ಹೆಣ್ಣು ಮಕ್ಕಳೇ ಹುಷಾರ್… ಆಮಿಷಕ್ಕೆ ಬಲಿಯಾದರೆ ಸಂಕಷ್ಟ ತಪ್ಪಿದಲ್ಲ… ಮಾನವ ಸಾಗಾಣಿಕೆ ಜಾಲ ತಡೆಯುವುದು ಹೇಗೆ?

ಮಾನವ ಸಾಗಾಣಿಕೆ ಜಾಲ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಈಗೀಗ ಆಮಿಷಗಳ ಮೂಲಕ ಹೆಣ್ಣುಮಕ್ಕಳನ್ನು ಸೆಳೆದು ವಂಚಿಸಿ ಅವರನ್ನು ತಮ್ಮ ಜಾಲದಲ್ಲಿ ಸಿಲುಕಿಸುವುದು ಸುಲಭವಾಗಿದೆ. ಹೆಣ್ಣು ಮಕ್ಕಳು ಎಚ್ಚರಿಕೆ ವಹಿಸದೆ ಹೋದರೆ ಇಂತಹ ಜಾಲಗಳಲ್ಲಿ ಸಿಲುಕಿ ನರಕವನ್ನು ಅನುಭವಿಸಬೇಕಾಗುತ್ತದೆ. ಬಹಳಷ್ಟು ಪ್ರಕರಣಗಳು ನಾಪತ್ತೆಯಲ್ಲಿಯೇ ಮುಗಿದು ಹೋಗುತ್ತದೆ. ಹಾಗಾದರೆ ನಾಪತ್ತೆಯಾಗುವ ಹೆಣ್ಣು ಮಕ್ಕಳು ಏನಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಬಹಳಷ್ಟು ಸಲ ಉತ್ತರಗಳೇ ಸಿಗುವುದಿಲ್ಲ.
ಇವತ್ತು ಒಂದಲ್ಲ ಒಂದು ಕಡೆ ಬಾಲಕಿಯರು, ಯುವತಿಯರು, ಮಹಿಳೆಯರು ನಾಪತ್ತೆಯಾಗುತ್ತಿರುವ ಪ್ರಕರಣಗಳು ನಾಪತ್ತೆ ಕಾಲಂಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಅವುಗಳನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವುಗಳನ್ನು ಕೇವಲ ನಾಪತ್ತೆ ಪ್ರಕರಣವಾಗಿ ನೋಡದೆ ಆಳವಾಗಿ ನೋಡಿದ್ದೇ ಆದರೆ ಅದರ ಹಿಂದೆ ಮಾನವ ಸಾಗಾಣಿಕೆಯ ಕರಿನೆರಳು ಇರುವುದು ಗೊತ್ತಾಗಿ ಬಿಡುತ್ತದೆ. ಇಲ್ಲಿ ಮುಖ್ಯವಾಗಿ ಮನೆ ಬಿಟ್ಟು ಹೋಗುವ ಹೆಣ್ಮಕ್ಕಳು ಆ ನಂತರ ಏನಾಗುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ.
ಮಾನವಸಾಗಾಣಿಕೆ ಎನ್ನುವುದು ಇವತ್ತು ನಿನ್ನೆಯದಲ್ಲ. ಅದು ಹಿಂದಿನಿಂದಲೂ ಬಂದಿದ್ದು ಈಗಲೂ ಮುಂದುವರೆಯುತ್ತಿದೆ. ಇದರ ತಡೆಗೆ ಹತ್ತು ಹಲವು ಕ್ರಮಗಳನ್ನು ಕೈಗೊಂಡರೂ ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸಾಧ್ಯವಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಮಾನವ ಸಾಗಾಣಿಕೆ ಬಗ್ಗೆ ನೋಡಿದ್ದೇ ಆದರೆ ಮನುಷ್ಯ ಮನುಷ್ಯನನ್ನ ಒಂದು ನಿರ್ದಿಷ್ಟ ಸ್ಥಳದಿಂದ ಬೇರೆ ಕಡೆಗೆ ಅಸ್ವಾಭಾವಿಕ ಕಾರಣಗಳಿಗಾಗಿ ವರ್ಗಾಹಿಸುವುದು, ಮಾರುವುದು, ಬಲವಂತವಾಗಿ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಕಳುಹಿಸುವುದು ಇವೆಲ್ಲವೂ ಮಾನವ ಸಾಗಾಣಿಕೆಯೇ..
