ಸಾಮಾಜಿಕ ಜಾಲ ತಾಣಗಳಲ್ಲಿ ಪುರುಷರಿಗೆ ಬಲೆ ಬೀಸಿ ಅವರೊಂದಿಗೆ ಫ್ರೆಂಡ್ ಶಿಪ್ ಬೆಳೆಸಿ ಅವರನ್ನು ಖೆಡ್ಡಾಕ್ಕೆ ಕೆಡವಿಕೊಂಡು ಬಳಿಕ ಅವರಿಂದ ಹಣ ಪೀಕುವುದು ಈಗ ದೊಡ್ಡದಂಧೆಯಾಗಿ ಬೆಳೆಯುತ್ತಿದೆ. ಈ ಹನಿಟ್ರಾಪ್ ಎಂಬ ಬಲೆಯಲ್ಲಿ ಸಿಲುಕಿ ಒದ್ದಾಡಿದವರು ಅದೆಷ್ಟು ಜನರಿದ್ದಾರೋ ಗೊತ್ತಿಲ್ಲ. ಮಾಯಾಂಗನೆಯನ್ನು ಮುಂದೆ ಬಿಟ್ಟು ಹಣ ಮಾಡುವ ಈ ದಂಧೆಯ ಕಬಂಧ ಬಾಹುಗೆ ಸಿಲುಕಿದ ಪುರುಷರು ಮಾನ ಮರ್ಯಾದೆಗೆ ಹೆದರಿ ಬಾಯಿ ಬಿಡದ ಕಾರಣದಿಂದ ದಂಧೆಕೋರರು ಪೊಲೀಸರಿಗೆ ಸಿಕ್ಕಿ ಬೀಳದೆ ತಪ್ಪಿಸಿಕೊಳ್ಳುತ್ತಿದ್ದಾರೆ.
ಯುವತಿ ಅಥವಾ ಮಹಿಳೆಯರನ್ನು ಬಳಸಿಕೊಂಡು ಅವರ ಮೂಲಕವೇ ನಗ್ನ ಪೋಟೋಗಳನ್ನು ತೆಗೆದು ಅದನ್ನಿಟ್ಟುಕೊಂಡು ಹಣ ಮಾಡುವುದು ಈ ದಂಧೆಕೋರರ ಕೆಲಸವಾಗಿದೆ. ಈ ದಂಧೆಕೋರರು ಮರ್ಯಾದಸ್ಥರನ್ನೇ ಟಾರ್ಗೆಟ್ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಣವಿರುವ ಶ್ರೀಮಂತ ಗಂಡಸರನ್ನೇ ಟಾರ್ಗೆಟ್ ಮಾಡುತ್ತಾರೆ. ಇಲ್ಲಿ ಯುವತಿಯರನ್ನು ಮುಂದಿಟ್ಟುಕೊಂಡು ಗಂಡಸರೇ ಚಾಟ್ ಮಾಡಲು ಆರಂಭಿಸುತ್ತಾರೆ. ಹುಡುಗಿಯೇ ನಮ್ಮೊಂದಿಗೆ ಚಾಟ್ ಮಾಡುತ್ತಾಳೆಂದು ಖುಷಿ ಪಡುವ ಅತ್ತಲಿನ ಬಕ್ರ ಎಲ್ಲವನ್ನು ಹಂಚಿಕೊಳ್ಳುತ್ತಾನೆ. ಒಳ ಮರ್ಮ ಅರಿಯದೆ ತುಂಬಾ ಕ್ಲೋಸ್ ಆಗಿಯೇ ಮುಂದುವರೆಯುತ್ತಾರೆ.
