ArticlesLatest

ಮುಂಗಾರು ಮಳೆಗೆ ದರ್ಶನ ನೀಡುವ ಅಪರೂಪದ ಅತಿಥಿಗಳು… ಇವು ನಿಸರ್ಗದ ಅಳಿದುಳಿದ ಜೀವರಾಶಿಗಳು…

ಮಳೆಗಾಲ ಬಂತೆಂದರೆ ಬೆಟ್ಟಗುಡ್ಡ, ಕಾಡು ಮೇಡುಗಳಲ್ಲಿ ಹೊಸ ಅನುಭವವಾಗುತ್ತವೆ. ಇದ್ದಕ್ಕಿದ್ದಂತೆ ಕಾಡಿನ ನಡುವೆ, ತೋಟಗಳ ಬೇಲಿ ಅಂಚುಗಳಲ್ಲಿ ಅಪರೂಪದ ಅತಿಥಿಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತವೆ. ಹೀಗೆ ಕಾಣಿಸುವ ಅಪರೂಪದ ಅತಿಥಿಗಳ ಪೈಕಿ ಕೆಲವು ನಿರುಪದ್ರವಿಗಳಾಗಿದ್ದರೆ ಮತ್ತೆ ಕೆಲವು ವಿಷಕಾರಿಗಳಾಗಿರುತ್ತವೆ. ಇವುಗಳನ್ನು ಹತ್ತಿರದಿಂದ ನೋಡುವುದೇ ಮಜಾ… ಮಲೆನಾಡಿನವರಿಗೆ ಈ ಜೀವರಾಶಿಗಳೆಲ್ಲವೂ ಪರಿಚಿತವೇ ಆದರೂ ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಂಡು ನಿಬ್ಬೆರಗಾಗಿಸುತ್ತವೆ.

ಹಾಗೆನೋಡಿದರೆ ಈ ಭೂಮಿ ಮೇಲಿರುವ ಕೋಟ್ಯಂತರ ಜೀವ ರಾಶಿಗಳ ನಡುವೆ ನಮಗೆ ಕಾಣಸಿಗುವುದು ಕೆಲವೇ ಕೆಲವು. ಅವು ಕೂಡ ಎಲ್ಲ ಕಾಲದಲ್ಲಿ ನಮಗೆ ಕಾಣಿಸುವುದಿಲ್ಲ. ನಿಸರ್ಗ ಸೃಷ್ಟಿಯಲ್ಲಿ ಜೀವಿಗಳು ಹುಟ್ಟಬೇಕು ಮತ್ತು ಸಾಯಬೇಕು. ಆದರೆ ಬೇಸರದ ಸಂಗತಿಗಳೆಂದರೆ ನಮ್ಮೊಳಗಿದ್ದ ಅದೆಷ್ಟೋ ಜೀವ ರಾಶಿಗಳು ಸದ್ದಿಲ್ಲದೆ ಅಳಿದು ಹೋಗಿವೆ. ಅಳಿದುಳಿದ ಕೆಲವು ಅವಸಾನದ ಅಂಚಿನಲ್ಲಿವೆ. ಹೀಗಿರುವಾಗಿ ಅವು ಕಾಣಿಸಿದರೆ ಖುಷಿಯಾಗುತ್ತದೆ. ಅದರಲ್ಲೂ ಮುಂಗಾರು ಮಳೆ ಸುರಿದಾಗ ಮಲೆನಾಡಿನಲ್ಲಿ ಕೆಲವೊಂದು ಜೀವರಾಶಿಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಇವು ಒಂಥರಾ  ಮುಂಗಾರು ಮಳೆಯ ಅತಿಥಿಗಳು ಎಂದರೆ ತಪ್ಪಾಗಲಾರದು.

