ArticlesLatest

ಪರಿಸರದ ಪಾಠ ಪ್ರತಿ ಮನೆಯಿಂದಲೇ ಆರಂಭವಾಗಲಿ… ಮನೆಗೊಂದು ಗಿಡ ನೆಡೋಣ… ಅದನ್ನು ಉಳಿಸಿ ಬೆಳೆಸೋಣ.. ಏನಂತೀರಾ?

ಪರಿಸರ ಶುದ್ಧವಾಗಿರಬೇಕಾದರೆ ಪರಿಸರ ದಿನಾಚರಣೆ ನಡೆಸಿದರೆ ಸಾಲದು ಸದಾ ಪರಿಸರವನ್ನು ಕಾಪಾಡಿಕೊಳ್ಳುವ ಕೆಲಸವನ್ನು ನಾವು ಪ್ರತಿದಿನವೂ ಮಾಡಬೇಕಾಗಿದೆ. ಕೇವಲ ಗಿಡ ನೆಟ್ಟರೆ ಸಾಲದು ಅದನ್ನು ವರ್ಷಪೂರ್ತಿ ನೀರು ಗೊಬ್ಬರ ಹಾಕಿ ಬೆಳೆಸುವ ಕೆಲಸವಾಗಬೇಕಿದೆ.. ಅದರಾಚೆಗೆ ನಮ್ಮ ಸುತ್ತಮುತ್ತಲಿನ ಪರಿಸರದ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಇದಿಷ್ಟು ಮಾಡದೆ ಹೋದರೆ ಪರಿಸರ ದಿನಗಳಿಗೆ ಅರ್ಥವಿರುವುದಿಲ್ಲ.

ಜೂನ್ 5 ವಿಶ್ವ ಪರಿಸರ ದಿನಾಚರಣೆ.. ಇದಕ್ಕಾಗಿ ಸಿದ್ಧತೆಗಳು ಆರಂಭವಾಗಿವೆ. ಗಿಡನೆಡುವ ಕಾರ್ಯಗಳು ಭರದಿಂದ ಸಾಗಲಿವೆ. ಇದನ್ನು ನಾವು ಹಬ್ಬದಂತೆ ಆಚರಿಸುತ್ತಾ ಬರುತ್ತಿದ್ದೇವೆ. ಕಳೆದ ವರ್ಷ ನೆಟ್ಟ ಗಿಡ ಈ ವರ್ಷ ಏನಾಗಿದೆ ಎಂಬುದನ್ನು ನೋಡುವ ತಾಳ್ಮೆ ನಮಗಿಲ್ಲದಾಗಿದೆ. ಹೀಗಾಗಿ ಈ ದಿನ ಕೇವಲ ಆಚರಣೆಗಷ್ಟೆ ಸೀಮಿತವಾಗುತ್ತಿದೆಯಾ ಎಂಬ ಅನುಮಾನ ಮೂಡದಿರದು.  ಬೇರೆಲ್ಲ ದಿನಾಚರಣೆಗಳನ್ನು ಬದಿಗಿಟ್ಟು ನೋಡಿದರೆ ಪರಿಸರ ದಿನಾಚರಣೆ ಎಂಬುದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಅದು ದಿನನಿತ್ಯದ ಆಚರಣೆಯಾಗಿಸುವ ಜವಬ್ದಾರಿ ನಮ್ಮದಾಗಿದೆ.

