ಕಾಲ ಬದಲಾಗಿದೆ… ಇವತ್ತು ತಂತ್ರಜ್ಞಾನ ಬೆಳೆದಿದೆ.. ಹೀಗಾಗಿ ರೇಡಿಯೋ ಕೇಳುತ್ತಿದ್ದವರಿಗೆ ಹರಡಿ ಹಂಚಿ ಹೋಗಿದ್ದಾರೆ. ಆದರೂ ಕೇಳುಗರು ಇದ್ದೇ ಇದ್ದಾರೆ. ಆದರೆ ರೇಡಿಯೋ ಕೇಳುತ್ತಿದ್ದವರು ಅದರೊಂದಿಗಿನ ಸಂಬಂಧ ಮತ್ತು ನೆನಪುಗಳನ್ನು ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಅವತ್ತು ರೇಡಿಯೋ ಇರುವ ಮನೆಗಳಲ್ಲಿ ಗ್ರಾಮೀಣ ಪ್ರದೇಶದ ಬಹುತೇಕ ಗುಡಿಸಲು, ಹಟ್ಟಿಗಳಲ್ಲಿ ಗಡಿಯಾರ ಇಲ್ಲದಿರುವಾಗ ಸಮಯ ಸೂಚಕ ಕಾರ್ಯ ನಿರ್ವಹಿಸುತ್ತಿತ್ತು.
ಬಡ ಹಾಗೂ ಮಧ್ಯಮ ವರ್ಗದವರ ಮನ-ಮನೆಗಳಲ್ಲಿ ಆಗಾಗ್ಗೆ ಉಂಟಾಗುವ ಅಲ್ಲೋಲ-ಕಲ್ಲೋಲಗಳನ್ನು ತಾತ್ಕಾಲಿಕವಾಗಿ ಉಪಶಮನಗೊಳಿಸಿ, ಅಲ್ಪಸ್ವಲ್ಪ ಶಾಂತಿ ನೆಮ್ಮದಿ ನೀಡುತ್ತಿತ್ತು. ಕೆಲವೊಂದು ವಿಶಿಷ್ಟ ಕಾರ್ಯಕ್ರಮಗಳಂತೂ ರೋಗಿಗಳಿಗೆ ನವಚೇತನ, ವೈ(ಭೈ)ರಾಗಿಗಳಿಗೆ ಹೊಸ ಚೈತನ್ಯ ನೀಡುತ್ತವೆ. ಪ್ರತಿಯೊಂದು ಸ್ಥಳದಲ್ಲಿ, ಪ್ರತಿಯೊಂದು ಸಂದರ್ಭದಲ್ಲಿ, ಪ್ರತಿಯೊಂದು ವಿಧದಲ್ಲಿ ಪ್ರತಿಯೊಬ್ಬರಿಂದ ಅಪಾಯವಿಲ್ಲದ ಉಪಕಾರಿ ಸಾಧನ ಎನಿಸಿಕೊಂಡಿದೆ. ತನ್ಮೂಲಕ ಓರ್ವ ಜಾತ್ಯಾತೀತ ಪ್ರಜಾಸೇವಕನ ಪಾತ್ರವನ್ನಿದು ಸದಾ ನಿರ್ವಹಿಸುತ್ತ ಬಂದಿದೆ.
