ArticlesLatest

ಕೊಡಗಿನ ಕಿತ್ತಳೆಯ ವೈಭವ ಮರುಕಳಿಸಲು ಸಾಧ್ಯನಾ?.. ಬೆಳೆಗಾರರಿಗೆ ಕಿತ್ತಳೆಯತ್ತ ಆಸಕ್ತಿ ಕಡಿಮೆಯಾಗಿದ್ದು ಹೇಗೆ?

ಸಾಮಾನ್ಯವಾಗಿ ಕಿತ್ತಳೆ ಮೇ, ಜೂನ್ ಆರಂಭ ಮತ್ತು ಡಿಸೆಂಬರ್,  ಜನವರಿಯಲ್ಲಿ  ಹೀಗೆ ವರ್ಷಕ್ಕೆ ಎರಡು ಬಾರಿ ಫಸಲು ಬಿಡುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಕೊಡಗಿನ ಮಟ್ಟಿಗೆ ಕಿತ್ತಳೆ ಮೊದಲಿನಂತೆ ಇಳುವರಿ ನೀಡುತ್ತಿಲ್ಲ. ಇಳುವರಿ ಬಂದರೂ ಅದನ್ನು ಮಾರಾಟ ಮಾಡಲು ಬೇಕಾದ ಮಾರುಕಟ್ಟೆಯ ವ್ಯವಸ್ಥೆಯಿಲ್ಲ. ಜತೆಗೆ ಬಹುಬೇಗವೇ ಗಿಡಗಳು ಸಾಯುತ್ತಿವೆ. ಆದ್ದರಿಂದ ಬೆಳೆಗಾರರು ಕೂಡ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಪರಿಣಾಮ ಕಾಫಿ ತೋಟಗಳ ನಡುವೆ ಹಣ್ಣಿನಿಂದ ತೂಗಿ ತೊನೆಯುತ್ತಿದ್ದ ಕಿತ್ತಳೆಯ ದೃಶ್ಯಗಳು ಮಾಯವಾಗಿದೆ.

ಮೊದಲೆಲ್ಲ ಕಾಫಿ ಗಿಡಗಳ ನಡುವೆ ಕಿತ್ತಳೆಯನ್ನು ನೆಟ್ಟು ಬೆಳೆಸುವ ಪ್ರಯತ್ನವನ್ನು ಮಾಡುತ್ತಿದ್ದರು. ಆದರೆ ಅದಕ್ಕೆ ತಗಲುವ ರೋಗಗಳು, ನಿರ್ವಹಣೆ ಸಮಸ್ಯೆಯಿಂದಾಗಿ ಬಹುತೇಕ ರೈತರು ಅದರತ್ತ ಹೆಚ್ಚು ಗಮನಹರಿಸುತ್ತಿಲ್ಲ. ಹೀಗಾಗಿಯೇ ಕೊಡಗಿನಲ್ಲಿ ಮೊದಲಿನಂತೆ ಕಿತ್ತಳೆ ಕಾಣಿಸುತ್ತಿಲ್ಲ. ಇದಕ್ಕಿಂತ ಹೆಚ್ಚಾಗಿ ಕೊಡಗಿನಲ್ಲಿ ಮೊದಲಿದ್ದ ತಳಿಗಳು ಮಾಯವಾಗಿದ್ದು, ಈಗಿನ ತಳಿಗಳು ಮೊದಲಿನಂತೆ ಹೆಚ್ಚು ವರ್ಷಗಳ ಕಾಲ ಬದುಕುತ್ತಿಲ್ಲ. ಇದೆಲ್ಲದರ ಕಾರಣದಿಂದಾಗಿ ಬೆಳೆಗಾರರಲ್ಲಿ ಕಿತ್ತಳೆ ಬಗೆಗಿನ ಆಸಕ್ತಿಯೂ ಮಾಯವಾಗುತ್ತಿದೆ.

