CinemaLatest

ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ… ಹಲವು ಪ್ರಥಮಗಳನ್ನು ಚಂದನವನಕ್ಕೆ ನೀಡಿದ ನಟ- ನಿರ್ಮಾಪಕ- ನಿರ್ದೇಶಕ!

ರಂಗಭೂಮಿ ಮೂಲಕ ಚಿತ್ರರಂಗಕ್ಕೆ ಬಂದು ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಹಲವು ಹಿರಿಯ ಕಲಾವಿದರು ಇವತ್ತು ನೆನಪಾಗಿ ಉಳಿದಿದ್ದಾರೆ. ಇವರ ನಡುವೆ ಗುಬ್ಬಿ ವೀರಣ್ಣ ಅವರ ಹೆಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಚಂದನವನದಲ್ಲಿ ಹಲವು ಪ್ರಥಮಗಳನ್ನು ನೀಡಿ ಕೀರ್ತಿಶೇಷರಾಗಿದ್ದಾರೆ. ಇವತ್ತು ಅವರಿಲ್ಲ ಆದರೆ ಚಿತ್ರರಂಗ ಇರುವವರೆಗೆ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿರುತ್ತದೆ.

ಗುಬ್ಬಿ ವೀರಣ್ಣರವರ ಬಗ್ಗೆ ಹೇಳುತ್ತಾ ಹೋದರೆ ಪದಗಳು ಸಾಕಾಗುವುದಿಲ್ಲ. ಆದರೆ ಅವರ ಕುರಿತಂತೆ ಇಲ್ಲಿ ಸಮಗ್ರ ವಿಚಾರಗಳನ್ನು ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಗಳ ಸಹಿತ ಪರಿಚಯಿಸುವ ಮೂಲಕ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ ಅವರು ಗುಬ್ಬಿ ವೀರಣ್ಣ ಅವರನ್ನು ನಮ್ಮ ನಿಮ್ಮ ಮುಂದೆ ತಂದಿದ್ದಾರೆ.

1931ರ ಕಾಲಘಟ್ಟದಲ್ಲಿ ಹಾಲಿವುಡ್‍ನ ರಫ಼ೆಲ್ ಅಲ್ಗೋಯೆಟ್ ನಿರ್ದೇಶನದಲ್ಲಿ ಭಾರತೀಯನಿಂದ ತಯಾರಿಸಲ್ಪಟ್ಟ ಪ್ರಪಂಚದ ಪ್ರಪ್ರಥಮ ಸೈಲೆಂಟ್ ಮೂವೀ “ಹಿಸ್ ಲವ್ ಅಫ಼ೇರ್” ಇಂಗ್ಲಿಷ್ ಫಿಲಂ ನಿರ್ಮಾಪಕರು…  ಗ್ಲಿಸರಿನ್ ಬಳಸದೆ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಭಾರತದ ಮೊಟ್ಟಮೊದಲ ಫಿಲಂ “ಸತಿಸುಲೋಚನ” ಚಿತ್ರದ ನಿರ್ಮಾಪಕರು.. ಇಂಡಿಯ ದೇಶದ ನಾಟಕ ಮತ್ತು ಸಿನಿಮ ಇವೆರಡೂ ಕ್ಷೇತ್ರದ ಪಿತಾಮಹ ಎಂಬ ಖ್ಯಾತಿಗೆ ಒಳಗಾದವರು ಬೇರೆ ಯಾರೂ ಅಲ್ಲ ಗುಬ್ಬಿವೀರಣ್ಣರವರು…

ಇಂಥ ವಿಖ್ಯಾತ ಗುಬ್ಬಿವೀರಣ್ಣನವರು ಕನ್ನಡಿಗ ಎಂಬುದು ಅತ್ಯಂತ ಹೆಮ್ಮೆಯ ಸಂಗತಿ.. 1910ರಲ್ಲಿ ಗುಬ್ಬಿ ಶ್ರೀಚನ್ನಬಸವೇಶ್ವರ ನಾಟಕ ಕಂಪನಿ ಸ್ಥಾಪಿಸಿ ಹತ್ತಾರು ನಾಟಕಗಳ ಸಾವಿರಾರು ಪ್ರದರ್ಶನ ನೀಡಿದರು. ತಾವು ಬೆಳೆಯುವುದರ ಜತೆಗೆ ಅನ್ಯರನ್ನೂ ಬೆಳೆಸುವಂಥ ಅಪರೂಪ ಗುಣವುಳ್ಳವರು. ದೇಶದಲ್ಲೆ ಮೊಟ್ಟಮೊದಲ ಚಿತ್ರನಿರ್ಮಾಣದ ಸಿಂಡಿಕೇಟ್ ಸಂಸ್ಥೆ ಕರ್ನಾಟಕ ಫಿಲಂಸ್ ನ ರೂವಾರಿ. ಪ್ರಪಂಚದಾದ್ಯಂತ ಕನ್ನಡ ನಾಡು, ನುಡಿ, ಕಲೆಯನ್ನು ಜನರಿಗೆ ಪರಿಚಯಿಸಿದ ಪ್ರಥಮ ಕನ್ನಡಿಗ..