ಈ ಮಾನವ ಸಾಗಾಣಿಕೆಯು ಹಲವಾರು ಅಂಶಗಳನ್ನು ಒಳಗೊಂಡಿರುವುದನ್ನು ನಾವು ಕಾಣಬಹುದಾಗಿದೆ. ಈ ಮಾನವಸಾಗಾಣಿಕೆ ಜೀವಂತವಾಗಿರಲು ಕಾರಣಗಳೇನು ಇರಬಹುದು ಎಂಬುದನ್ನು ನೋಡಿದ್ದೇ ಆದರೆ, ನಿರುದ್ಯೋಗ ಬಹುಮುಖ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ಅತಿಹೆಚ್ಚಾಗಿದ್ದು ಅದರಲ್ಲಿ ಮಹಿಳಾ ನಿರುದ್ಯೋಗಿಗಳ ಸಂಖ್ಯೆ ಅಧಿಕವಾಗಿದೆ. ಸರಳ ಶಿಕ್ಷಣ, ಸಾಂಪ್ರಾದಾಯಿಕ ಹಿನ್ನಲೆಗಳಿಂದಾಗಿ ಉದ್ಯೋಗಿಗಳ ಬಗ್ಗೆ ಸೂಕ್ತ ಮಾಹಿತಿಯಿಲ್ಲದೇ ಹೆಣ್ಣು ಮಕ್ಕಳು ಪ್ರತಿನಿತ್ಯ ಉದ್ಯೋಗ ಹುಡುಕಲು ಹರಸಾಹಸ ಪಡುತ್ತಿರುತ್ತಾರೆ.
ಇಂತಹ ಸಂದರ್ಭಗಳಲ್ಲಿ ವಿದೇಶದಲ್ಲಿ ಉದ್ಯೋಗದ ಸುಳ್ಳು ಜಾಹೀರಾತು ನೀಡುತ್ತಾರೆ. ಈ ವೇಳೆ ಉದ್ಯೋಗ ಪಡೆಯುವ ಆಸೆಯಿಂದ ಬರುವ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದು, ಅಪರಿಚಿತ ವ್ಯಕ್ತಿಗಳೊಂದಿಗೆ, ಅಪರಿಚಿತ ಸ್ಥಳಗಳಿಗೆ ಸಾಗಾಣಿಕೆ ಮಾಡುತ್ತಾರೆ. ಆದರೆ ವಾಸ್ತವ ಸ್ಥಿತಿಯ ಅರಿವು ಆಗುವುದರೊಳಗೆ ಮಾನವ ಸಾಗಾಣಿಕೆಯ ಕಬಂಧ- ಬಾಹುವಿನೊಳಗೆ ಬಂಧಿಯಾಗಿ ಬಿಡುತ್ತಾರೆ.
