ಕೌಶಲತೆ ನಿಮ್ಮಲ್ಲಿದ್ದರೆ ಕೆಲಸ ಸಿಕ್ಕೇ ಸಿಗುತ್ತದೆ… ಮೊದಲು ಕೆಲಸ ಸಂಪಾದಿಸಿ… ಆಮೇಲೆ ವೇತನಕ್ಕೆ ತಕ್ಕ ಉದ್ಯೋಗ ನಿಮ್ಮದಾಗಲಿದೆ…

ಇವತ್ತು ಕೆಲಸ ಯಾವುದೇ ಆಗಿರಲಿ ಮಾಡುತ್ತೇನೆ ಎಂದು ಹೊರಡುವವರಿಗೆ ನೂರಾರು ಕೆಲಸಗಳಿವೆ… ಆದರೆ ಇಂತಹದ್ದೇ ಬೇಕೆಂದು ಬಯಸುವವರು ಒಂದಷ್ಟು ಶ್ರಮ ಪಡಬೇಕಾಗಿದೆ.. ಅಂಥವರು ಕೆಲಸಕ್ಕೆ ಬೇಕಾದ ಕೌಶಲತೆ ಬೆಳೆಸಿಕೊಳ್ಳುವುದು ಒಳ್ಳೆಯದು… ಆ ನಂತರ ಕೆಲಸದ ಬೇಟೆ ಆರಂಭಿಸಬೇಕಾಗುತ್ತದೆ.
ಓದಿದ ಬಳಿಕ ಕೆಲಸ ಗಿಟ್ಟಿಸಿಕೊಳ್ಳುವುದು ಸವಾಲ್ ಆಗುತ್ತಿದೆ. ಪ್ರತಿವರ್ಷವೂ ಲಕ್ಷಾಂತರ ಮಂದಿ ಪದವಿಗಳನ್ನು ಪಡೆದುಕೊಂಡು ಕಾಲೇಜಿನಿಂದ ಹೊರ ಬರುತ್ತಿದ್ದಾರೆ. ಅವರಿಗೆಲ್ಲ ಕೆಲಸ ಸಿಗುತ್ತಾ? ಖಂಡಿತಾ ಇಲ್ಲ. ನೌಕರಿ ಕೊಡುವ ಕಂಪನಿಗಳು ಹತ್ತು ಹಲವು ರೀತಿಯ ಪರೀಕ್ಷೆಗಳನ್ನು ಮಾಡಿ ಎಲ್ಲವೂ ಸಮಾಧಾನವಾದರೆ ಮಾತ್ರ ಕೆಲಸ ಕೊಡುತ್ತವೆ. ವಿದ್ಯಾರ್ಥಿಗಳಿದ್ದಾಗ ಏನೇನೋ ಗುರಿಗಳನ್ನಿಟ್ಟುಕೊಂಡು ಪರೀಕ್ಷೆಗಳನ್ನೆಲ್ಲ ಚೆನ್ನಾಗಿ ಮಾಡಿ ಕೆಲಸದ ಬಗ್ಗೆ ಒಂದೊಳ್ಳೆಯ ಕನಸು ಕಾಣುತ್ತಾ ಸಂಭ್ರಮಿಸುವವರಿಗೆ ನಿಜವಾದ ಪರೀಕ್ಷೆಗಳು ಶುರುವಾಗುವುದೇ ಕೆಲಸಕ್ಕಾಗಿ ಅಲೆದಾಡುವಾಗ…
ಏನೇನೋ ಗುರಿಗಳನ್ನಿಟ್ಟುಕೊಂಡು ಓದುವ ವಿದ್ಯಾರ್ಥಿಗಳ ಪೈಕಿ ಕೆಲವರಿಗೆ ಅದರಲ್ಲೂ ರಾಜಕೀಯ, ಅಧಿಕಾರ, ಹಣ ಮುಂತಾದವುಗಳ ಬೆಂಬಲ ಇರುವವರು ತಮ್ಮ ಗುರಿಯನ್ನು ಬೇಗ ತಲುಪಿ ಬಿಡುತ್ತಾರೆ. ಮತ್ತೆ ಕೆಲವರು ತಲುಪಲಾಗದೆ ಹಾದಿ ಬದಲಾಯಿಸಿ ಹೊರಟು ಬಿಡುತ್ತಾರೆ. ಆದರೆ ಹಳ್ಳಿಯಿಂದ ಹೋಗಿ ಸಾಲ ಮಾಡಿ ಓದುವ ಬಡವರ ಬದುಕಿನಲ್ಲಿ ಕೆಲಸದ ಅಲೆದಾಟ ಸಾಕಷ್ಟು ಪಾಠಗಳನ್ನು ಕಲಿಸುತ್ತದೆ. ಹೀಗಾಗಿ ಅವರು ಅಲೆದು ಸುಸ್ತಾಗಿ ದುಡಿಯೋದಕ್ಕೊಂದು ಕೆಲಸ ಸಿಕ್ಕಿ ಬಿಟ್ಟರೆ ಸಾಕು ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಅದರಲ್ಲಿ ಅಲ್ಪ ತೃಪ್ತರಾಗಿ ಬದುಕು ಕಟ್ಟಿಕೊಳ್ಳೋದಕ್ಕೆ ಆರಂಭಿಸುತ್ತಾರೆ.
ಇದು ಅನಿವಾರ್ಯವೂ ಹೌದು ಏಕೆಂದರೆ ಲಕ್ಷಾಂತರ ಹಣ ಖರ್ಚು ಮಾಡಿ ಓದಿದ ಮೇಲೆ ಓದಿಗೆ ತಕ್ಕಂತೆ ಕೆಲಸ ಗಿಟ್ಟಿಸಿಕೊಳ್ಳುವುದೇ ಇವತ್ತೊಂದು ಸವಾಲ್. ಕಾಲೇಜು ಮುಗಿಸಿದ ಬಳಿಕ ಕೆಲಸ ಗ್ಯಾರಂಟಿ ಅಂಥ ದಾಖಲು ಮಾಡಿಕೊಂಡ ಕಾಲೇಜುಗಳು ತಲೆಕೆಡಿಸಿಕೊಳ್ಳುವುದಿಲ್ಲ. ಕಾಲೇಜುಗಳಿಗೆ ನೇಮಕಾತಿಗೆ ಬರುವ ಕಂಪನಿ, ಸಂಸ್ಥೆಗಳು ಕೂಡ ಕೆಲವೇ ಕೆಲವರಿಗಷ್ಟೆ ಕೆಲಸ ಕೊಡುತ್ತವೆ. ಉಳಿದವರ ಕಥೆ ಗೋವಿಂದ… ಆದರೆ ಓದು ಮುಗಿದಿದೆ ಕೆಲಸ ಮಾಡುವುದು ಅನಿವಾರ್ಯವಾಗಿದೆ ಹೀಗಾಗಿ ಕಂಪನಿಯಿಂದ ಕಂಪನಿಗೆ ಅಲೆದಾಡುವುದು ಮಾಮೂಲಿಯಾಗಿ ಬಿಡುತ್ತದೆ. ಆದ್ದರಿಂದ ಸದ್ಯಕ್ಕೊಂದು ಕೆಲಸ ಸಿಕ್ಕಿದರೆ ಸಾಕು.
ಈಗ ಸಿಕ್ಕ ಕೆಲಸ ಮಾಡುವುದು ಆಮೇಲೆ ಬೇರೆ ಹೆಚ್ಚು ಪ್ಯಾಕೇಜ್ ಸಿಗೋ ಕೆಲಸಕ್ಕೆ ಟ್ರೈ ಮಾಡಿದರಾಯಿತು ಎಂದು ಸಮಾಧಾನ ಮಾಡಿಕೊಂಡು ಕೆಲಸವನ್ನು ಮಾಡುತ್ತಾ ಹೋಗುತ್ತಾರೆ. ಇವತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಹೊರೆ ಹೊತ್ತ ಪೋಷಕರಿಗೆ ಮಗ ಅಥವಾ ಮಗಳಿಗೆ ಒಂದು ಕೆಲಸ ಸಿಕ್ಕಿಲ್ಲ ಎನ್ನುವುದು ಚಿಂತೆಗೆ ಕಾರಣವಾಗಿರುತ್ತದೆ. ಹೀಗಾಗಿ ಮಕ್ಕಳಿಗೂ ಮನೆಯಲ್ಲಿ ನಮಗಾಗಿ ಸಾಲ ಮಾಡಿದ ಅಪ್ಪ ಅಮ್ಮನ ಸಮಾಧಾನಗೊಳಿಸುವುದು ಅವತ್ತಿನ ಮಟ್ಟಿಗೆ ಮುಖ್ಯವಾಗಿರುತ್ತದೆ. ಅದರಲ್ಲೂ ಎಜುಕೇಷನ್ ಲೋನ್ ಪಡೆದವರಿಗೆ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆಯೇ ಸಾಲ ಇಎಂಐ ಕಟ್ಟುವ ಆತಂಕ ಶುರುವಾಗಿರುತ್ತದೆ. ಹೀಗಾಗಿ ಯಾವುದಾದರೊಂದು ಉದ್ಯೋಗ ಸಿಕ್ಕರೆ ಸಾಕೆಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ.
ಬಹಳಷ್ಟು ಸಲ ಓದುವಾಗ ಇದ್ದ ಬದುಕಿನ ಗುರಿ ಕೆಲಸ ಹುಡುಕುವ ಅಲೆದಾಟದಲ್ಲಿ ಹಾದಿ ತಪ್ಪಿ ಬಿಡುತ್ತದೆ. ಅದಕ್ಕಿಂತ ಹೆಚ್ಚಾಗಿ ಅನಿವಾರ್ಯವಾಗಿ ಗುರಿಯನ್ನು ಮರೆತು ಇಷ್ಟವಿಲ್ಲದಿದ್ದರೂ ಯಾವುದೋ ಸಿಕ್ಕಿದ ಕೆಲಸಕ್ಕೆ ನೇತು ಹಾಕಿಕೊಳ್ಳುತ್ತೇವೆ. ಆ ನಂತರ ಮಾಮೂಲಿ ಕೆಲಸ ಅದು ತರುವ ಒಂದಷ್ಟು ಪ್ರಮಾಣದ ವೇತನಕ್ಕೆ ನಾವು ಹೊಂದಿಕೊಂಡು ಬಿಡುತ್ತೇವೆ. ಹೊಸ ಕೆಲಸ ಸಿಗಲ್ಲ ಹಳೆ ಕೆಲಸ ಬಿಡಲ್ಲ ಹೀಗೆ ಜೀವನ ಸಾಗುತ್ತಿರುತ್ತದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬದುಕುವವರು ಬೇಕಾದಷ್ಟು ಮಂದಿಯಿದ್ದಾರೆ.
ನಾಳೆ ಕೆಲಸ ಕೊಟ್ಟ ಕಂಪನಿ ಕೈಬಿಟ್ಟರೆ ಬದುಕೇ ಕತ್ತಲೆ ಎನಿಸಿ ಬಿಡುತ್ತದೆ. ಇವತ್ತು ಖಾಸಗಿ ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ವೇತನ ಪಡೆಯುವವರಿಗೂ ಒಳಗೊಳಗೆ ಭಯವಂತು ಇದ್ದೇ ಇರುತ್ತದೆ. ಕಂಪನಿ ಕೈಬಿಟ್ಟರೆ ನಾಳೆ ಏನು? ಎಂಬ ಪ್ರಶ್ನೆಗಳಿಗೆ ಉತ್ತರವೇ ಇರುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ನಾವು ಯಾವ ಕೆಲಸ ಮಾಡುತ್ತಿದ್ದೇವೆ ಎನ್ನುವುದಕ್ಕಿಂತಲೂ ನಾವು ಮಾಡುವ ಕೆಲಸ ನಮ್ಮ ಕೈ ಹಿಡಿಯುತ್ತಾ? ಎಂಬುದನ್ನು ನಾವು ನೋಡಬೇಕಾಗಿದೆ. ಕೆಲಸವನ್ನು ಸೃಷ್ಟಿಸುವುದನ್ನು ನಾವು ಕಲಿತರೆ ಕೆಲಸ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಇವತ್ತು ಉದ್ಯೋಗದ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರು ದೊಡ್ಡ, ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಆಗಿರುತ್ತಾರೆ.
