ಚಾಮುಂಡಿಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ… ತಾಯಿಯ ದರ್ಶನಕ್ಕೆ ತೆರಳುವವರಿಗೆ ಒಂದಷ್ಟು ಮಾಹಿತಿ!

ಮೈಸೂರು: ಆಷಾಢ ಮಾಸ ಶುರುವಾಗಿ ಮೊದಲ ಶುಕ್ರವಾರದ ಸಂಭ್ರಮದಲ್ಲಿ ಭಕ್ತರು ತೇಲುತ್ತಿದ್ದು, ಚಾಮುಂಡಿಬೆಟ್ಟಕ್ಕೆ ಸಹಸ್ರಾರು ಮಂದಿ ಆಗಮಿಸುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಾರಿ ಜೂ.27, ಜು.4, ಜು.11, ಜು.18ರಂದು ಆಷಾಢ ಶುಕ್ರವಾರ, ಜು.17ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯೋತ್ಸವ ನಡೆಯಲಿದೆ. ಈ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲಿದ್ದಾರೆ. ಭಕ್ತರಿಗೆ ಏನೇನು ಅನುಕೂಲತೆಗಳನ್ನು ಕಲ್ಪಿಸಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ
ಈಗಾಗಲೇ ಚಾಮುಂಡಿಬೆಟ್ಟದಲ್ಲಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಢ ಶುಕ್ರವಾರದ ಪೂಜಾ ಕೈಂಕರ್ಯಕ್ಕೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದ್ದು ಮೊದಲ ಶುಕ್ರವಾರವಾದ ಜೂ.27ರಂದು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮುಂಜಾನೆ 3 ಗಂಟೆಯಿಂದಲೇ ಪೂಜಾ ಕೈಕಂರ್ಯ ನಡೆಯಲಿದ್ದು, ಬೆಳಗ್ಗೆ 5.30ರಿಂದ ರಾತ್ರಿ 10.30ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಾಮುಂಡೇಶ್ವರಿಗೆ ನಾಲ್ಕು ವಾರವು ಲಕ್ಷ್ಮಿಅಲಂಕಾರ ಮಾಡಲಾಗುತ್ತದೆ ಎಂದು ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ಧೀಕ್ಷಿತ್ ಹೇಳಿದ್ದಾರೆ.
ಆಷಾಢ ಶುಕ್ರವಾರದಂದು ದೇಗುಲಕ್ಕೆ ಭೇಟಿ ನೀಡುವವರಿಗೆ ತಾಯಿಯ ದರ್ಶನ ಮಾಡಲು ಯಾವುದೇ ರೀತಿಯ ಪಾಸ್ ವ್ಯವಸ್ಥೆ ಇರುವುದಿಲ್ಲ. ಧರ್ಮ ದರ್ಶನ, 300 ರೂ. ಹಾಗೂ 2000 ರೂ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಶಿಷ್ಟಾಚಾರದ ವ್ಯಾಪ್ತಿಗೆ ಬರುವವರಿಗೆ ಮಾತ್ರ ಪ್ರವೇಶವಿದೆ. ಇವರನ್ನು ಹೊರತು ಪಡಿಸಿ ಶುಕ್ರವಾರ ಶನಿವಾರ, ಭಾನುವಾರದಂದು ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಆದರೆ, ಬೆಟ್ಟದಲ್ಲಿ ವಾಸ ಮಾಡುವ ಜನರು ಗುರುತಿನ ಪತ್ರ ತೋರಿಸಿ ಓಡಾಡಲು ಅವಕಾಶ ಮಾಡಿಕೊಡಲಾಗಿದೆ.
