ArticlesLatest

ವ್ಯಾಲೆಂಟೈನ್ ಡೇ ಬಗ್ಗೆ ಗೊತ್ತಿಲ್ಲದ ರಹಸ್ಯ… ಪರ-ವಿರೋಧಗಳ ನಡುವೆ ಪ್ರೇಮಿಗಳ ಪ್ರೇಮೋತ್ಸವ!

ಭಾರತೀಯ ಸಂಸ್ಕೃತಿಯಲ್ಲಿ ಪ್ರೇಯಸಿಯಾದವಳು ಮಡದಿಯಾಗುತ್ತಾಳೆ…

ಇವತ್ತಿನ ಫ್ಯಾಷನ್ ಯುಗದಲ್ಲಿ ವ್ಯಾಲೆಂಟೈನ್ಸ್ ಡೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ… ಇದು ನಮ್ಮ ನೆಲದ ಸಂಸ್ಕೃತಿ ಅಲ್ಲವೆಂದು ಗೊತ್ತಿದ್ದರೂ ಅದನ್ನು ಕೆಲವರು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಉತ್ತೇಜಿಸುವ ಮೂಲಕ ಒಂದಷ್ಟು ವ್ಯಾಪಾರ ಕುದುರಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಲೇ ಇವೆ… ಹೀಗಾಗಿ ಪರ-ವಿರೋಧಗಳ ನಡುವೆ ಪ್ರತಿವರ್ಷವೂ ಅಲ್ಲಲ್ಲಿ ಪ್ರೇಮಿಗಳು ಆಚರಿಸಿ ಸಂಭ್ರಮಿಸುತ್ತಿದ್ದಾರೆ..

ಭಾರತೀಯ ಸಂಸ್ಕೃತಿಯಲ್ಲಿ ಪ್ರೇಯಸಿಯಾದವಳು ಮಡದಿಯಾಗುತ್ತಾಳೆ… ಅದೇ ಪ್ರೀತಿ ಅದೇ ಪ್ರೇಮ ಹೃದಯದಲ್ಲಿಟ್ಟುಕೊಂಡು ಒಬ್ಬರನೊಬ್ಬರು ನಿಷ್ಠೆಯಿಂದ ದಾಂಪತ್ಯ ಜೀವನ ನಡೆಸಬೇಕೆಂಬುದನ್ನು ಹಿರಿಯರು ತೋರಿಸಿಕೊಟ್ಟಿದ್ದಾರೆ. ಇದೀಗ ಪಾಶ್ಚಾತ್ಯ ಸಂಸ್ಕೃತಿಗಳು ನಮ್ಮ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಸಂಪೂರ್ಣವಾಗಿ ಅಲ್ಲಿಯದನ್ನು ಒಪ್ಪಿಕೊಳ್ಳಲಾಗದೆ, ಇಲ್ಲಿಯದನ್ನು ಬಿಡಲಾಗದೆ ತ್ರಿಶಂಕು ಸ್ಥಿತಿಯಲ್ಲಿರುವುದು ಕಂಡು ಬರುತ್ತಿದೆ. ಅದೆಲ್ಲವನ್ನು ಬದಿಗೊತ್ತಿ ನೋಡಿದರೆ ಎಲ್ಲವೂ ಅವರವರ ವಿವೇಚನೆ ಬಿಟ್ಟಿದ್ದಾಗಿದೆ… ವ್ಯಾಲೆಂಟೈನ್ಸ್ ಡೇ ಕುರಿತಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರದ್ದೇ ಆದ ರೀತಿಯಲ್ಲಿ ಬರೆದಿದ್ದಾರೆ.. ವಿಶ್ಲೇಷಿಸಿದ್ದಾರೆ.. ಒಮ್ಮೆ ಓದಿ ಬಿಡಿ… ಹೇಗಿತ್ತು ಎಂಬುದನ್ನು ತಿಳಿಸಿ…

ಒಂದು ಅಹಿತಕರ ಘಟನೆ ವ್ಯಾಲೆಂಟೈನ್ಸ್-ಡೇಗೆ ಮೂಲ ಕಾರಣವಾಯ್ತು ಎಂಬುದು ವಿಚಿತ್ರ ಮತ್ತು ನಂಬಲಸಾಧ್ಯ… ವ್ಯಾಲೆಂಟೈನ್ ಎಂಬ ರೋಮನ್ ಸಂತನಿಂದ ಉಗಮವಾದ ಇದರ ಬಗ್ಗೆ ಹಲವು ಭಿನ್ನಾಭಿಪ್ರಾಯವಿದ್ದು ಯಾವುದೆ ಖಚಿತ ಮಾಹಿತಿ/ಆಧಾರ ಈವರೆಗೆ ದೊರಕಿಲ್ಲ. ಕ್ರೈಸ್ತ ಧರ್ಮ ತ್ಯಜಿಸುವುದಿಲ್ಲವೆಂದು ಪ್ರತಿಭಟಿಸಿ ರಾಜಾಜ್ಞೆ ಧಿಕ್ಕರಿಸಿದವನಿಗೆ ಜೀವಾವಧಿ ಜೈಲುಶಿಕ್ಷೆ ನೀಡಲಾಯಿತು. ಈತ ಐರೋಪ್ಯದವನೊ ಅಥವಾ ಪಾಶ್ಚಾತ್ಯದವನೊ? ಎಂಬುದು ಈಗಲೂ ಚರ್ಚೆಗೆ ಗ್ರಾಸವಾಗಿದ್ದು ವಿ-ವಾದಕ್ಕೆಡೆ ಮಾಡಿಕೊಟ್ಟಿದೆ.

