯು ಕಾಲೇಜಿನಲ್ಲಿ ಓದಿದ್ದು, ಆ ನಂತರ ಪದವಿ ಶಿಕ್ಷಣವನ್ನು ಪಡೆಯುವ ಸಲುವಾಗಿ ಮೈಸೂರಿನ  ಮಹಾರಾಜ ಕಾಲೇಜಿಗೆ ಬಿಕಾಂಗೆ ಸೇರ್ಪಡೆಗೊಂಡರು. ಇಲ್ಲಿಂದ ಇವರ ಕ್ರೀಡಾ ಬದುಕಿನ ಮತ್ತೊಂದು ಮಜಲು ಆರಂಭವಾಯಿತು. ಜತೆಗೆ ಇವರಿಗೆ ತಾನು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಲು ಸಾಧ್ಯವಾಯಿತು. ಮೊದಲಿನಿಂದಲೂ ಅಥ್ಲೆಟಿಕ್ ನಲ್ಲಿ ಸಾಧನೆ ಮಾಡಿಕೊಂಡು ಬಂದಿದ್ದರಿಂದ ಮೈಸೂರು ವಿಶ್ವವಿದ್ಯಾಲಯದ ಅಂತರ-ಕಾಲೇಜು ಚಾಂಪಿಯನ್‌ಶಿಪ್ 2023ರಲ್ಲಿ ಭಾಗವಹಿಸಿ 400 ಮೀ ಮತ್ತು 800 ಮೀ ಸ್ಪರ್ಧೆಗಳಲ್ಲಿ ಅಥ್ಲೆಟಿಕ್ ತರಬೇತುದಾರರಾದ ಪುನೀತ್  ಅವರ ಮಾರ್ಗದರ್ಶನದಲ್ಲಿ  ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ಸು ಕಂಡರು.

ಆದರೆ ಸುಮಾರು 9 ವರ್ಷಗಳ ಕಾಲ ಅಥ್ಲೆಟಿಕ್ ನಲ್ಲಿದ್ದರೂ ರಾಷ್ಟ್ರಮಟ್ಟದಲ್ಲಿ ನಿರೀಕ್ಷೆ ಮಾಡಿದಷ್ಟು ಸಾಧನೆ ಮಾಡುವುದು ಸಾಧ್ಯವಾಗಲಿಲ್ಲ. ಹೀಗಾಗಿ ಇದರಲ್ಲಿ ಮುಂದುವರೆದರೆ ರಾಷ್ಟ್ರಮಟ್ಟದ ಕ್ರೀಡಾಪಟುವಾಗುವುದು ಕಷ್ಟ ಎನ್ನುವುದು ಅರಿವಿಗೆ ಬಂದಿತ್ತು. ಇದರಾಚೆಗೆ ಬೇರೆ ಏನಾದರೂ ಮಾಡಲೇ ಬೇಕೆಂಬ ತುಡಿತವೂ ಅವರಲ್ಲಿತ್ತು. ಅದೇ ವೇಳೆಗೆ ಬಾಕ್ಸಿಂಗ್ ಅವರನ್ನು ಸೆಳೆದಿತ್ತು. ಮುಂದಿನ ಕ್ರೀಡಾ ಜೀವನವನ್ನು ಮುಂದುವರೆಸುವುದಾದರೆ ಅದರ ಮೂಲಕವೇ ಎಂಬ ತೀರ್ಮಾನಕ್ಕೆ ಬಂದು ಬಿಟ್ಟರು. ಅಥ್ಲೆಟಿಕ್ ನಿಂದ ಕಿಕ್ ಬಾಕ್ಸಿಂಗ್ ಮತ್ತು ಬಾಕ್ಸಿಂಗ್ ಕಡೆಗೆ ಹೆಚ್ಚಿನ ಗಮನಹರಿಸಿದ ಅವರು ಅದಕ್ಕೆ ಬೇಕಾದ ತರಬೇತಿಯನ್ನು ಪಡೆದುಕೊಂಡರು. ಜತೆಗೆ ಕಠಿಣ ಪರಿಶ್ರಮಪಟ್ಟರು. ಅವರ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ 2023ರಲ್ಲಿ ನಡೆದ ಕರ್ನಾಟಕ ರಾಜ್ಯ ಮುವಾಯ್ ಥಾಯ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಕವನ್ನು ತಂದುಕೊಟ್ಟಿತು.

ಜತೆಗೆ ಬಾಕ್ಸಿಂಗ್ ನ ಸುಗಮ ಹಾದಿಗೆ ಬಾಗಿಲು ತೆರೆದು ಸ್ವಾಗತ ನೀಡಿತು. ಕಿಕ್ ಬಾಕ್ಸಿಂಗ್ ಮತ್ತು ಬಾಕ್ಸಿಂಗ್ ಅವರ ಕ್ರೀಡಾ ಬದುಕಿಗೆ ಹೊಸದೊಂದು ಆಯಾಮ ನೀಡಿತು. ಈ ಕ್ಷೇತ್ರದಲ್ಲಿ ಕಷ್ಟಪಟ್ಟು ಸಾಧನೆ ಮಾಡಿದರೆ ರಾಜ್ಯ, ರಾಷ್ಟ್ರ ಮಾತ್ರವಲ್ಲದೆ, ಅಂತರ್ರಾಷ್ಟ್ರೀಯ ಮಟ್ಟದಲ್ಲಿಯೂ ಗಮನಸೆಳೆಯ ಬಹುದು ಎಂಬ ವಿಶ್ವಾಸ ಮೂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಕಠಿಣ ತರಬೇತಿ ಪಡೆಯುವುದರೊಂದಿಗೆ ನಿರಂತರ ಅಭ್ಯಾಸ ಮಾಡುತ್ತಿರುವ ಸ್ಪೂರ್ತಿ ಹಲವು ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅದರಲ್ಲೂ ಹಲವು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಹೆಣ್ಮಕ್ಕಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನರಾಗಿದ್ದಾರೆ.