ಚಾಮುಂಡಿಬೆಟ್ಟಕ್ಕೆ ತೆರಳುವವರಿಗೆ ಲಲಿತ್ ಮಹಲ್ ಪ್ಯಾಲೇಸ್ ಮೈದಾನದಲ್ಲೇ ದರ್ಶನದ ಟಿಕೆಟ್ಗಳನ್ನು ನೀಡಲಾಗುತ್ತದೆ. 300 ರೂ, ಹಾಗೂ 2 ಸಾವಿರ ರೂ., ಮೌಲ್ಯದ ಟಿಕೆಟ್ ಪಡೆದವರನ್ನು ಹಾಗೂ ಧರ್ಮ ದರ್ಶನ ಪಡೆಯುವ ಭಕ್ತರನ್ನು ನಿಲ್ದಾಣದಿಂದಲೇ ಪ್ರತ್ಯೇಕವಾದ ಬಸ್ಗಳಲ್ಲಿ ಕರೆ ತರಲಾಗುತ್ತದೆ. ಇದಕ್ಕಾಗಿ ಮೂರು ಪ್ರತ್ಯೇಕ ಸಾಲುಗಳನ್ನು ಮಾಡಲಾಗಿದೆ. ಬೆಟ್ಟದ ಮೇಲೆ ಬರುವ ಬಸ್ಸುಗಳು ಧರ್ಮ ದರ್ಶನ ಪಡೆಯುವ ಭಕ್ತರನ್ನು ಚಾಮುಂಡಿ ಬೆಟ್ಟದ ಪ್ರವೇಶ ದ್ವಾರದಲ್ಲಿ ಇಳಿಸುತ್ತವೆ. ಅಲ್ಲಿಂದ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು. ಭಕ್ತರು ಸರತಿ ಸಾಲಿನಲ್ಲಿ ಹೋಗಬೇಕು.
ಇದನ್ನೂ ಓದಿ: ಮುಂಗಾರು ಮಳೆಗೆ ಮಿಂದೆದ್ದ ಚಾಮುಂಡಿಬೆಟ್ಟ…
ಇನ್ನೂ 300 ರೂಪಾಯಿ ಟಿಕೆಟ್ ಪಡೆದುಕೊಂಡಿರುವವರು ಮಲ್ಟಿಲೆವಲ್ ಪಾರ್ಕಿಂಗ್ ಬಳಿ ಇರುವ ಬಸ್ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಸರತಿ ಸಾಲಿನಲ್ಲಿ ಹೋಗಬೇಕು. 2000 ರೂ ಟಿಕೆಟ್ ಪಡೆದುಕೊಂಡಿರುವವರು ಮಹಿಷಾಸುರ ಪ್ರತಿಮೆಯ ಮುಂಭಾಗದಿಂದ ದೇವಸ್ಥಾನ ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಲಲಿತ್ ಮಹಲ್ ಪ್ಯಾಲೇಸ್ ಬಳಿ ಬಸ್ ಹತ್ತುವಾಗಲೇ ತಮ್ಮ ಪಾದರಕ್ಷೆಗಳನ್ನು ಬಿಡಬೇಕು. ಇದಕ್ಕಾಗಿ ಕೌಂಟರ್ ತೆರೆಯಲಾಗಿದೆ.
ಧರ್ಮದರ್ಶನದ ಸಾಲಿನಲ್ಲಿ ಬರುವ ಭಕ್ತಾಧಿಗಳಿಗೆ ಉಚಿತವಾಗಿ ಡ್ರೈ ಫ್ರೂಟ್ಸ್, ಬಾದಾಮಿ ಹಾಲು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೆಲವು ಕಡೆ ಶೌಚಾಲಯಗಳನ್ನು ತೆರೆಯಲಾಗಿದೆ. ಇದೇ ಸಾಲಿನಲ್ಲಿ ಮಾರಾಟದ ಮಳಿಗೆಗಳನ್ನು ತೆರೆಯಲಾಗಿದೆ. ಇಲ್ಲಿ ನಂದಿನಿ ಉತ್ಪನ್ನಗಳು, ಗಾಜಿನ ನೀರಿನ ಬಾಟಲ್, ಕಾಫಿ ಮಾರಾಟ ಮಾಡಲಾಗುತ್ತದೆ. ದೇವಿಯ ದರ್ಶನ ಪಡೆಯುವ ಎಲ್ಲ ಭಕ್ತರಿಗೂ ಕುಂಕುಮ ಪ್ರಸಾದ, ಮುತ್ತೈದೆಯರಿಗೆ ಮಡಿಲಕ್ಕಿ ಪ್ಯಾಕೆಟ್ ಗಳನ್ನು ಉಚಿತವಾಗಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡಲಾಗುತ್ತದೆ.
