ರಾಜಕೀಯದ ಅಗ್ನಿಪರೀಕ್ಷೆಯಲ್ಲಿ ಸಿಎಂ ಸಿದ್ದರಾಮಯ್ಯ… ಸ್ವಪಕ್ಷದ ಶಾಸಕರಿಂದಲೇ ಆರೋಪ, ಆಕ್ರೋಶ… ಮುಂದೇನು?

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ದ ಫಾರ್ಟಿ ಪರ್ಸೆಂಟ್ ಕಮೀಷನ್ ಆರೋಪವನ್ನು ಮುಂದಿಟ್ಟುಕೊಂಡು ರಾಜ್ಯದಾದ್ಯಂತ ಜನವಿರೋಧಿ ಅಲೆಯನ್ನು ಸೃಷ್ಟಿಸಿ, ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ನಿರೀಕ್ಷೆಗೂ ಮೀರಿದ ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿದ ಕಾಂಗ್ರೆಸ್ ಇವತ್ತು ದಿನ ಬೆಳಗಾದರೆ ಹಗರಣದ ಆರೋಪ, ಅಭಿವೃದ್ಧಿ ಕಾರ್ಯಗಳ ನಿರ್ಲಕ್ಷ್ಯ, ಸಿಎಂ ಸ್ಥಾನ ಬದಲಾವಣೆಯ ಚರ್ಚೆ, ಸ್ವಪಕ್ಷದ ಶಾಸಕರ ಆಕ್ರೋಶ.. ಹೀಗೆ ಹತ್ತು ಹಲವು ಕಿರಿಕಿರಿಗಳೊಂದಿಗೆ ಆಡಳಿತ ನಡೆಸುವ ಸ್ಥಿತಿಗೆ ಸಿಎಂ ಸಿದ್ದರಾಮಯ್ಯ ಬಂದಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸುತ್ತಿದೆ. ಜತೆಗೆ ಅವರು ರಾಜಕೀಯದ ಅಗ್ನಿಪರೀಕ್ಷೆಯಲ್ಲಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ.
ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಸಿಎಂ ಸಿದ್ದರಾಮಯ್ಯ ಕರ್ನಾಟಕವನ್ನು ಸಿಂಗಾಪುರ ಮಾಡುತ್ತಾರೆ ಎಂದು ನಂಬಿದ್ದವರಿಗೆ ನೆನೆಗುದಿಗೆ ಬಿದ್ದ ಅಭಿವೃದ್ಧಿ ಕಾಮಗಾರಿಗಳು, ಗುಂಡಿಬಿದ್ದ ರಸ್ತೆಗಳು, ಬಿಡುಗಡೆಯಾಗದ ಅನುದಾನದ ಬಗೆಗಿನ ಆರೋಪಗಳ ಜತೆಗೆ ಬೆಲೆ ಏರಿಕೆಯ ಬಿಸಿಯಲ್ಲಿ ಜನಸಾಮಾನ್ಯರು ಹಿಡಿಶಾಪ ಹಾಕುತ್ತಿರುವುದು ಕಂಡು ಬರುತ್ತದೆ. ಅದರಲ್ಲೂ ಸ್ವತಃ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವೇ ಭ್ರಷ್ಟಾಚಾರದ ಆರೋಪ ಬಂದಿರುವುದು, ಮುಡಾ ಹಗರಣದಲ್ಲಿ ನಿವೇಶನಗಳನ್ನು ಹಿಂತಿರುಗಿಸಿದ್ದು, ವಾಲ್ಮೀಕಿ ಹಗರಣದಲ್ಲಿ ಸಚಿವರು ಜೈಲ್ ಗೆ ಹೋಗಿ ಬಂದಿರುವುದು, ಈಗಾಗಲೇ ಮನಿ ಕೊಡು ಮನಿ ಪಡಿ ಆರೋಪಗಳು ಸಚಿವ ಜಮೀರ್ ಖಾನ್ ಮೇಲೆ ಕೇಳಿ ಬಂದಿರುವುದು ಎಲ್ಲವೂ ಕಾಂಗ್ರೆಸ್ ಸರ್ಕಾರಕ್ಕೆ ಸದ್ಯ ಅಂಟಿಕೊಂಡಿರುವ ಕಪ್ಪು ಚುಕ್ಕೆಗಳಾಗಿವೆ. ಇದರಾಚೆಗೆ ಸರ್ಕಾರದ ಬಗ್ಗೆ ಸ್ವತಃ ಆಡಳಿತ ಪಕ್ಷದವರೇ ಮಾತನಾಡುವಂತಾಗಿದೆ..
