ಭಾರತಕ್ಕೆ ಬಾಂಗ್ಲಾ-ನೇಪಾಳಿ ಹುಡ್ಗೀರ್ ಬರೋದ್ಯಾಕೆ?… ಅವರನ್ನು ಕರೆ ತರುವ ಜಾಲ ಯಾವುದು? ಆಂತರಿಕ ಭದ್ರತೆ ಬಗ್ಗೆ ಗಮನಹರಿಸುತ್ತಾರಾ?

ಬಾಂಗ್ಲಾ ಮತ್ತು ನೇಪಾಳದಿಂದ ಬಂದ ಹೆಣ್ಣು ಮಕ್ಕಳು ರಾಜ್ಯದ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶದ ವೇಶ್ಯಾವಾಟಿಕೆಯ ಅಡ್ಡೆಯಲ್ಲಿ ಸಿಗುತ್ತಿದ್ದಾರೆ ಎನ್ನುವುದಾದರೆ ಇವರನ್ನು ಕರೆತರುತ್ತಿರುವವರು ಯಾರು? ಎಂಬ ಪ್ರಶ್ನೆ ಜತೆಗೆ ಆಂತರಿಕ ಭದ್ರತೆಯ ಭಯವೂ ಹುಟ್ಟಿಕೊಳ್ಳುತ್ತಿದೆ.
ಇವತ್ತು ವೇಶ್ಯಾವಾಟಿಕೆಯ ಜಾಲ ದೊಡ್ಡ ಮಟ್ಟದಲ್ಲಿ ವ್ಯಾಪಿಸಿದೆ. ಈ ಜಾಲದಲ್ಲಿ ಸ್ಥಳೀಯ ಹೆಣ್ಣು ಮಕ್ಕಳು ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವುದು ಒಂದೆಡೆಯಾದರೆ ದೂರದ ಬಾಂಗ್ಲಾ ಮತ್ತು ನೇಪಾಳಗಳಿಂದ ಹೆಣ್ಣು ಮಕ್ಕಳನ್ನು ಕರೆತಂದು ಅವರನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ.
ಮಜಾಜ್ ಸೆಂಟರ್ ಗಳಲ್ಲಿ ನೇಪಾಳ ಮತ್ತು ಬಾಂಗ್ಲಾದ ಹೆಣ್ಣು ಮಕ್ಕಳೇ ಹೆಚ್ಚು ಕಾಣಸಿಗುತ್ತಿದ್ದಾರೆ. ಅವರನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತಿದ್ದು, ಈ ಹೆಣ್ಣು ಮಕ್ಕಳು ಅಷ್ಟು ಸುಲಭವಾಗಿ ದೇಶದ ಗಡಿ ದಾಟಿ ರಾಜ್ಯಗಳಿಗೆ ಬರುತ್ತಿರುವುದು ಹೇಗೆ? ಇವರನ್ನು ಕರೆತರುತ್ತಿರುವವರು ಯಾರು? ತನಿಖೆಗಳು ನಡೆಯಬೇಕಿದೆ.
ಈಗಾಗಲೇ ದೇಶದಲ್ಲಿ ದೇಶದ್ರೋಹದ ಕೆಲಸಗಳನ್ನು ಮಾಡುತ್ತಿರುವವರನ್ನು ರಾಷ್ಟ್ರೀಯ ಭದ್ರತಾ ಸಂಸ್ಥೆ ಹುಡುಕಿ, ಹುಡುಕಿ ಹೊಡೆಯುತ್ತಿದೆ. ಇಲ್ಲಿದ್ದುಕೊಂಡೇ ಪಾಕಿಸ್ತಾನಕ್ಕೆ ಮಾಹಿತಿ ರವಾನಿಸುತ್ತಿದ್ದವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಹಾಗಾದರೆ ಭಾರತಕ್ಕೆ ಮಾರಕವಾಗಿರುವ ಬಾಂಗ್ಲಾ ಪ್ರಜೆಗಳು ಮತ್ತು ವೇಶ್ಯಾವಾಟಿಕೆಗೆ ರವಾನೆಯಾಗುತ್ತಿರುವ ಹೆಣ್ಣು ಮಕ್ಕಳನ್ನು ಪತ್ತೆ ಹಚ್ಚುವ ಕೆಲಸವೂ ನಡೆಯ ಬೇಕಿದೆ.
