ArticlesLatest

ಬಂಡೀಪುರ ಅರಣ್ಯದಲ್ಲಿನ ಶತಮಾನ ಪೂರೈಸಿದ ಬ್ರಿಟೀಷರ ಕಾಲದ ಅತಿಥಿಗೃಹದ ವಿಶೇಷತೆ ಗೊತ್ತಾ?

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ನಿಸರ್ಗ ಪ್ರೇಮಿಗಳನ್ನು ತನ್ನತ್ತ ಸೆಳೆಯುವ ಸುಂದರ ತಾಣವಾಗಿದ್ದು, ಇಲ್ಲಿನ ಪ್ರಕೃತಿ ಚೆಲುವು ಮತ್ತು ಅದರೊಳಗಿನ ವನ್ಯಪ್ರಾಣಿಗಳ ನಲಿದಾಟ ಗಮನಸೆಳೆಯುತ್ತಿದೆ. ಇದರಾಚೆಗೆ ಅರಣ್ಯ ವ್ಯಾಪ್ತಿಯಲ್ಲಿ ಹತ್ತು ಹಲವು ವಿಶೇಷತೆಗಳಿದ್ದು, ಈ ಪೈಕಿ ಬಂಡೀಪುರದ ಮೂಲೆಹೊಳೆ ವಲಯದಲ್ಲಿನ ಚಮ್ಮನಹಳ್ಳ ಪ್ರದೇಶದಲ್ಲಿರುವ ಬ್ರಿಟೀಷರ ಕಾಲದ ಅತಿಥಿ ಗೃಹ ಇತಿಹಾಸದ ಕಥೆ ಹೇಳುತ್ತಿದೆ…

ಇದನ್ನೂ ಓದಿ: ಮಂಡ್ಯದ ನಿಸರ್ಗ ಸುಂದರ ತಾಣ ಹೇಮಗಿರಿ.. ಇದು ಅಣೆಕಟ್ಟೆಯಿಂದ ಸೃಷ್ಟಿಯಾಗುವ ಜಲಧಾರೆ..

ಈ ಅತಿಥಿಗೃಹದಲ್ಲಿ ಮೇಲ್ನೋಟಕ್ಕೆ ಅಂತಹ ವಿಶೇಷವೇನೂ ಕಂಡು ಬರದೆ ಇರಬಹುದು ಆದರೆ ಇದು ಶತಮಾನ ಸವೆಸಿದ ಅದಕ್ಕಿಂತ ಹೆಚ್ಚಾಗಿ ಬ್ರಿಟೀಷರಿಂದ ನಿರ್ಮಿಸಲ್ಪಟ್ಟ ಅತಿಥಿ ಗೃಹ ಎನ್ನುವ ಖ್ಯಾತಿಯಂತು ಇದಕ್ಕಿದೆ. ಹೀಗಾಗಿಯೇ ಈ ಅತಿಥಿಗೃಹ ಇವತ್ತು ಜನರ ಬಳಕೆಗೆ ಲಭ್ಯವಿಲ್ಲದಿದ್ದರೂ ಇತಿಹಾಸದ ಕಥೆ ಹೇಳುತ್ತಾ ನಿಂತಿದೆ. ಅವತ್ತಿನ ಕಾಲಕ್ಕೆ ಇದು ವೈಭವದಿಂದ ಮೆರೆದಿರುವುದಂತು ಸತ್ಯ.

ಇದು ಬ್ರಿಟೀಷರ ಕಾಲದಲ್ಲಿ ನಿರ್ಮಿಸಿದ ಕಟ್ಟಡ ಎನ್ನುವುದೇ ಎಲ್ಲರೂ ಅಚ್ಚರಿ ಪಡುವ ವಿಷಯವಾಗಿದೆ. ಅವತ್ತು ನಿರ್ಮಿಸಿದ ಕಟ್ಟದ ಇವತ್ತಿಗೂ ಇದೆ ಎನ್ನುವುದು ಸಂತಸದ ವಿಚಾರವಾಗಿದೆ. ಮೈಸೂರಿಗೆ ಬರುತ್ತಿದ್ದ ಬ್ರಿಟೀಷರು ಮಹಾರಾಜರೊಂದಿಗೆ ಬಂಡೀಪುರಕ್ಕೆ ಬರುತ್ತಿದ್ದರು. ಹೀಗಾಗಿ ವಿಶ್ರಾಂತಿ ಪಡೆಯಲು ಅರಣ್ಯದ ನಡುವೆ ಇದ್ದ ಈ ಕಟ್ಟಡವನ್ನು ಆಶ್ರಯಿಸುತ್ತಿದ್ದರು.  ಈ ಕಟ್ಟಡವನ್ನು ಬಂಡೀಪುರದ ಮೂಲೆಹೊಳೆ ವಲಯದಲ್ಲಿನ ಚಮ್ಮನಹಳ್ಳ ಪ್ರದೇಶದಲ್ಲಿ 1917ರಲ್ಲಿ ನಿರ್ಮಿಸಿದ್ದು ಇವತ್ತಿಗೂ ಮಳೆ, ಗಾಳಿ, ಬಿಸಿಲೆಗೆ ಜಗ್ಗದೆ ಗಟ್ಟಿಯಾಗಿ ನಿಂತಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ: ಬಿಳಿಗಿರಿ ಬೆಟ್ಟದ ಮೇಲೆ ವೀರಾಜಮಾನನಾದ ರಂಗನಾಥ… ವಿಶೇಷತೆಗಳು ಏನೇನು?

