ಕೆ.ಆರ್.ನಗರ(ಜಿಟೆಕ್ ಶಂಕರ್): ಸೂಕ್ಷ್ಮಾತೀ ಸೂಕ್ಷ್ಮ ಸಮಾಜಗಳ ಜನತೆ ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಕರ್ನಾಟಕ ತಮಿಳರ ಸಂಘದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಕಳೆದ ಒಂದು ವರ್ಷದ ಹಿಂದೆ ಸಮುದಾಯ ಭವನಕ್ಕೆ ಅನುದಾನ ಕೋರಿದ್ದರು. ಶಾಸಕರ ನಿಧಿಯಿಂದ ಐದು ಲಕ್ಷ ಅನುದಾನ ನೀಡಲಾಗಿದೆ ಎಂದರು.
ತಾಲೂಕಿನ ಹಂಪಾಪುರ ಗ್ರಾಮದ ತಮಿಳರ ಬಡಾವಣೆಯ ಚರಂಡಿ ಮತ್ತು ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ 25 ಲಕ್ಷ ಅನುದಾನ ನೀಡಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕರು ದೇವಾಲಯ ನಿರ್ಮಾಣಕ್ಕೂ ಅಗತ್ಯ ಅನುದಾನ ನೀಡುತ್ತೇನೆ ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳು ಸಮಾಜದ ಜನತೆಯ ಅಭಿವೃದ್ಧಿಗೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಶಾಸಕ ಡಿ.ರವಿಶಂಕರ್ ಒಂದು ವರ್ಷದೊಳಗೆ ಭವನ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ನುಡಿದರು.

ಸಂಘದ ಅಧ್ಯಕ್ಷ ಕೆ.ಆರ್.ಶ್ರೀನಿವಾಸ್ ಮಾತನಾಡಿ ಪಟ್ಟಣದ ವ್ಯಾಪ್ತಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ದೊರೆತಿರುವುದು ಹೆಮ್ಮೆಪಡುವ ವಿಚಾರವಾಗಿದ್ದು, ಸಮಾಜದ ಬಂಧುಗಳು ಈ ಕಾರ್ಯಕ್ಕೆ ಅಗತ್ಯ, ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಕೋರಿದರು.
ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಕಾಂಗ್ರೆಸ್ ವಕ್ತಾರ ಸೈಯದ್ಜಾಬೀರ್, ಹಂಪಾಪುರ ಗ್ರಾ.ಪಂ. ಸದಸ್ಯ ಹೆಚ್.ಈ.ಮಹದೇವಕುಮಾರ್, ಕರ್ನಾಟಕ ತಮಿಳರ ಸಂಘದ ಗೌರವಾಧ್ಯಕ್ಷ ತಾಂಡು, ಉಪಾಧ್ಯಕ್ಷರಾದ ರಾಮದಾಸ್, ಆರ್ಮುಗಂ, ಪ್ರಧಾನ ಕಾರ್ಯದರ್ಶಿ ಖಜಾಂಚಿ ಹೆಚ್.ಎಂ.ರವಿ, ಆರ್.ಲೋಕನಾಥ್, ಸಹಕಾರ್ಯದರ್ಶಿ ಗಣೇಶ್, ನಿರ್ದೇಶಕರಾದ ಮುರುಗೇಶ್, ಮಣಿಕಂಠ, ಯೋಗೇಶ್, ಏಳುಮಲೈ, ನಾಗೇಂದ್ರ, ಕೆ.ರವಿ, ಸುರೇಶ್, ವೆಂಕಟೇಶ್, ಕುಮಾರ್, ಲೈಫ್ ಮೆಡಿಕಲ್ಸ್ನ ಮಾಲೀಕ ಆರ್.ಚಲುವರಾಜು, ಯುವ ಮುಖಂಡ ಸುನೀಲ್ಮೊದಲಿಯಾರ್ ಮತ್ತು ಸಮಾಜದ ಮಹಿಳೆಯರು ಹಾಜರಿದ್ದರು.








