ಮುಂಗಾರು ಮಳೆಗೆ ಮಿಂದೆದ್ದ ಚಾಮುಂಡಿಬೆಟ್ಟ… ಆಷಾಢದಲ್ಲಿ ಭಕ್ತರಿಗೆ ದರ್ಶನ ನೀಡಲು ಸಜ್ಜಾದ ಚಾಮುಂಡೇಶ್ವರಿ!

ಮೈಸೂರು: ಮುಂಗಾರು ಮಳೆ ಚಾಮುಂಡಿಬೆಟ್ಟವನ್ನು ತೊಯ್ದಿದೆ.. ಹೀಗಾಗಿ ಇಡೀ ಬೆಟ್ಟ ಪ್ರದೇಶ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದು, ಭಕ್ತರು, ಪ್ರವಾಸಿಗರು ಸೇರಿದಂತೆ ನಿಸರ್ಗ ಪ್ರೇಮಿಗಳಿಗೆ ಮುದನೀಡುತ್ತಿದೆ.. ವನಸಿರಿಯ ನಡುವಿನ ಕುಳಿರ್ ಗಾಳಿ ಮೈಮನಕ್ಕೆ ತಂಪು ನೀಡಿದರೆ ಅದರಾಚೆಗಿನ ಮಂಜಿನ ಸಿರಿ ಖುಷಿ ಕೊಡುತ್ತಿದೆ.. ಮರಗಿಡಗಳ ಹಸಿರ ಲೋಕದೊಳಗಿಂದ ಕೇಳಿ ಬರುವ ಹಕ್ಕಿಗಳ ಇಂಚರ ಮಲೆನಾಡಿನಲ್ಲಿ ನಡೆದಾಡಿದ ಅನುಭವವನ್ನು ತಂದುಕೊಡುತ್ತಿದೆ… ಚಾಮುಂಡಿಬೆಟ್ಟವೇ ಹಾಗೆ ಆಷಾಢ ಬಂತೆಂದರೆ ಸಾಕು ನಿಸರ್ಗದ ಸ್ವರ್ಗವನ್ನೇ ಧರೆಗೆ ಎಳೆದು ತರುತ್ತದೆ.
ಈಗ ಆಷಾಢ ಆರಂಭವಾಗಿದೆ.. ಈ ಸಮಯದಲ್ಲಿ ಚಾಮುಂಡಿಬೆಟ್ಟದತ್ತ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಅದರಲ್ಲೂ ಆಷಾಢದ ಶುಕ್ರವಾರದಂತು ಭಕ್ತಸಾಗರವೇ ಚಾಮುಂಡಿಬೆಟ್ಟವನ್ನು ಆವರಿಸಿಕೊಳ್ಳುತ್ತದೆ. ಅವತ್ತು ತಾಯಿಚಾಮುಂಡೇಶ್ವರಿಯ ದರ್ಶನಕ್ಕಾಗಿ ಮುಂಜಾನೆಯಿಂದಲೇ ಭಕ್ತಸಾಗರ ಹರಿದು ಬರುತ್ತದೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಮಾಡಿ ಹೊರ ಬರುತ್ತಿದ್ದರೆ ಮೈಮನದಲ್ಲಿ ತೃಪ್ತಿಯ ಭಾವ ಮೂಡುತ್ತದೆ. ಸದ್ಯ ಮೈಸೂರು ನಗರದಲ್ಲಿ ನಿಂತು ಚಾಮುಂಡಿಬೆಟ್ಟದತ್ತ ಕಣ್ಣು ಹಾಯಿಸಿದರೆ ಚಾಮುಂಡಿಬೆಟ್ಟ ಪಚ್ಚೆ ಸೀರೆಯನ್ನುಟ್ಟ ಷೋಡಷಿಯಿಂತೆ ಕಂಗೊಳಿಸುತ್ತಿರುವುದು ಗೋಚರಿಸುತ್ತಿದ್ದು, ಈ ಸುಂದರ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳುವುದೇ ಒಂಥರಾ ಹಬ್ಬದಂತೆಯೇ..
ಈ ಬಾರಿ ಬೇಸಿಗೆಯಲ್ಲಿ ಆಗಾಗ್ಗೆ ಮಳೆ ಸುರಿದ ಕಾರಣದಿಂದಾಗಿ ಇಡೀ ಚಾಮುಂಡಿಬೆಟ್ಟ ಹಸಿರಾಗಿಯೇ ಉಳಿಯಲು ಸಹಕಾರಿಯಾಗಿದೆ. ಈ ಸುಂದರ ಹಸಿರುವನದೊಳಗೆ ಹೆಜ್ಜೆ ಹಾಕುವುದು ಹೊಸ ಅನುಭವ ನೀಡುತ್ತಿದೆ. ಅದರಲ್ಲೂ ನಸುಕಿನಲ್ಲಿ ಒಬ್ಬರಿಗೊಬ್ಬರು ಕಾಣದಷ್ಟು ದಟ್ಟವಾದ ಮಂಜಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ ಬೀಸಿ ಬರುವ ತಂಗಾಳಿ ಮುದ ನೀಡುತ್ತಿರುತ್ತದೆ. ಸಣ್ಣಗೆ ಮೈನಡುಗಿಸುವ ಚಳಿ ಇನ್ನಷ್ಟು ಖುಷಿಕೊಡುತ್ತದೆ.