ಇವನ ಹುಟ್ಟು ತಂದೆ ತಾಯಿ ವಿದ್ಯಾಭ್ಯಾಸ ಉದ್ಯೋಗ ಇನ್ನಿತರ ಪೂರ್ವಾಪರದ ಬಗ್ಗೆ ಎಲ್ಲಿಯೂ ಸ್ಪಷ್ಟ ಉಲ್ಲೇಖ ಕಂಡು ಬಂದಂತಿಲ್ಲ!ಫ಼ೆಬ್ರವರಿ 14ರಂದೇ ಆಚರಿಸಬೇಕು ಏಕೆ? ಎಂಬುದಕ್ಕೆ  ಕ್ರಿ.ಶ.496 ಫ಼ೆಬ್ರವರಿ 14ರಂದು ವ್ಯಾಲೆಂಟೈನ್ ಮರಣ ಹೊಂದಿದ್ದು ಅಂದಿನಿಂದ ಆತ ಹುತಾತ್ಮನಾದನೆಂಬ ವದಂತಿ? ಇತಿಹಾಸ ತಜ್ಞರ ಪ್ರಕಾರ ಈತ ಉತ್ತರ ಫಿನ್‌ಲ್ಯಾಂಡ್ [ಲ್ಯಾಪ್‌ಲ್ಯಾಂಡ್] ಸಾಂತಕ್ಲಾಸ್‌ ಸಾಮ್ರಾಜ್ಯದಲ್ಲಿ ಓರ್ವ ಅರ್ಚಕನಾಗಿದ್ದನು.

ಕ್ರಿ.ಶ.469ರಲ್ಲಿ ದೇಶದ್ರೋಹವೂ ಸೇರಿದಂತೆ ಹಲವಾರು ಅಪರಾಧಗಳ ಅಡಿಯಲ್ಲಿ ಇವನನ್ನು ಕಾರಾಗೃಹಕ್ಕೆ ಕಳುಹಿಸಲ್ಪಟ್ಟಿತ್ತು!  ಇನ್ನು ಕೆಲವರ ಪ್ರಕಾರ ಈತನನ್ನು ದೇಶದ್ರೋಹಿ, ರಾಷ್ಟ್ರಭ್ರಷ್ಟ ಆರೋಪದಡಿ ಗಡೀಪಾರ್ ಮಾಡಲಾಗಿತ್ತು!  ಇನ್ನೊಂದು ಮಾಹಿತಿಯಂತೆ ವ್ಯಾಲೆಂಟೈನ್ ಸೆರೆಮನೆಯಲ್ಲಿದ್ದಾಗ ಜೈಲರ್ ಮಗಳ ಸ್ನೇಹ ಸಂಪಾದಿಸಿ ತನ್ನ ಬಿಡುಗಡೆಯ ದಿನ [ಫ಼ೆಬ್ರವರಿ14] ಅವಳಿಗೊಂದು ಪತ್ರ ಬರೆದು ಜೈಲಿನಲ್ಲೆ ಬಿಟ್ಟುಹೋಗಿದ್ದ. ಅದರಲ್ಲಿ ನಿನ್ನವನೇ ಆದ ವ್ಯಾಲೆಂಟೈನ್  ಎಂದು ಸಹಿ ಮಾಡಿದ್ದ. ಹಾಗಾಗಿ ಫ಼ೆಬ್ರವರಿ14ರಂದು ಅವನ ದಿನಾಚರಣೆ ಆಚರಿಸುವ ಪದ್ಧತಿ ಪ್ರಾರಂಭವಾಯಿತು?

ಆದರೆ ಕೆಲವು ತಿಳಿ(ಕೇ)ಗೇಡಿಗಳು, ಸಮಾಜಘಾತುಕ ಸ್ವಾರ್ಥಮೂರ್ತಿಗಳು ಬೇರೆಯೆ ಮಿಥ್ಯದ ಕತೆ ಸೃಷ್ಟಿಸಿ ಆತ ಅನೇಕ ಪ್ರೇಮಿಗಳನ್ನ ಒಂದುಗೂಡಿಸಿದ? ಪೋಷಕರಿಂದ ತಿರಸ್ಕರಿಸಲ್ಪಟ್ಟ ಪ್ರೇಮಿಗಳ ವಿವಾಹ ಮಾಡಿಸಿದ? ಮುಂತಾದ ಕಾಲ್ಪನಿಕ ಕತೆ ಕಟ್ಟಿ ಹಾಡಿ ಹೊಗಳಿ ವ್ಯರ್ಥ ವಿಜೃಂಭಿಸಿದರು? ಅನವಶ್ಯಕ ಉಪ್ಪು ಹುಳಿ ಖಾರ ಬೆರೆಸಿ, ತಪ್ಪು ಮಾಹಿತಿ, ತಿಳುವಳಿಕೆ ನೀಡಿ ಯುವಕರ ದಾರಿ ತಪ್ಪಿಸುತ್ತಿದ್ದಾರೆ. ಕೆಲವು (ಭಗ್ನ)ಪ್ರೇಮಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರೇಮಿಗಳ ದಿನಾಚರಣೆ ಎಂದು ಬ್ರಾಂಡ್ ಮಾಡಿ ಬಿಂಬಿಸಿ ಅಮಾಯಕ-ಅಪ್ರಾಪ್ತ ಪ್ರೇಮಿಗಳನ್ನು ಹುರಿದುಂಬಿಸಿ ದುರಂತದ ಹಂತ ತಲುಪಿಸುತ್ತಿದ್ದಾರೆ!

