ಒಂದು ಕಾಲದಲ್ಲಿ ಮಳೆಗಾಲದಲ್ಲಿ ಕೊಡಗಿನತ್ತ ಜನ ಬರಲು ಭಯಪಡುತ್ತಿದ್ದರು. ಆದರೆ ಬದಲಾದ ಕಾಲದಲ್ಲಿ ಮಳೆಗಾಲದಲ್ಲಿಯೇ ಪ್ರವಾಸಿಗರು ಇತ್ತ ಮುಖ ಮಾಡುತ್ತಿದ್ದಾರೆ. ಇಲ್ಲಿನ ಮಳೆಯಲ್ಲಿ ಮಿಂದೆದ್ದು, ನಡುಗುವ ಚಳಿಯಲ್ಲಿ ಬಿಸಿ, ಬಿಸಿ ಕಾಫಿ ಕುಡಿದು ಖುಷಿ ಪಡುತ್ತಾರೆ. ಅಷ್ಟೇ ಅಲ್ಲದೆ, ಇಲ್ಲಿರುವ ಜಲಧಾರೆಗಳ ಭೋರ್ಗರೆತ ನೋಡಿ ಖುಷಿಪಡುತ್ತಿದ್ದಾರೆ.
ಈ ಬಾರಿ ವರುಣ ಮೋಸ ಮಾಡಿಲ್ಲ. ಬೇಸಿಗೆಯಲ್ಲಿ ಆಗೊಮ್ಮೆ ಈಗೊಮ್ಮೆ ದಯಪಾಲಿಸಿದ್ದರಿಂದ ನಿಸರ್ಗ ನಿಟ್ಟುಸಿರು ಬಿಟ್ಟಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೆ ಆರ್ಭಟಿಸಿದ ರೋಹಿಣಿ ಮಳೆ ನಡು ಮಳೆಗಾಲಕ್ಕೆ ಕರೆದುಕೊಂಡು ಹೋಗಿದೆ. ಈಗಿನ ಪರಿಸ್ಥಿತಿಯನ್ನು ಸಾಮಾನ್ಯವಾಗಿ ಜೂನ್ ಅಥವಾ ಜುಲೈ ತಿಂಗಳಲ್ಲಷ್ಟೇ ನೋಡಲು ಸಾಧ್ಯವಿತ್ತು. ಆದರೆ ಈ ಬಾರಿ ಮೇ ತಿಂಗಳ ಅಂತ್ಯದಲ್ಲಿಯೇ ನೋಡುವಂತಾಗಿದೆ.
ಬಹುಶಃ ಈ ರೀತಿಯಲ್ಲಿ ಮಳೆ ಸುರಿದಿದ್ದನ್ನು ಯಾರೂ ನೋಡಿಲ್ಲ. ಆದರೆ ಈ ಬಾರಿ ಯಾರು ನೋಡಿರದ ಮತ್ತು ಊಹಿಸದ ಘಟನೆಗೆ ಕೊಡಗು ಸಾಕ್ಷಿಯಾಗಿದೆ. ಈಗಾಗಲೇ ದೇಶ, ರಾಜ್ಯ ಹೀಗೆ ಎಲ್ಲೆಡೆ ಮಳೆ ಸುರಿಯುತ್ತಿದೆ. ಮಳೆಗೆ ಇಡೀ ನಿಸರ್ಗ ತೊಯ್ದು ಹಸಿರಿನಿಂದ ಕಂಗೊಳಿಸುತ್ತಿದೆ. ಪ್ರಕೃತಿಯ ನೋಟ ಕಣ್ಣಿಗೊಂದು ಹಬ್ಬದಂತೆ ಗೋಚರಿಸುತ್ತಿದೆ. ಇದೀಗ ಕೊಡಗು ಸೇರಿದಂತೆ ಮಲೆ ನಾಡಿನತ್ತ ತೆರಳುವ ಪ್ರವಾಸಿಗರಿಗೇನು ಕೊರತೆಯಿಲ್ಲ.