ಇದನ್ನೂ ಓದಿ: ಇದು ಆಕಾಶವಾಣಿ…. ಅಲ್ಲಿಂದ ಇಲ್ಲಿವರೆಗೆ… ರೇಡಿಯೋದೊಂದಿಗೆ ಸಾಗಿ ಬಂತು ನೆನಪಿನ ಹಾಯಿದೋಣಿ…
ಆಬಾಲವೃದ್ಧರಾದಿ, ಪಂಡಿತನಿಂದ ಪಾಮರನವೆರೆಗೆ, ಬಡವನಿಂದ ಬಲ್ಲಿದನವರೆಗೆ, ಯಾವುದೆ ತಾರತಮ್ಯವಿಲ್ಲದೆ ಮಕ್ಕಳಮಂಟಪ, ಚಿಣ್ಣರಚಾವಡಿ, ಚಲನಚಿತ್ರ ಧ್ವನಿವಾಹಿನಿ, ನಾಟಕ, ಪ್ರಚಲಿತ ವಿದ್ಯಮಾನಗಳ ಚರ್ಚೆ, ಪುಸ್ತಕ ವಿಮರ್ಶೆ, ಕ್ರಿಕೆಟ್ ಕಾಮೆಂಟರಿ, ಗಂಟೆಗೊಮ್ಮೆ ವಾರ್ತೆಗಳು, ಮುಂತಾದ ಅನೇಕ ಉತ್ತಮ ಉಪಯುಕ್ತ ಕಾರ್ಯಕ್ರಮಗಳು. ಇದೆಲ್ಲದರ ಜತೆಗೆ, ಶಿಕ್ಷಣ, ಕೌಟುಂಬಿಕಸಮಸ್ಯೆ, ಆರೋಗ್ಯಭಾಗ್ಯ, ಬಾಲಾಪರಾಧ ಬಾಲಕಾರ್ಮಿಕರ, ಮಹಿಳಾಸಮಸ್ಯೆ, ವಿದ್ಯಾವಿದ್ಯಾವಂತರ ನಿರುದ್ಯೋಗ ಪರಿಹಾರ, ವ್ಯವಸಾಯ, ಸಂಸ್ಕೃತಿರೂಪಕ, ಕೃಷಿ ಮಾರ್ಗದರ್ಶನ, ವೈಚಾರಿಕತೆ, ಯುವವಾಣಿ, ಪ್ರತಿಭಾನ್ವೇಷಣೆ, ಹೊಸರುಚಿ, ಹಾಸ್ಯ, ವಿಡಂಬನೆ, ರಾಜಕೀಯ(ಪಂಡಿತರ) ಲೆಕ್ಕಾಚಾರ, ಮುಂತಾದ ಕಾರ್ಯಕ್ರಮ ಗಳನ್ನು ಆಕಾಶವಾಣಿ ಮೂಲಕ ಬಿತ್ತರಿಸುವುದರಿಂದ ಸರ್ವರಿಗೂ ಸಮಪಾಲು ನೀಡುವ ಒಂದು ಸಾಮಾಜಿಕ ಸಮಾನತೆಯನ್ನು ರೇಡಿಯೋದಲ್ಲಿ ಕಾಣಬಹುದು.
ಒಟ್ಟಾರೆ ಶ್ರೀಸಾಮಾನ್ಯನ ಅವಿಭಾಜ್ಯ ಅಂಗವಾಗಿರುವ ರೇಡಿಯೋ; ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಹಾಗೂ ವೈಜ್ಞಾನಿಕ ವಿಚಾರ ಮತ್ತು ನೆಲೆಗಟ್ಟುಗಳ ಸಂಗಮವಾಗಿ “ಓಲ್ಡ್ ಇಸ್ ಗೋಲ್ಡ್”ಎನಿಸಿದೆ. ತನ್ನದೆ ಆದ ಉನ್ನತ ಸ್ಥಾನ ಮಾನ ಕಾಪಾಡಿಕೊಂಡು ಬಂದಿರುತ್ತದೆ. ಒಂದುಕಾಲಕ್ಕೆ ಯಾರಿಗೆ ಇಷ್ಟವಿರಲಿ ಇಲ್ಲದಿರಲಿ ರೇಡಿಯೋವನ್ನು ಪ್ರತಿಯೊಬ್ಬರೂ ಒಪ್ಪಿ ಅಪ್ಪಿಕೊಳ್ಳಲೇ ಬೇಕಾಗಿತ್ತು. ಏಕೆಂದರೆ, ಆ ಕಾಲಕ್ಕೆ ಇದ್ದ ಒಂದೇ ಒಂದು ಮನರಂಜನಾತ್ಮಕ ಸಾಧನ ಯಂತ್ರ ರೇಡಿಯೋ ಇಲ್ಲದೆ ಜೀವನ ಸಾಗಿಸುತ್ತಿದ್ದವರು ವಿರಳ. ಏಕೆಂದರೆ ನಮ್ಮ ಉಸಿರಾಟ ದಷ್ಟೇ ಸತ್ಯ ಮತ್ತು ಅಗತ್ಯ ಎನ್ನುವ ಹಂತ ತಲುಪಿ ಹಂಬಲ ಹೆಚ್ಚುತ್ತಲೆ ಇತ್ತು. ಹಾಗಾಗಿ ಬಹಳ ವರ್ಷಕಾಲ ರೇಡಿಯೋ ಪ್ರಿಯರಿಗೆ ಯಾವತ್ತೂ ಇದರ ‘ಬರ’ ಇ(ಬ)ರಲಿಲ್ಲ?!