ಹಾಗೆನೋಡಿದರೆ ಕೊಡಗಿನ ಬ್ರಾಂಡ್ ಗಳಲ್ಲಿ ಕಿತ್ತಳೆಯೂ ಒಂದಾಗಿದೆ. ಕೊಡಗಿನ ಕಿತ್ತಳೆ ಎಂದರೆ ಅದೊಂದು ಬ್ರಾಂಡ್ ಎಂಬಂತೆ ಕಾಣುತ್ತಿತ್ತು. ಆದರೆ ಅದನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ದುರಂತವೆಂದರೆ ಈಗ ಕೊಡಗಿಗೆ  ದೂರದ ನಾಗಾಪುರದ ಕಿತ್ತಳೆ ಹಣ್ಣುಗಳು ಮಾರಾಟಕ್ಕೆ ಬರುವಂತಾಗಿದೆ. ಕಿತ್ತಳೆ ಯುಗವನ್ನು ಕೊಡಗಿನಲ್ಲಿ ಮರಳಿ ತರಬೇಕೆಂಬ ಪ್ರಯತ್ನಗಳು ನಡೆಯುತ್ತಲೇ ಇವೆ. ಇತ್ತೀಚೆಗಿನ ವರ್ಷಗಳಲ್ಲಿ ಹೊಸ ತಳಿಗಳನ್ನು ಬೆಳೆಸುವ ಪ್ರಯತ್ನಗಳು ನಡೆಯುತ್ತಿವೆ.

ನಿಜ ಹೇಳಬೇಕೆಂದರೆ ಹಿಂದೆ ಕೊಡಗಿನಲ್ಲಿ ಬೆಳೆಯುತ್ತಿದ್ದ ತಳಿ ಮಾಯವಾಗಿದೆ. ಈಗ ಗಿಡಗಳನ್ನು ನೆಟ್ಟು ಬೆಳೆಸಿದರೂ ಅದು ಫಸಲಿಗೆ ಬರುವ ವೇಳೆಗೆ ರೋಗಗಳು ತಗುಲಿ ಒಣಗಿ ಹೋಗುತ್ತಿವೆ. ಇನ್ನೊಂದೆಡೆ ಅವುಗಳನ್ನು ಪ್ರತ್ಯೇಕವಾಗಿ ನೆಡದೆ ಕಾಫಿ ತೋಟಗಳ ನಡುವೆ ನೆಡುತ್ತಿರುವುದರಿಂದ ಕಾಫಿ ಗಿಡಗಳ ಕೆಲಸ ಮಾಡುವಾಗ ಕಿತ್ತಳೆ ಗಿಡ ಮತ್ತು ಬೇರಿಗೆ ಹಾನಿಯಾಗುತ್ತಿದ್ದು ಇದರಿಂದ ಅವುಗಳ ಬೆಳವಣಿಗೆ ಕುಂಠಿತವಾಗಿ ಸಾವನ್ನಪ್ಪುವುದು ಸಾಮಾನ್ಯವಾಗಿದೆ.

ಕಿತ್ತಳೆ ಪೂರ್ವಾಪರದ ಬಗ್ಗೆ ತಿಳಿಯುತ್ತಾ ಹೋದರೆ ಇದು ರೊಟೇಸಿ ಕುಟುಂಬಕ್ಕೆ ಸೇರಿದ್ದು, ಸಿಟ್ರಸ್ ಎಂಬ ವೈಜ್ಞಾನಿಕ ಹೆಸರಿದೆ. ಇದನ್ನು ಮ್ಯಾಂಡರಿನ್ ಆರಿಂಜ್ ಅಥವಾ ಮ್ಯಾಂಡರಿನ್ ಎಂದು ಕೂಡ ಕರೆಯಲಾಗುತ್ತದೆ. ಉಷ್ಣ ಮತ್ತು ಉಪೋಷ್ಣ ವಲಯಗಳಲ್ಲಿ ಮುಖ್ಯ ಬೆಳೆಯಾಗಿ ಬೆಳೆಸುತ್ತಾರೆ. ಇದರ ತವರು ಏಷ್ಯಾ ಖಂಡದ ಉಷ್ಣವಲಯ ಅದರಲ್ಲಿಯೂ  ವಲಯ ದ್ವೀಪಸ್ತೋಮಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.  ಇಲ್ಲಿಂದಲೇ ಅದು  ತನ್ನ ಬೆಳವಣಿಗೆಗೆ ಅನುಕೂಲವಿರುವ ವಾತಾವರಣದ ಪ್ರದೇಶಗಳಿಗೆ ಹರಡಿತೆಂದು ಹೇಳಲಾಗುತ್ತಿದೆ.

