ಬೆಂಗಳೂರು ನಿರ್ಮಾತೃ ಕೆಂಪೇಗೌಡರ ನೆನೆಯೋಣ.. ಅವರು ಬರೀ ಆಡಳಿತಗಾರನಲ್ಲ… ಹಲವು ಪ್ರತಿಭೆಯ ಮಹಾಪರ್ವತ!

ಬೆಂಗಳೂರು ನಿರ್ಮಾತೃ ಕೆಂಪೇಗೌಡರ 516ನೇ ಜಯಂತಿಯಂದು (ಜನನ 27.6.1510 – ಮರಣ 7.3.1570) ಅವರ ಬಗ್ಗೆ ನಾವು ಒಂದಿಷ್ಟು ತಿಳಿದುಕೊಳ್ಳುವ ಅಗತ್ಯವಿದೆ. ಅವರನ್ನು ಮಾಮೂಲಿ ರಾಜನಾಗಿ ನೋಡಲಾಗುವುದಿಲ್ಲ. ಏಕೆಂದರೆ ಅವರ ಆಡಳಿತಾವಧಿಯನ್ನು ಗಮನಿಸಿದರೆ ಅವರೊಬ್ಬ ಕೃಷಿತಜ್ಞ, ಶಿಕ್ಷಣತಜ್ಞ, ಆಡಳಿತಜ್ಞ, ಇಂಜಿನಿಯರ್, ವಾಣಿಜ್ಯೋದ್ಯಮಿ, ಕೈಗಾರಿಕೋದ್ಯಮಿ, ವಿಚಾರವಾದಿ, ವೈದ್ಯ, ಮನೋವೈದ್ಯ, ಜ್ಞಾನಿ, ವಿಜ್ಞಾನಿ, ಕಾಲಜ್ಞಾನಿ, ತಂತ್ರಜ್ಞ, ದಾರ್ಶನಿಕ, ಸಂತ, ಪವಾಡಪುರುಷ, ಯೋಜನಾನಿಪುಣ, ತತ್ವಜ್ಞಾನಿ, ಸಾರ್ವಭೌಮ ಹೀಗೆ ಹತ್ತಾರು ರೀತಿಯ ಪ್ರತಿಭೆಯ ಮಹಾಪರ್ವತ ಎಂದರೆ ತಪ್ಪಾಗಲಾರದು.
16ನೇ ಶತಮಾನದಲ್ಲಿ ದಕ್ಷಿಣ ಭಾರತದ ಚಕ್ರಾಧಿಪತಿ ಕನ್ನಡ ಸಾಮ್ರಾಜ್ಯ ರಮಾರಮಣ ವಿಜಯನಗರ ಚಕ್ರವರ್ತಿಯಾದ ಶ್ರೀಕೃಷ್ಣದೇವರಾಯರ ಭವಿತವ್ಯ ಆಡಳಿತ ವಿಜೃಂಭಿಸಿತ್ತು. ನಾಡು-ನುಡಿ, ನೆಲ-ಜಲ, ಜನ-ಮನ, ಕವಿ-ಕಲಾವಿದ, ಮಹಿಳೆ-ಮಕ್ಕಳು, ಬೆಳೆ-ಬಂಗಾರ, ಆದಿಯಾಗಿ ಇಡೀ ಸಾಮ್ರಾಜ್ಯ ಶಾಂತಿ ನೆಮ್ಮದಿ ಹಾಗೂ ಸಮೃದ್ಧಿಯಿಂದ ತುಂಬಿ ತುಳುಕಿತ್ತು.