ಇವತ್ತಿಗೂ ಯಾವುದೇ ’ನಾಟಕ’ ಇರುವೆಡೆಯಲ್ಲೆಲ್ಲ ಈ ರತ್ನದ ಹೊಳಪು, ಜೀವಂತ ಕಲಾಧಾತು, ಕರ್ನಾಟಕದ ಮನೆಮಾತು. ಮೂಕಿಟಾಕಿ ಯುಗದಿಂದ ಮಾಡ್ರನ್ ಕಾಲದವರೆಗೆ ವಿಜೃಂಭಿಸಿದ ಈ ಕಲಾಜೀವಿಯ ಬದುಕು ಚಂದನವನ ಚರಿತ್ರೆ ಸುವರ್ಣ ಪುಟಗಳಲ್ಲಿ ದಾಖಲಿಸಲಾಗಿದ್ದು, ಅನವರತ ಸ್ಮರಣೀಯ! ಇವರ ಆಶ್ರಯದಲ್ಲಿ ಬೆಳೆದು ಹಣ ಕೀರ್ತಿ ಸಂಪಾದಿಸಿದ ನೂರಾರು ಅತಿರಥ ಮಹಾರಥ ಕಲಾವಿದರಿದ್ದಾರೆ ಎನ್ನುವುದೇ ಗಮನಾರ್ಹ..

ಈ ಸಾಲಿನಲ್ಲಿ ಆರ್.ನಾಗೇಂದ್ರರಾವ್, ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ, ಢಿಕ್ಕಿಮಾಧವರಾವ್, ಟಿ.ಎಸ್.ಕರಿಬಸಯ್ಯ, ರಾಜಯ್ಯಂಗಾರ್, ಕೆಂಪರಾಜಅರಸ್, ಹೊನ್ನಪ್ಪಭಾಗವತರ್, ರಾಜಕುಮಾರ್, ಉದಯಕುಮಾರ್, ಕಲ್ಯಾಣಕುಮಾರ್, ಬಾಲಕೃಷ್ಣ, ನರಸಿಂಹರಾಜು, ಬಿವಿ.ಕಾರಂತ್, ಗಿರೀಶ್ ಕಾರ್ನಾಡ್, ಕಮಲಬಾಯಿ,ಲಕ್ಷ್ಮಿಬಾಯಿ, ಅಶ್ವಥಮ್ಮ, ಬಿ.ಜಯಮ್ಮ, ಸಿಐಡಿ ಶಕುಂತಲ, ಮಳವಳ್ಳಿಸುಂದ್ರಮ್ಮ, ಪಾರ್ವತಿದೇವಿ, ಎಸ್ಕೆ. ಪದ್ಮಾದೇವಿ, ಸಂಧ್ಯಾ ಹೀಗೆ ಹೆಸರುಗಳು ಬೆಳೆಯುತ್ತಾ ಹೋಗುತ್ತದೆ.