ಈ ಅತಿಥಿಗೃಹದಲ್ಲಿ ಬ್ರಿಟೀಷ್ ಅಧಿಕಾರಿಗಳಲ್ಲದೆ ಮೈಸೂರು ಅರಸರು ಕೂಡ ಪಕ್ಕದ ಊಟಿಗೆ ತೆರಳುವಾಗ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಕಲ್ಲು, ಇಟ್ಟಿಗೆ, ಗಾರೆಯಿಂದ ಗೋಡೆಯನ್ನು ನಿರ್ಮಿಸಲಾಗಿದ್ದು, ಮಂಗಳೂರು ಹೆಂಚಿನ ಛಾವಣಿ ಹೊಂದಿದೆ. ಬಂಡೀಪುರ ವ್ಯಾಪ್ತಿಯ ಮೂಲೆಹೊಳೆ ವಲಯದಲ್ಲಿನ ದಟ್ಟ ಅರಣ್ಯ ಪ್ರದೇಶದ ಚಮ್ಮನಹಳ್ಳದಲ್ಲಿನ ಈ ಅತಿಥಿ ಗೃಹ ಅಂದಿನ ಕಾಲದಲ್ಲಿ ಬಹಳಷ್ಟು ಖ್ಯಾತಿಯನ್ನು ಪಡೆದಿತ್ತಲ್ಲದೆ, ಬ್ರಿಟೀಷ್ ಅಧಿಕಾರಿಗಳು ಮತ್ತು ಮೈಸೂರು ಒಡೆಯರ್ ರಾತ್ರಿ ಇಲ್ಲಿ ತಂಗಿದ್ದು, ಮುಂಜಾನೆ ಈ ವ್ಯಾಪ್ತಿಯಲ್ಲಿ ಅಡ್ಡಾಡುವ ಪ್ರಾಣಿಗಳನ್ನು ನೋಡಿ ಖುಷಿ ಪಡುತ್ತಿದ್ದರು.

ಸ್ವಾತಂತ್ರ್ಯಾ ನಂತರ ಅರಣ್ಯ ಇಲಾಖೆಯ ಅತಿಥಿಗೃಹವಾಗಿ ಮುಂದುವರೆಯಿತಲ್ಲದೆ, 2000ರಲ್ಲಿ ಈ ಅತಿಥಿಗೃಹದ ಮೇಲ್ಭಾಗದಲ್ಲಿ ವೀಕ್ಷಣಾಗೋಪುರವನ್ನು ನಿರ್ಮಿಸಲಾಯಿತು. ಈ ಗೋಪುರ ನಿರ್ಮಾಣದ ಬಳಿಕ ಕಾಡು ಪ್ರಾಣಿಗಳ ಚಲನವಲನ ವೀಕ್ಷಣೆಗೆ ಅನುಕೂಲವಾಯಿತಲ್ಲದೆ, ಇಲ್ಲಿಂದ ನಿಂತು ನೋಡಿದರೆ ಕೇರಳ, ಗೋಪಾಲಸ್ವಾಮಿಬೆಟ್ಟ, ಮೂಲೆಹೊಳೆ, ಬಂಡೀಪುರ ವಲಯದ ಅರಣ್ಯ ಪ್ರದೇಶ ಕಾಣುವುದರಿಂದ ಬೇಸಿಗೆಯಲ್ಲಿ ಕಾಡ್ಗಿಚ್ಚು ಕಾಣಿಸಿದರೆ, ವಲಯ ಪತ್ತೆ ಹಚ್ಚಿ ಬೆಂಕಿ ನಂದಿಸಲು ಅನುಕೂಲವಾಗುತ್ತಿದೆ.