ದೇಶ-ವಿದೇಶದ ಪ್ರವಾಸಿಗರು ವರ್ತಕರು ಅತಿಥಿಗಳು ಸಾಮಂತರು ಮೊದಲ್ಗೊಂಡು ಪ್ರತಿಯೊಬ್ಬರೂ ವಿಜಯನಗರ ಅರಸರ ಆಡಳಿತದ ಪರಿಣಾಮವಾಗಿ ಫಲಿಸಿದ್ದ ಸರ್ವಾಂಗೀಣ ಅಭಿವೃದ್ಧಿಯ ಸುಭಿಕ್ಷ ಅಸ್ಮಿತೆಯನ್ನು ಕಂಡು ಬೆರಗಾಗುತ್ತಿದ್ದರು. ಸಕಲ ಲೋಕವು ಹೊಗಳುವಂಥ ಹೃದಯ ಶ್ರೀಮಂತಿಕೆಯ ಸುಭದ್ರ ನೆಲೆಬೀಡು ಪ್ರಬುದ್ಧ ಕನ್ನಡನಾಡು ಮಹಾರಾಜ ಶ್ರೀ ಕೃಷ್ಣದೇವರಾಯರ ಆಳ್ವಿಕೆಯಲ್ಲಿ ಅದ್ಭುತ ಎನಿಸಿತ್ತು! ಹಲವಾರು ಸಾಮಂತ ರಾಜ ಮಹಾರಾಜ ಪಾಳೇಗಾರರು ತಂತಮ್ಮ ಸಣ್ಣಪುಟ್ಟ ಪ್ರದೇಶ ರಾಜ್ಯ ಪ್ರಾಂತ್ಯಗಳ ಆಡಳಿತವನ್ನು ನಿಶ್ಚಿಂತೆಯಿಂದ ನಡೆಸುತ್ತಿದ್ದರು. ಇವರೆಲ್ಲರ ಪೈಕಿ ಅಗ್ರಗಣ್ಯ ರಾಗಿದ್ದವರು ಸಾಮಂತರಾಜ ಪಾಳೇಗಾರ್ ಕೆಂಪೇಗೌಡರು.
ಕ್ರಿ.ಶ.1510ನೇ ಜೂನ್ 27ರಂದು ಶ್ರೀಮತಿ ಲಿಂಗಾಂಬೆ ಮತ್ತು ಪಾಳೇಗಾರ ಕೆಂಪನಂಜೇಗೌಡ ದಂಪತಿಯ ಜೇಷ್ಠ ಪುತ್ರ ರತ್ನನಾಗಿ ಕೆಂಪಯ್ಯನವರ ಜನನ. 1515ರಲ್ಲಿ ಐದು ವರ್ಷದವನಿದ್ದಾಗ ತಂದೆಯೊಡನೆ ಹಂಪಿಯಲ್ಲಿ ಆ ವರ್ಷದಿಂದ ಪ್ರಾರಂಭವಾದ ಮೊಟ್ಟಮೊದಲ ವಿಜಯದಶಮಿ ಉತ್ಸವವನ್ನು ಕಣ್ಣಾರೆ ಕಂಡ ಬಾಲಕ ಕೆಂಪಯ್ಯನ ಮನದಲ್ಲಿ ಆಗ ಮೂಡಿದ್ದು: ಭವಿಷ್ಯದಲ್ಲಿ ತಾನೂ ಸಹ ಕೆಂಪರಾಯ ಎಂಬ ಹೆಸರಿನೊಡನೆ ರಾಜ್ಯವನ್ನು ವಿಸ್ತರಿಸಿ ಉತ್ತಮ ಆಳ್ವಿಕೆ ನಡೆಸಬೇಕೆಂಬ ಹೆಬ್ಬಯಕೆ! ದೈವಲೀಲೆ ಎಂಬಂತೆ ಪ್ರಕೃತಿದತ್ತವಾಗಿ ಬೆಳೆದಂತೆ ಬಾಲಕ-ಯುವಕ ಕೆಂಪೇಗೌಡ ಕ್ಷಾತ್ರಗುಣದಂತೆ ಗುರುಕುಲದಲ್ಲಿ ಶಸ್ತ್ರಾಸ್ತ್ರ ವಿದ್ಯೆ ಮತ್ತು ಸಕಲ ವಿದ್ಯಾ ಪಾರಂಗತರಾದರು.
