ArticlesLatest

ಪ್ರಜೆಗಳ ಒಳಿತಿಗಾಗಿ ಬಲಿದಾನಗೈದ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿ… ಇವರ ಬಲಿದಾನದ ಕಥೆ ಇಲ್ಲಿದೆ…!

ಬೆಂಗಳೂರನ್ನು ಸ್ಥಾಪಿಸಿದ ಕೆಂಪೇಗೌಡರ ಬಗ್ಗೆ ಮಾತನಾಡುವಾಗ ನಾವು ಅವರ ಸೊಸೆ ಲಕ್ಷ್ಮಿ ದೇವಿಯ ಬಗ್ಗೆ  ಮತ್ತು ಅವರು ಬೆಂಗಳೂರಿಗಾಗಿ ಮಾಡಿದ ಬಲಿದಾನದ  ಕುರಿತಂತೆ ಹೇಳಲೇ ಬೇಕಾಗುತ್ತದೆ. ಅರಮನೆಯ ಸಕಲ ಸುಖವನ್ನು ಬದಿಗೊತ್ತಿ ಪ್ರಜೆಗಳಿಗಾಗಿ ತನ್ನ ಜೀವವನ್ನೇ ತ್ಯಾಗ ಮಾಡುವುದೆಂದರೆ ಅದು ಸಾಮಾನ್ಯ ವಿಷಯವಲ್ಲ.. ಇವತ್ತಿಗೂ ಅವರು ಅಜರಾಮರರಾಗಿ ಉಳಿದು ಹೋಗಿದ್ದಾರೆ. ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ…

ನಗರದ ಸುತ್ತಲೂ ಕೋಟೆ ನಿರ್ಮಾಣ ಕಾಮಗಾರಿಗಾಗಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ  ಕಾಮಗಾರಿ ಆರಂಭಿಸಿದರು ಆದರೆ ಅವತ್ತು ನಿಲ್ಲಿಸಿದ ಕಂಬಗಳು ಮೂರೂ ದಿಕ್ಕಿನಲ್ಲಿ ಯಶಸ್ವಿಯಾಗಿ ನಿಂತವು. ಆದರೆ ದಕ್ಷಿಣ ದಿಕ್ಕಿನ ಹೆಬ್ಬಾಗಿಲ ಕಂಬವು ಮಾತ್ರ ಅದೆಷ್ಟು ಶ್ರಮಪಟ್ಟು ಪದೇ ಪದೇ ಕಟ್ಟಿದರೂ ಸ್ತಿರವಾಗಿ ನಿಲ್ಲದೆ ಬಿದ್ದುಹೋಗುತ್ತಿತ್ತು?! ಶಿಲ್ಪಿಗಳು ಶಾಸ್ತ್ರಜ್ಞರು ಪ್ರಾಜ್ಞರು ಆದಿಯಾಗಿ ತಿಳಿದವರೆಲ್ಲ ತಲೆಕೆರೆದು ಬೈತಲೆಕೆಡಿಸಿಕೊಂಡರೂ ಸಾಧ್ಯವಾಗಲಿಲ್ಲ. ಅದ್ಯಾರೆಲ್ಲಾ ಎಂಥೆಂತದ್ದೊ ಎಷ್ಟೆಷ್ಟೊ (ಕು)ಯುಕ್ತಿ ಖರ್ಚು ಮಾಡಿದರೂ ಸಮಸ್ಯೆ ಬಗೆಹರಿಯದಿದ್ದಾಗ ವಿಧಿಯಿಲ್ಲದೆ ಈ ದುಸ್ಸಂಗತಿಯನ್ನು ದೊರೆಗಳ ಗಮನಕ್ಕೆ ತರುತ್ತಾರೆ.