ಒಂದೊಳ್ಳೆಯ ಪರಿಸರವಿದ್ದರೆ ಮಾತ್ರ ಜೀವ ಸಂಕುಲ ನೆಮ್ಮದಿಯಾಗಿ ಬದುಕಲು ಸಾಧ್ಯವಿದೆ. ಪರಿಸರವೆಂದರೆ ಹಸಿರು. ಆದರೆ ಇವತ್ತು ಆ ಹಸಿರಿಗೆ ಕಂಟಕ ಬಂದಿದೆ. ಅದನ್ನು ರಕ್ಷಿಸಿಕೊಳ್ಳಬೇಕಾದ ಅಗತ್ಯತೆ ನಮ್ಮ ಮುಂದಿದೆ. ನಾವೆಲ್ಲರೂ ಪರಿಸರದ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡಲು ಸಿದ್ದವಿದ್ದೇವೆ. ಮುಂದುವರೆದು ಒಂದು ಗಿಡನೆಟ್ಟು ಪ್ರಚಾರ ಪಡೆಯಲು ತಯಾರಿದ್ದೇವೆ. ಇಷ್ಟೆಲ್ಲ ಮಾಡಿದ ಮೇಲೆ ನೆಟ್ಟ ಗಿಡ ಏನಾಯಿತೆಂದು ನೋಡುವ ಸೌಜನ್ಯ ನಮ್ಮಲ್ಲಿಲ್ಲ. ಇವತ್ತು ಪರಿಸರ ಉಳಿಯ ಬೇಕಾದರೆ ನಮಗೆ ಬೇಕಾಗಿರುವುದು ನೆಡುವ ಗಿಡವಲ್ಲ. ನೆಟ್ಟಿದನ್ನು ಆರೈಕೆ ಮಾಡಿ ಉಳಿಸಿದ ಗಿಡಗಳ ಸಂಖ್ಯೆ ಎಂಬುದನ್ನು ನಾವು ಮರೆಯಬಾರದು.

ಈಗಾಗಲೇ ಅಭಿವೃದ್ಧಿ ನೆಪದಲ್ಲಿ ಪರಿಸರಕ್ಕೆ ಬಹಳಷ್ಟು ಹಾನಿ ಮಾಡಿದ್ದೇವೆ. ಅರಣ್ಯವನ್ನು ಅಕ್ರಮಿಸಿ ಬೋಳು ಮಾಡಿದ್ದೇವೆ. ನದಿಪಾತ್ರಗಳಲ್ಲಿ ಮರಳು ಬಗೆದು, ಬೆಟ್ಟಗುಡ್ಡಗಳಲ್ಲಿದ್ದ ಕಲ್ಲನ್ನು ಕರಗಿಸಿ, ಮರಗಳನ್ನು ಕಡಿದು ನಾಶ ಮಾಡಿದ್ದೇವೆ. ಸದ್ಯ ಕೆಲವೊಂದಕ್ಕೆ ನಿರ್ಬಂಧ ಹೇರಿರುವುದರಿಂದ ಸ್ವಲ್ಪ ಮಟ್ಟಿಗೆ ಉಳಿದುಕೊಂಡಿವೆ. ಇಲ್ಲದೆ ಹೋಗಿದ್ದರೆ ಇಷ್ಟರಲ್ಲೇ ಎಲ್ಲವನ್ನು ಕರಗಿಸಿ ರಣಕೇಕೆ ಹಾಕಿಬಿಡುತ್ತಿದ್ದ ಮಾನವ. ನಾವು ಇವತ್ತು ಪ್ರಕೃತಿ ವಿಕೋಪದ ಬಗ್ಗೆ ಬಾಯಿ ಬಡಿದುಕೊಳ್ಳುತ್ತಿದ್ದೇವೆ. ಆದರೆ ಅದಕ್ಕೆ ಕಾರಣ ನಾವು ಎಂಬುದನ್ನು ಮರೆಯುತ್ತಿದ್ದೇವೆ.