ಭಾರತದಲ್ಲಿ ವೇಶ್ಯಾವಾಟಿಕೆಯನ್ನು ತಡೆಗಟ್ಟುವುದು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಇದರ ಹಿಂದೆ ದೇಶ, ವಿದೇಶಗಳ ಜಾಲಗಳು ಕೆಲಸ ಮಾಡುತ್ತಿವೆ. ನಮಗೆ ಯಾವತ್ತೋ ಒಂದು ದಿನ ಹೋಟೆಲ್, ಮಸಾಜ್ ಪಾರ್ಲರ್ ಮುಂತಾದ ಕಡೆಗಳಲ್ಲಿ ಪೊಲೀಸರು ದಾಳಿ ಮಾಡುವುದು, ಒಂದಷ್ಟು ಹೆಣ್ಣು ಮಕ್ಕಳನ್ನು ರಕ್ಷಣೆ ಮತ್ತೊಂದಷ್ಟು ಮಂದಿಯ ಬಂಧನದ ಸುದ್ದಿಯಷ್ಟೇ ಗೊತ್ತಾಗುತ್ತದೆ. ಅದರಾಚೆಗಿನ ಜಾಲಗಳ ಬಗ್ಗೆ ಗೊತ್ತೇ ಆಗುವುದಿಲ್ಲ.
ವೇಶ್ಯಾವಾಟಿಕೆಯಾಚೆಗೂ ಹತ್ತು ಹಲವು ದುಷ್ಟಶಕ್ತಿಗಳು ಕೆಲಸ ಮಾಡುತ್ತವೆ. ಅವು ಹೆಣ್ಣುಮಕ್ಕಳನ್ನು ಪುಸಲಾಯಿಸಿ ವೇಶ್ಯಾವಾಟಿಕೆಗೆ ಕರೆತರುವುದು, ಊರಿಂದ ಊರಿಗೆ, ರಾಜ್ಯದಿಂದ ರಾಜ್ಯಕ್ಕೆ ಹೆಣ್ಣು ಮಕ್ಕಳನ್ನು ಸಾಗಿಸುವುದು, ಕಮೀಷನ್ ವ್ಯವಹಾರಗಳು ಹೀಗೆ ನಡೆಯುತ್ತಲೇ ಇರುತ್ತವೆ. ಈ ದಂಧೆಯಲ್ಲಿ ಪುರುಷರು ಮತ್ತು ಮಹಿಳೆಯರು ಮೇಲ್ಮಟ್ಟದಲ್ಲಿ ಕೆಲಸ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಪೊಲೀಸರ ಮತ್ತು ಜನರ ಕಣ್ಣಿಗೆ ಮಣ್ಣೆರೆಚುವ ಸಲುವಾಗಿ ಬೇರೆ, ಬೇರೆ ರೀತಿಯ ವೇಷಗಳು, ವ್ಯವಹಾರಗಳು ಇಲ್ಲಿ ನಡೆಯುತ್ತಿವೆ. ಮೇಲ್ನೋಟಕ್ಕೆ ಏನು ಕಾಣಿಸದೆ ಹೋದರೂ ಇದರ ಆಳ ಮಾತ್ರ ಪಾತಾಳಕ್ಕೆ ತಲುಪಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಬೇರು ಮಟ್ಟದಿಂದಲೇ ಕಿತ್ತು ಹಾಕುವ ಕೆಲಸಗಳು ನಡೆಯದ ಕಾರಣದಿಂದಾಗಿ ದಂಧೆ ರಾಜಾರೋಷವಾಗಿ ಮುಂದುವರೆಯುತ್ತಿದೆ.
