LatestMysore

ಸರ್ಕಾರಿ ಶಾಲೆಗಳ ಏಳಿಗೆಗೆ ಸಮಾಜದ ಸರ್ವರು ಕೈ ಜೋಡಿಸಬೇಕು:ಡಿ.ಶಿವುನಾಯಕ್

 ಕೆ.ಆರ್.ನಗರ(ಜಿಟೆಕ್ ಶಂಕರ್): ಸರ್ಕಾರಿ ಶಾಲೆಗಳ ಏಳಿಗೆಗೆ ಸಮಾಜದ ಸರ್ವರು ಕೈ ಜೋಡಿಸಿ ಕೆಲಸ‌ ಮಾಡಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಡಿ.ಶಿವುನಾಯಕ್ ಹೇಳಿದರು.

ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 50  ವಿದ್ಯಾರ್ಥಿಗಳಿಗೆ ಫ್ರೆಂಡ್ಸ್ ರೀ ಕ್ರೀಯೇಷನ್ ಕ್ಲಬ್ ವತಿಯಿಂದ ಕೊಡಮಾಡಿದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ ನಂತರ ನಡೆದ ಸರಳ‌ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಉನ್ನತ್ತಿ ಸಾಧಿಸಬೇಕು ಎಂದು ಸಲಹೆ ನೀಡಿದ ಮಾಜಿ ಅಧ್ಯಕ್ಷರು ಮುಂದಿನ ದಿನಗಳಲ್ಲಿ ವೈಯಕ್ತಿಕ ವಾಗಿ ಶಾಲೆಯ ಏಳಿಗೆಗೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕ ಸೈಯದ್ ರಿಜ್ವಾನ್ ಮಾತನಾಡಿ ಇತ್ತೀಚೆಗಿನ ದಿನಗಳಲ್ಲಿ ಖಾಸಗಿ ಶಾಲೆಗಳಿಂತ ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಣ ದೊರಕುತ್ತಿದ್ದು ಪೋಷಕರು ಇದನ್ನು ಅರಿತು ಕಡ್ಡಾಯವಾಗಿ ತಮ್ಮ‌ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಬೇಕು ಎಂದು ಮನವಿ ಮಾಡಿದರಲ್ಲದೆ, ಉನ್ನತ ಹುದ್ದೆಗೇರುವ ಮೂಲಕ ಉತ್ತಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು ಇದನ್ನು ಎಲ್ಲರೂ ಅರಿಯಬೇಕೆಂದರು.

ಪುರಸಭೆ ಮಾಜಿ ಸದಸ್ಯ ಕೆ.ವಿನಯ್,  ಫ್ರೆಂಡ್ಸ್‌ ರೀ ಕ್ರಿಯೇಷನ್  ಕ್ಲಬ್  ಅಧ್ಯಕ್ಷ ರಾಜಶೇಖರ, ಮುಖಂಡರಾದ ಅಮೃತ್ ಗೌಡ, ಮೋಹನ್,  ಶಾಲೆಯ  ಶಿಕ್ಷಕಿಯರಾದ ಕಮಲಮ್ಮ,ರಾಜೇಶ್ವರಿ, ದಮನಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

 

admin
the authoradmin

Leave a Reply

Translate to any language you want