ಕಿತ್ತಳೆಯನ್ನು  ಭಾರತ, ಅಮೇರಿಕಾ, ಇಂಗ್ಲೆಂಡ್, ಯುರೋಪಿನ ಮೆಡಿಟೇರಿಯನ್ ಪ್ರದೇಶ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಲ್ಲಿ ಬೆಳೆಯುತ್ತಿದ್ದರೆ, ಭಾರತದ ಮಟ್ಟಿಗೆ ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್, ಅಸ್ಸಾಂ ಹಾಗೂ ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ, ಕರ್ನಾಟಕದಲ್ಲಿ ಹಾಸನ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಬೆಳೆಯುತ್ತಿದ್ದರೂ ಕೊಡಗಿನ ಕಿತ್ತಳೆಗೆ ಬೇಡಿಕೆಯಿದ್ದು ತನ್ನದೇ ಹೆಸರಿನಿಂದ ಪ್ರಸಿದ್ದಿಗೊಂಡಿದೆ.

ಕೊಡಗು, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಕಿತ್ತಳೆಯನ್ನು ಬೆಳೆದರೂ ಇದನ್ನು ಪ್ರತ್ಯೇಕವಾಗಿ ಹೆಚ್ಚಿನವರು ಬೆಳೆಯುತ್ತಿಲ್ಲ. ಕಾಫಿ ತೋಟದ ನಡುವೆ  ಅಥವಾ ಬದಿಯಲ್ಲಿ ಬೆಳೆಯುತ್ತಾರೆ. ಪ್ರತ್ಯೇಕವಾಗಿ ಎಕರೆಗಟ್ಟಲೆ ಬೆಳೆದು ಅದರಿಂದ ಆದಾಯ ಪಡೆಯುವುದು ಸುಲಭವಾಗಿ ಉಳಿದಿಲ್ಲ. ಹೀಗಾಗಿ ಉಪಬೆಳೆಯಾಗಿ ಬೆಳೆಸುತ್ತಾರೆ. ಇದನ್ನು ನಲವತ್ತರಿಂದ ನೂರು ಇಂಚು ಮಳೆ ಸುರಿಯುವ ಮತ್ತು ಸಮುದ್ರ ಮಟ್ಟದಿಂದ ಸುಮಾರು ಎರಡು ಸಾವಿರ ಅಡಿ ಎತ್ತರವಿರುವ ತಂಪು ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ.

ಮೆಕ್ಕಲು, ಜಂಬಿಟ್ಟಿಗೆ ಜೌಗಿಲ್ಲದ ಕಪ್ಪು ಜೇಡಿ ಮಣ್ಣುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಗಿಡದ ತಾಯಿ ಬೇರು ಭೂಮಿಯ ಆಳಕ್ಕೆ ಇಳಿದರೂ ನೀರನ್ನು ಹೀರಿಕೊಳ್ಳಲು ಭೂಮಿಯ ಮೇಲ್ಭಾಗದಲ್ಲಿಯೇ ಹರಡಿಕೊಂಡಿರುತ್ತವೆ. ಹೀಗಾಗಿ ಅತಿ ಆಳದ ಮಣ್ಣಿನ ಅವಶ್ಯಕತೆ ಇರುವುದಿಲ್ಲ.  ಸಸ್ಯಾಭಿವೃದ್ಧಿಯನ್ನು ಲಿಂಗರೀತಿ ಮತ್ತು ನಿರ್ಲಿಂಗ ರೀತಿಯಲ್ಲಿ ಮಾಡುತ್ತಾರೆ. ನಮಗೆ ಬೇಕಾದ ತಳಿಗಳನ್ನು ಬೀಜದಿಂದ ಪಡೆದು ಬೂದಿಯನ್ನು ಬೆರೆಸಿ ಪಾತಿಗಳಲ್ಲಿ ಬಿತ್ತಬೇಕು.

ಇದು ಸಾಮಾನ್ಯ ಸಸ್ಯಾಭಿವೃದ್ಧಿಯ ಕ್ರಮವಾಗಿದೆ. ಹೀಗೆ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಣ್ಣಿನಿಂದ ತೆಗೆದ ಬೀಜಗಳನ್ನು ತಕ್ಷಣವೇ ಬಿತ್ತನೆ ಮಾಡಬೇಕು. ಹೆಚ್ಚು ದಿನ ಇಟ್ಟರೆ ಮೊಳಕೆ ಒಡೆಯುವ ಸಾಮರ್ಥ್ಯ ಕಳೆದುಕೊಳ್ಳಬಹುದು. ಬೀಜಗಳು ಬಿತ್ತಿದ ಇಪ್ಪತ್ತು ದಿನಗಳ ನಂತರ ಮೊಳಕೆ ಒಡೆಯಲು ಆರಂಭಿಸುತ್ತವೆ. ಅವುಗಳನ್ನು ತೆಗೆದು ಕೊಟ್ಟಿಗೆ ಗೊಬ್ಬರ ಮಿಶ್ರಿತ ಪಾಲಿಥಿನ್ ಕವರ್ ನಲ್ಲಿ ನೆಟ್ಟು ನೆರಳಿನಲ್ಲಿ ಆರೈಕೆ ಮಾಡಬೇಕು. ಗಿಡಗಳು ಬೆಳೆದ ನಂತರ ಮುಂಗಾರಿನಲ್ಲಿ ತೋಟಗಳಲ್ಲಿ ನೆಡಬೇಕು.

ಗಿಡ ನೆಡಲು ಯೋಜಿಸಿದ ಸ್ಥಳದಲ್ಲಿ ಒಂದು ಗುಂಡಿಯಿಂದ ಮತ್ತೊಂದು ಗುಂಡಿಗೆ ಸುಮಾರು 20ರಿಂದ 25 ಅಡಿಯಷ್ಟು ಅಂತರವನ್ನು ಕಾಪಾಡಿಕೊಳ್ಳಬೇಕು. ಎರಡೂವರೆ ಅಡಿ ಆಳ, ಉದ್ದ ಗುಂಡಿಗಳನ್ನು  ತೋಡಿ ಅದರಲ್ಲಿ ಕೊಟ್ಟಿಗೆ ಗೊಬ್ಬರ ಬೆರೆಸಿ ಗಿಡಗಳನ್ನು ನೆಡಬೇಕಾಗುತ್ತದೆ. ಗಿಡಗಳನ್ನು ನೆಟ್ಟ ನಂತರ ಗೊಬ್ಬರ ನೀರು ಹಾಕಿ ಚೆನ್ನಾಗಿ ಆರೈಕೆ ಮಾಡಿದ್ದೇ ಆದರೆ ನಾಲ್ಕೈದು ವರ್ಷಗಳಲ್ಲಿ ಫಸಲು ನೀಡಲು ಆರಂಭಿಸುತ್ತವೆ.

ಕೆಲವು ಗಿಡಗಳು ಒಂಬತ್ತು ಹತ್ತು ವರ್ಷಗಳ ನಂತರ ಫಸಲು ನೀಡುತ್ತವೆ. ಒಂದು ಕಿತ್ತಳೆ ಗಿಡವು ಯಾವುದೇ ರೋಗ ಬಾಧೆಯಿಲ್ಲದೆ ಚೆನ್ನಾಗಿದ್ದರೆ ನಲುವತ್ತಕ್ಕೂ ಹೆಚ್ಚು ವರುಷ ಬದುಕಿ ಫಸಲು ನೀಡಬಲ್ಲದು. ಒಂದು ಗಿಡವು ಅದರ ಸಾಮರ್ಥ್ಯಕ್ಕೆ ತಕ್ಕಂತೆ ಹಣ್ಣುಗಳನ್ನು ಬಿಡುತ್ತದೆ. ಬದಲಾದ ವಾತಾವರಣದಲ್ಲಿ ಗಿಡಕ್ಕೆ ಕೀಟ ಹಾಗೂ ರೋಗಗಳು ತಗಲುತ್ತಿದ್ದು, ಇದರಿಂದ ಅವು ಸಾಯುತ್ತಿವೆ. ಇನ್ನು ಕೆಲಿದೋನಿಯಂ ಸಿಂಕ್ಟಂ ಎಂಬ ಹುಳು ಮತ್ತು ಹುರುಪೆ ಎಂಬ ಕೀಟವು ಕಾಂಡಗಳನ್ನು ಕೊರೆದು ನಾಶಪಡಿಸುತ್ತವೆ.

ಇದರ ಜತೆಗೆ ಚಿಟ್ಟೆ ಹೇನು, ತಿಗಣೆಗಳು ಹಣ್ಣಿನ ರಸವನ್ನು ಹೀರಿ ನಾಶಮಾಡುತ್ತವೆ. ಗಿಡಕ್ಕೆ ಏಕಾಣು ಜೀವಿಯಿಂದ ಬರುವ ಕಜ್ಜಿರೋಗ, ಶಿಲೀಂದ್ರ ರೋಗಗಳು ಬಾಧಿಸುತ್ತವೆ. ಫೈಟಾಪ್ತರ ಜಾತಿಯ ಶಿಲೀಂದ್ರದಿಂದ ಹಾನಿಕಾರಕ ಬ್ರೌನ್ ರಾಟ್ ಗಮ್ಮೋಸಿಸ್ ಅಥವಾ ಫುಟ್ ರಾಟ್ ರೋಗಗಳು ಬಾಧಿಸುತ್ತವೆ. ಈ ರೋಗದ ಮುಖ್ಯ ಲಕ್ಷಣಗಳು ಏನೆಂದರೆ ಕಾಂಡದ ಕೆಳಭಾಗ ಮತ್ತು ಬೇರುಗಳು ಕೊಳೆಯುತ್ತವೆ. ಇನ್ನು ಶೀತ ಹವೆಯಲ್ಲಿ ಹಣ್ಣುಗಳಿಗೆ ಬ್ರೌನ್ ರಾಟ್ ಹರಡಿ ಹಣ್ಣುಗಳು ಕೊಳೆತು ಗಿಡದಿಂದ ಉದುರುತ್ತವೆ. ಗಿಡಕ್ಕೆ  ಕಾಂಡ ಒಣಗುವಿಕೆ, ಎಲೆಗಳಿಗೆ ಮಚ್ಚೆರೋಗ. ಬೂದುರೋಗ ಮೊದಲಾದ ರೋಗಗಳು ಬಾಧಿಸುತ್ತವೆ.

ಇವುಗಳೆಲ್ಲವನ್ನು ರಾಸಾಯನಿಕ ಸಿಂಪಡಣೆ ಮೂಲಕ ನಿಯಂತ್ರಿಸಬೇಕಾಗುತ್ತದೆ. ಕೊಡಗಿನಲ್ಲಿ ಕಿತ್ತಳೆ ಬಗ್ಗೆ ಬೆಳೆಗಾರರು ಕಾಫಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಅದರ ನಡುವೆ ಕರಿಮೆಣಸು ಮತ್ತು ಕಿತ್ತಳೆಯನ್ನು ಬೆಳೆಯುತ್ತಾರೆಯಾದರೂ ವಾಣಿಜ್ಯ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದು ಕಡಿಮೆಯೇ.. ಇದರಿಂದ ಹೆಚ್ಚಿನ ಆದಾಯ ಪಡೆಯುವುದು ಕೊಡಗಿನ ಮಟ್ಟಿಗೆ ಕಷ್ಟಸಾಧ್ಯವಾಗಿದೆ. ಕೊಡಗಿನ ಕಿತ್ತಳೆಗೆ ಒಳ್ಳೆಯ ಹೆಸರಿದ್ದು ಅದನ್ನು ಉಳಿಸಿಕೊಳ್ಳಬೇಕಾದರೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಮತ್ತು ಕಿತ್ತಳೆಯನ್ನು ಬೆಳೆಸಲು ಸರ್ಕಾರ ಕೂಡ ಉತ್ತೇಜನ ನೀಡಬೇಕಾಗಿದೆ.  ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಕೊಡಗಿನ ಕಿತ್ತಳೆ ನೇಪಥ್ಯಕ್ಕೆ ಸರಿಯುವುದರಲ್ಲಿ ಎರಡು ಮಾತಿಲ್ಲ.

 

B M Lavakumar

admin
the authoradmin

Leave a Reply