ಇನ್ನು ಬಣ್ಣದ ಪ್ರಪಂಚ ಎಂತಹವರನ್ನು ಅತೀ ಸುಲಭವಾಗಿ ಆಕರ್ಷಣೆ ಮಾಡಿಬಿಡುತ್ತದೆ. ಅದರಲ್ಲೂ ಅದೆಷ್ಟೋ ಮುಗ್ದ ಯುವತಿಯರು ಸಿನಿಮಾಗಳಲ್ಲಿ ಬರುವ ನಾಯಕಿಯರಂತೆ ತಮ್ಮನ್ನು ಹೋಲಿಸಿಕೊಂಡು ಕನಸು ಕಾಣುವುದರಲ್ಲಿ ಅದೆಷ್ಟೋ ಸಮಯವನ್ನ ಕಳೆಯುತ್ತಿರುತ್ತಾರೆ. ಅಂತಹವರಿಗೆ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತು ಅಥವಾ ತಮ್ಮನ್ನು ಸಿನಿಮಾಕ್ಕೆ ಸೇರಿಸುತ್ತೇವೆಂದು ಹೇಳುವ ವ್ಯಕ್ತಿಗಳು ಅತ್ಯಂತ ಆಪ್ತರೆನಿಸಿರುತ್ತಾರೆ. ಹಿಂದೆ-ಮುಂದೆ ಯೋಚನೆ ಮಾಡದೇ ಇಂತಹ ವ್ಯಕ್ತಿಗಳೊಟ್ಟಿಗೆ ನಗರ ಪ್ರವೇಶಿಸುವ ಯುವತಿಯರು ಮಾನವ ಸಾಗಾಣಿಕೆಯ ಕೂಪದೊಳಗೆ ಸಿಲುಕುತ್ತಾರೆ. ಮುಂದೆ ಅವರನ್ನು ವೇಶ್ಯಾವಾಟಿಕೆಗೆ ತಳ್ಳಿದರು ಅಚ್ಚರಿಯಿಲ್ಲ.
ಬಡತನದಲ್ಲಿರುವ ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸುವುದು ಬಹು ಸುಲಭ. ಅದರ ಜತೆಗೆ ಅನಕ್ಷರತೆಯೂ ಮಾನವಸಾಗಾಣಿಕೆಗೆ ಇನ್ನಷ್ಟು ಪುಷ್ಠಿ ನೀಡುತ್ತದೆ. ಗ್ರಾಮೀಣ ಯುವತಿಯರು ತಾವು ಕೇಳಿದ್ದು ನೋಡಿದ್ದು ಸತ್ಯವೆಂದು ಭ್ರಮಿಸುತ್ತಾ ಕಲ್ಪನಾ ಬದುಕನ್ನ ಸಾಗಿಸುತ್ತಿರುತ್ತಾರೆ. ಸತ್ಯ-ಸತ್ಯತೆಗಳ ಯಾವುದೇ ಅರಿವು ಅವರಿಗೆ ಇರುವುದಿಲ್ಲ. ತಾವು ಉತ್ತಮ ಜೀವನ ನಡೆಸಬೇಕು ಎಂಬ ಕನಸು ಕಾಣುವ ಅವರು ಅತೀ ಸುಲಭವಾಗಿ ಪಟ್ಟಣದ ಬದುಕಿಗೆ ಮಾರುಹೋಗುತ್ತಾರೆ. ತಮಗೆ ಅರಿವು ಬರುವುದಕ್ಕೆ ಮುಂಚೆಯೇ ಮಾನವ ಸಾಗಾಣಿಕೆಯ ವ್ಯವಸ್ಥಿತ ಜಾಲದಲ್ಲಿ ಸೆರೆಯಾಗುತ್ತಾರೆ
ಅದೆಷ್ಟೊ ಅವಿದ್ಯಾವಂತ ಹೆಣ್ಣು ಮಕ್ಕಳು ಕೆಲಸಕ್ಕೆಂದು ರಾಜ್ಯದಿಂದ ರಾಜ್ಯಕ್ಕೆ, ರಾಷ್ಟ್ರದಿಂದ ರಾಷ್ಟ್ರಕ್ಕೆ ಸಾಗಾಣಿಕೆಗೆ ಒಳಪಟ್ಟು, ಅಲ್ಲಿ ವೇಶ್ಯಾವಾಟಿಕೆಗೆ ಸಿಲುಕಿ ಅದರಿಂದ ಈಚೆ ಬರಲಾಗದಂತೆ ಬಳಲಿ ಹೋಗುತ್ತಾರೆ. ಇದರಾಚೆಗೆ ಪ್ರೀತಿ, ಪ್ರೇಮದ ಹೆಸರಿನಲ್ಲೂ ಮಹಾ ವಂಚನೆಯೇ ನಡೆದು ಹೋಗುತ್ತದೆ ಹದಿಹರೆಯದ ಹುಡುಗಿಯರನ್ನು ಪ್ರೀತಿ, ಪ್ರೇಮದ ಹೆಸರಲ್ಲಿ ಸೆಳೆದು ಅವರನ್ನು ಮನೆಯಿಂದ ಹೊರಕ್ಕೆ ಬರುವಂತೆ ಮಾಡಿ ಸುಲಭವಾಗಿ ಮಾನವ ಸಾಗಾಣಿಕೆ ತಳ್ಳಲಾಗುತ್ತದೆ.