ಸಾಮಾನ್ಯವಾಗಿ ಮಲೆನಾಡಿನಲ್ಲಿ ಮಳೆ ಆರಂಭವಾಗುತ್ತಿದ್ದಂತೆಯೇ ಸುರಕ್ಷಿತ ತಾಣಗಳನ್ನು ಅರಸಿ ಪಕ್ಷಿಗಳು (ಕೆಲವು ಪಕ್ಷಿಗಳನ್ನು ಹೊರತುಪಡಿಸಿ), ಜೇನು ನೊಣಗಳು, ಹೀಗೆ ಹಲವು ಜೀವರಾಶಿಗಳು ಹೊರಹೋಗುತ್ತವೆ. ಆದರೆ ಇದೇ ಸಮಯದಲ್ಲಿ ಮಲೆನಾಡಿನ ನಿಸರ್ಗದ ನಡುವಿನಿಂದ ಕೆಲವೊಂದು ಜೀವ ಜಂತುಗಳು ಹೊರ ಬಂದು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ.  ಮಳೆಗಾಲದಲ್ಲಿ ಮಲೆನಾಡಿಗೊಂದು ಸುತ್ತು ಹೊಡೆದರೆ ನಿಸರ್ಗದ ಸುಂದರ ನೋಟ ನಮ್ಮನ್ನು ಮೂಕಸ್ಮಿತರನ್ನಾಗಿಸಿ ಬಿಡುತ್ತದೆ. ಪಕೃತಿಯ ಚೆಲುವೇ ಒಂದು ವಿಸ್ಮಯ. ಅದು ಮೊಗೆದಷ್ಟೂ ಮುಗಿಯದ ಅಕ್ಷಯಪಾತ್ರೆ.

ಮುಂಗಾರು ಮಳೆಗೆ ಯಾವತ್ತಾದರೊಂದು ದಿನ ಹಾಗೆ ಸುಮ್ಮನೆ  ಮಲೆನಾಡಿನ ಕಾಡು, ಗದ್ದೆ ಬಯಲು, ಕಾಫಿ, ಏಲಕ್ಕಿ ತೋಟಗಳ ನಡುವೆ ಹೆಜ್ಜೆ ಹಾಕುತ್ತಾ ಹೋಗಿ ನಿಸರ್ಗದ ವಿಸ್ಮಯಗಳು ಒಂದರ ಮೇಲೊಂದರಂತೆ ತೆರೆದುಕೊಳ್ಳುತ್ತಾ ಹೋಗುತ್ತವೆ. ನಾವು ಯಾವತ್ತೂ ಕಾಣದ ಕೆಲವೊಂದು ಸುಂದರ ನೋಟಗಳು ನಮ್ಮನ್ನು ಬೆರಗುಗೊಳಿಸುತ್ತವೆ. ನಿಸರ್ಗವೇ ಹಾಗೆ ನೋಡನೋಡುತ್ತಲೇ ತನ್ನ ವರಸೆ ಬದಲಿಸಿ ಬಿಡುತ್ತದೆ. ಅದರಾಚೆಗೆ ಹೊಸ ಕ್ರಿಮಿ ಕೀಟ, ಜಂತುಗಳು ಅಲ್ಲೊಂದು ಇಲ್ಲೊಂದು ಕಾಣಿಸಿಕೊಂಡು ಅಚ್ಚರಿಗೆ ತಳ್ಳಿ ಬಿಡುತ್ತವೆ.