ಈ ದಿನದಂದು ಪ್ರಾಪ್ತವಯಸ್ಕರು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವ ಬದಲು ಚಾಕಲೇಟ್ ಕೇಕ್ ತಿಂಡಿ ತಿನಿಸು ಒಡವೆ ವಸ್ತ್ರ ಗ್ರೀಟಿಂಗ್ಸ್ ಜತೆಗೆ ತನು-ಮನ ವಿನಿಮಯ [ಡೇಟಿಂಗ್] ಮಾಡಲು ಪ್ರಾರಂಭಿಸಿದ್ದಾರೆ! ಶ್ರಮದ ದುಡಿಮೆಹಣ [ಬೆವರಿನಬೆಲೆ] ಯಿಂದ ಖರೀದಿಸಿದ ಅಮೂಲ್ಯ ಕೊಡುಗೆಯನ್ನು ಯಾವುದೆ ಸಂಬಂಧವಿಲ್ಲದ ಯಾವನೊ ಪರದೇಶಿ ’ಖೈದಿ’ ಹೆಸರಿನಲ್ಲಿ ಫ಼ೆಬ್ರವರಿ 14ರಂದೇ ವಿನಿಮಯ ಮಾಡಿಕೊಳ್ಳಬೇಕು ಏಕೆ?

ದಿ(ಟ)ಟ್ಟ ಪ್ರೇಮಿಗಳು ಅವರ ಪದ್ಧತಿ, ಸಂಪ್ರದಾಯಕ್ಕೆ  ಅನುಗುಣವಾಗಿ ಮುಯ್ಯಿ ವಿನಿಮಯ ಮಾಡಿಕೊಂಡರೆ ಬೇಡ ಎನ್ನುವವರಾರು? ’ಹಿತ್ತಲಗಿಡಮದ್ದಲ್ಲ’ ಎಂಬಂತೆ ಸ್ವಂತದ್ದನ್ನು ಕಡೆಗಣಿಸಿ ಪರಕೀಯನಿಗೆ ಮಣೆಹಾಕುವುದು ಯಾವ ನ್ಯಾಯ ನೀತಿ ಧರ್ಮ? ಈ ದಿನಾಚರಣೆ ಮೂಲಕ ಪ್ರೇಮಿಗಳಿಗೆ ಗೆಲುವು ಸಂತೋಷ ಸಿಗುತ್ತದೆ, ತಮ್ಮ ಗುರಿಮುಟ್ಟುವರು, ಎಂಬುದೆಲ್ಲ ಕೇವಲ ಭ್ರಮೆ ಅಷ್ಟೆ.  ಅವರಿಗೇ ಅರಿವಿಲ್ಲದೆ ಮಾಡುತ್ತಿರುವ ಧರ್ಮಾಪರಾಧ?!

ಇಂಥ ನಿಷ್ಠುರದ ಪ್ರಶ್ನೆಗಳಿಗೆ ಪುಷ್ಠೀಕರಿಸುವ ಉದಾಹರಣೆ ಸಹಿತ ಹೇಳುವುದಾದರೆ.. 1)2010ರಲ್ಲಿ ಹಾಲಿವುಡ್ನ ಖ್ಯಾತ ನಿರ್ದೇಶಕ ಗ್ಯಾರಿ ಮಾರ್ಷಲ್ ಮತ್ತು ಕ್ಯಾತರಿನ್ ಫ಼್ಯುಗೇಟ್ ಬರೆದ ಕಥೆ-ಚಿತ್ರಕತೆ ಆಧರಿಸಿ “ವ್ಯಾಲೆಂಟೈನ್ಸ್ ಡೇ” ಎಂಬ ಹಾಸ್ಯ ಚಲನಚಿತ್ರ ನಿರ್ಮಿಸಿ ಅಪಹಾಸ್ಯಕ್ಕೆ ಗುರಿಯಾಗಿ ಛೀಮಾರಿ ಹಾಕಿಸಿಕೊಂಡನು. ಈ ಸಿನಿಮಾ ಅಟ್ಟರ್‌ ಫ಼್ಲಾಪ್‌ ಆಗಿ ಎಲ್ಲರಿಗೂ ಶಾಪವಾಯ್ತು ಪಾಪ!