ಹಾಗೆನೋಡಿದರೆ ಆಷಾಢ ಮಾಸ ಚಾಮುಂಡೇಶ್ವರಿಗೆ ಜನುಮ ಮಾಸದ ಸಂಭ್ರಮದ ಕಾಲವಾಗಿದ್ದು, ಈ ಕಾಲದಲ್ಲಿ ತಾಯಿ ಚಾಮುಂಡೇಶ್ವರಿ ತನ್ನ ದರ್ಶನ ಬಯಸಿ ಬರುವ ಭಕ್ತರಿಗಾಗಿಯೇ ನಿಂತಿದ್ದಾಳೆಯೇನೋ ಎಂಬಂತೆ ಗೋಚರವಾಗುತ್ತದೆ. ಆಷಾಢ ಶುಕ್ರವಾರದಂದು ದೇವಾಲಯದ ಸುತ್ತಲೂ ಸಾಗರೋಪಾದಿಯಲ್ಲಿ ನೆರೆಯುವ ಭಕ್ತರು ದರ್ಶನಕ್ಕಾಗಿ ಹಾತೊರೆಯುತ್ತಿದ್ದರೆ, ಇತ್ತ ಮುಂಜಾನೆಯೇ ಸ್ನಾನಾದಿಗಳನ್ನು ಮಾಡಿ ಮಡಿಯನ್ನುಟ್ಟು ಬಂದ ಮಹಿಳೆಯರು, ಪುರುಷರು, ಮಕ್ಕಳು, ಪಾದದಲ್ಲಿ ಪೂಜೆ ಮಾಡಿ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ ಪ್ರತಿ ಮೆಟ್ಟಿಲಿಗೆ ಕುಂಕುಮ, ಅರಸಿನವನ್ನಿಟ್ಟರೆ, ಮತ್ತೆ ಕೆಲವರು, ಹೂವು, ಕರ್ಪೂರ ಹಚ್ಚುತ್ತಾ ಮೆಟ್ಟಿಲೇರುತ್ತಾರೆ. ಇವರ ನಡುವೆ ಕಠಿಣ ಹರಕೆ ಹೊತ್ತವರು ಮಂಡಿಯಲ್ಲೇ ಮೆಟ್ಟಿಲೇರಿ ಹರಕೆ ತೀರಿಸುತ್ತಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸುವುದರಿಂದ ಪ್ಲಾಸ್ಟಿಕ್ ಮುಕ್ತಗೊಳಿಸಿ ಸ್ವಚ್ಛತೆ ಕಾಪಾಡುವುದು ಬಹುಮುಖ್ಯವಾಗಿದೆ. ಪ್ರವಾಸಿಗರು ಬೆಟ್ಟದ ನಂದಿ ಸೇರಿದಂತೆ ಇತರೆ ವ್ಯೂ ಪಾಯಿಂಟ್ ಗಳಲ್ಲಿ ಸಮಯ ಕಳೆಯುವುದರಿಂದ ಅಲ್ಲಿಯೇ ಪ್ಲಾಸ್ಟಿಕ್, ಬಾಟಲಿ, ಕವರ್ ಗಳು ಸೇರಿದಂತೆ ಕಸವನ್ನು ಎಸೆದು ಹೋಗುವುದು ಮಾಮೂಲಿಯಾಗಿದೆ. ಇದನ್ನು ತಡೆಯಲು ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಈ ಬಾರಿ ಆಷಾಢದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದೆ. ಹೀಗೆ ಆಗಮಿಸುವವರಿಗೆ ಹಲವು ರೀತಿಯ ಅನುಕೂಲತೆಯನ್ನು ಮಾಡಲಾಗಿದೆ. ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಿದರೆ ಅಷ್ಟೇ ಸಾಕು.
