ಇತ್ತೀಚೆಗೆ ಕೊಡಗು ಜಿಲ್ಲೆಯ ಹಲವು ಕಡೆ ತುಕ್ಕು ಹಿಡಿದ ಮತ್ತು ಅವಧಿ ಮೀರಿದ ಗ್ಯಾಸ್ ಸಿಲಿಂಡರ್ ಗಳು ಪೂರೈಕೆಯಾಗುತ್ತಿವೆ ಎಂದು ಸಾರ್ವಜನಿಕರು ವಿವಿಧ ವಾಟ್ಸಾಪ್ ಗ್ರೂಪ್ ಗಳಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಕೇವಲ ಒಂದು ದೂರಲ್ಲ, ಇದು ಗ್ರಾಹಕರ ಜೀವ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ.
ಅಡುಗೆ ಮನೆಯಲ್ಲಿ ಬಳಸುವ ಸಿಲಿಂಡರ್ ದುಸ್ಥಿತಿಯಲ್ಲಿದ್ದರೆ, ಒಂದು ಸಣ್ಣ ಸೋರಿಕೆ ಸಾಕು ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಈಗಾಗಲೇ ಹಲವು ಕಡೆ ಸಣ್ಣ ಪ್ರಮಾಣದ ಗ್ಯಾಸ್ ಸೋರಿಕೆಯ ಘಟನೆಗಳು ವರದಿಯಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ನೈಜ ಧ್ವನಿ ವತಿಯಿಂದ ಜಿಲ್ಲಾಡಳಿತ ಹಾಗೂ ಎಲ್ಲಾ ಗ್ಯಾಸ್ ಏಜೆನ್ಸಿಗಳಲ್ಲಿ ನಮ್ಮ ಕಳಕಳಿಯ ಮನವಿ.
ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ, ಜಿಲ್ಲೆಯಲ್ಲಿ ತುಕ್ಕು ಹಿಡಿದ ಹಾಗೂ ಅವಧಿ ಮೀರಿದ ಗ್ಯಾಸ್ ಸಿಲಿಂಡರ್ ಗಳ ಪೂರೈಕೆಯನ್ನು ಕಟ್ಟುನಿಟ್ಟಾಗಿ ಬ್ಯಾನ್ ಮಾಡಬೇಕು. ಸುಸ್ಥಿತಿಯಲ್ಲಿರುವ ಮತ್ತು ಸುರಕ್ಷತಾ ಪರೀಕ್ಷೆಗೆ ಒಳಗಾದ ಸಿಲಿಂಡರ್ ಗಳು ಮಾತ್ರ ಗ್ರಾಹಕರಿಗೆ ತಲುಪುವಂತೆ ನೋಡಿಕೊಳ್ಳಬೇಕು ಮತ್ತು ಈ ಕುರಿತು ತನಿಖೆ ನಡೆಸಬೇಕು.

ಹಾಗೆಯೇ ಗ್ರಾಹಕರ ತುರ್ತು ಸೇವೆಗಾಗಿ ಜಿಲ್ಲಾಡಳಿತ ಮತ್ತು ಎಲ್ಲಾ ಗ್ಯಾಸ್ ಏಜೆನ್ಸಿಗಳು ತಮ್ಮ ಸಹಾಯವಾಣಿ ನಂಬರ್ ಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇದರಿಂದ ಸಾರ್ವಜನಿಕರಿಗೆ ತಕ್ಷಣ ದೂರು ನೀಡಲು ಮತ್ತು ಸುರಕ್ಷತಾ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ. ಗ್ರಾಹಕರು ಸಹ ಜಾಗೃತರಾಗಿರಬೇಕು. ಸಿಲಿಂಡರ್ ಸ್ವೀಕರಿಸುವಾಗ ಅದರ ಸ್ಥಿತಿಯನ್ನು ಪರಿಶೀಲಿಸಿ, ದುಸ್ಥಿತಿಯಲ್ಲಿದ್ದರೆ ಸ್ವೀಕರಿಸಬೇಡಿ ಮತ್ತು ತಕ್ಷಣ ಸಂಬಂಧಪಟ್ಟ ಏಜೆನ್ಸಿಗೆ ಮಾಹಿತಿ ನೀಡಿ. ಜನರ ಸುರಕ್ಷತೆಗಿಂತ ದೊಡ್ಡದೇನೂ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಎಚ್ಚೆತ್ತುಕೊಳ್ಳಲಿ ಎಂದು ಆಶಿಸುತ್ತೇವೆ.