ಆದರೆ ಈಗ “ಕಾಲಾಯ ತಸ್ಮೈನಮ:” ಎಂಬಂತೆ 2-ಜಿ, 3-ಜಿ, 2-ಡಿ, 3-ಡಿ, ಎಲ್.ಸಿ.ಡಿ, ಎಲ್.ಈ.ಡಿ, ಟಚ್ಸ್ಕ್ರೀನ್, ಇಂಟರ್ನೆಟ್, ಲೇಸರ್ವ್ಯೂ ಸ್ಕ್ರೀನ್, ಇತ್ಯಾದಿ ಅತ್ಯಾಧುನಿಕ ಯಂತ್ರ ತಂತ್ರಜ್ಞಾನದ ಮನರಂಜನಾ ಸಲಕರಣೆಗಳು ಕಾಸಿಗೊಂದು ಕೊಸರಿಗೊಂದು ಸಿಗುತ್ತಿರುವಾಗ ಇತ್ತೀಚಿನ ನಮ್ಮ ಯುವ ಪೀಳಿಗೆಯು ‘ರೇಡಿಯೋ’ ಗೆ ಮಾನ್ಯತೆ ನೀಡಲು ಸಮ್ಮತಿಸುವರೆ?
ಏನೇ ಬಂದರೂ ಸಾಫ್ಟ್ ವೇರ್ ಹಾರ್ಡ್ ವೇರ್ ಇಂಜಿನಿಯರ್ ಸೇರಿದಂತೆ ಪ್ರತಿಯೊಬ್ಬ ಮಾನವನ ಕಣ್ಣು, ಮೆದುಳು, ಹೃದಯ, ಶ್ವಾಸಕೋಶ, ಇತ್ಯಾದಿ ಅಂಗಗಳ ಜೋಪಾನ ಹಾಗು ಪರಿಪೂರ್ಣ ಆರೋಗ್ಯ ನಿರ್ವಹಣೆ ಎಂಬ ವಿಷಯಕ್ಕೆ ಬಂದಾಗ ತೆಪ್ಪಗೆ ಒಪ್ಪಿಕೊಳ್ಳಲೇ ಬೇಕಾದ ಪ್ರಾಕೃತಿಕ ವಿಷಯವೆಂದರೆ: ಜಾಗತೀಕರಣ ಯುಗದಲ್ಲಿ ಯಾವುದೇ ಅತ್ಯಾಧುನಿಕ ಸಾಧನ ವಸ್ತುಗಳ ಜನಪ್ರಿಯತೆ ಮತ್ತು ಉಪಯೋಗವನ್ನು ಮೆಟ್ಟಿನಿಂತು ನಿರಂತರ ಎತ್ತರದಲ್ಲಿ ಮಿನುಗುತ್ತಿದೆ ರೇಡಿಯೋ! ಎಂದರೆ ಅತಿಶಯೋಕ್ತಿಯಲ್ಲ, ಬದಲಿಗೆ ವಾಸ್ತವ ಎಂಬುದನ್ನ ಈಗಿನ ಪೀಳಿಗೆಯವರು ತಿಳಿಯಲಿ ಎಂಬುದೇ ಈ ಲೇಖನದ ಉದ್ದೇಶ.
ಇದನ್ನೂ ಓದಿ: ಇದು ಆಕಾಶವಾಣಿ…. ಅಲ್ಲಿಂದ ಇಲ್ಲಿವರೆಗೆ… ರೇಡಿಯೋದೊಂದಿಗೆ ಸಾಗಿ ಬಂತು ನೆನಪಿನ ಹಾಯಿದೋಣಿ…
ನೂರಾರು ವರ್ಷಗಳ ಪರ್ಯಂತ “ರೇಡಿಯೋ-ಕೊಡುಗೆ ಸಂಪ್ರದಾಯ ವೊಂದು ಚಾಲ್ತಿಯಲ್ಲಿತ್ತು. ಹಬ್ಬ, ಹುಟ್ಟುಹಬ್ಬ, ವಿವಾಹ, ಇನ್ನಿತರ ಸಂತೋಷಕೂಟದ ಸಂದರ್ಭಗಳಲ್ಲಿ ಬಂಧು-ಮಿತ್ರರೊಳಗೆ ‘ಮುಯ್ಯಿ’ ರೂಪದಲ್ಲಿ ರೇಡಿಯೋ ನೀಡಲಾಗುತ್ತಿತ್ತು. ನಿವೃತ್ತಿ, ಬಡ್ತಿ, ವರ್ಗಾವಣೆ ಇತ್ಯಾದಿ ಕಾರಣಗಳಿಂದ ವಿದಾಯ ಹೇಳುವಾಗ ತಮ್ಮ ಸಹೋದ್ಯೋಗಿ, ಅಧಿಕಾರಿಗಳಿಗೂ ರೇಡಿಯೋವನ್ನು ಕೊಡುಗೆ [ಗಿಫ್ಟ್] ನೀಡುವ ಮೂಲಕ ಶುಭವನ್ನು ಕೋರಲಾಗುತ್ತಿತ್ತು ಎಂಬುದನ್ನು ಒಪ್ಪಲೇಬೇಕು.