ಆತ ಬುಟ್ಟಿಗೆ ಬೀಳುತ್ತಿದ್ದಾನೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಮುಹೂರ್ತ ನಿಗದಿ ಮಾಡಿ ಖೆಡ್ಡಾಕ್ಕೆ ಕೆಡವಿಕೊಂಡು ಆತನಿಂದ ಹಣ ವಸೂಲಿ ಮಾಡುವುದೇ ದಂಧೆಯಾಗಿದೆ. ಇಂತಹ ಪ್ರಕರಣಗಳು ದೇಶದಾದ್ಯಂತ ನಡೆಯುತ್ತಿದ್ದು ಅದರಲ್ಲೂ ಮೈಸೂರಿನಲ್ಲಿ ಈಗಾಗಲೇ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಸಾಮಾಜಿಕ ಜಾಲತಾಣಗಳು ಆಕ್ಟೀವ್ ಆದಂತೆ ಅದನ್ನು ಸದುಪಯೋಗಕ್ಕಿಂತ ಹೆಚ್ಚಾಗಿ ದುರುಪಯೋಗ ಮಾಡುತ್ತಾ ಆ ಮೂಲಕ ಲಕ್ಷ ಲಕ್ಷ ಹಣ ಪೀಕುವ ದಂಧೆಗೆ ಹಲವು ಕೈಹಾಕಿದ್ದಾರೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಹಣದ ಜತೆಗೆ ಮಾನ ಮರ್ಯಾದೆಯೂ ಹರಾಜಾಗಿ ಬಿಡುತ್ತದೆ.
ಈ ದಂಧೆಯಲ್ಲಿ ತೊಡಗಿರುವವರು ತಮ್ಮ ಜಾಲಕ್ಕೆ ಬೀಳಿಸುವ ವ್ಯಕ್ತಿ ಶ್ರೀಮಂತನಾಗಿರಬೇಕು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರಬೇಕು, ಹೆಂಡತಿ ಮಕ್ಕಳು ಎಲ್ಲರೂ ಇದ್ದು ಮಾನಮರ್ಯಾದೆಗೆ ಅಂಜುವ ವ್ಯಕ್ತಿಯಾಗಿರಬೇಕು. ಇಂತಹ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿಕೊಂಡು ಅವರ ಪೂರ್ವಾಪರ ಅರಿತೇ ಅವರನ್ನು ಖೆಡ್ಡಾಕ್ಕೆ ಕೆಡವಲು ತಂತ್ರ ರೂಪಿಸುತ್ತಾರೆ. ಯುವತಿಯರು, ಮಹಿಳೆಯರು ಇದರಲ್ಲಿ ಪಳಗಿದವರು ಆಗಿರುವುದರಿಂದ ಮತ್ತು ಲಕ್ಷ ಲಕ್ಷ ಹಣ ಪೀಕಿಸುವುದೇ ಉದ್ದೇಶ ಆಗಿರುವುದರಿಂದ ಅವರು ಎಲ್ಲದಕ್ಕೂ ತಯಾರಾಗಿರುತ್ತಾರೆ.
ಯುವತಿ ಅಥವಾ ಮಹಿಳೆಯ ಜತೆ ಕ್ಲೋಸ್ ಆಗಿ ಮುಂದುವರೆಯುವ ಆ ವ್ಯಕ್ತಿಗೆ ಸ್ವಲ್ಪವೂ ಸಂಶಯ ಬಾರದಂತೆ ನಟಿಸುತ್ತಾ ನಂಬಿಕೆ ಹುಟ್ಟಿಸಿ ತಾನಿರುವಲ್ಲಿಗೆ ಕರೆಯಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅಪ್ಪಿತಪ್ಪಿ ಹೆಣ್ಣಿನ ಆಶೆಗೆ ಬಿದ್ದು ಅವಳು ಹೇಳಿದಲ್ಲಿಗೆ ಹೋದರೆ ಅವನ ಕಥೆ ಮುಗಿದಂತೆಯೇ.. ಮೊದಲೆಲ್ಲ ಈ ರೀತಿಯ ಪ್ರಕರಣಗಳು ಕೇವಲ ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದವು. ಇದೀಗ ತಾಲೂಕು, ಗ್ರಾಮೀಣ ಮಟ್ಟಕ್ಕೂ ಬಂದಿರುವುದ ಆತಂಕಕಾರಿಯಾಗಿದೆ.