ಜಲಸ್ಥಳಗಳಲ್ಲಿ ಎಲ್ಲೆ ಮೀರಿ ವರ್ತಿಸದಂತೆ, ನೀರಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಸದ್ಯ ಜಿಲ್ಲೆಯ ಪ್ರಮುಖ ಜಲಪಾತಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಜಲಧಾರೆಗಳ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಂಡು, ಮೊಬೈಲ್ ನಲ್ಲಿ ಚಿತ್ರಗಳನ್ನು ಸೆರೆಹಿಡಿದು ಖುಷಿಪಡುತ್ತಿದ್ದಾರೆ. ಹಾಗೆ ಸುಮ್ಮನೆ ಕೊಡಗಿನ ನಿಸರ್ಗದತ್ತ ನೋಟ ಬೀರಿದರೆ ಪ್ರಕೃತಿಯೇ ಸುಂದರ ಕಾವ್ಯ ಬರೆದಂತೆ ಗೋಚರಿಸುತ್ತಿದೆ.
ಕುಂಭದ್ರೋಣ ಮಳೆಗೆ ಇಡೀ ಕೊಡಗು ಹಸಿರಾಗಿದ್ದು, ಅದು ಸೃಷ್ಟಿಸಿ ಸುಂದರತೆ ಕಣ್ಣಿಗೆ ರಾಚುತ್ತಿದೆ.. ಈಗ ನೋಡಿದಲ್ಲೆಲ್ಲ ಹಸಿರು ತುಂಬಿದ ಅನುಭವವಾಗುತ್ತಿದೆ. ಮೋಡದ ಮುಸುಕು ಸರಿಸಲೇನೋ ಎಂಬಂತೆ ಆಗೊಮ್ಮೆ ಈಗೊಮ್ಮೆ ಸುರಿಯುವ ಮಳೆ… ಬೆಟ್ಟಗುಡ್ಡ, ಗಿಡ ಮರಗಳ ನಡುವಿನಿಂದ ಭೂತಾಕಾರವಾಗಿ ಎದ್ದು ನಿಂತು ತುರ್ತು ಕೆಲಸವಿದೆಯೇನೋ ಎಂಬ ಲಾಗ ಹೊಡೆಯುವ ಮಂಜು ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತಿದೆ.
ಮುಂಗಾರಿಗೆ ಹಸಿರ ಸೀರೆಯುಟ್ಟು ಅಲಂಕೃತಗೊಂಡ ವಧುವಿನಂತೆ ಇಡೀ ಕೊಡಗು ಕಂಗೊಳಿಸುತ್ತಿದೆ. ಈ ಸುಂದರತೆಯನ್ನು ಮನಸಾರೆ ಸವಿಯಲೆಂದೇ ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಮೂರ್ನಾಲ್ಕು ದಶಕಗಳಿಗೆ ಹೋಲಿಸಿದರೆ ಇತ್ತೀಚೆಗಿನ ದಿನಗಳಲ್ಲಿ ಕೊಡಗು ಅಭಿವೃದ್ಧಿಯಾಗುತ್ತಿದೆ. ಕೇವಲ ಕೃಷಿಯನ್ನಷ್ಟೆ ಅವಲಂಬನೆಯಾಗಿದ್ದವರು ಅದರಾಚೆಗೆ ವ್ಯಾಪಾರ, ವ್ಯವಹಾರ, ಉದ್ಯಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೃಷಿ ಸುತ್ತ ಬದುಕು ಕಟ್ಟಿಕೊಂಡಿದ್ದವರು ಇದೀಗ ಬೇರೆ ಉದ್ಯಮಗಳನ್ನು ನಡೆಸುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಇದಕ್ಕೆಲ್ಲ ಕಾರಣವಾಗಿರುವುದು ಪ್ರವಾಸೋದ್ಯಮದ ಚೇತರಿಕೆಯಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ.