ಅಂಕಿ ಅಂಶಗಳ ಆಧಾರದಲ್ಲಿ ನೋಡಿವುದಾದರೆ ಪ್ರತಿಶತ 20 ರಿಂದ 30 ಮಂದಿ ಪ್ರೀತಿ-ಪ್ರೇಮದಿಂದಾಗಿ ಮಾನವ ಸಾಗಾಣಿಕೆಗೆ ಜಗತ್ತಿನಾದ್ಯಂತ ಒಳಪಡುತ್ತಿದ್ದಾರೆ. ತನ್ನದಲ್ಲದ ಜಾತಿಯವರನ್ನು, ತನ್ನದಲ್ಲದ ಧರ್ಮದವರನ್ನು, ತನಗೆ ಸರಿಹೊಂದದ ಅಂತಸ್ತಿನವರನ್ನ, ತನ್ನ ಪೋಷಕರು ಇಷ್ಟಪಡದವರನ್ನ, ಪ್ರೇಮಿಸುವ ಹುಡುಗ ಅಥವಾ ಹುಡುಗಿಯನ್ನು ಸಮಾಜದಿಂದ, ಸಂಬಂಧಿಕರಿಂದ, ಕುಟುಂಬದಿಂದ ದೂರಹೋಗಿ ಸ್ವತಂತ್ರ ಬದುಕನ್ನ ನಡೆಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗೆ ತೆಗೆದುಕೊಳ್ಳುವ ದುಡುಕು ತೀರ್ಮಾನಗಳಿಂದ ಮೋಸ ಹೋಗುತ್ತಾರೆ.
ಇದೆಲ್ಲದರ ನಡುವೆ ಪ್ರೇಮಿಸಿದ ವ್ಯಕ್ತಿಯು ತನ್ನ ಪ್ರೇಯಸಿಯನ್ನು ಮದುವೆಯಾಗುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಮತ್ತೊಬ್ಬರಿಗೆ ಮಾರಾಟ ಮಾಡುತ್ತಿರುವುದು ಕೂಡ ಹೊಸತೇನಲ್ಲ. ಅದೆಷ್ಟೋ ಹೆಣ್ಣು ಮಕ್ಕಳು ಇಂತಹ ನರಕ ಕೂಪದಲ್ಲಿ ಸಿಕ್ಕಿ ಮಾನವ ಸಾಗಾಣಿಕೆಗೆ ಒಳಗಾಗಿರುವುದನ್ನು ಹಲವಾರು ಸಂದರ್ಭಗಳಲ್ಲಿ ನಾವು ನೋಡಿದ್ದೇವೆ. ಜಾಗತಿಕ ಮಟ್ಟದಲ್ಲಿಯೂ ಇದೊಂದು ಸಮಸ್ಯೆ ಎಂದು ಪರಿಗಣಿಸಲ್ಪಟ್ಟಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಶಾಲಾ- ಕಾಲೇಜುಗಳಲ್ಲೂ, ಸಾರ್ವಜನಿಕ ಸ್ಥಳಗಳಲ್ಲೂ ಜಾಗತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾನವ ಸಾಗಾಣಿಕೆ ಕುರಿತಂತೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ.