ಈ ಬಾರಿ ಕೊಡಗಿನಲ್ಲಿ ಮುಂಗಾರು ಮಳೆ ಆರಂಭದಲ್ಲಿಯೇ ಭೋರ್ಗರೆದು ಸುರಿಯುವುದರೊಂದಿಗೆ ಹಳ್ಳಕೊಳ್ಳ, ನದಿಯಲ್ಲಿ ಪ್ರವಾಹ ಸೃಷ್ಟಿಸಿ ಜಲಪಾತಗಳಲ್ಲಿ ರುದ್ರನರ್ತನಗೈದು ದಾಖಲೆ ಬರೆದಿದೆ. ಸಾಮಾನ್ಯವಾಗಿ ಈ ವೇಳೆಗೆ ಮಳೆ ಬಿರುಸುಗೊಳ್ಳುತ್ತಿತ್ತು. ಆದರೆ ಈ ವರ್ಷ ಹಾಗಿಲ್ಲ. ಆಗೊಮ್ಮೆ ಈಗೊಮ್ಮೆ ಸುರಿಯುತ್ತಿದ್ದ ರೋಹಿಣಿ ಮಳೆ ನಡುಮಳೆಗಾಲದಲ್ಲಿ ಸುರಿಯುವಂತೆ ಸುರಿದು ಅಚ್ಚರಿ ಮೂಡಿಸಿದೆ. ಅಲ್ಲಿಂದೀಚೆಗೆ ಮಳೆ ಸುರಿಯುತ್ತಲೇ ಇದೆ… ಯಾರೂ ಇಷ್ಟು ಬೇಗೆ ಮಳೆಗಾಲ ಶುರುವಾಗುತ್ತದೆ ಎಂದು ಊಹೆ ಮಾಡಿರಲಿಲ್ಲ. ಹೀಗಾಗಿ ಹತ್ತು ಹಲವು ಸಮಸ್ಯೆಗಳನ್ನು ಎಳೆದು ತಂದಿದೆ.
ಮುಂಗಾರು ಮಳೆ ಅಬ್ಬರಕ್ಕೆ ಜನ ಬೆಚ್ಚಿ ಬಿದ್ದಿದ್ದರೆ, ಪ್ರಕೃತಿಯಲ್ಲಿ ಮಾತ್ರ ಹೊಸದೊಂದು ಪುಳಕ.. ಇಡೀ ಸಸ್ಯರಾಶಿ ಮುಂಗಾರು ಮಳೆಗೆ ತೋಯ್ದು ತಲೆದೂಗುತ್ತಿದ್ದರೆ ಬೆಟ್ಟಗುಡ್ಡ, ಕಾಡು, ಮೇಡು ತೋಟಗಳ ನಡುವೆ ಧುಮ್ಮಿಕ್ಕುವ ಜಲಧಾರೆಗಳು ರುದ್ರನರ್ತನ ಮಾಡುತ್ತಿವೆ. ಇತರೆ ದಿನಗಳಲ್ಲಿ ಹಾಲ್ನೊರೆಯುಕ್ಕಿಸುತ್ತಾ ವಯ್ಯಾರಿಗಳಂತೆ ಬಳುಕುತ್ತಾ ತುಂಟ ನಗು ಬೀರುತ್ತಿದ್ದ ಜಲಧಾರೆಗಳು ಇದೀಗ ವರುಣನ ಅಬ್ಬರಕ್ಕೆ ತಕ್ಕಂತೆ ರೌದ್ರತೆ ಮೆರೆಯುತ್ತಿವೆ. ಹೀಗಾಗಿ ಈ ಸಮಯದಲ್ಲಿ ಇವುಗಳತ್ತ ಹೋಗುವ ಪ್ರಯತ್ನವನ್ನು ಯಾರೂ ಮಾಡದಿರುವುದು ಒಳಿತು..
ಸಾಮಾನ್ಯವಾಗಿ ಮಳೆ ಸುರಿದಾಗಲೇ ಜಲಧಾರೆಗಳನ್ನು ನೋಡಬೇಕೆನ್ನುವ ತವಕ ಹುಟ್ಟುತ್ತದೆ. ಆದರೆ ಅಂತಹ ಹುಚ್ಚು ಸಾಹಸಕ್ಕೆ ಕೈಹಾಕದಿದ್ದರೆ ತುಂಬಾ ಒಳ್ಳೆಯದು. ಮಳೆಗಾಲದ ಈ ಸಂದರ್ಭಗಳಲ್ಲಿ ಕೆಲವೊಂದು ಕಿವಿಮಾತುಗಳನ್ನು ಕೇಳಲೇ ಬೇಕಾಗುತ್ತದೆ. ಪ್ರವಾಸಿಗರು ಮಳೆಗಾಲದಲ್ಲಿ ಜಲಧಾರೆಗಳತ್ತ ಹೋಗಲೇ ಬೇಡಿ. ಯಾವಾಗ ಎಲ್ಲಿ ಗುಡ್ಡ ಕುಸಿತ ಸಂಭವಿಸುತ್ತದೆಯೋ? ರಸ್ತೆ ಇಕ್ಕೆಲಗಳಲ್ಲಿರುವ ಮರಗಿಡಗಳು ಯಾವ ಸಂದರ್ಭದಲ್ಲಿ ಮುರಿದು ಬೀಳುತ್ತವೆ ಎನ್ನುವುದನ್ನು ಹೇಳಲಾಗದು. ಇನ್ನು ಮಳೆ ಹೊತ್ತುಗೊತ್ತಿಲ್ಲದೆ ಸುರಿಯುವುದರಿಂದ ಅಪಾಯಗಳು ಕಟ್ಟಿಟ್ಟ ಬುತ್ತಿ.
ಹೆಚ್ಚಿನವರು ಮಳೆಗಾಲದ ಸೊಬಗನ್ನು ಸವಿಯಲೆಂದೇ ಮಳೆಗಾಲದಲ್ಲಿ ಕೊಡಗಿನತ್ತ ಬರುವುದನ್ನು ಕಾಣಬಹುದು. ಬೇರೆ ದಿನಗಳಲ್ಲಿ ಅದು ಸಮಸ್ಯೆ ತಂದೊಡ್ಡದು. ಆದರೆ ಇದೀಗ ಭಾರೀ ಮಳೆ ಸುರಿಯುತ್ತಿರುವ ಕಾರಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಜಲಧಾರೆಗಳನ್ನು ನೋಡಲೆಂದೇ ಹೆಚ್ಚು ಜನರು ಬರುವುದರಿಂದ ಅವುಗಳ ಬಗ್ಗೆ ಹೇಳಲೇ ಬೇಕಾಗುತ್ತದೆ. ಪ್ರತಿವರ್ಷವೂ ಈ ಸಮಯದಲ್ಲಿ ಮಂದಗತಿಯಲ್ಲಿ ಮಳೆ ಆರಂಭವಾಗುತ್ತಿತ್ತು. ಆಗ ಬೇಸಿಗೆಯಲ್ಲಿ ಸೊರಗಿದ್ದ ಜಲಧಾರೆಗಳು ನಿಧಾನವಾಗಿ ತನ್ನ ಚೆಲುವನನ್ನು ಹೆಚ್ಚಿಸಿಕೊಂಡು ಧುಮ್ಮಿಕ್ಕುತ್ತಿದ್ದವು. ಅದನ್ನು ನೋಡುವುದು ಮಜಾ ಕೊಡುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ. ಆರಂಭದಲ್ಲಿಯೇ ವರುಣ ಅಬ್ಬರಿಸಿದ್ದಾನೆ.. ಹೀಗಾಗಿ ಸಮಸ್ಯೆಗಳು ಹೆಚ್ಚಾಗಿವೆ. ದೂರದಿಂದ ಬರುವವರು ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ.
ಹಾಗೆನೋಡಿದರೆ ನಗರ ಪ್ರದೇಶಗಳಲ್ಲಿ ವಾರದ ಐದು ದಿನಗಳ ಕಾಲ ಹೊರ ಜಗತ್ತನ್ನು ಮರೆತು ದುಡಿಯುವವರು ವೀಕೆಂಡ್ ಬಂತೆಂದರೆ ಎಲ್ಲ ಜಂಜಾಟವನ್ನು ಬದಿಗೊತ್ತಿ ಎರಡು ದಿನಗಳ ಕಾಲ ದೂರದ ಊರುಗಳಿಗೆ ತೆರಳಿ ಒಂದಷ್ಟು ಸಮಯವನ್ನು ಕಳೆದು ಬರುವುದು ಇತ್ತೀಚೆಗಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ಮಾನ್ಸೂನ್ ಟ್ರಿಪ್ ಹೊಸ ಟ್ರೆಂಡ್ ಆಗಿದೆ. ಮಲೆನಾಡಿನ ಬೆಟ್ಟಗುಡ್ಡಗಳ ತಿರುವಿನ ರಸ್ತೆಯಲ್ಲಿ ಸುರಿವ ಮಳೆಗೆ ತಮ್ಮ ಪಾಡಿಗೆ ತಾವು ಸಾಗುತ್ತಾ ಧಾರಾಕಾರ ಮಳೆಗೆ ಮೈಯೊಡ್ಡಿ ಖುಷಿಪಡುವುದು, ಜಲಪಾತಗಳ ಮುಂದೆ ತಮ್ಮನ್ನು ತಾವೇ ಮರೆತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ಮೈಕೊರೆಯುವ ಚಳಿಗೆ ಮೈಯೊಡ್ಡಿ ಕುಪ್ಪಳಿಸುವುದು ಇದೆಲ್ಲವನ್ನು ಮಾಡುತ್ತಾ ಮಜಾ ಉಡಾಯಿಸುವುದು ಕಾಣಿಸುತ್ತಿದೆ. ಹೀಗಾಗಿ ಇಂಥವರು ಭಾರೀ ಮಳೆ ಸುರಿಯುತ್ತಿದೆ ಎಂದು ಗೊತ್ತಿದ್ದರೂ ಇದೇ ಸಮಯದಲ್ಲಿ ಟ್ರಿಪ್ ಇಟ್ಟುಕೊಳ್ಳುವ ಹುಚ್ಚು ಸಾಹಸ ಮಾಡುತ್ತಾರೆ. ಅಂತಹವರಿಗೆ ಸದ್ಯಕ್ಕೆ ಜಲಧಾರೆಗಳತ್ತ ಬರಬೇಡಿ ಎನ್ನವುದು ಕಿವಿಮಾತಾಗಿದೆ.