ವೀರಣ್ಣನವರ “ಸದಾರಮೆ” ನಾಟಕವು 1925 ರಿಂದ 1955 ರವರೆಗೆ ಒಟ್ಟು 878 ಪ್ರದರ್ಶನ ಕಂಡು ನೂತನ ದಾಖಲೆ ನಿರ್ಮಿಸಿತು. ಬ್ರಿಟಿಷ್ ದೊರೆ ಇಂಗ್ಲಿಷ್ ಅಧಿಕಾರಿ, ರಾಜಮಹಾರಾಜ, ದಿವಾನ್, ಸಾಹುಕಾರ್ ಕುಟುಂಬ ಮೊದಲ್ಗೊಂಡು ನಾಟಕ ವೀಕ್ಷಿಸಿದ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. 2ನೇ ಮಹಾಯುದ್ಧ ಕಾಲದಲ್ಲಿ ಗುಬ್ಬಿ ಕಂಪನಿಯು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ, ಧೃತಿಗೆಡದೆ ತಮ್ಮ ಒಡವೆ-ವಸ್ತ್ರ-ಆಸ್ತಿ ಗಿರವಿ ಇಟ್ಟು ಪ್ರತಿಯೊಬ್ಬರಿಗೂ ಸಂಬಳ ನೀಡಿದ ತ್ಯಾಗಿ. ನೂರಾರು ಕುಟುಂಬಗಳ ಮನೆ ದೇವರಾದರು! ದುರ್ಭಿಕ್ಷ ಕಾಲದಲ್ಲೂ ಯಾರೊಡನೆಯೂ ದುಃಖವನ್ನು ಹಂಚಿಕೊಳ್ಳದ ಸ್ವಾಭಿಮಾನಿ ವೀರಣ್ಣ. ಕಲೆಗಾಗಿಯೇ ಹುಟ್ಟಿ ಬೆಳೆದು ಬದುಕಿ ಗತಿಸಿದ ನಿಸ್ವಾರ್ಥ ವ್ಯಕ್ತಿ ಮಹಾನ್ ಶಕ್ತಿ!

ನಾಟಕರತ್ನ ಡಾ.ಗುಬ್ಬಿವೀರಣ್ಣ 1881ರಲ್ಲಿ ಗುಬ್ಬಿಯ ಗುಲಗಂಜಿಹಳ್ಳಿಯಲ್ಲಿ ಜನಿಸಿ, 1972ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು. 1976ರಿಂದ ಕರ್ನಾಟಕ ಸರ್ಕಾರ ಪ್ರತಿ ವರ್ಷವು “ಗುಬ್ಬಿವೀರಣ್ಣಪ್ರಶಸ್ತಿ” ಕೊಡಮಾಡುತ್ತಿದೆ. “ಗುಬ್ಬಿವೀರಣ್ಣ ರಂಗಮಂದಿರ” ಸ್ಮಾರಕ ಇವತ್ತಿಗೂ ಸಹ ಜ್ವಲಂತ ಸಾಕ್ಷಿ. ಇವರ ಇಡೀ ಕುಟುಂಬವೇ ನಾಟಕ-ಸಿನಿಮಾ ಕಲಾವಿದರಿಂದ ತುಂಬಿ ತುಳುಕಿದೆ.ಗುಬ್ಬಿವೀರಣ್ಣ ಅಂಡ್ ಫ಼್ಯಾಮಿಲಿಯ 48 ಸದಸ್ಯರೆಂದರೆ ಗುಬ್ಬಿವೀರಣ್ಣ, ಇವರ ಪತ್ನಿಯರಾದ ಸುಂದ್ರಮ್ಮ, ಭದ್ರಮ್ಮ, ಬಿ.ಜಯಮ್ಮ.

ಒಟ್ಟು 12 ಮಕ್ಕಳಲ್ಲಿ ಪ್ರಮುಖರು: ಜಿ.ವಿ.ಸ್ವರ್ಣಮ್ಮ, ಜಿ.ವಿ.ಮಾಲತಿ, ಜಿ.ವಿ.ಲತಾ ಜಿ.ವಿ.ಶಿವರಾಜ್, ಜಿ.ವಿ.ಶಿವಾನಂದ್, ಜಿ.ವಿ. ಶಿವಕುಮಾರ್. ಒಟ್ಟು 37 ಮೊಮ್ಮಕ್ಕಳಲ್ಲಿ ಪ್ರಮುಖರು: ರಂಗಭೂಮಿ ಮತ್ತು  ಸಿನಿಮಾ ರಂಗದ ಖ್ಯಾತ  ಕಲಾವಿದೆಯರಾದ ವೈಜಯಂತಿ, ಬಿ.ಶಿವಶ್ರೀ(ನಿರ್ದೇಶಕ ಪ್ರೀತಮ್ ಗುಬ್ಬಿರವರ ತಾಯಿ) ಸುಂದರಶ್ರೀ, ಬಿ.ಜಯಶ್ರೀ. ಇವರಪೈಕಿ ರಂಗ ನಿರ್ದೇಶಕಿ ಜಯಶ್ರೀ ‘ನಾಗಮಂಡಲ’ ಚಿತ್ರದ ಮೂಲಕ  ಖ್ಯಾತರಾದರಲ್ಲದೆ ಜಾನಪದ ಕ್ಷೇತ್ರದಲ್ಲು ಸಾಧನೆಗೈದು ದೇಶದಾದ್ಯಂತ ಕನ್ನಡದ ಕೀರ್ತಿಪತಾಕೆ ಹಾರಿಸಿದರು.