1528 ರಲ್ಲಿ ತಮ್ಮ ಸೋದರಮಾವನ ಮಗಳು ಚೆನ್ನಾಂಬೆ @ ಚೆನ್ನಮ್ಮ ಎಂಬ ಕನ್ಯೆಯೊಡನೆ ವಿವಾಹ. ಇದೇ ಸಂದರ್ಭದ ಸುಮುಹೂರ್ತದಲ್ಲಿ ಕೆಂಪೇಗೌಡರಿಗೆ ಯುವರಾಜನಾಗಿ ಪಟ್ಟಾಭಿಷೇಕ. 1529 ರಲ್ಲಿ ಶ್ರೀಕೃಷ್ಣದೇವರಾಯ ನಿಧನರಾದ ಬಳಿಕ ಆವರೆಗೂ ಸಾಮಂತ ರಾಜನಾಗಿದ್ದ ಕೆಂಪನಂಜೇಗೌಡರ ಪುತ್ರ ಮೊದಲನೇ ಕೆಂಪೇಗೌಡರು ಸ್ವತಂತ್ರ ಮಹಾರಾಜನಾಗಿ 1530ರಿಂದ 1569ರವರೆಗೆ 39ವರ್ಷ ನಿರಂತರ ಆಳ್ವಿಕೆ ನಡೆಸಿ ಸ್ತ್ಯುತ್ಯಾರ್ಹ ರೀತಿಯಲ್ಲಿ ನಿರಂಕುಶ ಪ್ರಭುವಾಗಿ ಮೆರೆದರು.
ಕೆಂಪೇಗೌಡರ ಆಡಳಿತ ಅವಧಿಯಲ್ಲಿ ಜೈತ್ರ ಯಾತ್ರೆ ಮೂಲಕ ಆವತಿಯಿಂದ ಮೊದಲ್ಗೊಂಡು ಜಿಗಣಿ ಬಾಣಾವರ ಕೋರ ಮಂಗಲ ನೆಲಮಂಗಲ ತಲಘಟ್ಟಪುರ ಹಲಸೂರು ಹೊಸೂರು ಕೋಲಾರ ಶಿವಗಂಗೆ ಸಿದ್ಧಗಂಗೆ ಕುಣಿಗಲ್ ಹುಲಿಯೂರುದುರ್ಗ. ಹುಲಿಕಲ್ ಹುತ್ತರಿದುರ್ಗ ಸಾವನದುರ್ಗ ದೇವನಹಳ್ಳಿ ಗಂಗೇನಹಳ್ಳಿ ಹೊಸಹಳ್ಳಿ ಸಾತನೂರು ರಾಗಿಮುದ್ದನಹಳ್ಳಿ ಕಾನಕಾನಹಳ್ಳಿ ಮುದ್ದಗೆರೆ ಮಾಗಡಿ ಹಾಗೂ ರಾಮನಗರ ಸುತ್ತಮುತ್ತಲವರೆಗೆ ಹಬ್ಬಿಸಿದ್ದರು. ವಿಜಯನಗರ ಸಾಮ್ರಾಜ್ಯದ ಪ್ರತಿರೂಪದಂತಿದೆ ಎಂದು ಪ್ರಸಿದ್ಧಿ ಪಡೆದು ಸಾಂಗವಾಗಿ ಸಾಗಿತ್ತು ಕೆಂಪರಾಯ ಉರುಫ್ ಮೊದಲನೇ ಕೆಂಪೇಗೌಡರ ದರ್ಬಾರ್!
ಚಕ್ರವರ್ತಿ ಅಚ್ಯುತರಾಯನಿಂದಲೇ ಅನುಮತಿ ಪಡೆದು ಸರ್ವತಂತ್ರ ಸ್ವತಂತ್ರನಾಗಿ ಸಾರ್ವತ್ರಿಕ ಮೆಚ್ಚುಗೆ ಗಳಿಸಿದರು. ಅಪರಿಚಿತರು ಆಗಂತುಕರು ಆಶ್ಚರ್ಯಚಕಿತರಾಗುವಂತೆ ಸಕಲಗುಣ ಸಂಪನ್ನನಾಗಿ ವಿಜಯನಗರ ಆಳರಸರಿಂದ ಶಹಬ್ಬಾಸ್ಗಿರಿ ಪಡೆದು ಸಮರ್ಥ ಆಡಳಿತಗಾರನಾಗಿ ಶ್ರೇಷ್ಠ ರಾಜ್ಯಭಾರ ನಡೆಸುತ್ತಿದ್ದ ಏಕೈಕ ಸಾಮಂತನೆಂದು ಹೆಸರುವಾಸಿ ಪಡೆದರು. ಯಲಹಂಕ-ಮಾಗಡಿ ಜೋಡಿ ಸಂಸ್ಥಾನದ ಯಶಸ್ವಿ ದೊರೆ ಎಂದೂಸಹ ಅಪಾರ ಕೀರ್ತಿ ಗಳಿಸಿದರು ಬೆಂಗಳೂರು ನಗರದ ನಿರ್ಮಾತೃ ಯಲಹಂಕದ ಪ್ರಭು ಮೊದಲನೆಯ ಕೆಂಪೇಗೌಡರು!