ಇನ್ನು ಚಾಮುಂಡಿಬೆಟ್ಟ ಮತ್ತು ಚಾಮುಂಡೇಶ್ವರಿ ದೇವಸ್ಥಾನದ ಬಗ್ಗೆ ನೋಡಿದ್ದೇ ಆದರೆ ಚಾಮುಂಡೇಶ್ವರಿ ದುಷ್ಟರ ಸಂಹಾರ ಮತ್ತು ಶಿಷ್ಟರ ರಕ್ಷಣೆಗಾಗಿ ಇಲ್ಲಿ ನೆಲೆ ನಿಂತಿರುವುದು ಗೋಚರಿಸುತ್ತದೆ. ಚಾಮುಂಡೇಶ್ವರಿ ಇಲ್ಲಿ ನೆಲೆಸುವ ಮುನ್ನ ಈ ಬೆಟ್ಟವನ್ನು ಮಹಾಬಲಾದ್ರಿ ಎಂದು ಕರೆಯಲಾಗುತ್ತಿತ್ತಂತೆ. ಇವತ್ತಿಗೂ ಪ್ರಾಚೀನ ಮಹಾಬಲೇಶ್ವರ ದೇವಸ್ಥಾನ ಇಲ್ಲಿದೆ. ಮೊದಲಿದ್ದ ಮಹಾಬಲಾದ್ರಿ ಬೆಟ್ಟ ಚಾಮುಂಡೇಶ್ವರಿ ನೆಲೆ ನಿಂತ ಬಳಿಕ ಚಾಮುಂಡಿಬೆಟ್ಟವಾಗಿದೆ. ದೇವಿ ಮಹಾತ್ಮೆ ಕಥೆಯ ಪ್ರಕಾರ ಬ್ರಹ್ಮ-ವಿಷ್ಣು-ಮಹೇಶ್ವರರ ಶಕ್ತಿದೇವತೆಯಾಗಿ, ಅಷ್ಟದಳ ಪರ್ವತಗಳಲ್ಲಿ ಪಶ್ಚಿಮದಳದ ಮಧ್ಯಭಾಗದ ಶೃಂಗದಲ್ಲಿಯೇ ಆದಿಶಕ್ತಿ ಸ್ವರೂಪಿಣಿಯಾಗಿ ಮಹಿಷಾಸುರನೆಂಬ ದುಷ್ಟ ರಕ್ಕಸವನ್ನು ಸಂಹರಿಸಿ ಚಾಮುಂಡಾ ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದು ಚಾಮುಂಡೇಶ್ವರಿ ನೆಲೆ ನಿಂತಳು ಎಂಬುದು ತಿಳಿದು ಬರುತ್ತದೆ.
ಚಾಮುಂಡೇಶ್ವರಿ ದೇವಸ್ಥಾನ ಚೌಕಾಕೃತಿಯಲ್ಲಿ ನಿರ್ಮಾಣವಾಗಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿರುವ ದೇವಸ್ಥಾನ, ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಮತ್ತು ಪ್ರಾಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ ‘ಗೋಪುರ’ ಮತ್ತು ಗರ್ಭಗುಡಿಯ ಮೇಲೆ ‘ವಿಮಾನ’ ಶಿಖರಗಳಿವೆ. ಏಳು ಅಂತಸ್ತುಗಳ ಗೋಪುರ 19ನೇ ಶತಮಾನದಲ್ಲಿ ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದೆ. ಶಿಖರದ ಮೇಲೆ ಏಳು ಚಿನ್ನ ಲೇಪಿತ ಕಲಶಗಳನ್ನಿಡಲಾಗಿದೆ.
ದೇಗುಲದ ಗರ್ಭಗುಡಿಯಲ್ಲಿ ಮಹಿಷಮರ್ಧಿನಿಯಾದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹವು ಬಹಳಷ್ಟು ಪುರಾತನವಾದುದ್ದಾಗಿದೆ. ಈ ವಿಗ್ರಹವನ್ನು ಮಾರ್ಕಂಡೇಯ ಋಷಿಗಳು ಸ್ಥಾಪಿಸಿದರೆಂದು ಪುರಾಣದ ಕಥೆ ಹೇಳುತ್ತದೆ. ಯದುಕುಲದ ದೇವತೆಯಾಗಿ ಬೆಳೆದು ಬಂದಿರುವ ಶ್ರೀ ಚಾಮುಂಡೇಶ್ವರಿಗೆ ಮೈಸೂರಿನ ಮಹಾರಾಜರು ಹಲವು ಬಗೆಯ ಬೆಲೆಬಾಳುವ ಹಾಗೂ ಅಪರೂಪದ ಕಾಣಿಕೆಗಳನ್ನು ಹರಕೆಯಾಗಿ ಒಪ್ಪಿಸಿರುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: ಭಕ್ತರ ಇಷ್ಟಾರ್ಥ ನೆರವೇರಿಸುವ ಚಾಮುಂಡಿಬೆಟ್ಟದ ತಾಯಿಗೆ ನಮೋ ಎನ್ನಿ…
B M Lavakumar