ವಿಷಯ ತಿಳಿದು ಹೌಹಾರಿ ದಿಗ್ಭ್ರಮೆಗೊಂಡ ಕೆಂಪೇಗೌಡರು ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಾರೆ. ಈ ಬಗ್ಗೆ ತಜ್ಞರೊಡನೆ ಕೂಲಂಕಶವಾಗಿ ಚರ್ಚಿಸಿದ ನಂತರ ಒಂದು ಪರಿಹಾರ ದೊರಕಿತು. ಜ್ಯೋತಿಷ್ಯರ ಸಲಹೆ ಪ್ರಕಾರ ಇದೊಂದು ಭೂತಚೇಷ್ಟೆಯಾಗಿದ್ದು ಶಮನಕ್ಕಾಗಿ ತುಂಬುಗರ್ಭಿಣಿಯನ್ನು ಜೀವಸಹಿತ ಬಲಿಕೊಡಬೇಕೆಂದು ತಿಳಿಸುತ್ತಾರೆ. ಇದನ್ನು ಕೇಳಿದ ನಾಡಪ್ರಭುಗಳು ಜರ್ಝರಿತಗೊಂಡು ಚಿಂತಾಕ್ರಾಂತರಾಗಿ ಬಹುಕಾಲ ನಿದ್ರಾಹಾರ ತೊರೆದು ಕೊರಗಿ ಕೃಶರಾಗುತ್ತಾರೆ.

ಇದನ್ನೂ ಓದಿ: ಕೆಂಪೇಗೌಡರು ಬರೀ ಆಡಳಿತಗಾರನಲ್ಲ… ಹಲವು ಪ್ರತಿಭೆಯ ಮಹಾಪರ್ವತ!

ಕೈಗೆ ಬಂದ ತುತ್ತು ಬಾಯಿಗೆ ಇಲ್ಲವಾಯಿತಲ್ಲ ಎಂದು ಮಮ್ಮಲ ಮರುಗಿದರು. ಹಗಲುರಾತ್ರಿ ತಮ್ಮ ಕುಲದೇವತೆ ಕೆಂಪಮ್ಮನಬಳಿ ಅಲವತ್ತುಕೊಂಡು ಆಕೆಯ ಆಣತಿಗಾಗಿ ಹಪಹಪಿಸುತ್ತಾರೆ. ದಿಕ್ಕು ತೋಚದ ಕೆಂಪೇಗೌಡರು ಸಾಮ್ರಾಟನಿಂದ ಸಲಹೆ ಪಡೆಯಲು ವಿಜಯನಗರಕ್ಕೆ ತೆರಳಿದರು. ಇದೇವೇಳೆ ಪ್ರಜೆಗಳ ಅರಿವಿಗೆ ಬರುವಂತೆ ಹೊರಡಿಸಿದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುತ್ತದೆ. “ನಗರ ನಿರ್ಮಾಣವು ಪೂರ್ಣವಾಗಲು ಅವಶ್ಯವಾದ ಪ್ರಾಣತ್ಯಾಗ ಮಾಡಲಿಚ್ಚಿಸುವ ಗರ್ಭಿಣಿಯು ಮುಂದೆ ಬರಬಹುದು.

ಆಕೆಯ ಕುಟುಂಬಕ್ಕೆ ಜಾಗೇರುಜಾಗ ಚರಸ್ಥಿರಾಸ್ತಿ ನಗನಾಣ್ಯ ಬಿರುದುಬಹುಮಾನ ಬಳುವಳಿ ತಾಮ್ರಪತ್ರ ಮುಂತಾದ್ದನ್ನು ಕೊಡಲಾಗುವುದು  ಎಂಬ ಡಂಗುರವನ್ನು ಸಾರಿಸಲಾಯ್ತು. ಆದರೆ, ಕೆಂಪೇಗೌಡರ ಮತ್ತು ಅವರ ಕುಟುಂಬದವರ ಅನುಮತಿ ಇಲ್ಲದೆ ಅವರ ಗಮನಕ್ಕೆ ಬಾರದಂತೆ ರಾಜ್ಯ ಮತ್ತು ರಾಜರ ಮೇಲಿನ ಗೌರವ ಭಯ ಭಕ್ತಿಯಿಂದ ಮಂತ್ರಿಮಂಡಲ ಮತ್ತು ಆಡಳಿತಾಧಿಕಾರಿ ವರ್ಗದವರೇ ನಿರ್ಧಾರ ತೆಗೆದುಕೊಂಡು ಢಂಗುರ ಸಾರಿಸಿದರು. ಇದಾದ ಕೆಲವೆ ತಾಸುಗಳಲ್ಲಿ ನೂರಾರು ಗರ್ಭಿಣಿಯರು ಸ್ವಯಂ ಇಚ್ಚೆಯಿಂದ ಸಹಕರಿಸಲು ಸಾಲುಗಟ್ಟಿ ನಿಂತರು.

