ಧಾರವಾಡ: ವಿದ್ಯಾ ಪೋಷಕ ವತಿಯಿಂದ ಧಾರವಾಡ ಮತ್ತು ಗದಗ ಜಿಲ್ಲೆಗಳ ಸ್ವಯಂಸೇವಕರ ಸಭೆಯನ್ನು ಧಾರವಾಡದ ಜೆಎಸ್ಎಸ್ ಕಾಲೇಜು ಆವರಣದಲ್ಲಿರುವ ಉತ್ಸವ ಹಾಲ್ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ವಿದ್ಯಾಪೋಷಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶರತ್ ಐರಣಿ ಉದ್ಘಾಟಿಸಿ ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಸಾವಿರಾರು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಬದುಕಿಗೆ ಆರ್ಥಿಕವಾಗಿ ಸಹಾಯವನ್ನು ನೀಡುವ ಮೂಲಕ ಬೆಳಕಾದ ಈ ಸಂಸ್ಥೆ ಇಪ್ಪತೈದು ವರ್ಷಗಳನ್ನು ನಿಸ್ವಾರ್ಥ ಸೇವೆಯಿಂದ ಪೂರೈಸಿದ್ದು ಇದಕ್ಕೆ ಕಾರಣ ಸಮಾಜದ ಭವಿಷ್ಯವನ್ನು ರೂಪಿಸಿದ ಸಾವಿರಾರು ಕೈಗಳ ಸಮೂಹದ ಪ್ರಯತ್ನವೇ ಕಾರಣವಾಗಿದೆ ಎಂದರು.
ವಿದ್ಯಾಪೋಷಕ ಸಂಸ್ಥೆಯ ಗೌರವ ಆಧ್ಯಕ್ಷರಾದ ಡಾ. ರವೀಂದ್ರ ಗುರುವಣ್ಣವರ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳು, ಭವಿಷ್ಯದ ಯೋಜನೆಗಳು ಹಾಗೂ ಸ್ವಯಂಸೇವಕರ ಪಾತ್ರದ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಎರಡೂ ಜಿಲ್ಲೆಗಳ ಸಮರ್ಪಿತ ಹಿರಿಯ ಸ್ವಯಂಸೇವಕರು, ದಾನಿಗಳು, ವಿದ್ಯಾ ಪೋಷಕದ ಮಾಜಿ ಸಿಬ್ಬಂದಿಗಳು ಹಾಗೂ ಯುವ (ಅಲ್ಯೂಮ್ನಿ) ಸದಸ್ಯರು ಭಾಗವಹಿಸಿದ್ದರು. ಎಲ್ಲರನ್ನು ಒಂದೇ ವೇದಿಕೆಯಲ್ಲಿ ಭೇಟಿ ಮಾಡುವ ಅವಕಾಶ ಉತ್ಸಾಹಭರಿತ ಹಾಗೂ ಸ್ಮರಣೀಯ ಕ್ಷಣವಾಯಿತು.

ಸಭೆಯಲ್ಲಿ ಸ್ವಯಂಸೇವಕರ ಅಭಿಪ್ರಾಯಗಳು, ಅನುಭವ ಹಂಚಿಕೆ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆಗಳು ನಡೆದವು. ಕಾರ್ಯಕ್ರಮವು ವಿದ್ಯಾ ಪೋಷಕದ ಧ್ಯೇಯ ಮತ್ತು ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಬಲತುಂಬುವಂತಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲೆಯಿಂದ ಡಾ.ಸಂಗಮೇಶ ಸಜ್ಜನರ, ಡಾ.ಪಿ.ಎಸ್.ಕಣವಿ, ಡಾ.ಪ್ರಭು ಗಂಜಿಹಾಳ, ಆರ್.ಕೆ.ಭಾಗವಾನ, ಪ್ರೊ.ಹೊಳ್ಳಿಯವರಮಠ, ಪ್ರೊ.ಎಚ್.ಎನ್.ಕಾಳೆ, ವಿಜಯಕುಮಾರ ಸಜ್ಜನರ, ಶಶಿಧರ ಮಳಲಿ, ಮೊದಲಾದವರು ಭಾಗವಹಿಸಿದ್ದರು. ವಿದ್ಯಾಪೋಷಕ ಸಂಸ್ಥೆಯ ಫಾತಿಮಾ ಪಠಾಣ, ರತ್ನಾ ಹಿಪ್ಪರಗಿ, ಅನ್ನಪೂರ್ಣ ಯಡ್ರಾವಿ ಮತ್ತು ಸಿಬ್ಬಂದಿವರ್ಗ ಸಕ್ರಿಯವಾಗಿ ಪಾಲ್ಗೊಂಡಿದ್ದರು.








