ಕೆಎಸ್ಆರ್ ಟಿಸಿ ಸಿಬ್ಬಂದಿ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಿ, ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕು

ಪಿರಿಯಾಪಟ್ಟಣ (ರವಿಚಂದ್ರ ಬೂದಿತಿಟ್ಟು): ಕೆಎಸ್ಆರ್ ಟಿಸಿ ಸಿಬ್ಬಂದಿ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕು ಎಂದು ಕೆಎಸ್ಆರ್ ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ವಿರೇಶ್ ಎಚ್ ತ್ಯಾಪಿ ತಿಳಿಸಿದರು.

ಪಿರಿಯಾಪಟ್ಟಣ ಸಾರಿಗೆ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸಿಬ್ಬಂದಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು, ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವ ಮೂಲಕ ನಿಗದಿತ ಮಾರ್ಗಸೂಚಿಗಳನ್ನು ಕಾರ್ಯಾಚರಣೆ ಮಾಡಬೇಕು, ಸಾರ್ವಜನಿಕ ಪ್ರಯಾಣಿಕರಿಗೆ ವಿಶೇಷವಾಗಿ ಶಾಲಾ ಕಾಲೇಜು ವೇಳೆಯಲ್ಲಿ ಸಮರ್ಪಕ ಸಾರಿಗೆ ಸೇವೆ ಒದಗಿಸುವ ಮೂಲಕ ಆದಾಯ ಕ್ರೂಢೀಕರಣ ಮಾಡಬೇಕು, ಕರ್ತವ್ಯ ವೇಳೆ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಸಾರ್ವಜನಿಕ ವಲಯದಲ್ಲಿ ಸಂಸ್ಥೆಗೆ ಉತ್ತಮ ಹೆಸರು ತರಬೇಕು ಎಂದರು.

ವಿಭಾಗೀಯ ಯಾಂತ್ರಿಕ ಅಭಿಯಂತರರಾದ ಪಿ.ಮಹೇಶ್ ಅವರು ಮಾತನಾಡಿ ಸಿಬ್ಬಂದಿಗಳು ಸಾರಿಗೆ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಉತ್ತಮ ಸೇವೆ ನೀಡಬೇಕು, ವಾಹನದಲ್ಲಿ ಏನಾದರೂ ತೊಂದರೆ ಕಂಡು ಬಂದ ತಕ್ಷಣ ಅಧಿಕಾರಿಗಳ ಗಮನಕ್ಕೆ ತಂದು ದುರಸ್ತಿ ಪಡಿಸಿಕೊಳ್ಳಬೇಕು, ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯ ಪಾಲಿಸುವ ಮೂಲಕ ಸುರಕ್ಷಿತ ಚಾಲನೆಗೆ ಒತ್ತು ನೀಡಿ ಇಂಧನದ ಹೆಚ್ಚು ಬಳಕೆ ಹೊರೆ ತಪ್ಪಿಸಬೇಕು ಎಂದರು.

ಈ ಸಂದರ್ಭ ವಿಭಾಗೀಯ ಸಂಚಾರ ಅಧಿಕಾರಿ ದಿನೇಶ್ ಕುಮಾರ್, ಪಿರಿಯಾಪಟ್ಟಣ ಘಟಕ ಸಹಾಯಕ ಕಾರ್ಯ ಅಧಿಕ್ಷಕ ಶ್ರೀಕಾಂತ್, ಸಂಚಾರ ನಿರೀಕ್ಷಕ ಪ್ರಶಾಂತಯ್ಯ ಹಿರೇಮಠ್, ಸಹಾಯಕ ಸಂಚಾರ ನಿರೀಕ್ಷಕ ಈಶ್ವರ್, ಸಿಬ್ಬಂದಿ ಮೇಲ್ವಿಚಾರಕಿ ಭಾಗ್ಯಲಕ್ಷ್ಮಿ, ಸಂಚಾರ ನಿಯಂತ್ರಣಾಧಿಕಾರಿ ಶ್ರೀಧರ್ ಮತ್ತು ಚಾಲಕ ನಿರ್ವಾಹಕ ಯಾಂತ್ರಿಕ ಭದ್ರತಾ ಮತ್ತು ಕಚೇರಿ ಸಿಬ್ಬಂದಿ ಇದ್ದರು.