ಒಂದು ದಿನ ಹುಣ್ಣಿಮೆ ರಾತ್ರಿಯಲ್ಲಿ ಅರಮನೆ ಸುಪ್ಪತ್ತಿಗೆಯಲ್ಲಿ ರಾಜಾ ಕೆಂಪೇಗೌಡರು ನಿದ್ರಾವಸ್ಥೆಯಲ್ಲಿದ್ದಾಗ ಬೆಳಗಿನ ಅಭಿಜಿನ್ ಮುಹೂರ್ತಕ್ಕೆ ಮುನ್ನ ಕೆಂಪೇಗೌಡರ ಕನಸಲ್ಲಿ ಕಾಣಿಸಿಕೊಂಡ ನಾಡದೇವತೆ ಅಣ್ಣಮ್ಮದೇವಿ ಪ್ರಸ್ತುತ ಪಡಿಸಿದ್ದೇನೆಂದರೆ… ಮಗೂ ಕೆಂಪೇಗೌಡ ಸಕಲಜೀವಿಯ ಕಲ್ಯಾಣಾರ್ಥಕ್ಕಾಗಿ ನೀನೊಂದು ನವನಗರ ನಿರ್ಮಾಣ ಮಾಡುವಂತವನಾಗು, ನಿನ್ನ ಕಾರ್ಯವು ಶೀಘ್ರವೇ ಕೈಗೊಳ್ಳುವಂತಾಗಲಿ ಸಂಪೂರ್ಣ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದಳು.
ಅಣ್ಣಮ್ಮನ ಅಣತಿಯಂತೆ ಹೊಸದಾದ ಒಂದು ಬೃಹತ್ ನಗರವನ್ನು ನಿರ್ಮಿಸಲು ತಕ್ಕುದಾದ ಶುಭ ಮುಹೂರ್ತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆಂಪೇಗೌಡರು ಸತ್ಕಾರ್ಯವು ಪ್ರಾರಂಭವಾದ ಕ್ಷಣದಿಂದಲೇ ಆಲಸ್ಯ ತೊರೆದರು. ಬೆಂಗಳೂರು ನಗರ ನಿರ್ಮಾಣ ಕಾಮಗಾರಿಯನ್ನು ಸಾಧ್ಯವಾದಷ್ಟು ಶೀಘ್ರವಾಗಿ ಅಚ್ಚುಕಟ್ಟಾಗಿ ಸುಂದರವಾಗಿ ಸಾವಕಾಶವಾಗಿ ಆದರೆ ಪರಿಪೂರ್ಣ ಯಶಸ್ವಿಯಾಗಿ ಮುಕ್ತಾಯಗೊಳಿಸಲು ಪಣತೊಟ್ಟರು. ತಮ್ಮ ತಾಯಿ ಮತ್ತು ಹೆಂಡ್ತಿ ಇಬ್ಬರೂ ಸಹ ಹಳೇ ಬೆಂದಕಾಳೂರಿನ ತವರಿನವರೇ ಆಗಿದ್ದುದರಿಂದ ಇವರಿಬ್ಬರ ತವರಿನ ಜ್ಞಾಪಕಾರ್ಥ ಮತ್ತು ಒಮ್ಮೆ ತಾವು ಬೇಟೆಯಾಡಲು ಬಂದಿದ್ದಾಗ ಅರ್ಕಾವತಿ ನದಿ ನೀರಿನಿಂದ ಬೇಯೀಸಿದ ಕಾಳು ನೀಡಿ ಹಸಿವು ನೀಗಿಸಿದ್ದ ಅಜ್ಜಿಯ ಮತ್ತು ಬೆಂದಕಾಳಿನ ನೆನಪಿಗೆ ಬೆಂಗಳೂರು ಎಂದೂ ನಾಮಕರಣ ಮಾಡಲು ಯೋಚಿಸಿ ಯೋಜಿಸಿದ್ದರು.