ನಮ್ಮ ಗ್ರಾಮಗಳಿಂದ ಆರಂಭವಾಗಿ ಜಗತ್ತಿನ ತನಕ ನೋಡಿದ್ದೇ ಆದರೆ ನಿನ್ನೆ ಇದ್ದದ್ದು ಇವತ್ತು ಇಲ್ಲದಂತಾಗಿದೆ. ನಾವು ಧರೆಗೆ ಉರುಳಿಸಿದ ಮರಗಿಡಗಳನ್ನು ನೋಡಿದರೆ ಅಷ್ಟು  ಮರ-ಗಿಡಗಳನ್ನು ನೆಟ್ಟಿದ್ದೇವಾ? ಒಂದು ವೇಳೆ ನೆಟ್ಟಿದ್ದರೂ ಅವುಗಳನ್ನು ಉಳಿಸಿ ಬೆಳೆಸುವ ಕಾಳಜಿ ವಹಿಸಿದ್ದೇವೆಯಾ? ಪರಿಸರದ ಬಗ್ಗೆ ಮಾತನಾಡುವ ನಾವು ಮನೆ ಮುಂದೆ ಯಾವುದಾದರೊಂದು ಗಿಡಕ್ಕೆ ಗೊಬ್ಬರ, ನೀರು ಹಾಕಿ ಆರೈಕೆ ಮಾಡಿದ್ದೇವಾ? ಹೋಗಲಿ ಕೊನೆ ಪಕ್ಷ ಒಂದು ಗಿಡವನ್ನು ಕುಂಡದಲ್ಲಿ ಬೆಳೆಸಿದ್ದೇವಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ.

ನಾವೆಲ್ಲರೂ ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಅವತ್ತು ಹೇಗಿತ್ತು? ಈಗ ಹೇಗಿದೆ? ಎಂಬುದು ಅರಿವಿಗೆ ಬರುತ್ತದೆ. ನಾವು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದೇವೆ. ಎಲ್ಲ ಸೌಲಭ್ಯಗಳು ಕಾಲಬುಡಕ್ಕೆ ಬರುವಂತಿರಬೇಕು. ಬಹಳಷ್ಟು ಸಲ ಅಭಿವೃದ್ಧಿ ಎನ್ನುವುದು ಪ್ರಕೃತಿ ಮೇಲಿನ ನಿರಂತರ ದೌರ್ಜನ್ಯದಂತೆ ಕಾಣಿಸುತ್ತದೆ. ಹೀಗಾಗಿ ಅಭಿವೃದ್ಧಿ ಕೂಡ ಪರಿಸರ ಪೂರಕವಾಗಿದ್ದರೆ ಚೆನ್ನಾಗಿರುತ್ತದೆ. ಇವತ್ತು ನಾವ್ಯಾರು ನೆಮ್ಮದಿಯಾಗಿಲ್ಲ ಇದಕ್ಕೆ ಕಾರಣ ನಮ್ಮ ಸುತ್ತಲಿನ ಪರಿಸರ ಉತ್ತಮವಾಗಿಲ್ಲದೆ ಕಲ್ಮಶವಾಗಿರುವುದು. ಸ್ವಚ್ಛತೆಯಂತು ಇಲ್ಲವೇ ಇಲ್ಲದಾಗಿದೆ.

ಜನಸಂಖ್ಯೆ ಹೆಚ್ಚುತ್ತಿದ್ದಂತೆ ಸ್ವಚ್ಛತೆ ಮಾಯವಾಗಿದೆ. ಪ್ಲಾಸ್ಟಿಕ್ ವಸ್ತುಗಳು ಪರಿಸರಕ್ಕೆ ಮಾರಕವಾಗಿದೆ. ಅವುಗಳನ್ನು ನಾವೇ ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುವ ಅಭ್ಯಾಸ ಮಾಡಿಕೊಂಡೆವು. ಇವತ್ತು ಪ್ಲಾಸ್ಟಿಕ್ ನಮ್ಮ ನಿತ್ಯ ಬಳಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಜತೆಗೆ ತ್ಯಾಜ್ಯ ವಸ್ತುವಾಗಿ ಪರಿಸರವನ್ನ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಹಾಗೆ ಸುಮ್ಮನೆ ಕುಳಿತು ಯೋಚಿಸಿ ನೋಡಿ. ನಮ್ಮ ಸುತ್ತಮುತ್ತಲಿನ ಪರಿಸರದಿಂದ ನಾವು ಎಷ್ಟೆಲ್ಲ ಉಪಯೋಗವನ್ನು ಪಡೆದುಕೊಂಡಿದ್ದರೂ ಪರಿಸರಕ್ಕೆ ನಾವು ನೀಡಿದ ಕೊಡುಗೆ ಮಾತ್ರ ಶೂನ್ಯ.