ಅಂತಿಮವಾಗಿ, ರೇಡಿಯೋ ಎಂದರೆ ಅಲ್ಲಗಳೆವಂತಿಲ್ಲ, ಮೂಗು ಮುರಿವಂತಿಲ್ಲ. ಆದಾಗ್ಯೂ ಅತಿ ಬುದ್ಧಿವಂತರಿದ್ದರೆ, ಇವರಿಗೊಂದು ಉಧಾಹರಣೆ ನೀಡಲಾಗಿದೆ: ಇತ್ತೀಚೆಗೆ ಜರುಗಿದ ಒಂದು ಜ್ವಲಂತ ನಿದರ್ಶನವೆಂದರೆ ಆಕಾಶವಾಣಿ ಹಾಸನ ಕೇಂದ್ರದಿಂದ ಪ್ರತಿ ಭಾನುವಾರ ಬೆಳಗ್ಗೆ 8.30 ರಿಂದ 9 ಗಂಟೆವರೆಗೆ ನಿಗಧಿಗೊಂಡಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆ 2012 ಎಂಬ ಫೋನ್ ಇನ್-ನೇರ ಕಾರ್ಯಕ್ರಮ ಪ್ರಸಾರ ಆಗುತ್ತಿತ್ತು. ಈ ಸಮಯದಲ್ಲಿ ವಿದ್ಯಾರ್ಥಿಗಳಿಂದ ಒಂದರ ನಂತರ ಇನ್ನೊಂದು ವಿಷಯವಾರು ಪ್ರಶ್ನೆಗಳ ಸುರಿಮಳೆ ಆಕಾಶವಾಣಿ ನಿಲಯದ ಸಂಬಂಧಪಟ್ಟವರಿಗೆ ಕೇಳಲು ಅವುಗಳಿಗೆಲ್ಲ ಥಟ್ ಎಂದು ಕಿರಿದಾದ ಸಮರ್ಪಕ ಉತ್ತರಗಳನ್ನು ಆ ಕೂಡಲೇ ನೀಡಲಾಗುತ್ತಿತ್ತು. ಈ ಉತ್ತಮವಾದ ಪ್ರಯೋಜನಕಾರಿ ಕಾರ್ಯಕ್ರಮದಿಂದಾಗಿ ಹಾಸನ ಜಿಲ್ಲೆಯ ಸುತ್ತಮುತ್ತಲ ಸುಮಾರು15 ತಾಲೂಕಿನ ಸಾವಿರಾರು 10ನೆ ತರಗತಿ ವಿದ್ಯಾರ್ಥಿಗಳಿಗೆ ಬಹಳ ಹೆಚ್ಚಿನ ಪ್ರಯೋಜನ ಉಂಟಾಯಿತು.
ಇದರಿಂದ ನಮಗೆ ತಿಳಿಯುವುದೇನೆಂದರೆ ರೇಡಿಯೋ ಕಾರ್ಯಕ್ರಮದ ಮುಖೇನ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಂತದ ಶೈಕ್ಷಣಿಕ ಕ್ಷೇತ್ರದಲ್ಲಿ ಪರೀಕ್ಷಾ ಪೂರ್ವ ಸಿದ್ಧತೆ ಮಾಡಿ ಕೊಳ್ಳಲು ಒಂದು ಕ್ರಾಂತಿಯನ್ನು ಪ್ರಾರಂಭಿಸಲಾಯಿತು. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಲ್ಲಿ ಮಹಾನ್ ಸಾಧನೆಯನ್ನು ನಿರಾಯಾಸವಾಗಿ ಮಾಡಬಹುದು ಎಂಬುದನ್ನೂ ನಿರೂಪಿಸಲಾಯ್ತು. ಹೀಗೆ, ರೇಡಿಯೋದಿಂದ ಆಗಬಹುದಾದ ಬಹೋಪಯೋಗಿ ಕಾರ್ಯಗಳಿಗೆ ಇದಕ್ಕಿಂತ ಉತ್ತಮವಾದ ಸಾಕ್ಷಿ ಆಧಾರ ಇನ್ನೇನು ಬೇಕು? ಇಂತಹ ನೂರಾರು ಕಾರ್ಯಕ್ರಮಗಳು ಈಗಲೂ ಬದುಕಿವೆ! ಜೈರೇಡಿಯೋ! ಜೈಶ್ರೀಸಾಮಾನ್ಯ!