ಹನೂರು: ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಜೆಎಸ್ ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಿರಿಯಣ್ಣ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ರಾಮಾಪುರದ ಜೆಎಸ್ಎಸ್ ಸಭಾಭವನದಲ್ಲಿ ಆಯೋಜಿಸಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಮ್ಮ ಜೀವನ ರೂಪಿಸಿಲು ಶ್ರಮಪಡುವ ತಂದೆ-ತಾಯಿಯರನ್ನು ಗೌರವಿಸುವುದರೊಂದಿಗೆ, ಗುರುಗಳು, ಹಿರಿಯರನ್ನು ಗೌರವಿಸುವ ಪರಿಪಾಠ ಬೆಳೆಸಿಕೊಳ್ಳಿ. ಶಿಕ್ಷಣದತ್ತ ಚಿತ್ತ ಹರಿಸಿ ಸುಂದರ ಭವಿಷ್ಯ ರೂಪಿಸಿಕೊಳ್ಳಿ ಎಂದು ತಿಳಿಸಿದರು.

ಹನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ರಘುರಾಜು ಮಾತನಾಡಿ, ಮನುಷ್ಯ ಯಾವುದೇ ರಾಗ ದ್ವೆಷಗಳಿಲ್ಲದೆ ವಿಶ್ವ ಮಾನವನಾಗಿ ಹುಟ್ಟುತ್ತಾನೆ, ಬೆಳೆಯುತ್ತ ದ್ವೇಷ, ಅಸೂಯೆ, ಕೋಪ ತಾಪಗಳನ್ನು ತಾಳುತ್ತ ಅಲ್ಪ ಮಾನವನಾಗುತ್ತಾನೆ. ಆತ ಮತ್ತೆ ವಿಶ್ವ ಮಾನವನಾಗಲು ಇರುವ ಏಕೈಕ ಸಾಧನ ಶಿಕ್ಷಣ. ಉತ್ತಮ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಿ ಉತ್ಯಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.








