ಚಿಕ್ಕ ಅಳುವಾರದಲ್ಲಿ ಯುವ ನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ಕಾರ್ಯಾಗಾರ
ಕೊಡಗಿನಲ್ಲಿ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಆರಂಭಕ್ಕೆ ಚಿಂತನೆ : ಶಾಸಕ ಡಾ.ಮಂತರ್ ಗೌಡ

ಕುಶಾಲನಗರ (ಆರ್ ಹೆಚ್ ): ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಚಿಕ್ಕ ಅಳುವಾರದಲ್ಲಿರುವ ಕೊಡಗು ವಿಶ್ವ ವಿದ್ಯಾನಿಲಯದ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಗಳ ಪೈಕಿ ಯುವ ನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಯುವಜನಾಂಗದ ಮೇಲೆ ದೇಶದ ಅಭಿವೃದ್ಧಿ ನಿಂತಿದೆ. ಹೊಸ ತಂತ್ರಜ್ಞಾನ, ಆಧುನಿಕ ಬದಲಾದಂತೆ ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಕೃಷಿಯಲ್ಲೂ ಕೂಡ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.

ಯುವ ಜನತೆಗೆ ಜೀವನದಲ್ಲಿ ನಿರ್ದಿಷ್ಟ ಗುರಿ ಬೇಕು ಎಂದರು.ಕೊಡಗು ಜಿಲ್ಲೆಗೆ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ತರಬೇಕು ಎಂಬ ಚಿಂತನೆ ಇದೆ. ಈಗ ಜಿಲ್ಲೆಯಲ್ಲಿರುವ ಹೊಟೇಲ್ ಹೊರ ರಾಜ್ಯದವರು ಕೆಲಸಮಾಡುತ್ತಿದ್ದಾರೆ.ಆದ್ದರಿಂದ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿಕೊಡುವ ಉದ್ದೇಶದಿಂದ ಹೊಟೇಲ್ ಮೆನೇಜ್ ಮೆಂಟ್ ಕೋರ್ಸ್ ತುಂಬಾ ಅಗತ್ಯವಾಗಿದೆ. ಸದ್ಯದಲ್ಲಿಯೇ ಕೆಐಡಿಬಿ ಹಾಗೂ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುತ್ತದೆ.ಇದರಿಂದ ನಿರುದ್ಯೋಗ ಯುವಜನರಿಗೆ ಅನುಕೂಲವಾಗುತ್ತದೆ ಎಂದರು.
ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಅಶೋಕ್ಸಂಗಪ್ಪ ಅಲೂರ ಮಾತನಾಡಿ, ವಿದ್ಯಾವಂತ ನಿರುದ್ಯೋಗಿ ಯುವಜನರು ಉದ್ಯೋಗ ಹುಡಿಕೊಂಡು ಹೋಗುವ ಬದಲು ಉದ್ಯೋಗಗಳನ್ನು ಸೃಷ್ಟಿಸುವಂತ ಸೃಷ್ಟಿಕರ್ತ ಯುವ ಶಕ್ತಿ ಆಗಬೇಕು. ಎಲ್ಲಾ ನಿರುದ್ಯೋಗ ಯುವ ಜನತೆಗೆ ಕೌಶಲ್ಯ, ತರಬೇತಿ ಹಾಗೂ ಉದ್ಯೋಗ ಕಲ್ಪಿಸಲು ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಹಮ್ಮಿಕೊಂಡಿದೆ ಎಂದರು.

ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷವಿ.ಪಿ.ಶಶಿಧರ್ ಮಾತನಾಡಿ,ನಿರುದ್ಯೋಗ ವಿದ್ಯಾವಂತ ಯುವಜನರಿಗೆ ಉದ್ಯೋಗ ಕಲ್ಪಿಸಿಕೊಡಬೇಕು.ಜೊತೆಗೆ ಅರ್ಥಪೂರ್ಣ ಬದುಕು ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ಕೌಶಲ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಹುತೇಕ ಫಲಾನುಭವಿಗಳಿಗೆ ಮಾರ್ಗದರ್ಶನದ ಕೊರತೆ ಎದುರಾಗಿದ್ದು, ಈ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕೊಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಿಕ್ಷಣ ತಜ್ಞ ಬೆಂಗಳೂರಿನ ಎ.ಹೆಚ್.ಸಾಗರ್ ಅವರು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ತಾರ್ಕಿಕ ಉದ್ಯಮ ಶೀಲತೆ ಅಭಿವೃದ್ಧಿ ಕುರಿತು ಯುವ ಜನರೊಂದಿಗೆ ಸಂವಾದ ನಡೆಸಿದರು. ಸಂಪನ್ಮೂಲ ವ್ಯಕ್ತಿ ಡಿ.ಕೆ.ಮಹೇಶ್ ಕುಮಾರ್ ಅವರು ಕೊಡಗಿನ ಪದವಿಧರರಿಗೆ ವೃತ್ತಿ ಜೀವನ. ಉದ್ಯೋಗಾವಕಾಶಗಳು, ಉದ್ಯಮಶೀಲತೆ ಮತ್ತು ಉನ್ನತ ಶಿಕ್ಷಣ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭ ಕೊಡಗು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪೊ.ಎಂ.ಸುರೇಶ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಣಾಧಿಕಾರಿ ಕೆ.ಸಿ.ಅಪ್ಪಣ್ಣ,ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕೆ.ಸಿ.ಭೀಮಯ್ಯ,ಕೆಪಿಸಿಸಿ ಸದಸ್ಯ ಎಚ್.ಕೆ.ನಟೇಶ್ ಗೌಡ,ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಜಿಲ್ಲಾ ಅಧಿಕಾರಿ ಮಂಜುನಾಥ್, ಸಹಾಯಕ ಅಧಿಕಾರಿ ಮದನ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಸದಸ್ಯರಾದ ಮಲ್ಲಿಕಾರ್ಜುನ, ಎಂ. ಕಿಶೋರ್, ರಫಿಕ್, ಕೃಷ್ಣೇಗೌಡ, ರಾಜಶೇಖರ್, ಅಬ್ದುಲ್ ರಜಾಕ್, ಶ್ರೀನಿವಾಸ್, ವಿವೇಕಾನಂದ.ಎಂ.ಎ.ಆದಂ ಮತ್ತಿತರರು ಭಾಗವಹಿಸಿದ್ದರು.