ಇದನ್ನೂ ಓದಿ: ಪ್ರಜೆಗಳ ಒಳಿತಿಗಾಗಿ ಬಲಿದಾನಗೈದ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿ… ಇವರ ಬಲಿದಾನದ ಕಥೆ ಇಲ್ಲಿದೆ…!
1537ರಲ್ಲಿ ಗುದ್ದಲಿ ಪೂಜೆಯೊಂದಿಗೆ ಪ್ರಾರಂಭವಾಗಿ ಕಾಲ ಕಳೆದಂತೆ ನಗರ ನಿರ್ಮಿತಿ ಕೈಂಕರ್ಯವು ನಿರೀಕ್ಷೆಗಿಂತ ಹೆಚ್ಚಿನ ಶೀಘ್ರಗತಿಯ ಪ್ರಗತಿಯಲ್ಲಿ ನಿರ್ವಿಘ್ನವಾಗಿ ಸಾಗತೊಡಗಿತು. ಇನ್ನೇನು ಕೆಲವೆ ದಿನಗಳಲ್ಲಿ ನವ ನಿರ್ಮಾಣದ ಬೆಂದಕಾಳೂರು ನಗರ ಅಸ್ತಿತ್ವಕ್ಕೆ ಬರುವ ಎಲ್ಲಾ ಲಕ್ಷಣ ಕಂಡುಬಂತು. ನಾಡಪ್ರಭು ಕೆಂಪೇಗೌಡರು ಈ ಹಿಂದೆ ಎಂದೋ ಒಂದು ಘಳಿಗೆ ತಮ್ಮ ಮನಸಲ್ಲಿ ಅಂದುಕೊಂಡಿದ್ದಂತೆ 4 ದಿಕ್ಕುಗಳಲ್ಲಿ ಗಡಿಗೋಪುರ ಇರುವ ಹೊಸ ರಾಜಧಾನಿ ನಿರ್ಮಾಣ ಮಾಡುವ ತಮ್ಮ ಕನಸು ದೇವರ ಕೃಪೆಯಿಂದಾಗಿ ನನಸಾಗುವ ಕಾಲ ಒದಗಿಬಂದ ಕ್ಷಣ ಜ್ಞಾಪಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟು ಸಮಾಧಾನ ಗೊಂಡರು.
ಆದರೆ ತಮ್ಮಇಚ್ಚೆ ಮತ್ತು ಅಣ್ಣಮ್ಮತಾಯಿ ಇಚ್ಚೆಯಂತೆ ಬೃಹತ್ ನಗರವೊಂದು ಲೋಕಾರ್ಪಣೆ ಆಗುವಕಾಲ ಸನ್ನಿಹಿತ ಆಗುತ್ತಿದ್ದಂತೆ ಅನಿರೀಕ್ಷಿತವಾಗಿ ಸಣ್ಣದೊಂದು ಎಡರುತೊಡರು ಕಾಣಿಸಿಕೊಂಡಿತು. ಇದು ದುರದೃಷ್ಟಕರವೋ ದುರ್ವಿಧಿಯೋ ಎಂಬ ಜಿಜ್ಞಾಸೆಯ ಜೇಡರಬಲೆಗೆ ಸಿಲುಕಿದಂತಾಗಿತ್ತು ನಾಡ ಪ್ರಭುಗಳ ಸ್ಥಿತಿ. ಯೋಚನೆ-ಯೋಜನೆಯಂತೆ ಒಟ್ಟಾರೆ 9 ದ್ವಾರಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು. 5 ಕಿರಿಯ ರಹಸ್ಯ ದ್ವಾರಗಳ ಮತ್ತು 4 ಬೃಹತ್ ದ್ವಾರಗಳ (*ಪೂರ್ವಕ್ಕೆ ಹಲಸೂರು ದ್ವಾರ, *ಪಶ್ಚಿಮಕ್ಕೆ ಸೊಂಡೆಕೊಪ್ಪ ದ್ವಾರ, *ಉತ್ತರಕ್ಕೆ ಯಲಹಂಕ ದ್ವಾರ, *ದಕ್ಷಿಣಕ್ಕೆ ಆನೆಕಲ್ ದ್ವಾರ) ನಿರ್ಮಾಣಕಾರ್ಯ ಮುಕ್ತಾಯಗೊಂಡಿತ್ತು.