ಇದನ್ನೂ ಓದಿ: ಚಾಮುಂಡಿಬೆಟ್ಟದಲ್ಲೀಗ ಹಿಮಮಳೆ… ಹಿಮದ ಮಳೆಯಲ್ಲಿ ಮಿಂದೇಳಬಾರದು?

ಹಿಂದೆ ಬಂಡೀಪುರ ಹುಲಿಯೋಜನೆಗೆ ಸೇರಿರುವ ಈ ಅತಿಥಿಗೃಹದಲ್ಲಿ ತಂಗಲು ರಜಾದಿನಗಳಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಗಿಬೀಳುತ್ತಿದ್ದರು. ಇದಕ್ಕಾಗಿ ಮಂತ್ರಿಗಳಿಂದಲೂ ಪ್ರಭಾವ ಬೀರುತ್ತಿದ್ದರು. ಹೆಚ್ಚಿನವರು ಮೋಜು ಮಸ್ತಿ ಮಾಡುವ ಸಲುವಾಗಿ ಆಗಮಿಸುತ್ತಿದ್ದರು. ಇಂತಹವರನ್ನು ಸುರಕ್ಷಿತವಾಗಿ ಕರೆದೊಯ್ದು ವಾಪಸ್ ಕರೆತರುವುದು ಅರಣ್ಯ ಇಲಾಖೆಯ ಸಿಬ್ಬಂದಿಗೆ ದೊಡ್ಡ ತಲೆನೋವಾಗಿತ್ತು. ಜತೆಗೆ ಪರಿಸರ ಸೂಕ್ಷ್ಮ ವಲಯದಲ್ಲಿ ವಾಹನಗಳ ಸಂಚಾರ ಹಾಗೂ ಅತಿಥಿಗಳ ಗದ್ದಲದಿಂದ ವನ್ಯಜೀವಿಗಳು ತೊಂದರೆ ಎದುರಿಸುತ್ತಿದ್ದವು.

ಇಂತಹ ತೊಂದರೆಗಳನ್ನೆಲ್ಲ ಕಣ್ಣಾರೆ ಕಂಡ ಅರಣ್ಯಾಧಿಕಾರಿಗಳು ಅತಿಥಿಗೃಹಕ್ಕೆ ಸಾರ್ವಜನಿಕರ ಪ್ರವೇಶ ನಿರಾಕರಿಸಿದರು. ಹೀಗಾಗಿ ಜನರ ಗಲಾಟೆಯಿಲ್ಲದೆ ಅತಿಥಿಗೃಹ ಈಗ ಪ್ರಶಾಂತವಾಗಿದೆ. ಅರಣ್ಯಾಧಿಕಾರಿಗಳು, ಸಿಬ್ಬಂದಿ ಹೊರತು ಪಡಿಸಿದರೆ ಇದರತ್ತ ಯಾರೂ ಸುಳಿಯುತ್ತಿಲ್ಲ. ಕಟ್ಟಡಕ್ಕೆ ಬೆಳಕಿನ ವ್ಯವಸ್ಥೆಗೆ ಸೋಲಾರ್ ದೀಪವನ್ನು ಅಳವಡಿಸಲಾಗಿದೆ. ಸಮೀಪದ ಕೆರೆಯ ಬಳಿ ಕೊಳವೆಬಾವಿಯಿಂದ ನೀರು ಒದಗಿಸಲಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಅರಣ್ಯದ ನಡುವೆ ಮಳೆಗಾಳಿ, ಚಳಿಯ ಹೊಡೆತವನ್ನು ಸಹಿಸುತ್ತಾ ಬಂದಿರುವ ಈ ಕಟ್ಟಡ ಶತಮಾನ ಪೂರೈಸಿದ ಸಂಭ್ರಮದಲ್ಲಿದ್ದು, ಇದನ್ನು ಮುಂದಿನ ತಲೆಮಾರಿಗೂ ಉಳಿಸಿಕೊಳ್ಳಬೇಕಾಗಿದೆ.

ಇದನ್ನೂ ಓದಿ: ಬಿಳಿಗಿರಿ ಬೆಟ್ಟದ ಮೇಲೆ ವೀರಾಜಮಾನನಾದ ರಂಗನಾಥ… ವಿಶೇಷತೆಗಳು ಏನೇನು?

 

B M Lavakumar

admin
the authoradmin

Leave a Reply