ArticlesLatest

ಚಿಕ್ಲಿಹೊಳೆಯಲ್ಲಿ ಜಲಬೆಡಗಿಯ ನರ್ತನ ನೋಡುವುದೇ ಕಣ್ಣಿಗೊಂದು ಹಬ್ಬ… ಎಲ್ಲಿದೆ ಈ ಜಲಾಶಯ? ಏನಿದರ ವಿಶೇಷ?

ಕೊಡಗಿನಲ್ಲಿರುವ ಚಿಕ್ಲಿಹೊಳೆ ಜಲಾಶಯ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಬಹುಬೇಗ ಭರ್ತಿಯಾಗಿ ಬೇಸಿಗೆ ಬರುತ್ತಿದ್ದಂತೆಯೇ ಬರಿದಾಗುವ ಜಲಾಶಯ ಎಂದರೆ ತಪ್ಪಾಗಲಾರದು.. ಆದರೆ ಈ ಜಲಾಶಯವನ್ನು ನಂಬಿಕೊಂಡು ಒಂದಷ್ಟು ರೈತರಿದ್ದಾರೆ. ಭರ್ತಿಯಾದಾಗ ವೃತ್ತಾಕಾರದಲ್ಲಿ ಧುಮ್ಮಿಕ್ಕುವ ಸುಂದರ ದೃಶ್ಯಕ್ಕಾಗಿ  ಈ ಜಲಾಶಯ ಪ್ರಸಿದ್ಧವಾಗಿದ್ದು, ಸುಂದರ ಪರಿಸರದ ನಡುವೆ ನೆಲೆ ನಿಂತ ಜಲಾಶಯದಿಂದ ನೀರು ಧುಮ್ಮಿಕ್ಕಿ ಹರಿಯುವ ದೃಶ್ಯವನ್ನು ನೋಡುವುದೇ ಒಂಥರಾ ಮಜಾ..

ಮಳೆಗಾಲದಲ್ಲಿ ಮುಂಗಾರು ಬಿರುಸುಗೊಂಡಾಗ ಚಿಕ್ಲಿ ಜಲಾಶಯ ಭರ್ತಿಯಾಗಿ ಬಿಡುತ್ತದೆ. ಈ ವೇಳೆ ಜಲನರ್ತನವೂ ಆರಂಭವಾಗಿ ಬಿಡುತ್ತದೆ. ಈ ಜಲನರ್ತನ ನೋಡಲು ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು ಮುಗಿ ಬೀಳುತ್ತಾರೆ.  ಈ ಜಲಾಶಯ ಪ್ರವಾಸಿಗರ ಪಟ್ಟಿಯಲ್ಲಿದ್ದು, ಇತರೆ ಜಲಾಶಯಗಳೊಂದಿಗೆ ಹೋಲಿಕೆ ಮಾಡುವಷ್ಟು ದೊಡ್ಡದಾಗಿಲ್ಲ ಆದರೆ ಈ ಜಲಾಶಯವನ್ನು ಅಭಿವೃದ್ಧಿಪಡಿಸಿದ್ದೇ ಆದಲ್ಲಿ ಖಂಡಿತಾ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.

ಚಿಕ್ಲಿಹೊಳೆ ಜಲಾಶಯ ಪ್ರಕೃತಿಯ ರಮಣೀಯ ತಾಣದಲ್ಲಿ ನೆಲೆ ನಿಂತಿರುವುದರಿಂದಾಗಿ ನಿಸರ್ಗ ಪ್ರೇಮಿಗಳು ಅತ್ತ ಹೆಜ್ಜೆ ಹಾಕುತ್ತಾರೆ. ಪ್ರಶಾಂತ ವಾತಾವರಣ ಇಲ್ಲಿ ಇರುವ ಕಾರಣದಿಂದಾಗಿ ಒಂದಷ್ಟು ಹೊತ್ತನ್ನು ಇಲ್ಲಿ ಕಳೆದು ಹೋಗುತ್ತಾರೆ. ಸುತ್ತಲೂ ಹಸಿರು ತುಂಬಿದ ಪರಿಸರದಲ್ಲಿ ನೀರಧಾರೆ ವೃತ್ತಾಕಾರದಲ್ಲಿ ಧುಮ್ಮಿಕ್ಕುವ ದೃಶ್ಯ ನೋಡುಗರ ಮನಸೆಳೆಯುತ್ತದೆ.

ಮಡಿಕೇರಿಯಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ಚಿಕ್ಲಿಹೊಳೆ ಜಲಾಶಯದ ಬಳಿಗೆ ತೆರಳಲು ಯಾವುದೇ ಬಸ್ ಸೌಲಭ್ಯವಿಲ್ಲ. ಹಾಗಾಗಿ ಸ್ವಂತ ವಾಹನಗಳಲ್ಲಿ ಅಥವಾ ಮಡಿಕೇರಿಯಿಂದ ಸುಂಟಿಕೊಪ್ಪದವರೆಗೆ ಬಸ್‌ನಲ್ಲಿ ತೆರಳಿ ಅಲ್ಲಿಂದ ಕಂಬಿಬಾಣೆಗೆ ಆಟೋ ಅಥವಾ ಜೀಪಿನಲ್ಲಿ ತೆರಳಬಹುದು. ಎರಡು ಗುಡ್ಡದ ನಡುವೆ ಹರಿಯುತ್ತಿದ್ದ ಚಿಕ್ಲಿಹೊಳೆಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿ ಜಲಾಶಯವನ್ನು ನಿರ್ಮಿಸಲಾಗಿದೆ.

ಈ ಜಲಾಶಯವನ್ನು ಕುಶಾಲನಗರ ಹಾಗೂ ಪಿರಿಯಾಪಟ್ಟಣ ವ್ಯಾಪ್ತಿಯ ಸುಮಾರು 18ಗ್ರಾಮಗಳ 862  ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒಗದಿಸುವ ಉದ್ದೇಶದಿಂದ ಕಾವೇರಿ ನದಿಯ ಉಪನದಿಯಾದ ಚಿಕ್ಲಿಹೊಳೆಗೆ 1982ರಲ್ಲಿ ಸುಮಾರು 12ಕೋಟಿ ವೆಚ್ಚದಲ್ಲಿ ಅಡ್ಡಲಾಗಿ ಕಟ್ಟೆಯನ್ನು ನಿರ್ಮಿಸಲಾಗಿದೆ. ಆದರೆ ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಸ್ವಾತಂತ್ರ್ಯ ನಂತರ 1978ರಲ್ಲಿ ಶಂಕುಸ್ಥಾಪನೆ ನೆರವೇರಿಸಿ 1982ರಲ್ಲಿ ಜಲಾಶಯ ನಿರ್ಮಾಣವಾಯಿತು.

ಒಂದೆಡೆ ಕಾಫಿ ತೋಟ ಮತ್ತೊಂದೆಡೆ ಅರಣ್ಯ ಇದರ ನಡುವಿನ ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡ ಜಲಾಶಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.  ಈ ಜಲಾಶಯ ಸುತ್ತಮುತ್ತಲಿನ ವಿರುಪಾಕ್ಷಪುರ, ರಸೂಲ್‌ ಪುರ, ರಂಗಸಮುದ್ರ, ಬೊಳ್ಳೂರು, ಬಸವನಹಳ್ಳಿ, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಹೊಸಪಟ್ಟಣ ಮುಂತಾದ ಗ್ರಾಮಗಳ ರೈತರ ಸುಮಾರು ಎರಡು ಸಾವಿರ ಎಕರೆಗೂ ಹೆಚ್ಚು ಕೃಷಿ ಭೂಮಿಗೆ ನೀರನ್ನು ಒದಗಿಸುತ್ತಾ ಬಂದಿದೆ.