ಮಳೆಗಾಲದಲ್ಲಿ ಮಲೆನಾಡಿನಲ್ಲಿ ಹೆಜ್ಜೆ ಹಾಕಿದರೆ ಜೀರುಂಡೆಯ ಸದ್ದು ಕಿವಿಗೆ ಅಪ್ಪಳಿಸುತ್ತಲೇ ಇರುತ್ತದೆ. ಇದರ ಜತೆ ಜತೆಯಲ್ಲಿ ಎಲ್ಲೆಂದರಲ್ಲಿ ರಕ್ತ ಹೀರಲು ಕಾಯುವ ಜಿಗಣೆಗಳು ಭಯ ಹುಟ್ಟಿಸುತ್ತವೆ. ನೀರು ಹರಿಯುವ ಜಾಗಗಳಲ್ಲಿ ಕಲ್ಲು ಬಂಡೆಗಳ ನಡುವೆ, ಬಿಲಗಳಲ್ಲಿ ಅವಿತಿದ್ದ ಏಡಿಗಳು, ಕೆರೆಗಳಲ್ಲಿ, ನೀರಿನ ಹೊಂಡಗಳಲ್ಲಿ ಅವಿತಿದ್ದ ಆಮೆಗಳು ಒಮ್ಮೊಮ್ಮೆ ಮೇಲೆದ್ದು ಬಂದು ದರ್ಶನ ನೀಡುತ್ತವೆ. ಇನ್ನು ಮಳೆ ಬಿದ್ದು ಭೂಮಿ ತೇವವಾದಾಗ ಗಿಡ, ಮರ, ಬೆಟ್ಟಗುಡ್ಡ ಹೀಗೆ ಎಲ್ಲೆಲ್ಲಿಂದಲೂ ಹೊಸ ಅತಿಥಿಗಳು ಗೋಚರಿಸುತ್ತವೆ. ಗೊಣ್ಣೆಹುಳ, ಬಸವನಹುಳ ಸೇರಿದಂತೆ ಹಲವು ಜೀವರಾಶಿಗಳು ತೆವಳುತ್ತಾ ಸಾಗುತ್ತಿರುತ್ತವೆ.

ಸಾಮಾನ್ಯವಾಗಿ ಕೆಲವೊಂದು ಜೀವರಾಶಿಗಳನ್ನು ಹೊರತು ಪಡಿಸಿದರೆ ಇನ್ನು ಕೆಲವು ಮಳೆಗಾಲದಲ್ಲಿ ಮಾತ್ರ ನಮಗೆ ದರ್ಶನ ನೀಡುತ್ತವೆ. ಉಳಿದಂತೆ ಅವು ಎಲ್ಲಿ ಕಳೆದು ಹೋಗಿರುತ್ತವೆಯೋ ಗೊತ್ತಾಗಲಾರದು.  ಮೊದಲೆಲ್ಲ ಮುಂಗಾರು ಆರಂಭದ ದಿನಗಳಲ್ಲಿ ರಾತ್ರಿಯಾಯಿತೆಂದರೆ ಎಲ್ಲೆಂದರಲ್ಲಿ ಮಿಂಚುತ್ತಾ ಹಾರಾಡುವ ಮಿಂಚು ಹುಳುಗಳು ಕಾಣಿಸುತ್ತಿದ್ದವು. ಅವು ಮರ, ಬಿದಿರುಮೆಳೆಗಳಲ್ಲಿ ಕುಳಿತಾಗ ಕಂಡು ಬರುತ್ತಿದ್ದ ದೃಶ್ಯ ಥೇಟ್ ವಿದ್ಯುದ್ದೀಪ ಅಳವಡಿಸಿದಂತೆ ಗೋಚರಿಸುತ್ತಿತ್ತು. ಆದರೆ ಅಂತಹದೊಂದು ದೃಶ್ಯಗಳು ಈಗ ಮಾಯವಾಗಿವೆ. ಇದಕ್ಕೆ ಅತಿಯಾದ ರಾಸಾಯನಿಕ ಬಳಕೆಯೇ ಕಾರಣ ಎನ್ನಬಹುದು.