2) ವ್ಯಾಟಿಕನ್ ನಗರದಲ್ಲಿ ಜರುಗಿದ ವಿಶ್ವ ಕ್ರೈಸ್ತರ ಸಮ್ಮೇಳನ ದಲ್ಲಿ ಅಮೆರಿಕ ದೇಶವನ್ನು ಪ್ರತಿನಿಧಿಸಿದ್ದ ಪಾದ್ರಿಯೊಬ್ಬರು ವ್ಯಾಲೆಂಟೈನ್-ಡೇ ಬಗ್ಗೆ ಧರ್ಮಗುರು ಪೋಪ್‌ರನ್ನು ಕುರಿತು ಪ್ರಶ್ನಿಸಿದ್ದು ಹೀಗೆ:- Should a Christian celebrate Valentine’s day? ಒಬ್ಬ ಕ್ರೈಸ್ತನು ವ್ಯಾಲೆಂಟೈನ್ಸ್ ಡೇ ಆಚರಿಸಬೇಕೆ? ಈ ಪ್ರಶ್ನೆಗೆ ಪೋಪ್ ಉತ್ತರಿಸಿದ್ದು:-A sincere Christian will not celebrate Valentine’s day!  ಇದರ ತಾತ್ಪರ್ಯ ಏನೆಂದರೆ? “ಎ ಟ್ರೂ ಕ್ರಿಶ್ಚಿಯನ್ ಎಂದಿಗೂ ವ್ಯಾಲೆಂಟೈನ್ಸ್-ಡೇ ಆಚರಿಸುವುದಿಲ್ಲ ಎಂಬುದನ್ನು ಒತ್ತಿ ಹೇಳುತ್ತದೆ.

ಕ್ರೈಸ್ತರೇ ಇರುವಂಥ ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿ ಇದನ್ನು ಆಚರಿಸುತ್ತಿಲ್ಲ ಎಂಬ ವಾಸ್ತವಾಂಶ ತಿಳಿಯುತ್ತದೆ. ಈ ಕುರಿತು ಬೈಬಲ್‌ನಲ್ಲೂ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ ಕ್ರಿಶ್ಚಿಯನ್ನರು ಇದನ್ನು ಆಚರಿಸುವಂತಿಲ್ಲ” ಎಂಬುದಾಗಿ ಕ್ರೈಸ್ತ ಧರ್ಮದ ಮಹಾಗುರುಗಳೆ ಸ್ಪಷ್ಟ ಪಡಿಸಿದ್ದಾರೆ?!

ಯಾವ ರಾಷ್ಟ್ರಗಳಲ್ಲಿ ಆಚರಣೆ… ಅಮೆರಿಕ ಕೆನಡ ವಿಂಡೀಸ್ ಬ್ರಿಟನ್ ಫ಼್ರಾನ್ಸ್ ಇಟಲಿ ಆಸ್ಟ್ರಿಯ ಸ್ವಿಜ಼ರ್‌ಲ್ಯಾಂಡ್ ಸ್ಪೇನ್ ಆಸ್ಟ್ರೇಲಿಯ ಸಿಂಗಾಪೂರ್ ಹಾಂಕಾಂಗ್ ಹಾಗೂ ಅಮೆರಿಕ ಮತ್ತು ಬ್ರಿಟಿಷ್ ಆಡಳಿತಕ್ಕೆ ಒಳಪಡುವ ಕೇಂದ್ರಾಡಳಿತ ಪ್ರದೇಶಗಳು ಸೇರುತ್ತವೆ! ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಕೆಲವು ದೇಶಗಳಲ್ಲಿ ಫ಼ೆಬ್ರವರಿ 12,13,14 ಮೂರು ದಿನವೂ ವಿವಿಧ ಕಾರ್ಯಕ್ರಮದೊಡನೆ ವೈಭವದಿಂದ ಆಚರಿಸುತ್ತಾರೆ!

ಯಾವ ರಾಷ್ಟ್ರಗಳು ಬಹಿಷ್ಕರಿಸಿವೆ…? ಭಾರತದಲ್ಲಷ್ಟೇ ಏಕೆ ವಿಶ್ವದಾದ್ಯಂತ ಅವರವರ ಧರ್ಮವನ್ನು ಸರಿಯಾಗಿ ತಿಳಿದುಕೊಂಡಿರುವ ಯಾರೇ ಆಗಲಿ ಇದನ್ನು ಆಚರಿಸುವಂತಿಲ್ಲ.ಈಬಗ್ಗೆ ಮನಮಂಥನ ಮಾಡಿದರೆ ಅವರವರ ಪದ್ಧತಿ ಆಚಾರವಿಚಾರ ಸಂಪ್ರದಾಯ, ಇತ್ಯಾದಿಗಳನ್ನು ತಲತಲಾಂತರದಿಂದ ಅನುಸರಿಸುತ್ತಬಂದ ಧರ್ಮನಿಷ್ಠರು ಯಾವ ರೀತಿಯಲ್ಲೂ ಇದನ್ನು ಆಚರಿಸಲು ಒಪ್ಪುವುದಿಲ್ಲ.

ಮೆಕ್ಸಿಕೋ, ದಕ್ಷಿಣ ಅಮೆರಿಕ, ಅರ್ಜೆಂಟಿನ, ಚಿಲಿ, ದಕ್ಷಿಣ ಆಫ್ರಿಕಾ, ನೈಜೀರಿಯ, ಟಾಂಜಾನಿಯ, ಈಜಿಪ್ಟ್, ಇರಾನ್, ಇರಾಖ್, ಸೌದಿಅರೇಬಿಯ, ಕುವೈತ್, ಖತಾರ್, ಅರಬ್ ಸಂಯುಕ್ತ ಸಂಸ್ಥಾನ, ಪ್ಯಾಲೆಸ್ಟೈನ್, ಆಪ್ಘಾನಿಸ್ತಾನ, ಪಾಕಿಸ್ತಾನ, ಕಜ಼ಕೀಸ್ಥಾನ ಸೇರಿದಂತೆ ರಷ್ಯಾದೇಶದ ಸುತ್ತ ಮುತ್ತಲ ದೇಶಗಳು, ಚೀನಾ-ಟಿಬೆಟ್, ನೇಪಾಳ, ಬಾಂಗ್ಲಾದೇಶ, ಜರ್ಮನಿ, ಜಪಾನ್, ದಕ್ಷಿಣ ಕೊರಿಯ, ಉತ್ತರಕೊರಿಯ, ವಿಯೆಟ್ನಾಂ, ಮಲೇಶಿಯ, ಮಯನ್ಮಾರ್, ಶ್ರೀಲಂಕಾ, ಮಾರಿಷಿಯಸ್, ಮುಂತಾದವು.