ರವೀಂದ್ರಕಲಾಕ್ಷೇತ್ರ, ಮೈಸೂರು ರಂಗಾಯಣ ಮುಂತಾದೆಡೆ ಉನ್ನತ ಹುದ್ದೆಗಳಲ್ಲಿ ಸೇವೆಗೈದ ಈಕೆ ತಮ್ಮ ತಾತ ಗುಬ್ಬಿವೀರಣ್ಣನವರ ಹೆಸರು ಉಳಿಸುವಂಥ ಎತ್ತರಕ್ಕೆ ಬೆಳೆದಿದ್ದಾರೆ!

ಗುಬ್ಬಿವೀರಣ್ಣರಿಗೆ  ಸಂದ ಪ್ರಶಸ್ತಿ,ಸನ್ಮಾನಗಳು: ಸಂಗೀತ-ನಾಟಕ ಅಕ್ಯಾಡೆಮಿ ಪ್ರಶಸ್ತಿ, ನಾಟಕರತ್ನ, ವಿನೋದರತ್ನಾಕರ, ಪದ್ಮಶ್ರೀ, ಡಿಲಿಟ್.,ಗೌರವ ಡಾಕ್ಟರೇಟ್, ಮುಂತಾದ ಅನೇಕ ರಾಷ್ಟ್ರ,ರಾಜ್ಯ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿ ಬಂದವು. ಹಲವಾರು ಸಂಘಸಂಸ್ಥೆಗಳಿಂದ, ಬೇರೆ ಬೇರೆ ಸರ್ಕಾರದಿಂದ ನೂರಾರು ಸನ್ಮಾನ ಬಹುಮಾನ ಬಿರುದುಗಳ ಪಡೆದ ನಟ- ನಿರ್ಮಾಪಕ- ನಿರ್ದೇಶಕ ಗುಬ್ಬಿವೀರಣ್ಣ ಕನ್ನಡದಮಾಣಿಕ್ಯ. ಇವರು ಕನ್ನಡ ಭಾಷೆಯಲ್ಲದೇ ಇತರೆ ಭಾಷೆಯಲ್ಲು ಸಿನಿಮ ತಯಾರಿಸಿರುವುದು ಇವರ ಘನತೆ ಗೌರವ ಇಮ್ಮಡಿಗೊಳಿಸಿದೆ.

ಗುಬ್ಬಿಫಿಲಂಸ್ ಬ್ಯಾನರಡಿಯಲ್ಲಿ ನಿರ್ಮಿಸಿ, ತಾವೂ ನಟಿಸಿದ್ದ ಫಿಲಂಸ್: ಹರಿಮಾಯ (ಮೂಕಿಚಿತ್ರ-1932), ಸದಾರಮೆ (1935), ಸುಭದ್ರಾ(1941), ಜೀವನನಾಟಕ(1942), ಹೇಮರೆಡ್ಡಿಮಲ್ಲಮ್ಮ (1944), ಗುಣಸಾಗರಿ (1953), ಬೇಡರಕಣ್ಣಪ್ಪ (ತೆಲುಗಿನಲ್ಲಿ ಕಾಳಹಸ್ತಿ ಮಹಾತ್ಯಂ-(1954). ತಮಿಳ್ ಚಿತ್ರಗಳಾದ ಸತ್ಯಶೋಧನೈ (1953)  ಹಾಗೂ ಸಗೋದರಿ (1959). ನಾಟಕರತ್ನ ಡಾ. ಗುಬ್ಬಿವೀರಣ್ಣ ತಮ್ಮ ಜೀವನ ಪರ್ಯಂತ ಯಾರನ್ನೂ ನೋಯಿಸದೆ 81 ವರ್ಷ ಕಾಲ ಸಾರ್ಥಕ ಜೀವನ ನಡೆಸಿ ತೆರಳಿದರೂ ಇಂದಿಗೂ ಅಜರಾಮರ.

admin
the authoradmin

1 Comment

Leave a Reply