ಬಾಂಗ್ಲಾ ಮತ್ತು ನೇಪಾಳದಿಂದ ಕೇವಲ ಹೆಣ್ಣು ಮಕ್ಕಳು ಮಾತ್ರ ಬರುತ್ತಿಲ್ಲ ಗಂಡಸರೂ ಬರುತ್ತಿದ್ದಾರೆ. ಅವರೆಷ್ಟು ಡೇಂಜರ್ ಎನ್ನುವುದು ಇತ್ತೀಚೆಗಿನ ದಿನಗಳಲ್ಲಿ ಮರ್ಡರ್ ಮಾಡಿ ಚಿನ್ನಾಭರಣ ದೋಚಿದ ಪ್ರಕರಣಗಳಿಂದ ಗೊತ್ತಾಗುತ್ತಿದೆ.
ಬಾಂಗ್ಲಾ ಯುವತಿಯರನ್ನು ಅಕ್ರಮವಾಗಿ ಗಡಿದಾಟಿಸಿ ಬಳಿಕ ದೇಶದಾದ್ಯಂತ ಅವರನ್ನು ಲಾಡ್ಜ್ ಗಳಿಗೆ, ರೆಸಾರ್ಟ್ ಗಳಿಗೆ, ಬಾಡಿ ಮಸಾಜ್, ಸ್ಪಾಸೆಂಟರ್ ಗಳಿಗೆ ಹೀಗೆ ಹಲವು ಸ್ಥಳಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕೆಲವೊಮ್ಮೆ ವೇಶ್ಯಾವಾಟಿಕೆ ದಂಧೆಯಲ್ಲಿ ಪೊಲೀಸರು ದಾಳಿ ಮಾಡಿದಾಗಲೆಲ್ಲ ಬಾಂಗ್ಲಾದ ಯುವತಿಯರೇ ಹೆಚ್ಚು, ಹೆಚ್ಚು ಸಿಕ್ಕಿ ಬೀಳುತ್ತಾರೆ. ಏಕೆ ಹೀಗೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಸುಲಭವಾಗಿ ಅವರನ್ನು ಕರೆತಂದು ಬಳಿಕ ಮಾರಾಟ ಮಾಡಿ ತಾವು ಹಣ ಮಾಡಿಕೊಳ್ಳಲು ದೊಡ್ಡ ಮಟ್ಟದ ಜಾಲಗಳೇ ಇವೆ. ಈ ಜಾಲದಲ್ಲಿ ಸಿಕ್ಕಿ ಬೀಳುವ ಹೆಣ್ಣು ಮಕ್ಕಳು ಆ ಪಾಪ ಕೂಪದಿಂದ ಹೊರಬರಲಾಗದೆ, ಮದ್ಯಪಾನ, ಧೂಮಪಾನ, ಡ್ರಗ್ಸ್ ಮುಂತಾದ ಚಟಗಳಿಗೆ ಬಲಿಯಾಗಿ ಬದುಕನ್ನೇ ಕಳೆದುಕೊಳ್ಳುತ್ತಾರೆ.
ಇದೆಲ್ಲದಕ್ಕಿಂತ ಹೆಚ್ಚಾಗಿ ವೇಶ್ಯಾವಾಟಿಕೆ ಹೊರತು ಪಡಿಸಿ ಬೇರೆ ಯಾವುದನ್ನೂ ಮಾಡಲಾರದ ಪರಿಸ್ಥಿತಿಗೆ ಆ ಹೆಣ್ಣುಮಕ್ಕಳು ಬಂದು ತಲುಪಿ ಬಿಡುತ್ತಾರೆ. ಹೀಗಾಗಿ ತಮ್ಮ ಒತ್ತಡ ತಣಿಯಲು, ಮಾನಸಿಕ ನೆಮ್ಮದಿಗಾಗಿ ಮದ್ಯಪಾನ, ಡ್ರಗ್ಸ್ ಗೆ ಮೊರೆ ಹೋಗಿ ಬಿಡುತ್ತಾರೆ. ಕೆಲವೊಮ್ಮೆ ಇವರು ದಂಧೆಯಲ್ಲಿ ತೊಡಗಿದಾಗ ಸಿಕ್ಕಿಬಿದ್ದರೂ ಫೈನ್ ಕಟ್ಟಿ ಅವರನ್ನು ಬಿಡಿಸಿಕೊಂಡು ಹೋಗಲೂ ವ್ಯವಸ್ಥೆಗಳಿದ್ದು, ಮತ್ತೆ ಅವರಿಂದ ಅದೇ ದಂಧೆ ಮಾಡಿಸುತ್ತಾರೆ.