ಬ್ರೆಜ಼ಿಲ್ ದೇಶವು ಬಹಿಷ್ಕರಿಸಿದ್ದರೂ ಪರ್ಯಾಯವಾಗಿ ತಮ್ಮದೇಶದ ಪದ್ಧತಿಯನ್ನೊಳಗೊಂಡ ’ದಿ ಡೇ ಆಫ಼್ ದಿ ಎನಾಮೋರ್ಡ್’ ದಿನದ  ಆಚರಣೆಯನ್ನು ಪ್ರತಿವರ್ಷ ಜೂನ್12 ರಂದು ಆಚರಿಸಲು ಅನುಮತಿ ನೀಡಿದ್ದು ದೇಶೀಯ ಸಂಸ್ಕೃತಿಗೆ ಧಕ್ಕೆ ಬಾರದಂತೆ ಪ್ರತಿಯೊಬ್ಬ ನಾಗರಿಕನು ಎಚ್ಚರಿಕೆ ವಹಿಸಲು ಕಟ್ಟಾಜ್ಞೆ ಮಾಡಿದೆ!

ಭಾರತಕ್ಕೆ ಪ್ರವೇಶ ಯಾವಾಗ-ಹೇಗಾಯ್ತು..? 1999 ನೇ ಇಸವಿಯವರೆಗೆ ’ವ್ಯಾಲೆಂಟೈನ್ಶ್ ಡೇ’ (ಪ್ರೇಮಿಗಳ ದಿನಾಚರಣೆ) ಹೆಸರೇ ಕೇಳಿರದ ಭಾರತೀಯರು 2000ನೇ ಇಸವಿಯಿಂದ ಅನಿವಾಸಿ ಭಾರತೀಯರಿಂದ, ವಿದೇಶೀ ಪ್ರವಾಸಿಗರಿಂದ, ಚಲನಚಿತ್ರ, ದೂರದರ್ಶನದಿಂದ, ಸೆಲ್‌ ಫೋನ್, ಪತ್ರಿಕೋದ್ಯಮ, ಅಂತರ್ಜಾಲ, ಇತ್ಯಾದಿ ಮಾಧ್ಯಮಗಳ ಮೂಲಕ ಭಾರತಕ್ಕೆ ಎಂಟ್ರಿ. ಮುಂಬಯಿ ಕೊಲ್ಕತ್ತ ಚೆನ್ನೈ ಗೋವ ಪಾಂಡಿಚೇರಿ ಕಲ್ಲಿಕೋಟೆ ಮಂಗಳೂರು ವಿಶಾಖಪಟ್ಟಣ ಮುಂತಾದ ಪ್ರಮುಖ ಬಂದರು ನಗರಗಳ ಮೂಲಕ ಈ ಮಹಾಮಾರಿಯ ಪ್ರವೇಶವಾಯಿತು.

ಪ್ರಾರಂಭದ 3-4 ವರ್ಷಗಳು ಮೆಟ್ರೊ ನಗರಗಳಲ್ಲಿ ಮಾತ್ರ ತೆವಳುತ್ತ ಸಾಗಿದ್ದ ಈ ವ್ಯಾಧಿಯು ಶೇ.3ರಷ್ಟು ಯುವ ಪ್ರೇಮಿಗಳನ್ನು ಮಾತ್ರ ಆಕರ್ಷಿಸಿಸಲು ಸಾಧ್ಯವಾಯ್ತು!  ನಂತರದ 3-4 ವರ್ಷಗಳಲ್ಲಿ ಹೇಗೋ ಯುವ ಪೀಳಿಗೆಯನ್ನು ತನ್ನ ತೋಳ್ತೆಕ್ಕೆಗೆ ಸಿಕ್ಕಿಸಿ ಕೊಂಡು ಶೇ.6ರಷ್ಟು ತನ್ನತ್ತ ಸೆಳೆಯಿತು.