ಈ ಜಲಾಶಯದ ಬಗ್ಗೆ ಒಂದಷ್ಟು ಕಾಳಜಿ ವಹಿಸಿ ಅಭಿವೃದ್ಧಿಪಡಿಸಿದ್ದರೆ ಬಹುಶಃ ಇದೊಂದು ಸುಂದರ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿತ್ತು. ಆದರೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಲಾಶಯ ಅಭಿವೃದ್ಧಿ ಕಾಣುವ ಬದಲು ಅಧೋಗತಿಯತ್ತ ಸಾಗತೊಡಗಿತು  ಎಂದರೆ ತಪ್ಪಾಗಲಾರದು. ಏಕೆಂದರೆ ಈ ಹಿಂದೆ ಜಲಾಶಯದ ಉದ್ದಕ್ಕೂ ನಿರ್ಮಿಸಲಾಗಿದ್ದ ಕಬ್ಬಿಣದ ಸರಪಳಿಗಳು, ಯಂತ್ರೋಪಕರಣಗಳ ಬಿಡಿಭಾಗಗಳ ಕಳವು ನಡೆದಿದೆ. ಅಷ್ಟೇ ಅಲ್ಲದೆ ನಿರ್ಜನ ಪ್ರದೇಶವಾದುದರಿಂದ ಮೋಜು ಮಸ್ತಿ ಹಾಗೂ ಅನೈತಿಕ ಚಟುವಟಿಕೆಯ ತಾಣವಾಗುತ್ತಿದೆ ಎಂಬ ಆರೋಪವೂ ಇಲ್ಲದಿಲ್ಲ.

ಈ ಜಲಾಶಯದ ಹೂಳನ್ನು ಸಮರ್ಪಕವಾಗಿ ತೆಗೆಯದ ಕಾರಣ ಹೆಚ್ಚು ನೀರು ಶೇಖರಣೆಯಾಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಈ ಜಲಾಶಯದಲ್ಲಿ ದೇವಾಲಯವೊಂದು ಮುಳುಗಡೆಯಾಗಿದ್ದು, ಬೇಸಿಗೆ ಬರುತ್ತಿದ್ದಂತೆಯೇ ನೀರು ಕಡಿಮೆಯಾದಾಗ ದೇವಾಲಯ ಕಾಣಸಿಗುತ್ತದೆ. ಈ ಜಲಾಶಯದಲ್ಲಿ ಇರುವುದು ಒಂದೇ ಕ್ರೆಸ್ಟ್‌ಗೇಟ್ ಜಲಾಶಯದ ಗರಿಷ್ಠ ಮಟ್ಟಕ್ಕಿಂತ ಹೆಚ್ಚಿನ ನೀರು ತುಂಬಿದ ಸಂದರ್ಭ ಅದು ತಾನಾಗಿಯೇ ಹರಿದು ಹೋಗಲು ಅನುಕೂಲವಾಗುವಂತೆ ಜಲಾಶಯದ ಒಂದು ಬದಿಯಲ್ಲಿ ವೃತ್ತಾಕಾರದ ತೂಬನ್ನು ಮಾಡಿದ್ದಾರೆ. ಇದರ ಮೂಲಕ ನೀರು ಹರಿದು ಹೋಗುತ್ತದೆ.

ಮಳೆಸುರಿದು ಜಲಾಶಯ ತುಂಬಿದಾಗ ಹೆಚ್ಚಾದ  ನೀರು ವೃತ್ತಾಕಾರವಾಗಿ ಧುಮುಕುತ್ತಾ ತೂಬಿನ ಮೂಲಕ ಹರಿದು ಹೋಗುವ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿ ಬಿಡುತ್ತದೆ. ಮಳೆಗಾಲದಲ್ಲಿ ಈ ಮನಮೋಹಕ ದೃಶ್ಯವನ್ನು ನೋಡಲೆಂದೇ ಪ್ರವಾಸಿಗರು ತಂಡೋಪತಂಡವಾಗಿ ಇತ್ತ ಬರುತ್ತಿರುತ್ತಾರೆ. ಜಲಾಶಯದ ಸುತ್ತಲೂ ತಂತಿಬೇಲಿ ನಿರ್ಮಿಸಿ ಉದ್ಯಾನವನ ಮಾಡಿದ್ದೇ ಆದರೆ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ. ಆದರೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಚಾಕೊರತೆ ಎದ್ದು ಕಾಣಿಸುತ್ತಿದೆ.

 

B.M.Lavakumar

admin
the authoradmin

Leave a Reply