ಈ ಅಪೂರ್ವ ದೃಶ್ಯವನ್ನು ಕಣ್ಣಾರೆ ಕಂಡ ಕೆಂಪೇಗೌಡರ ಕುಟುಂಬವು ಕೃತಜ್ಞತಾ ಭಾವದಿಂದ ಶೋಕಕ್ಕೆ ಶರಣಾಗಿ ಆನಂದಬಾಷ್ಪ ಸುರಿಸಿ ಪ್ರಜೆಗಳ ಮನವೊಲಿಸಲು ಪ್ರಯತ್ನಿಸಿದರು. ಆತ್ಮಾರ್ಪಣೆಗೆ ಸಿದ್ಧರಿದ್ದ ಗರ್ಭಿಣಿಯರನ್ನು ಸಂತೈಸುವಾಗ ಗೌಡರ ಕುಟುಂಬವು ಅತ್ಯಂತ ಜಾಗ್ರತೆ ವಹಿಸಿ ಜಗಜ್ಜಾಹೀರು ಪಡಿಸಿದ್ದು ಹೀಗೆ.. ಬೇರೆ ಕುಟುಂಬದವರು ಅನ್ಯಾಯವಾಗಿ ಬಲಿಪಶು ಆಗಬಾರದು. ಅದೇನೆ ಇದ್ದರೂ ನಮ್ಮ ಕುಟುಂಬದವರೆ ಬಗೆಹರಿಸಿಕೊಳ್ಳುತ್ತೇವೆ. ನಾಡಿನ ಒಳಿತಿಗಾಗಿ ಮತ್ತು ಪ್ರಜಾಕ್ಷೇಮಕ್ಕಾಗಿ ನಾವೇ ಅಂತಿಮ ತೀರ್ಮಾನ ತೆಗೆದು ಕೊಳ್ಳುತ್ತೇವೆ. ಈ ಸಮಸ್ಯೆಯು ನಮ್ಮ ಜವಾಬ್ಧಾರಿ ಆಗಿರುವುದರಿಂದ ನೀವು ನೆಮ್ಮದಿಯಿಂದ ಹೊರಡಿ.. ಎಂಬುದನ್ನು ಆಲಿಸಿದ ಪ್ರಜೆಗಳು ವಿಧಿಇಲ್ಲದೆ ಕಣ್ಣೀರು ಸುರಿಸುತ್ತಾ ಹಿಂದಿರುಗಿದರು!

ಈ ಎಲ್ಲ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿದ ಕೆಂಪೇಗೌಡರ ಸೊಸೆ ತುಂಬುಗರ್ಭಿಣಿ ಲಕ್ಷ್ಮಿದೇವಿಯು ತಮ್ಮ ಮಾವನವರ ಕನಸಿನ ರಾಜಧಾನಿ ನಿರ್ಮಾಣದ ಕಾಮಗಾರಿಯು ಶೇ.99ರಷ್ಟು ಮುಕ್ತಾಯವಾಗಿದ್ದರೂ ಏಕೈಕ ಅಡೆತಡೆ ಕೆಡಕು ತೊಡಕು ಬಂದೊದಗಿತಲ್ಲ ಎಂಬುದನ್ನರಿತು ಅದನ್ನು ತೊಡೆದು ಹಾಕಲು ನಿರ್ಧರಿಸಿದಳು. ಯಾರಿಗೂ ತಿಳಿಯದಂತೆ ಮತ್ತು ತಿಳಿಸದೇ ಸ್ವಯಂ ತೀರ್ಪು ತೆಗೆದುಕೊಂಡು ಮಧ್ಯರಾತ್ರಿಯಲ್ಲಿ ಅರಮನೆ ತೊರೆದು ನಿಗಧಿತ ಸ್ಥಳಕ್ಕೆ ತಲುಪಿ ಜನಹಿತಕ್ಕಾಗಿ ಮತ್ತು ಸಕಲ ಸಮಸ್ಯೆ ಪರಿಹಾರಕ್ಕಾಗಿ ಕೋಟೆಯಕಂಬವು ಸುಸ್ತಿರವಾಗಿ ಶಾಶ್ವತವಾಗಿ ನಿಲ್ಲುವಂತೆ ದೇವರನ್ನು ಪ್ರಾರ್ಥಿಸಿ, ಬಳಿಕ ತಾನೇ ತೆಗೆದು ಕೊಂಡು ಬಂದಿದ್ದ ಕುಡುಗೋಲಿಂದ ತನ್ನ ಕೈಯಾರೆ ಕತ್ತು ಕತ್ತರಿಸಿಕೊಂಡು ಪ್ರಾಣವನ್ನು ಅರ್ಪಿಸಿದಳು.