ಗ್ಯಾರಂಟಿ ಯೋಜನೆಗಳ ಹೊಡೆತ ಸರ್ಕಾರವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಅಧಿಕಾರ ಪಡೆಯುವ ಸಲುವಾಗಿ ಮತದಾರರಿಗೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್ ನಾಯಕರು ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿರಲಿಲ್ಲ. ಅಧಿಕಾರಕ್ಕೆ ಬಂದ ಮೇಲೆ ನೋಡಿಕೊಂಡರಾಯಿತು ಎಂದು ಆಲೋಚಿಸಿದ್ದರು. ಸರ್ಕಾರಕ್ಕೆ ಒಂದಷ್ಟು ಆದಾಯ ತಂದು ಕೊಡುತ್ತಿದ್ದ ಮೂಲವನ್ನೇ ಮುಚ್ಚಿ ಇದೀಗ ಬೊಕ್ಕಸ ತುಂಬಿಸಲು ಸರ್ಕಸ್ ಮಾಡುವಂತಾಗಿದೆ.
ಈಗಾಗಲೇ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಅದನ್ನು ತುಂಬಿಸುವ ಸಲುವಾಗಿ ಬೇರೆಲ್ಲಾ ಮೂಲಗಳಿಂದ ಹಣ ಸಂಗ್ರಹಕ್ಕೆ ಇಳಿಯಲಾಗಿದೆ. ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಲಾಗಿದೆ. ಶಾಸಕರಿಗೆ ನೀಡಬೇಕಾದ ಅನುದಾನಗಳಿಗೆ ಬ್ರೇಕ್ ಹಾಕಲಾಗಿದೆ. ಹೀಗಾಗಿ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಇದರಿಂದ ಕ್ಷೇತ್ರದಲ್ಲಿ ಶಾಸಕರು ಇದ್ದು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ ಕ್ಷೇತ್ರದ ಶಾಸಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ಸರ್ಕಾರ ಮಾತ್ರ ಸರ್ಕಾರದ ಬೊಕ್ಕಸ ಸುಸ್ಥಿತಿಯಲ್ಲಿದೆ. ಯಾವುದೇ ರೀತಿಯ ತೊಂದರೆಯಿಲ್ಲ ಎಂಬ ಮಾತುಗಳನ್ನಾಡುತ್ತಿದೆ. ಆದರೆ ಪರಿಸ್ಥಿತಿ ನೆಟ್ಟಗಿಲ್ಲ ಎಂಬುದನ್ನು ಅರಿಯದಷ್ಟು ಜನ ದಡ್ಡರಲ್ಲ..