2009-10ರಲ್ಲಿ ಇದರ ಪ್ರಮಾಣ ದಿಢೀರನೆ ಶೇ.13ರಷ್ಟಿದ್ದು 2011-12 ಎರಡೇ ವರ್ಷದಲ್ಲಿ ಈ ಅಂಟುರೋಗವು ’ಕಾಸ್ಮೊಪಾಲಿಟನ್ ಸಿಟಿ’ ಬೆಂಗಳೂರು ಸೇರಿದಂತೆ ದೆಹಲಿ, ಆಗ್ರಾ, ಚಂದೀಘಡ್, ಅಲಹಾಬಾದ್, ಗಾಂಧಿನಗರ, ಅಹಮದಾಬಾದ್, ಹೈದರಾಬಾದ್, ಪೂನಾ, ಕೊಯಮತ್ತೂರು, ಕನ್ಯಾಕುಮಾರಿ, ತಿರುವನಂತಪುರ, ಎರ್ನಾಕುಲಂ, ಕಣ್ಣಾನೂರು, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಇನ್ನಿತರ ಪ್ರಮುಖ ನಗರಗಳಲ್ಲಿ ತನ್ನ ಕರಾಳಛಾಯೆ ಸ್ಥಾಪಿಸಿ 2020ರಿಂದ ದೇಶದ-ರಾಜ್ಯದ ಪ್ರಮುಖ ಕೇಂದ್ರಗಳಲ್ಲೂ ಕಾಲಿಟ್ಟಿರುವುದು ಪರಮಾಶ್ಚರ್ಯ ವಿಷಾದನೀಯ. ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗಬಹುದು, ಎಚ್ಚರಿಕೆ…ಹುಷಾರ್…!

ನೆಮ್ಮದಿ ಶಾಂತಿ ಕದಡುವ ಅನಿವಾರ್ಯತೆ.. ನಗರ ಮತ್ತು ಗ್ರಾಮೀಣ ಪ್ರದೇಶದ ಅ-ವಿದ್ಯಾವಂತ ಮುಗ್ಧ ಯುವಜನರ ದಾರಿತಪ್ಪಿಸಲು ವ್ಯಾಲೆಂಟೈನ್ಸ್  ಡೇ ಭೂತ ಬಂದೇ ಬರುತ್ತದೆ ಎಂಬ ಭಯದ ನೆರಳು ಸಂಪ್ರದಾಯ ಬದ್ಧ ಕುಟುಂಬಗಳಲ್ಲಿ ಈಗಾಗಲೇ ಮನೆಮಾಡಿ ಈಗಿರುವ ನೆಮ್ಮದಿ ಶಾಂತಿ ಕದಡುವುದರಲ್ಲಿ ಸಂಶಯವಿಲ್ಲ! ಆಧುನಿಕ ಜಗತ್ತು ಜಾಗತೀಕರಣ ಪಾಶ್ಚಾತ್ಯರ ಸಂಸ್ಕೃತಿ-ನಾಗರಿಕತೆ ಕೇವಲ ಆಕರ್ಷಣೆ ಅಷ್ಟೆ. ಯುವಪಡೆಗೆ ಕ್ಷಣಿಕ ಸುಖ ತೋರಿಸಿ ನಂತರ ನಿರಂತರ ನರಳುವಂತೆ ಮಾಡುತ್ತದೆ ಜೋಕೆ, ಎಚ್ಚರಿಕೆ!

ಇಂಥ ತಾತ್ಕಾಲಿಕ ಮೋಜಿನ ಜೀವನಕ್ಕೆ ಹದಿ ಹರೆಯದವರು ಶರಣಾಗಿ ಬಲಿಪಶು ಆಗದೆ ಸಾತ್ವಿಕ ಆಹಾರ ತಾತ್ವಿಕ ವಿಚಾರ ಹಾಗೂ ಸಂಪ್ರದಾಯದ ಬದುಕನ್ನು ಆರಿಸಿಕೊಂಡಾಗ ಶಾಶ್ವತ ಸುಖ ಸಿಗುತ್ತದೆ. ಇತ್ತೀಚೆಗೆ ಪಾಶ್ಚಾತ್ಯರೂ ಯೂರೋಪಿಯನ್ನರೂ ಭಾರತೀಯ ಸಂಸ್ಕೃತಿ-ನಾಗರಿಕತೆಗೆ ಮನಸೋತು ಸನ್ಮತಿಯೆಡೆ ಸಾಗಿ ಬರುತ್ತಿದ್ದಾರೆ.

ಭಾರತೀಯರಲ್ಲಿರುವ ಅ-ಲೌಕಿಕ ಗೂಢಾರ್ಥ ತಿಳಿದು, ಆ ಬಗ್ಗೆ ಸೂಕ್ತ ವಿಮರ್ಷೆ ವಿವೇಚನೆ ಮಾಡಲು ನಿರ್ಧರಿಸಿರುವುದು ಶ್ಲಾಘನೀಯ. ತಾಯಿ ತಂದೆ ದೇವರು ಸೋದರ ಸೋದರಿ ಬಂಧುಮಿತ್ರರ ಬಗ್ಗೆ ಇರುವ ಪವಿತ್ರ ಸಂಬಂಧ ಅರ್ಥೈಸಿಕೊಂಡು ನಮ್ಮ ಜೀವನಕ್ಕೆ ಅಳವಡಿಸಿಕೊಂಡು ಉತ್ತಮ ಬದುಕನ್ನು ಆರಿಸಿಕೊಂಡಾಗ ಮಾತ್ರ ಸುಖ ಸಂತೋಷ ನೆಮ್ಮದಿ ಆರೋಗ್ಯ ಎಲ್ಲವೂ ಸಿಗುತ್ತದೆ. ಈ ನಿತ್ಯಸತ್ಯವನ್ನ ಪೋಷಕರು ಗುರುಹಿರಿಯರು ಸಾಧುಸಂತರು ಯುವಕರಿಗೆ ಮನವರಿಕೆ ಆಗುವಂತೆ ಮಾರ್ಗದರ್ಶನ ಮಾಡಿದರೆ ಮಾತ್ರ ಇಂಥ ಅನಿಷ್ಟ ಅ(ದಿ)ನಾ ಚರಣೆಯ ಅತ್ಯಾಚಾರ-ಅಕೃತ್ಯಗಳಿಗೆ ಅಂತ್ಯ ಸಿಗಬಹುದು?