ಇನ್ನೊಂದೆಡೆ ಬಡ ಹಾಗೂ ಸುಂದರವಾಗಿರುವ ಹೆಣ್ಣು ಮಕ್ಕಳಿಗೆ ಹೋಟೆಲ್, ರೆಸಾರ್ಟ್ಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು ಬಳಿಕ ವೇಶ್ಯಾವಾಟಿಕೆಗೆ ನೂಕುತ್ತಿದ್ದಾರೆ. ಬಹಳಷ್ಟು ಕಡೆಗಳಲ್ಲಿ ವೇಶ್ಯಾವಾಟಿಕೆ ನಡೆಸಲೆಂದೇ ಪಟ್ಟಣಗಳ ಹೊರ ವಲಯದಲ್ಲಿ ಲಾಡ್ಜ್ ರೆಸಾರ್ಟ್ ಗಳನ್ನು ನಿರ್ಮಿಸಲಾಗುತ್ತಿದ್ದು, ಇಲ್ಲಿ ಮೇಲ್ನೋಟಕ್ಕೆ ಯಾರಿಗೂ ಯಾವುದೇ ಅನುಮಾನ ಬಾರದ ವಾತಾವರಣ ನಿರ್ಮಿಸಲಾಗಿರುತ್ತದೆ..
ಯಾರಿಗೂ ಗೊತ್ತೇ ಆಗದಂತೆ ರೆಸಾರ್ಟ್ ಒಳಗೆ ರಹಸ್ಯ ಕೊಠಡಿ ಮಾಡಿ ಗೋಡೆಯಲ್ಲೊಂದು ರಂಧ್ರ ಮಾಡಿ ಅದರ ಮೂಲಕ ಕೊಠಡಿಗೆ ತೆರಳುವಂತೆ ಮಾಡಿರುತ್ತಾರೆ. ಮಾಮೂಲು ಗೋಡೆಯಲ್ಲೇ ರಹಸ್ಯ ಕೊಠಡಿಗೆ ತೆರಳಲು ಬಾಗಿಲು ಇದ್ದರೂ ಮೇಲ್ನೋಟಕ್ಕೆ ಅದು ಗೊತ್ತಾಗದಂತೆ ಮುಚ್ಚಲಾಗುತ್ತದೆ. ಪೊಲೀಸರು ದಾಳಿ ಮಾಡುವ ಸೂಚನೆ ಗೊತ್ತಾಗುತ್ತಿದ್ದಂತೆಯೇ ರಹಸ್ಯ ಕೊಠಡಿ ಸೇರಿ ಬಿಡುತ್ತಾರೆ.
ಇಂತಹ ವ್ಯವಸ್ಥಿತ ಲಾಡ್ಜ್ ಹಾಗೂ ರೆಸಾರ್ಟ್ ಗಳು ಬೇಕಾದಷ್ಟಿದ್ದು, ಇವರಿಗೆಲ್ಲರಿಗೂ ಅನ್ನ ಹಾಕುವವರು ಅಮಾಯಕ ಹೆಣ್ಣು ಮಕ್ಕಳಾಗಿದ್ದಾರೆ. ಇದನ್ನು ಪ್ರಭಾವಿಗಳೇ ನಿಯಂತ್ರಿಸುತ್ತಿದ್ದು, ಇಲ್ಲಿಗೆ ಮಜಾ ಉಡಾಯಿಸಲು ಬರುವ ಗಿರಾಕಿಗಳ ಪೈಕಿ ಹೆಚ್ಚಿನವರು ಹೊರಗಿನವರು ಆಗಿರುತ್ತಾರೆ. ಸ್ಥಳೀಯರನ್ನು ಹತ್ತಿರ ಬಿಟ್ಟುಕೊಂಡರೆ ಗುಟ್ಟುರಟ್ಟಾಗುತ್ತದೆ ಎಂಬ ಕಾರಣಕ್ಕೆ ನಿಯಂತ್ರಿಸುತ್ತಾರೆ. ಮೇಲ್ನೋಟಕ್ಕೆ ಹೈಫೈ ಇರುವುದರಿಂದ ಸಾಮಾನ್ಯ ಜನರು ಅತ್ತ ಮುಖ ಮಾಡುವುದಿಲ್ಲ ಹೀಗಾಗಿ ದಂಧೆ ಅಡೆತಡೆಯಿಲ್ಲದೆ ಸಾಗುತ್ತಿರುತ್ತದೆ.