ಕಿಕ್ ಬಾಕ್ಸಿಂಗ್ ಮತ್ತು ಬಾಕ್ಸಿಂಗ್ ನಲ್ಲಿ  ಇವರ ಸಾಧನೆಗಳೇನು ಎಂಬುದನ್ನು ನೋಡಿದ್ದೇ ಆದರೆ 2023 ರಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಕಿಕ್‌ ಬಾಕ್ಸಿಂಗ್ ಚಾಂಪಿಯನ್‌ ಶಿಪ್ ನಲ್ಲಿ ಚಿನ್ನದ ಪದಕ, 2024ರಲ್ಲಿ ನಡೆದ ಸ್ವಾಮಿ ವಿವೇಕಾನಂದ ಸುಭಾರ್ತಿ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ-ವಿಶ್ವವಿದ್ಯಾಲಯ ಕಿಕ್‌ ಬಾಕ್ಸಿಂಗ್ ಚಾಂಪಿಯನ್‌ ಶಿಪ್ ನಲ್ಲಿ ಚಿನ್ನದ ಪದಕ,  2025ರಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕಿಕ್ ಬಾಕ್ಸಿಂಗ್ ಚಾಂಪಿಯನ್‌ ಶಿಪ್ ನಲ್ಲಿ  ಚಿನ್ನದ ಪದಕ, 2023ರಲ್ಲಿ ಆಂಧ್ರ ಪ್ರದೇಶದ ವಿಶ್ವವಿದ್ಯಾಲಯದಲ್ಲಿ ನಡೆದ ಖೇಲೋ ಇಂಡಿಯಾ ಮಹಿಳಾ ಕಿಕ್ ಬಾಕ್ಸಿಂಗ್ ಲೀಗ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಚಿನ್ನದ ಹುಡುಗಿಯಾಗಿದ್ದಾರೆ.

ಇನ್ನು ಬಾಕ್ಸಿಂಗ್ ನಲ್ಲಿ ಇವರ ಸಾಧನೆ ಹೀಗಿದೆ.. 2023ರಲ್ಲಿ ನಡೆದ ದಸರಾ ಸಿಎಂ ಕಪ್ ನಲ್ಲಿ ಚಿನ್ನದ ಪದಕ, ತಮಿಳುನಾಡಿನಲ್ಲಿ  2024ರಲ್ಲಿ ನಡೆದ  ಅಖಿಲ ಭಾರತ ಮುಕ್ತ ರಾಷ್ಟ್ರೀಯ ವಿಶುಯಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಕ ಮತ್ತು ಅತ್ಯುತ್ತಮ ಬಾಕ್ಸರ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ-ವಿಶ್ವವಿದ್ಯಾಲಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನ ದಕ್ಷಿಣ ವಲಯದಲ್ಲಿ 5 ನೇ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಎಲೈಟ್ ಮಹಿಳಾ ಹವ್ಯಾಸಿ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಬೆಳ್ಳಿ ಪದಕ, 2024ರಲ್ಲಿ ಪಂಜಾಬ್‌ ನ ಗುರು ಕಾಶಿ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ-ವಿಶ್ವವಿದ್ಯಾಲಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಿದ್ದಾರೆ.

ಬಾಕ್ಸಿಂಗ್ ನಲ್ಲಿ ಮುಂದಿನ ದಿನಗಳಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂದು ಪಣತೊಟ್ಟಿರುವ ಸ್ಪೂರ್ತಿ ಅದಕ್ಕಾಗಿ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.ಸರ್ಕಾರ ಸೇರಿದಂತೆ ಸಂಘ, ಸಂಸ್ಥೆಗಳು ಇವರ ಕ್ರೀಡಾಸಾಧನೆಯನ್ನು ಪರಿಗಣಿಸಿ, ಪ್ರೋತ್ಸಾಹಿಸಿದ್ದೇ ಆದರೆ ಮುಂದಿನ ಅವರ ಸಾಧನೆಗೆ ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೆ ರಾಜ್ಯಕ್ಕೊಬ್ಬ ಉತ್ತಮ ಮಹಿಳಾ ಬಾಕ್ಸರ್ ನ್ನು ತಯಾರು ಮಾಡಲು ಸಾಧ್ಯವಾಗಲಿದೆ. ಆ ಬಗ್ಗೆ ಸಂಬಂಧಿಸಿದವರು ಗಮನಹರಿಸಲಿ ಎನ್ನುವುದೇ ನಮ್ಮ ಆಶಯವಾಗಿದೆ.

 

 

B.M.Lavakumar

admin
the authoradmin

Leave a Reply