2013ರಿಂದ 2018ರವರೆಗೆ ಆಡಳಿತ ನಡೆಸಿದ ಸಿಎಂ ಸಿದ್ದರಾಮಯ್ಯರಿಗೂ ಈಗ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯರಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಒಬ್ಬ ಸಿಎಂ ಅಧಿಕಾರದಲ್ಲಿದ್ದಾಗ ಅದರಲ್ಲೂ ಸಿದ್ದರಾಮಯ್ಯರಂತಹ ಖಡಕ್ ನಾಯಕ ಸಿಎಂ ಸ್ಥಾನದಲ್ಲಿ ಕುಳಿತಿರುವಾಗಲೇ ಸಿಎಂ ಬದಲಾವಣೆಯ ಮಾತುಗಳು ಸ್ವಪಕ್ಷದ ಶಾಸಕರಿಂದಲೇ ಕೇಳಿ ಬರುತ್ತಿದೆ ಎನ್ನುವುದಾದರೆ ಸಿದ್ದರಾಮಯ್ಯ ಅವರ ವರ್ಚಸ್ಸಿನ ಬಗ್ಗೆ ಅನುಮಾನ ಮೂಡುವುದಂತು ನಿಜ. ಅದಕ್ಕಿಂತ ಹೆಚ್ಚಾಗಿ ಅವರ ನಡೆ ನುಡಿಗಳು ಕೂಡ ಅಚ್ಚರಿ ಮೂಡಿಸುತ್ತಿವೆ. ಅವರಲ್ಲಿ ಅಸಹಾಯಕತೆ ಎದ್ದು ಕಾಣಿಸುತ್ತಿದೆ.
ಸಿಎಂ ಅಧಿಕಾರ ಹಂಚಿಕೆ ವಿಚಾರಗಳು ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೇ ಕೇಳಿ ಬರುತ್ತಿವೆ. ಅದನ್ನು ವಿರೋಧ ಪಕ್ಷದವರು ಮಾಡಿದ್ದರೆ ರಾಜಕೀಯವೆಂದು ತಳ್ಳಿ ಹಾಕಬಹುದಿತ್ತು. ಆದರೆ ಸ್ವತಃ ತಮ್ಮದೇ ಪಕ್ಷದವರು ಮಾಡುತ್ತಿದ್ದಾರೆ ಎಂದರೆ ಸಿದ್ದರಾಮಯ್ಯ ದುರ್ಬಲರಾಗಿದ್ದಾರಾ? ಎಂಬ ಪ್ರಶ್ನೆ ಮೂಡುತ್ತದೆ. ಒಂದು ವೇಳೆ ಅಧಿಕಾರ ಹಂಚಿಕೆಯ ಮಾತುಕತೆಗಳು ಹೈಕಮಾಂಡ್ ಮಟ್ಟದಲ್ಲಿ ನಡೆದಿದೆ ಎನ್ನುವುದಾದರೆ ನವೆಂಬರ್ ವೇಳೆಗೆ ಸಿದ್ದರಾಮಯ್ಯರವರು ಅಧಿಕಾರ ಹಸ್ತಾಂತರಿಸುವುದು ಅನಿವಾರ್ಯವಾಗುತ್ತದೆ.
ಸವಾಲಿನ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರು ಒಂದೆಡೆ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಬೇಕು.. ಮತ್ತೊಂದಡೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು.. ಇಷ್ಟೇ ಅಲ್ಲದೆ ಮುಂದಿನ ಬಿಹಾರದ ವಿಧಾನಸಭಾ ಚುನಾವಣೆಗೂ ಹೈಕಮಾಂಡ್ ಗೆ ಇಲ್ಲಿಂದಲೇ ಸಂಪನ್ಮೂಲ ಕ್ರೋಢೀಕರಿಸಬೇಕಾದ ಒತ್ತಡವೂ ಇರುವುದರಿಂದಾಗಿ ಇದೆಲ್ಲವನ್ನು ಒಟ್ಟೊಟ್ಟಿಗೆ ಮಾಡಬೇಕಾದ ಅನಿವಾರ್ಯತೆಗೆ ಸಿಕ್ಕಿ ಒದ್ದಾಡಬೇಕಾಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಮುಗ್ಗಟ್ಟು ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ತೈಲಬೆಲೆ ಗಗನಕ್ಕೇರಿದರೆ ಆಗ ಕೆಎಸ್ ಆರ್ ಟಿಸಿ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲದಂತಾಗಿದೆ.
ಈಗಾಗಲೇ ಬಸ್ ದರ ಏರಿಕೆ ಬಿಸಿ ಪುರುಷ ಪ್ರಯಾಣಿಕರಿಗೆ ತಟ್ಟಿದೆ. ಅದರಾಚೆಗೆ ಅಗತ್ಯ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುವ ಕಾರ್ಮಿಕರು, ಕೂಲಿ ಕೆಲಸಗಾರರು ಈಗಾಗಲೇ ಸಂಕಷ್ಟಕ್ಕೀಡಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಂಧನಕ್ಕೆ ಕೊರತೆಯುಂಟಾದರೆ ಆಗ ಹೇಗೆ ನಿಭಾಯಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ರಾಜ್ಯದಲ್ಲಿ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು ಜನ ಅದರ ಫಲಗಳನ್ನು ಪಡೆಯುತ್ತಿದ್ದರೂ ಅದರ ಬಗ್ಗೆ ವಿರೋಧವಂತೂ ಇದ್ದೇ ಇದೆ. ಇದರಾಚೆಗೆ ಮುಸ್ಲಿಂ ಒಲೈಕೆಯಲ್ಲಿ ತೊಡಗಿಸಿಕೊಂಡು ಹಿಂದೂ ವಿರೋಧಿ ಧೋರಣೆ ತಾಳುತ್ತಿದೆ ಎಂಬ ಆರೋಪ ಮುನ್ನಲೆಯಲ್ಲಿದೆ. ಇನ್ನು ಒಕ್ಕಲಿಗ ಮತ್ತು ಲಿಂಗಾಯಿತ ನಾಯಕರ ವಿರೋಧದ ನಡುವೆಯೂ ಹತ್ತು ವರ್ಷಗಳ ಹಿಂದಿನ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿದ್ದ ಕಾಂತರಾಜು ಆಯೋಗದ ವರದಿಯನ್ನೂ ಜಾರಿಗೆ ತಂದೇ ತರುತ್ತೇವೆ ಎಂದು ಬೊಬ್ಬಿರಿದಿದ್ದ ಸಿಎಂ ಸಿದ್ದರಾಮಯ್ಯ ಸೇರಿದಂತೆ ದಲಿತ, ಹಿಂದುಳಿದ ಸಚಿವರು ಮತ್ತು ಶಾಸಕರು ಇದೀಗ ಹೈಕಮಾಂಡ್ ಮಾತಿಗೆ ತೆಪ್ಪಗಾಗಿ ಮರು ಸರ್ವೆಗೆ ಹೊರಟಿರುವುದು ರಾಜ್ಯ ಸರ್ಕಾರವನ್ನು ಅದರಲ್ಲೂ ಸಿಎಂ ಸಿದ್ದರಾಮಯ್ಯನವರನ್ನು ಅನುಮಾನದಿಂದ ನೋಡುವಂತಾಗಿದೆ.
ಈ ನಡುವೆ ಅನುದಾನ ಸಿಗದೆ ಪರದಾಡುತ್ತಿರುವ ತಮ್ಮದೇ ಪಕ್ಷದ ಶಾಸಕರಾದ ಬಿ.ಆರ್.ಪಾಟೀಲ್, ರಾಜುಕಾಗೆ ಮೊದಲಾದವರು ಆಕ್ರೋಶ ಹೊರಹಾಕಿದರೆ, ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೇ ಸರ್ಕಾರದಲ್ಲಿ ಹಣವಿಲ್ಲ ಎಂಬುದನ್ನು ಹೇಳಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಸದ್ಯ ಸಿಎಂ ಸಿದ್ದರಾಮಯ್ಯ ರಾಜಕೀಯ ಬದುಕಿನ ಅಗ್ನಿಪರೀಕ್ಷೆಯಲ್ಲಿದ್ದಾರೆ ಎನ್ನುವುದು ಸುಲಭವಾಗಿ ಗೊತ್ತಾಗುತ್ತಿದೆ.. ಮುಂದೇನು? ಕಾದು ನೋಡೋಣ..
B.M.Lavakumar