ಇವುಗಳ ಎಲ್ಲೆಯನ್ನು ಗುರುತಿಸುವಂತಹ ನಾಲ್ಕು ದೊಡ್ಡ ಗಡಿ ಗೋಪುರಗಳ ಕಾಮಗಾರಿಯೂ ಮುಗಿದಿತ್ತು. ಆದರೆ ದಕ್ಷಿಣ ದಿಕ್ಕಿನ ಹೆಬ್ಬಾಗಿಲ ಕಂಬ ನಿರ್ಮಾಣದ ಹಿಂದೆ ಕೆಂಪೇಗೌಡರ ಸೊಸೆ ತುಂಬುಗರ್ಭಿಣಿ ಲಕ್ಷ್ಮಿದೇವಿಯ ಬಲಿದಾನವೂ ಇದೆ ಎನ್ನುವುದು ಅಷ್ಟೇ ಸತ್ಯ. 1570ರಲ್ಲಿ ಕೆಂಪೇಗೌಡರು ಶತ್ರು ಪಾಳಯವನ್ನು ಸಂಹರಿಸಿ ಕುಣಿಗಲ್ ನಿಂದ ಹಿಂದಿರುಗುವಾಗ ಕತ್ತಲೆಯ ಮೊತ್ತದೊಳು ಮರದ ಮೇಲೆ ಪೊಟರೆ ಸಂದುಗಳಲ್ಲಿ ಅವಿತುಕೊಂಡಿದ್ದ ಹೇಡಿಶತ್ರುಗಳ ಗುಂಪು ಇದ್ದಕ್ಕಿದ್ದಂತೆ ನಾಡಪ್ರಭುವಿನ ಮೇಲೆರಗಿ ಹಿಂದಿನಿಂದ ದಾಳಿ ಮಾಡಿತು. ತಮ್ಮ 60ನೇ ವಯಸ್ಸಿನಲ್ಲೂ ಹುರುಪಿನಿಂದಲೇ ಧೀರ್ಘ ಹೋರಾಟ ಮಾಡುವಾಗ ಮಾಗಡಿ ಬಳಿಯ ಕೆಂಪಾಪುರ ಸಮೀಪದ ನಿರ್ಜನ ಪ್ರದೇಶದಲ್ಲಿ ವೀರೋಚಿತವಾದ ಮರಣಕ್ಕೆ ಶರಣಾದರು!
ಆಗಿನ ಕಾಲಕ್ಕೆ ಬೆಂಗಳೂರು ನಗರದಲ್ಲಿ ಒಟ್ಟು 125 ಕೆರೆಗಳನ್ನು, 12000ಕ್ಕೂ ಹೆಚ್ಚು ಮರಗಳನ್ನು, 50 ಅರವಟ್ಟಿಗೆ-ಧರ್ಮಛತ್ರ ಗಳನ್ನು, 64 ಪೇಟೆಗಳನ್ನು ನೂರಾರು ಉದ್ಯಾನವನ ಹಾಗೂ ರಸ್ತೆಗಳನ್ನು ನಿರ್ಮಿಸುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದರು. ನಾಡಪ್ರಭು ಕೆಂಪೇಗೌಡರ ವಂಶಸ್ಥರು ಅಥವ ಪೀಳಿಗೆಯವರು ಇಂದಿಗೂ ಮಾಗಡಿ ತಾಲ್ಲೂಕು ಹುಲಿಕಲ್ ಗ್ರಾಮದಲ್ಲಿ ಇರುವ ಅರಮನೆಯಲ್ಲಿ ವಾಸಿಸುತ್ತಿದ್ದಾರೆ.
Fantastic and informative article 👏 👍 👌 thanks sir