ಒಂದು ಉತ್ತಮ ಪರಿಸರ ನಿರ್ಮಾಣವಾಗಬೇಕಾದರೆ ಸ್ವಚ್ಛವಾಗಿರುವ ಪ್ರದೇಶ, ಸ್ವಚ್ಛವಾಗಿರುವ ಗಾಳಿ, ಬೆಳಕು ಮತ್ತು ಸುತ್ತಲೂ ಹಸಿರ ವಾತಾವರಣ ಬೇಕು. ಆದರೆ ಇದು ನಮ್ಮ ಸುತ್ತಮುತ್ತ ಇದೆನಾ? ಇಲ್ಲದೆ ಹೋದರೆ ಇದಕ್ಕೆ ಕಾರಣ ಯಾರು? ನಾವೇ ಅಲ್ಲವೆ? ಇನ್ನಾದರೂ ಪರಿಸರ ದಿನಾಚರಣೆ ವೇಳೆ ಕೇವಲ ಭಾಷಣ ಮಾಡುವುದರಿಂದ ಪ್ರಯೋಜನವಿಲ್ಲ. ಪರಿಸರ ರಕ್ಷಣೆ ಮಾಡಿ ಎಂದು ಕರೆನೀಡುವವರು ಹೆಚ್ಚು ಹೆಚ್ಚಾಗಿ ಕಾಣಿಸುತ್ತಾರೆ. ಆದರೆ ಅವರ ಅಗತ್ಯತೆಗಿಂತ ಪರಿಸರವನ್ನು ಕಾಪಾಡಲು ತನ್ನಿಂದ ಏನಾದರೂ ಸಾಧ್ಯನಾ ಎಂದು ಚಿಂತಿಸುವವರು ಬೇಕಾಗಿದ್ದಾರೆ.

ನಾವು ನಮ್ಮ ಮನೆಯಿಂದಲೇ ಪರಿಸರದ ಉಳಿವಿಗೆ ಅಭಿಯಾನ ಆರಂಭಿಸಬೇಕಿದೆ. ಮನೆಗೊಂದು ಗಿಡ ನೆಟ್ಟು ಪೋಷಿಸುತ್ತಾ ಮನೆ ಸುತ್ತಲಿನ ಸ್ವಚ್ಛತೆಗೆ ಆದ್ಯತೆ ನೀಡಿದರೆ ಸಾಕು.. ಪರಿಸರದ ಪಾಠ ಪ್ರತಿ ಮನೆಯಿಂದಲೇ ಆರಂಭವಾಗ ಬೇಕಿದೆ. ಅಂತಹದೊಂದು ಮನಸ್ಸು ಪ್ರತಿ ಮನೆಯಲ್ಲಿಯೂ ಹುಟ್ಟಬೇಕಿದೆ. ಆಗ ವಿಶ್ವ ಪರಿಸರ ದಿನಾಚರಣೆಗೆ ಅರ್ಥ ಬರುತ್ತದೆ. ಅದು ಸಾಧ್ಯವಾಗುವಂತೆ ನೋಡಿಕೊಳ್ಳುವುದು ನಮ್ಮಿಂದ, ನಿಮ್ಮಿಂದ ಸಾಧ್ಯವಿದೆ… ಏನಂತೀರಾ?

 

 

B.M.Lavakumar

 

admin
the authoradmin

Leave a Reply