ಕೆ.ಆರ್.ನಗರ(ಸಂಘಟನೆ ಮಂಜುನಾಥ್): ನಮ್ಮ ವಿರೋಧಿಗಳ ಟೀಕೆಗೆ ಮಾತಿನಿಂದ ಉತ್ತರನೀಡದೆ ಅಭಿವೃದ್ದಿ ಕಾರ್ಯಗಳ ಮುಖಾಂತರ ತಕ್ಕ ಉತ್ತರ ನೀಡುವುದಾಗಿ ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಭೇರ್ಯಗ್ರಾಮದ ಪರಿಶಿಷ್ಠಜಾತಿ ಸ್ಮಶಾನಭೂಮಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ಯಾವುದೇ ರಾಜಕೀಯ, ಜಾತಿಮತ, ಧರ್ಮದ ಬೇಧವಿಲ್ಲದೆ ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗುತ್ತಿದ್ದು ಟೀಕಿಸುವವರ ಟೀಕೆಗೆ ಸೂಕ್ತ ಸಮಯದಲ್ಲಿ ಅಭಿವೃದ್ದಿ ಕಾರ್ಯಕ್ರಮಗಳೊಂದಿಗೆ ತಕ್ಕ ಉತ್ತರ ನೀಡುವುದಾಗಿ ಹೇಳಿದರು.

ಭೇರ್ಯ ಗ್ರಾಮದ ಆಸ್ಪತ್ರೆಯನ್ನು 30 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಗ್ರಾಮದ ಕೆರೆಯನ್ನು ಒಂದು ಕೋಟಿ ರೂಪಾಯಿಗಳಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ಕಳೆದ 25-30 ವರ್ಷಗಳಿಂದ ಡಾಂಬರ್ ಕಾಣದ ಭೇರ್ಯ ಗ್ರಾಮದ ಸುತ್ತಮುತ್ತಲ ಗ್ರಾಮಗಳ ಹಲವಾರು ರಸ್ತೆಗಳನ್ನು ಡಾಂಬರೀಕರಣಗೊಳಿಸಿ ಅಭಿವೃದ್ದಿಪಡಿಸಲಾಗಿದ್ದು ಗ್ರಾಮದಲ್ಲಿನ ಜನತೆಯ ಹಲವು ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು ಎಂದರು.
20ಲಕ್ಷ ರೂಪಾಯಿಗಳಲ್ಲಿ ಪರಿಶಿಷ್ಠಜಾತಿ ಸ್ಮಶಾನಭೂಮಿ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಇಲ್ಲಿ ಕಾಂಪೌಂಡ್, ಕುಡಿಯುವ ನೀರು, ವಿದ್ಯುತ್ ದೀಪ, ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅಂತಿಮ ಕಾರ್ಯವನ್ನು ನೆಮ್ಮದಿಯಿಂದ ಮಾಡಲು ಎಲ್ಲಾ ರೀತಿಯಲ್ಲಿ ಅನುವು ಮಾಡಿಕೊಡಲಾಗುತ್ತಿದೆ ಎಂದರಲ್ಲದೆ, ಜಾನುವಾರುಗಳಿಗೆ ಕುಡಿಯಲು, ಸಣ್ಣಪುಟ್ಟ ಕೆರೆಕಟ್ಟೆಗಳನ್ನು ತುಂಬಿಸಲು ನಾಲೆಗಳಿಗೆ ಕಟ್ ನೀರು ಬಿಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕೆಪಿಸಿಸಿ ಸದಸ್ಯ ಸಿ.ಪಿ.ರಮೇಶ್ ಮಾತನಾಡಿ ಅವಳಿ ತಾಲೂಕಿನ ಜನತೆ ಅಭಿವೃದ್ದಿ ಬಗ್ಗೆ ಚಿಂತಿಸುವ ಅಭಿವೃದ್ದಿ ಹರಿಕಾರ ಎನಿಸಿದ ಅಪರೂಪದ ಶಾಸಕರನ್ನು ಪಡೆದಿದ್ದು ಸರಕಾರದಿಂದ ಅನುದಾನ ತಂದು ಉತ್ತಮವಾಗಿ ಕೆಲಸ ಮಾಡುತ್ತಿದ್ದು ಮುಂದಿನ 2028ರ ಚುನಾವಣೆಯಲ್ಲಿಯೂ ಸಹ ಇವರನ್ನೆ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಬ್ಲಾಕ್ಕಾಂಗ್ರೇಸ್ ಅಧ್ಯಕ್ಷ ಉದಯಶಂಕರ್, ಎಂ.ಎಸ್.ಮಹದೇವ್, ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ, ಗ್ರಾಮದ ಮುಖಂಡರಾದ ನಾಡಗೌಡ, ಕೃಷ್ಣ ಸೇರಿದಂತೆ ಸಮಾಜದ ಮುಖಂಡರು ಹಾಗೂ ಭೇರ್ಯ ಗ್ರಾಮದ ಜನತೆ ಪಾಲ್ಗೊಂಡಿದ್ದರು.