ಕಾರಣ ಅವರು ಯಾವುದೊ ಒಂದು ಕಂಪನಿಗಷ್ಟೆ ಸೀಮಿತರಾಗಿ ಇದರಾಚೆಗೂ ಬದುಕ ಬಹುದು ಎಂಬ ಆತ್ಮವಿಶ್ವಾಶವನ್ನೇ ಕಳೆದುಕೊಂಡಿರುತ್ತಾರೆ. ಹೀಗಾಗಿ ಕೆಲಸ ಕಳೆದು ಕೊಂಡ ತಕ್ಷಣ ಅವರು ಇದು ಹೋದರೇನು? ಇನ್ನೊಂದು ಹುಡುಕಿದರಾಯಿತು ಎಂಬ ಮನೋಬಲವಿದಲ್ಲದೆ ಕುಗ್ಗಿ ಹೋಗಿ ಬಿಡುತ್ತಾರೆ. ಹಾಗೆ ಆಗದಂತೆ ನೋಡಿಕೊಳ್ಳುವುದು ಬಹುಮುಖ್ಯ. ಮನೆ ಕೆಲಸ ಮಾಡುವವರು, ಗಾರೆ ಕೆಲಸ ಮಾಡುವವರು, ಕೂಲಿ ಕಾರ್ಮಿಕರು ಹೀಗೆ ಸಣ್ಣ ಪುಟ್ಟ ಕೆಲಸ ಮಾಡುವವರಿಗೆ ಇವತ್ತು ಇಲ್ಲಿ ಕೆಲಸ ಮಾಡಿ ಮುಗಿದರೆ ನಾಳೆ ಅಲ್ಲಿ ಕೆಲಸ ಸಿಕ್ಕಿಯೇ ಸಿಗುತ್ತದೆ ಎಂಬ ಧೈರ್ಯವಿದೆ.
ಅದೇ ದೊಡ್ಡ ಮಟ್ಟದ ಉದ್ಯೋಗ ಪಡೆದವರಿಗೆ ಆ ರೀತಿಯಲ್ಲಿ ಸುಲಭವಾಗಿ ಇವತ್ತು ಮಾಡುತ್ತಿರುವ ಹುದ್ದೆ ಬಿಟ್ಟ ತಕ್ಷಣ ನಾಳೆ ಮತ್ತೊಂದು ಹುದ್ದೆ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ನಮಗೆಲ್ಲರಿಗೂ ಬದುಕೋದಕ್ಕೆ ಏನಾದರೊಂದು ಕೆಲಸ ಬೇಕೇ ಬೇಕು.. ಆದರೆ ಆ ಕೆಲಸ ನಾವು ನಿರೀಕ್ಷಿಸಿದ ಆದಾಯವನ್ನು ತಂದುಕೊಡುತ್ತಿದ್ದರೆ ಮಾತ್ರ ಅದನ್ನು ಇಷ್ಟಪಟ್ಟು ಮಾಡುತ್ತಿರುತ್ತೇವೆ. ಇಲ್ಲಾಂದ್ರೆ ಮಾಡಬೇಕಲ್ಲ ಎಂಬ ಕಾರಣಕ್ಕೆ ಮಾಡುತ್ತಿರುತ್ತೇವೆ. ಅದು ಏನೇ ಇರಲಿ ಎಲ್ಲರಿಗೂ ಇಷ್ಟಪಡುವ ಕೆಲಸವೇ ಸಿಗಲಿ… ಮತ್ತು ಅದನ್ನು ಇಷ್ಟಪಟ್ಟು ಮಾಡುವಂತಾಗಲಿ ಎಂಬುದೇ ನಮ್ಮ ಹಾರೈಕೆ..
ಮೊದಲಿಗೆ ಕೆಲಸವೊಂದನ್ನು ಸಂಪಾದಿಸಿಕೊಂಡು ಅದರ ಮೂಲಕ ಬೆಳೆಯುವುದನ್ನು ಕಲಿಯಬೇಕು. ಸಣ್ಣಪುಟ್ಟ ಕೆಲಸ ಮಾಡಿದವರು ಇವತ್ತು ಉದ್ಯಮಿಗಳಾಗಿ ನೂರಾರು ಮಂದಿಗೆ ಕೆಲಸ ಕೊಟ್ಟ ನಿದರ್ಶನಗಳು ಸಾವಿರಾರು ಇವೆ. ಹೀಗಾಗಿ ಅಧ್ಯಯನ ಜತೆಗೆ ಕೌಶಲತೆ ಮೈಗೂಡಿಸಿಕೊಂಡರೆ ಕೆಲಸಗಳನ್ನು ನಾವೇ ಸೃಷ್ಟಿಸಿಕೊಳ್ಳಲು ಖಂಡಿತಾ ಸಾಧ್ಯವಿದೆ. ಅದಕ್ಕಿಂತ ಮೊದಲು ನಿಮ್ಮಲ್ಲಿರುವ ಅಡಗಿರುವ ಪ್ರತಿಭೆಯನ್ನು ಹೊರ ತರುವ ಕೆಲಸ ಮಾಡಿ ಅಷ್ಟೇ ಸಾಕು…