ಒಂದು ಕಾಲದಲ್ಲಿ ಮಳೆಗಾಲದಲ್ಲಿ ಇತ್ತ ಬರಲು ಪ್ರವಾಸಿಗರು ಭಯಪಡುತ್ತಿದ್ದರು. ಆದರೀಗ ಮಳೆಗಾಲದಲ್ಲಿಯೂ ಪ್ರವಾಸಿಗರು ಪ್ರವಾಸಿ ತಾಣಗಳಲ್ಲಿ ಕಾಣಿಸುತ್ತಿದ್ದಾರೆ. ಮಲೆನಾಡಿನ ಮಳೆಗಾಲದ ಸುಂದರ ಕ್ಷಣಗಳನ್ನು ಸವಿಯಲು ದೂರದ ಊರುಗಳಿಂದ ಬರುತ್ತಿದ್ದಾರೆ. ಹಾಗೆ ಬಂದವರು ಇಲ್ಲಿನ ಹೋಂಸ್ಟೇಗಳಲ್ಲಿ ಒಂದಷ್ಟು ಕಾಲ ಕಳೆದು ಇಲ್ಲಿನ ತಂಪಾದ ವಾತಾವರಣದಲ್ಲಿ ಒಂದಷ್ಟು ಸಮಯ ಕಳೆದು ಹೋಗುತ್ತಿದ್ದಾರೆ.
ಕೊಡಗಿನ ಮಟ್ಟಿಗೆ ಹೇಳುವುದಾದರೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಇಲ್ಲಿ ಕೃಷಿ ಚಟುವಟಿಕೆಗಳು ಗ
ರಿಗೆದರುತ್ತವೆ. ಭತ್ತದ ಕೃಷಿಯಿಂದ ಕಾಫಿ ತೋಟದ ಕೆಲಸದವರೆಗೆ ಒಂದಲ್ಲ ಒಂದು ಕೆಲಸಗಳು ನಡೆಯುತ್ತಲೇ ಇರುತ್ತವೆ. ಈ ವರ್ಷ ಒಮ್ಮೆಲೆ ಮಳೆ ಸುರಿದಿದ್ದರಿಂದ ಕೃಷಿ ಚಟುವಟಿಕೆ ಕುಂಠಿತವಾಗಿದೆ. ಆದರೆ ಭತ್ತದ ಕೃಷಿ ಮಾಡುವವರಿಗೆ ಖುಷಿಕೊಟ್ಟಿದೆ. ಇದೆಲ್ಲದರ ನಡುವೆ ಅಲ್ಲಲ್ಲಿ ಅನಾಹುತಗಳನ್ನು ಸೃಷ್ಟಿಸಿದೆ.
ಈಗೀಗ ಕೊಡಗಿನಲ್ಲಿ ಮಳೆ ಸುರಿದರೆ ಅನಾಹುತಗಳಂತು ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಅಲ್ಲಲ್ಲಿ ಮರ ಮುರಿದು ಬೀಳುವುದು, ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಮಾಮೂಲಾಗಿದೆ. ಹೀಗಾಗಿ ಕೊಡಗಿನತ್ತ ತೆರಳುವ ಪ್ರವಾಸಿಗರು ಎಚ್ಚರಿಕೆ ವಹಿಸ ಬೇಕಾಗುತ್ತದೆ. ಅಷ್ಟೇ ಅಲ್ಲದೆ ನೀರಿಗೆ ಇಳಿಯುವುದು ಇನ್ನಿತರ ಹುಚ್ಚಾಟಗಳನ್ನು ಆಡದಿದ್ದರೆ ಮಳೆಗಾಲದ ಪ್ರವಾಸ ಬೆಚ್ಚಗಿರಲು ಸಾಧ್ಯವಾಗಲಿದೆ.
B.M.Lavakumar