LatestNews

ಮಾಚಗೋನಹಳ್ಳಿಯಲ್ಲಿ ಅರಣ್ಯ ಕಡಿದು ತೆಂಗಿನ ಸಸಿ ನೆಟ್ಟು ಅತಿಕ್ರಮಣಕ್ಕೆ ಯತ್ನಿಸಿದ ಕಿಡಿಗೇಡಿಗಳು!

ಕೆ.ಆರ್.ಪೇಟೆ(ಶ್ರೀನಿವಾಸ್): ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮಾಚಗೋನಹಳ್ಳಿ ಗ್ರಾಮದ ಎಲ್ಲೆಯಲ್ಲಿರುವ ಸರ್ವೆ ನಂ. 23ರ ಅರಣ್ಯ ಭೂಮಿಯನ್ನು ಅತಿಕ್ರಮಿಸಲು ಯತ್ನಿಸಿರುವ ಆರೋಪ ಕೇಳಿಬಂದಿದೆ.

ರಾತ್ರೋರಾತ್ರಿ ಜೆಸಿಬಿ ಯಂತ್ರದ ಮೂಲಕ ಅರಣ್ಯ ಪ್ರದೇಶದಲ್ಲಿದ್ದ ವಿವಿಧ ಜಾತಿಯ ನೂರಾರು ಮರಗಳನ್ನು ನಾಶಪಡಿಸಿರುವ ದುಷ್ಕರ್ಮಿಗಳು, ಬಳಿಕ ತೆಂಗಿನ ಸಸಿಗಳನ್ನು ನೆಡುವ ಮೂಲಕ ಸುಮಾರು ಎರಡು ಎಕರೆಯಷ್ಟು ಅರಣ್ಯ ಭೂಮಿಯನ್ನು ಕಬಳಿಸಲು ಯತ್ನಿಸಿದ್ದಾರೆ ಎಂದು ಮಾಚಗೋನಹಳ್ಳಿ  ಗ್ರಾಮಸ್ಥರು ಆರೋಪಿಸಿದ್ದಾರೆ.

ಅರಣ್ಯ ಪ್ರದೇಶಕ್ಕೆ ಅತಿಕ್ರಮಣ ಮಾಡಿ ಬೆಲೆಬಾಳುವ ಮರಗಳನ್ನು ನಾಶ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಾಚಗೋನಹಳ್ಳಿ ಗ್ರಾಮಕ್ಕೆ ಸೇರಿದ ಅರಣ್ಯ ಪ್ರದೇಶವನ್ನು ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ, ಅರಣ್ಯ ನಾಶ ಮಾಡಿರುವ ಸ್ಥಳದಲ್ಲಿಯೇ ಮಾಚಗೋನಹಳ್ಳಿ ಗ್ರಾಮದ ರೈತರು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಬಂಧಪಟ್ಟ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಅರಣ್ಯ ನಾಶ ಮಾಡಿ ಸರ್ಕಾರಿ ಭೂಮಿಯನ್ನು ಕಬಳಿಸಲು ಯತ್ನಿಸಿರುವ ಮಾಚಗೋನಹಳ್ಳಿ ಗ್ರಾಮದ ಎಂ.ವಿ. ಕುಮಾರ್ ಎಂಬಾತನ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಈತನ  ಎಫ್‌ಐಆರ್ ದಾಖಲಿಸಿ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಮಾಚಗೋನಹಳ್ಳಿ ಗ್ರಾಮಸ್ಥರು ಸ್ಥಳದಲ್ಲಿಯೇ ಧರಣಿ ನಡೆಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ವಿ. ಅನಿಲ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎಸ್. ಬೋರಲಿಂಗೇಗೌಡ, ಎಂ.ಕೆ. ಯೋಗೇಂದ್ರ, ದಿಲೀಪ್, ಶ್ರೀಧರ್, ಜಗದೀಶ್, ರಾಜೇಗೌಡ, ದೇವರಾಜು, ರವಿಯಣ್ಣ, ಗೋಪಾಲ್, ಕಾಂತರಾಜು, ಚೇತನ್, ಮಂಜು ಮರೀಗೌಡ, ಪ್ರಸನ್ನ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದಾರೆ

admin
the authoradmin

Leave a Reply