ಹೆಣ್ಣು ಮಕ್ಕಳು ಹಣಕ್ಕಾಗಿ ಇಂತಹ ಕೀಳು ಮಟ್ಟಕ್ಕೆ ಇಳಿದು ಕ್ರಿಮಿನಲ್ ಗಳಾಗುತ್ತಿರುವುದು ಅನಾಹುತಕಾರಿ ಬೆಳವಣಿಗೆಯಾಗಿದೆ. ಬಹುತೇಕ ಅಪರಾಧ ಚಟುವಟಿಕೆಗಳಲ್ಲಿ ಹೆಣ್ಮಕ್ಕಳು ಭಾಗಿಯಾಗುತ್ತಿರುವುದು ಹೆಚ್ಚುತ್ತಿದೆ. ಇದು ನಿಜಕ್ಕೂ ಒಳ್ಳೆ ಬೆಳವಣಿಗೆಯಲ್ಲ. ಜತೆಗೆ ಇಂತಹ ಜಾಲಗಳನ್ನು ಪತ್ತೆ ಹಚ್ಚಿ ನಾಶ ಮಾಡುವ ಕೆಲಸ ಮಾಡಬೇಕಾಗಿದೆ. ಈಗಾಗಲೇ ಉದ್ಯಮಿಗಳು, ರಾಜಕಾರಣಿಗಳು, ಅಧಿಕಾರಿಗಳು ಈ ವಿಷ ವರ್ತುಲದಲ್ಲಿ ಸಿಕ್ಕಿ ನರಳಾಡುತ್ತಿದ್ದಾರೆ. ಆದರೆ ತಮ್ಮ ಎಲ್ಲಿ ತಮ್ಮ ಮಾನ, ಮರ್ಯಾದೆ, ಗೌರವಕ್ಕೆ ಚ್ಯುತಿ ಬಂದು ಬಿಡುತ್ತದೆಯೋ ಎಂದು ಹೆದರಿ ಬಾಯಿ ಬಿಡುತ್ತಿಲ್ಲ. ಹೀಗಾಗಿ ಇಂತಹ ಜಾಲಗಳು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಿದೆ.
ಇನ್ನಾದರೂ ಸರ್ಕಾರ ಇಂತಹ ಪ್ರಕರಣಗಳು ಪತ್ತೆಯಾದಾಗ ಅದನ್ನು ಗಂಭೀರವಾಗಿ ಪರಿಗಣಿಸಿ ಬೇರು ಸಹಿತ ಕಿತ್ತು ಹಾಕಬೇಕಿದೆ. ಮುಂದೆ ಯಾವತ್ತೂ ಅಂತಹ ಕೃತ್ಯಗಳಿಗೆ ಕೈ ಹಾಕಬಾರದು ಅಲ್ಲದೆ, ಅವರಿಗಾದ ಶಿಕ್ಷೆಯಿಂದ ಬೇರೆಯವರೂ ಅಂತಹ ಕುಕೃತ್ಯಕ್ಕೆ ಕೈಹಾಕಬಾರದು. ಅಂತಹದೊಂದು ಕಠಿಣ ಶಿಕ್ಷೆಯ ಅವಶ್ಯಕತೆಯಿದೆ. ಆದರೆ ಅಂತಹದ್ದು ಯಾವುದೂ ಆಗದ ಕಾರಣದಿಂದಾಗಿ ಈ ಪ್ರಕರಣಗಳು ಆಗಿಂದಾಗ್ಗೆ ನಡೆಯುತ್ತಾ ಸಾಮಾನ್ಯ ಎನ್ನುವಂತಾಗಿದೆ. ಇಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಪ್ರಶ್ನೆಯಾಗಿಯೇ ಉಳಿದು ಹೋಗುತ್ತಿದೆ.
-ಬಿ.ಎಂ.ಲವಕುಮಾರ್