ಇದೀಗ ಭಾರಿ ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಮಾಮೂಲಿ ಜಲಪಾತಗಳಲ್ಲದೆ ಮಳೆ ನೀರಿನಿಂದ ಅಲ್ಪಾಯುಷಿ ಜಲಧಾರೆಗಳು ಎಲ್ಲೆಂದರಲ್ಲಿ ಸೃಷ್ಟಿಯಾಗಿವೆ. ಇವು ಮಳೆ ಸುರಿದಾಗ ಮಾತ್ರ ಕಾಣಸಿಗುತ್ತವೆ. ಇಂತಹ ಜಲಧಾರೆಗಳು ಅಲ್ಲಲ್ಲಿ ಕಾಣಸಿಗುತ್ತವೆಯಾದರೂ ಮಡಿಕೇರಿ ಮಂಗಳೂರು ರಸ್ತೆ, ಮಡಿಕೇರಿ ಚೆಟ್ಟಳ್ಳಿ ರಸ್ತೆ, ಭಾಗಮಂಡಲ ಕರಿಕೆ ರಸ್ತೆಗಳಲ್ಲಿ ಹೆಚ್ಚು ಹೆಚ್ಚಾಗಿ ಕಂಡು ಬರುತ್ತವೆ. ಇದರಾಚೆಗೂ ಕೆಲವು ಜಲಪಾತಗಳು ನಗರ ನಾಗರೀಕತೆಯ ಗಂಧಗಾಳಿಗೆ ಒಳಗಾಗದೆ ದಟ್ಟ ಕಾಡಿನ ನಡುವೆ… ಮತ್ಯಾರದೋ ಕಾಫಿ, ಏಲಕ್ಕಿ ತೋಟಗಳಲ್ಲಿ… ತಮ್ಮ ಪಾಡಿಗೆ ತಾವು ಎಂಬಂತೆ ಭೋರ್ಗರೆದು ಧುಮುಕುತ್ತವೆ. ಈ ಜಲಪಾತಗಳನ್ನು ಹತ್ತಿರ ಹೋಗಿ ವೀಕ್ಷಿಸುವುದು ಹಾಗೂ ಕ್ಯಾಮರಾದಲ್ಲಿ ಸೆರೆ ಹಿಡಿಯವುದು ಅಷ್ಟು ಸುಲಭದ ಕೆಲಸವಲ್ಲ
ಭಾರೀ ಮಳೆಗೆ ಅಸಂಖ್ಯಾತ ಜಲಧಾರೆಗಳು ಸೃಷ್ಟಿಯಾಗಿ ಯಾರ ಗಮನವನ್ನೂ ಸೆಳೆಯದೆ ತಮ್ಮ ಪಾಡಿಗೆ ತಾವು ಎಂಬಂತೆ ಅಜ್ಞಾತ ಜಲಧಾರೆಗಳಾಗಿ ಉಳಿದು ಬಿಡುತ್ತವೆ. ಇವು ಒಂಥರಾ ಮಳೆಗಾಲದ ಬೆಡಗಿಯರು ಎಂದರೆ ತಪ್ಪಾಗಲಾರದು. ಅದು ಏನೇ ಇರಲಿ ಕೊಡಗು ಸೇರಿದಂತೆ ಮಲೆನಾಡಿನತ್ತ ಈ ಸಮಯದಲ್ಲಿ ಟ್ರಿಪ್ ಹೊರಡುವ ಬಗ್ಗೆ ಆಲೋಚನೆ ಮಾಡಿದ್ದರೆ ಮುಂಜಾಗ್ರತಾ ದೃಷ್ಟಿಯಿಂದ ಅದನ್ನು ಮುಂದೂಡಿ ಮಳೆ ಕಡಿಮೆಯಾದ ಬಳಿಕ ಹೋಗುವುದು ಒಳ್ಳೆಯದು… ಏನಂತಿರಾ?
B M Lavakumar