ಬೆಟ್ಟದ ಪಾದದ ಮೂಲಕ ಸಾವಿರ ಮೆಟ್ಟಿಲು ಹತ್ತಿಕೊಂಡು ಬೆಟ್ಟಕ್ಕೆ ತೆರಳುವ ಭಕ್ತರಿಗೆ ನೇರ ದರ್ಶನದ ಅವಕಾಶವನ್ನು ಕಲ್ಪಿಸಲಾಗುತ್ತದೆ. ಮೆಟ್ಟಿಲ ಬಳಿಯಿಂದಲೇ ಬ್ಯಾರಿಕೇಡ್ ಅಳವಡಿಸಿ, ಪ್ರತ್ಯೇಕ ಸರತಿ ಸಾಲನ್ನು ಮಾಡಲಾಗಿದೆ. ಇಲ್ಲಿಂದ ಭಕ್ತರು ದೇವಾಲಯವನ್ನು ಪ್ರವೇಶ ಮಾಡಿ, ದೇವಿಯ ದರ್ಶನ ಮಾಡಬಹುದಾಗಿದೆ. ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಉತ್ಸವಮೂರ್ತಿ ಸಮೀಪ, ಗರ್ಭಗುಡಿ ಮತ್ತು ಪ್ರಾಂಗಣದಲ್ಲಿ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಛಾಯಾಚಿತ್ರ ತೆಗೆಯುವುದು ಮತ್ತು ರೀಲ್ಸ್ ಮಾಡುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬನ್ನಿ.. ತಾಯಿಗೆ ನಮೋ ಎನ್ನಿ…
ಈ ಕಾನೂನನ್ನು ಉಲ್ಲಂಘನೆ ಮಾಡಿದಲ್ಲಿ ಮೊಬೈಲ್ ಮತ್ತು ಕ್ಯಾಮೆರಾಗಳನ್ನು ಶಾಶ್ವತವಾಗಿ ವಶಪಡಿಸಿಕೊಳ್ಳಲಾಗುವುದು. ಇನ್ನು ಮುಂದೆ ಪ್ರಾಧಿಕಾರದ ವತಿಯಿಂದ ಉತ್ಸವ ಮೂರ್ತಿಯ ಫೋಟೋ ಹಾಗೂ ವೀಡಿಯೋ ಚಿತ್ರೀಕರಿಸಿ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗುವುದು. ಪ್ರತಿ ವರ್ಷ ಮಲ್ಟಿ ಲೆವಲ್ ಪಾರ್ಕಿಂಗ್ ಜಾಗದಲ್ಲಿ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ಕಾರ್ಯ ನಡೆಯುತ್ತಿತ್ತು. ಈ ಬಾರಿ ಅರಣ್ಯ ಮಾಹಿತಿ ಭವನದ ಆವರಣವನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮೊದಲ ಶುಕ್ರವಾರ ಪ್ರಾಧಿಕಾರದ ವತಿಯಿಂದಲೇ ಅನ್ನ ಸಂತರ್ಪಣೆ ಕಾರ್ಯ ನಡೆಯುತ್ತಿದೆ.
ಆಷಾಢ ಶುಕ್ರವಾರ, ಶನಿವಾರ, ಭಾನುವಾರ ಬೆಟ್ಟಕ್ಕೆ ಖಾಸಗಿ ವಾಹನ ಪ್ರವೇಶ ನಿಷೇಧಿಸಲಾಗಿದೆ. ಗುರುವಾರ ರಾತ್ರಿ 10 ಗಂಟೆಯಿಂದ ಭಾನುವಾರ ರಾತ್ರಿ 11 ಗಂಟೆವರೆಗೆ ಖಾಸಗಿ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಲಲಿತ ಮಹಲ್ ಮೈದಾನದಲ್ಲಿ ಧರ್ಮ ದರ್ಶನ, 300, 2 ಸಾವಿರ ರೂ ಟಿಕೆಟ್ಗಳಿಗೆ ಪ್ರತ್ಯೇಕ ಪಾರ್ಕಿಕ್ ವ್ಯವಸ್ಥೆ ಮಾಡಲಾಗಿದೆ. ಸಿಸಿ ಟಿವಿ, ಅಗತ್ಯ ಲೈಟಿಂಗ್ ಹಾಕಲಾಗಿದೆ. ಯಾವುದೇ ಅಹಿತಕರ ಘಟನೆ, ನೂಕುನುಗ್ಗಲು ಆಗದಂತೆ ತಡೆಯಲು 4 ಡಿಸಿಪಿ, ಎಎಸ್ಪಿ, 12 ಎಸಿಪಿ, 32 ಪಿಐ, 65 ಪಿಎಸ್ಐ, 1071 ಹೆಚ್ಸಿ, ಪಿಸಿ, 6 ಕೆಎಸ್ಆರ್ಪಿ, 12 ಸಿಎಆರ್, 4 ಕಮಾಂಡ್ ವಾಹನ, ಎಚ್ಜಿ 300 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.