ನಿಸ್ವಾರ್ಥ ನಿರ್ಮಲ ಚಿತ್ತದ ಕುಲವಧುವಾಗಿ ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಅಪಾರ ಕೀರ್ತಿಯನ್ನು ದೊರಕಿಸಿಕೊಟ್ಟು ತ್ಯಾಗಮಯಿ ಪಟ್ಟ ಗಿಟ್ಟಿಸಿದ ಲಕ್ಷ್ಮಿದೇವಿಯಂಥ ವಂಶೀಕ ಹೆಣ್ಣುಮಗಳ ಪವಿತ್ರ ಜೀವನವು ಅನುಕರಣೀಯವಾದರೆ ಸಾರ್ಥಕ ಜೀವವು ಶ್ರೇಷ್ಠತೆಯ ಜ್ವಲಂತ ನಿದರ್ಶನವಾಗುತ್ತದೆ! ತಮ್ಮ ಬೀಗರ ಬಯಕೆಯಂತೆ ಲಕ್ಷ್ಮಿದೇವಿ ದೇಹವನ್ನು ಆಕೆಯ ತೌರೂರು ಕೋರಮಂಗಲದಲ್ಲೆ ಸಕಲ ವಿಧಿ ವಿಧಾನದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಮಹಾರಾಣಿ ಆಗಬೇಕಿದ್ದ ಸೊಸೆಯ ಸ್ಮರಣಾರ್ಥ ಆಕೆಯ ಸಮಾಧಿ ಬಳಿಯಲ್ಲಿ ಲಕ್ಷ್ಮೀ ದೇವಿಯ ಗುಡಿಯನ್ನು ಕಟ್ಟಿಸಿ ಪ್ರತಿದಿನವೂ ಪೂಜಾ ಕೈಂಕರ್ಯ ನಡೆಯಲು ಏರ್ಪಾಡು ಮಾಡುತ್ತಾರೆ. ಪುಣ್ಯವತಿ ಸತೀ ಲಕ್ಷ್ಮೀ ದೇವಿ ಸ್ಮರಣಾರ್ಥ ನಿತ್ಯಪೂಜಾ ಕಾರ್ಯಗಳು ಇವತ್ತಿಗೂ ಜರುಗುತ್ತಿವೆ ಎಂಬುದು ನಿತ್ಯಸತ್ಯ.

ಅಂದಿನಿಂದ ಇಂದಿನವರೆಗೆ ಈ ಲಕ್ಷ್ಮಿದೇವಿ ಮಹಾತಾಯಿ ಬೆಂಗಳೂರು ನಾಡಪ್ರಭು ಕೆಂಪೇಗೌಡರ ಸೊಸೆಯಾಗಿ ಮಾತ್ರವಲ್ಲದೆ ಇಡೀ ಕನ್ನಡನಾಡಿನ ಮತ್ತು ಭರತ ಖಂಡದ ಕೋಟ್ಯಾಂತರ ಮನೆ ಮಗಳಾಗಿ ಮಮತೆ ವಾತ್ಸಲ್ಯದ ಶಿಖರವಾಗಿ ಮಾದರಿಯ ಮೇರು ಪರ್ವತವಾಗಿ ಆಚಂದ್ರಾರ್ಕ ಅಜರಾಮರ!

 

 

admin
the authoradmin

Leave a Reply