ಭಾರತದ-ಕರ್ನಾಟಕದ ಶೇ.95ರಷ್ಟು ಪ್ರೇಮಿಗಳಿಗೆ ಖಂಡಿತ ಈ ದಿನದ ಬಗ್ಗೆ ಶೂನ್ಯ ಅರಿವಿದೆ!  ಅಷ್ಟೇ ಏಕೆ ಇದರ ಉಚ್ಛಾರಣೆ ಬಾರದವರೂ, ಸ್ಪೆಲ್ಲಿಂಗ್ ಗೊತ್ತಿಲ್ಲ ದವರೂ, ಕೇವಲ ಫ಼್ಯಾಶನ್‌ಗೆ ಅಥವ ಸ್ಕೋಪ್ಗೆ ಆಚರಿಸುತ್ತಾರೆ ಎಂಬುದು ನಾಚಿಕೆಗೇಡು? ಈ ಅತಿರೇಕಕ್ಕಿಂತ ಇನ್ನೊಂದು ಅವಿವೇಕವಿಲ್ಲ! ಆದ್ದರಿಂದ ಯುವ ಜಾಣ-ಜಾಣೆಯರು  ವ್ಯಾಲೆಂಟೈನ್ಸ್ ಡೇಗೆ ಕಿಮ್ಮತ್ತು ನೀಡದಿರಲಿ ಎಂಬುದೇ ನನ್ನ ಸಲಹೆ.

ಇದು ಭಾರತ ಸಂಸ್ಕೃತಿಗೆ ಮಾರಕನಾ? ಒಂದುವೇಳೆ ಈ ಅನಾಗರಿಕ ಅಸಾಮಾಜಿಕ ಪದ್ಧತಿಯನ್ನು ಮೊಳಕೆಯಲ್ಲೆ ಚಿವುಟಿ ಹಾಕದೆ ಹೆಮ್ಮರವಾಗಿ ಬೆಳೆಯಲು ಬಿಟ್ಟರೆ, ಈ ಅಜ್ಞಾನಕ್ಕೆ ಅಸಹಾಯಕತೆಯ ಮಣೆ ಹಾಕಿದರೆ, ಭವಿಷ್ಯದಲ್ಲಿ ಭಾರತದ ಸಾಂಸ್ಕೃತಿಕ ಬೆಳವಣಿಗೆಯನ್ನು ಕುಂಠಿತ ಗೊಳಿಸಿದಂತೆ ಆಗುತ್ತದೆ. ಹಿಂದುತ್ವದ ಉನ್ನತಿ ಮತ್ತು ಅವಿಭಕ್ತ ಕುಟುಂಬ ನಿರ್ವಹಣೆ ಇವೆರಡೂ ಅವನತಿಗೊಳ್ಳುತ್ತದೆ. ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಣಲು ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ ಪುನರುತ್ಥಾನದ ಕೈಂಕರ್ಯವನ್ನು ಸಂಸ್ಕೃತಿ ಉದ್ಧಾರಕರು ತ್ರಿಕರಣ ಶುದ್ಧಿಯಿಂದ ಮನಸ್ಸು ಮಾಡಿ ಮುಂದಾಳತ್ವ ವಹಿಸಿದರೆ ಪ್ರತಿಯೊಬ್ಬ ಭಾರತೀಯ ಇವರೊಡನೆ ಕೈ ಜೋಡಿಸುತ್ತಾನೆ. ಡೌಲು ಢಂಭಾಚಾರದ ಈ ಅನಿಷ್ಟದ ದಿನಾಚರಣೆ ಕೆಲವೇ ವರ್ಷದೊಳಗೆ ಬುಡಸಹಿತ ಕಿತ್ತೊಗೆಯಬಹುದು.

ಯುವಜನತೆಯ ದಾರಿ ತಪ್ಪಿಸುವ ಆಚರಣೆ… ನಾವೀಗ ಆಲಸ್ಯದಿಂದ ಕೈಚೆಲ್ಲಿ ಕುಳಿತರೆ ಮುಂದಿನ 10-15 ವರ್ಷದೊಳಗೆ ವ್ಯಾಲೆಂಟೈನ್ಸ್-ಡೇ ಪೆಡಂಭೂತವು ತನ್ನ ಪ್ರಬಲ ಕಬಂಧ ಬಾಹುಗಳನ್ನು ಹಳ್ಳಿ ಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಚಾಚುತ್ತ  ಚಾಟಿಂಗ್‌-ಡೇಟಿಂಗ್ ಎಂಬ ಅನೈತಿಕ ಪದ್ದತಿ ಅಳವಡಿಸಿಕೊಳ್ಳಲು ಬುನಾದಿಯಾಗುತ್ತದೆ. ಭಾರತದ ಪರಂಪರಾನುಗತ ಪವಿತ್ರ ಸಂಸ್ಕೃತಿ ಸರ್ವನಾಶ ಆಗುತ್ತದೆ! ಈ ಅನಿಷ್ಟಾಚರಣೆ ಇಲ್ಲದೆ ಹೋದರೆ ಯಾರಿಗೂ ಯಾವುದೇ ನಷ್ಟ ಆಗಲಾರದು ಮತ್ತು ಎಂತಹ ಕಷ್ಟವೂ ಇರಲಾರದು.