ನಿಸರ್ಗದಲ್ಲಿ ಹೇರಳವಾಗಿದ್ದ ಜೀವರಾಶಿಗಳಲ್ಲಿ ಕೆಲವು ಉಪದ್ರವಿಯಾಗಿದ್ದರೆ, ಮತ್ತೆ ಕೆಲವು ನಿರುಪದ್ರವಿಯಾಗಿದ್ದವು. ತೋಟ, ಗದ್ದೆ, ಕಾಡುಗಳ ನಡುವೆ ಸಂಚರಿಸುವಾಗ ಇವು ಕಾಣಿಸುತ್ತಿದ್ದವು. ಜನರಿಗೆ ಬಹುತೇಕ ಜಂತುಗಳ ಪರಿಚಯವಿತ್ತು. ಅಷ್ಟೇ ಅಲ್ಲದೆ ಅವುಗಳಲ್ಲಿ ಯಾವುದು ವಿಷ ಜಂತು ಎಂಬುದು ಗೊತ್ತಿತ್ತು. ಹೀಗಾಗಿ ಅವು ಅಲ್ಲಲ್ಲಿ ಕಂಡಾಗ ಏನೂ ಅನಿಸುತ್ತಿರಲಿಲ್ಲ. ನಂತರದ ಕಾಲಘಟ್ಟದಲ್ಲಿ ಆಧುನಿಕತೆಯ ಭರಾಟೆಯಲ್ಲಿ ಕೃಷಿಗೆ ಸಿಂಪಡಿಸುತ್ತಿರುವ ಕೀಟ ನಾಶಕಗಳು, ರಾಸಾಯಿನಿಕ ಗೊಬ್ಬರ ಬಳಕೆ ಹೀಗೆ ಹತ್ತು ಹಲವು ಕಾರಣಗಳಿಂದ ಬಹುತೇಕ ಜೀವರಾಶಿಗಳು ಅಳಿದು ಹೋಗಿವೆ. ಇದರಿಂದ ಕೆಲವೊಮ್ಮೆ ಅವು ನಮ್ಮ ಕಣ್ಣಿಗೆ ಗೋಚರಿಸಿದಾಗ ಅಚ್ಚರಿಯಾಗುತ್ತವೆ ಜತೆಗೆ ಸುದ್ದಿಯಾಗುತ್ತವೆ.

ಕೆಲವೊಂದು ಜೀವಿಗಳು ನೋಡಿದ ತಕ್ಷಣ ಭಯಹುಟ್ಟಿಸಿದರೆ ಮತ್ತೆ ಕೆಲವು ಕುತೂಹಲ ಕೆರಳಿಸುತ್ತವೆ. ಕೆಲವು ನೋಡಲಷ್ಟೆ ಭಯಂಕರ ಆದರೆ ಸಾಧು ಜೀವಿಗಳು. ಇನ್ನು ಕೆಲವು ನೋಡಲು ಸುಂದರ ಆದರೆ ಭಯಂಕರ. ಕೆಲವು ಅಪರೂಪಕ್ಕೆ ನಮ್ಮ ಕಣ್ಣಿಗೆ ಬಿದ್ದಿರುತ್ತವೆ. ಅವುಗಳ ಬಗ್ಗೆ ತಿಳಿಯುತ್ತಾ ಹೋದಂತೆ ಅವುಗಳ ಹಿಂದೆ ಕುತೂಹಲಕಾರಿ ಅಂಶಗಳು ಇರುತ್ತವೆ. ಈ ಭೂಮಿ ಮೇಲೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ. ಹೀಗಾಗಿ ಅವುಗಳನ್ನು ರಕ್ಷಿಸುತ್ತ ನಾವು ಗಮನಹರಿಸಬೇಕಿದೆ. ಕೆಲವೊಂದನ್ನು ಕಂಡ ತಕ್ಷಣ ಹೊಸಕಿ ಹಾಕುವ ಬದಲಿಗೆ ಅವುಗಳನ್ನು ರಕ್ಷಿಸಿ ಕಾಡಿಗೆ ಬಿಡುವ ಕೆಲಸ ಮಾಡಬೇಕಿದೆ. ಆಗ ಅವು ಕೂಡ ನಮ್ಮಂತೆ ಬದುಕಿ ಮುಂದಿನ ತಲೆಮಾರಿಗೂ ಉಳಿಯಲು ಸಾಧ್ಯವಾಗಲಿದೆ. ಆ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ.

 

B.M.Lavakumar

admin
the authoradmin

Leave a Reply