ಇನ್ನು ಸ್ಪಾ ಕೇಂದ್ರಗಳಲ್ಲಿಯೂ ಹೆಚ್ಚು ಬಾಂಗ್ಲಾ ಹೆಣ್ಣು ಮಕ್ಕಳೇ ಇರುತ್ತಾರೆ. ಇಲ್ಲಿ ಸಾವಿರಾರು ರೂಪಾಯಿ ಕೊಟ್ಟು ಮಸಾಜ್ ಮಾಡಿಸಿಕೊಳ್ಳಲು ವಯಸ್ಸಾದ ಗಂಡಸರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರು ಯುವತಿಯರಿಂದ ಬಾಡಿ ಮಸಾಜ್ ಮಾಡಿಸಿಕೊಂಡು ಸುಖ ಪಡೆಯುತ್ತಾರೆ. ಇದಕ್ಕೆಲ್ಲ ಹೊರಗಿನ ಅದರಲ್ಲೂ ಬಾಂಗ್ಲಾ, ನೇಪಾಳಿ ಯುವತಿಯರನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದೇಕೆ? ಎಂಬ ಪ್ರಶ್ನೆಗೆ ಬಡತನವೇ ಕಾರಣವಾಗಿರುತ್ತದೆ. ಹೀಗೆ ಬರುವ ಯುವತಿಯರನ್ನು ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಮಾಡಲಾಗುತ್ತಿರುತ್ತದೆ.
ಈ ಬಗ್ಗೆ ಯಾರೂ ಕೂಡ ತುಂಬಾ ಆಳವಾಗಿ ಯೋಚಿಸುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ದಾಳಿ ನಡೆಸಿ ಸಿಕ್ಕಿ ಬಿದ್ದಾಗ ಅವರು ಈ ವೃತ್ತಿಗೆ ಏಕೆ ಬಂದರು? ಕರೆತಂದವರು ಯಾರು? ಹೀಗೆ ಜಾಲಗಳ ಬಗ್ಗೆ ಆಳಕ್ಕಿಳಿದು ತನಿಖೆಯೂ ನಡೆಯಲ್ಲ. ಆದ್ದರಿಂದ ಅವರನ್ನು ಮತ್ತೆ ಬಿಡಿಸಿಕೊಂಡು ಹೋಗಿ ಮತ್ತೆ ಅದೇ ಕೂಪಕ್ಕೆ ತಳ್ಳುತ್ತಾರೆ. ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ವೇಶ್ಯಾವಾಟಿಕೆ ದಾಳಿಯಲ್ಲಿ ಬಾಂಗ್ಲಾ ಮತ್ತು ನೇಪಾಳಿ ಯುವತಿಯರು ಸಿಕ್ಕಿ ಬಿದ್ದರೆ ಅವರ ಪೂರ್ವಾಪರದ ತನಿಖೆ ನಡೆಸುವುದು ಬಹಳ ಅಗತ್ಯವಿದೆ. ಇಲ್ಲದೆ ಹೋದರೆ ಇದು ಭದ್ರತೆ ಮೇಲೆಯೂ ಪರಿಣಾಮ ಬೀರಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ.
B.M.Lavakumar