ಬದಲಿಗೆ ವಿನಯ-ವಿವೇಕ ಎಂಬ ಶುಭ-ಲಾಭ ವೃದ್ಧಿಯಾಗಿ ಯುವಶಕ್ತಿಯ ಸದುಪಯೋಗವಾಗುತ್ತದೆ. ದೇಶದ ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸರ್ವತೋಮುಖ ಬೆಳವಣಿಗೆ ಕಂಡು ಭಾರತವು ಜಾಗತಿಕ ಮಟ್ಟದಲ್ಲಿ ಹೆಚ್ಚು ಪ್ರಬಲವಾಗುತ್ತದೆ ನಾವೂಸಹ ಭಾರತೀಯರಾಗೆ ಉಳಿದು ಸಾರ್ಥಕತೆಯನ್ನು ಪಡೆಯುತ್ತೇವೆ? ಜೈ ಸಂಸ್ಕೃತಿ-ನಾಗರಿಕತೆ! ಜೈ ಯುವಜನತೆ!!

admin
the authoradmin

2 Comments

  • ನಮ್ಮದೇಶ ನಮ್ಮಸಂಸ್ಕೃತಿ ನಮ್ಮಧರ್ಮ ಇದೆಲ್ಲದರ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸುವಂತೆ ಮತ್ತು ವ್ಯಾಲೆಂಟೈನ್ ಡೇ ಬಗ್ಗೆ ಸತ್ಯ ಇತಿಹಾಸ ಮತ್ತು ಅನಗತ್ಯ ಅನಾವಶ್ಯಕ ಎಂಬುದನ್ನು ಒತ್ತಿ ಹೇಳುವ ಮೂಲಕ ಕುಮಾರಕವಿಯವರು ನಿಜವಾಗಿಯೂ ದಿ ಬೆಸ್ಟ್ ಲೇಖನ ಬರೆದಿದ್ದಾರೆ, ಒಂದೊಂದು ಅಂಶವು ಸೂಪರ್ ಬೊಂಬಾಟ್ ಆಗಿದೆ. ಭಾರತೀಯರಾದ ನಾವು ಇನ್ನಾದರೂ ಅರ್ಥ ಮಾಡಿಕೊಂಡು ಕೆಲವು ಸಂಬಂಧವೇ ಇಲ್ಲದ ಆಚರಣೆಗಳನ್ನು ನಿಲ್ಲಿಸುವುದೇ ಕ್ಷೇಮ, ಸರಿ. ಪತ್ರಿಕೆಯ ಎಲ್ಲರಿಗೂ ಕೋಟಿ ಧನ್ಯವಾದ
    ಮಲ್ಲಿಕಾರ್ಜುನಸ್ವಾಮಿ, ಸೀನಿಯರ್ ಅಸ್ಸಿಸ್ಟಂಟ್ , ಸಬ್ ರಿಜಿಸ್ಟ್ರಾರ್ ಕಚೇರಿ, ನೆಲಮಂಗಲ, ಬೆಂಗಳೂರು

  • ನಮ್ಮದೇಶ ನಮ್ಮಸಂಸ್ಕೃತಿ ನಮ್ಮಧರ್ಮ ಇದೆಲ್ಲದರ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸುವಂತೆ ಮತ್ತು ವ್ಯಾಲೆಂಟೈನ್ ಡೇ ಬಗ್ಗೆ ಸತ್ಯ ಇತಿಹಾಸ ಮತ್ತು ಅನಗತ್ಯ ಅನಾವಶ್ಯಕ ಎಂಬುದನ್ನು ಒತ್ತಿ ಹೇಳುವ ಮೂಲಕ ಕುಮಾರಕವಿಯವರು ನಿಜವಾಗಿಯೂ ದಿ ಬೆಸ್ಟ್ ಲೇಖನ ಬರೆದಿದ್ದಾರೆ, ಒಂದೊಂದು ಅಂಶವು ಸೂಪರ್ ಬೊಂಬಾಟ್ ಆಗಿದೆ. ಭಾರತೀಯರಾದ ನಾವು ಇನ್ನಾದರೂ ಅರ್ಥ ಮಾಡಿಕೊಂಡು ಕೆಲವು ಸಂಬಂಧವೇ ಇಲ್ಲದ ಆಚರಣೆಗಳನ್ನು ನಿಲ್ಲಿಸುವುದೇ ಕ್ಷೇಮ, ಸರಿ. ಪತ್ರಿಕೆಯ ಎಲ್ಲರಿಗೂ ಕೋಟಿ ಧನ್ಯವಾದ, ನಿಮ್ಮ ವಿಶ್ವಾಸದ, ಮಲ್ಲಿಕಾರ್ಜುನಸ್ವಾಮಿ, ಸೀನಿಯರ್ ಅಸ್ಸಿಸ್ಟಂಟ್ , ಸಬ್ ರಿಜಿಸ್ಟ್ರಾರ್ ಕಚೇರಿ, ನೆಲಮಂಗಲ, ಬೆಂಗಳೂರು

Leave a Reply

Translate to any language you want