“ತಮಸೋಮ ಜ್ಯೋತಿರ್ಗಮಯ….. ” ಎಂಬ ಪವಮಾನ ಮಂತ್ರವು 108 ಆದಿಮೂಲ ಉಪನಿಷತ್ಗಳ ಪೈಕಿ ಒಂದಾದ ‘ಬೃಹದಾರಣ್ಯಕ’ ಉಪನಿಷತ್ತಿನ ಪವಿತ್ರ ಶ್ಲೋಕ. ಪ್ರತಿಯೊಂದು ಯಜ್ಞ-ಯಾಗ ಕೈಗೊಳ್ಳುವಾಗ ಅಗ್ನಿದೇವನಿಗೆ ಅರ್ಪಿಸುವ ಗೌರವ ವಂದನೆ. ಇದು ಅನಾದಿ ಕಾಲದಿಂದ ಪ್ರತೀತಿಯಲ್ಲಿರುವ ವೇದಿಕಾ ಪದ್ಧತಿ ಗಳಲ್ಲೊಂದು. ದಾನವ-ಮಾನವರು ತ್ರಿಮೂರ್ತಿಗಳಿಗೆ, ಕೋಟಿದೇವತೆಗಳಿಗೆ ಯಾವುದಾದರು ಹರಕೆ ಸಲ್ಲಿಸಲು ಅಥವ ಅವರಿಂದ ಏನಾದರು ವರ ಪಡೆಯಲು ಅಗ್ನಿಯ ಮೂಲಕವೆ ಎಂಬುದು ಯಾರ ಉವಾಚ?!
ಈ ನಿಯಮ ಪಾಲಿಸದೆ ತಮ್ಮ ಭಕ್ತಿಶಕ್ತಿಯಿಂದ ನೇರವಾಗಿ ದೈವ ಸಾಕ್ಷಾತ್ಕಾರ ಕಂಡುಕೊಂಡ; ಗೋರಕುಂಬಾರ, ಬೇಡರಕಣ್ಣಪ್ಪ, ಕನಕದಾಸ, ಕಾಳಿದಾಸ, ಪುರಂದರದಾಸ ಮುಂತಾದವರು ನಿಜಭಕ್ತರಾದರು! ಅಗ್ನಿಹಾದಿಯನ್ನು ಹಿಂದಿಕ್ಕಿ ಮುಕ್ತಿ ಪಡೆದವರಲ್ಲಿ ಮಂತ್ರಾಲಯದ ಗುರು ರಾಘವೇಂದ್ರ, ಜಾತ್ಯಾತೀತ ಶ್ರೇಷ್ಠ ಶಿರಡಿ ಸಾಯಿಬಾಬ, ನಿಸ್ವಾರ್ಥ ಸಂತ ಶಿಶುನಾಳ ಷರೀಫ಼ ಮುಂತಾದವರಲ್ಲದೇ ಇನ್ನೂ ಅನೇಕ ಸಾಧಕರು ಅವರವರ ಹಾದಿ ಮೂಲಕ ಲೋಕ ಕಲ್ಯಾಣಕ್ಕೆ ಸಕಲವನ್ನು ಸಮರ್ಪಿಸಿ ನಿಸ್ವಾರ್ಥ ಮೂರ್ತಿಗಳಾಗಿ ಮುಕ್ತಿ ಪಡೆಯಲಿಲ್ಲವೆ?
ಇಂಥ ಸಾರ್ಥಕರಲ್ಲಿ ಇನ್ನಷ್ಟು ಉತ್ತಮ ಉದಾಹರಣೆ:- ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಲಾಲ್-ಬಾಲ್-ಪಾಲ್, ಗಾಂಧೀಜಿ, ನೇತಾಜಿ ಸುಭಾಷಚಂದ್ರ ಬೋಸ್, ಸರ್ದಾರ್ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ರವೀಂದ್ರನಾಥ್ ಠಾಗೂರ್, ಕುವೆಂಪು, ಕೆಂಗಲ್ ಹನುಮಂತಯ್ಯ, ನರೇಂದ್ರಮೋದಿ, ಮುಂತಾದ ಕೆಲವರು ಯಾವುದೇ ಪರಮಾತ್ಮ ಗಳಿಗಿಂತ ಕಡಿಮೆಯೇನಲ್ಲ? ಇವರೆಲ್ಲರೂ ಒಂದಿಲ್ಲೊಂದು ರೀತಿ, ಕತ್ತಲೆಯಲ್ಲಿ ಇದ್ದವರನ್ನು ಬೆಳಕಿನೆಡೆಗೆ ಕರೆತಂದವರೇ ಆಗಿದ್ದು, ಭಕ್ತಿ ಶಕ್ತಿ ಮುಕ್ತಿ ಪವಿತ್ರತೆ ಪಾತಿವ್ರತ್ಯ ದೇಶಪ್ರೇಮ ಇತ್ಯಾದಿ ಯಾವುದೇ ಮಾರುಕಟ್ಟೆಯಲ್ಲಿ ಸಿಗುವಂಥದ್ದಲ್ಲ ಎಂದು ತೋರಿಸಿಕೊಟ್ಟರು.
ಇದರ ಮೇಲೆ ಕ್ಲಿಕ್ ಮಾಡಿ ವಿವಿಧ ಬರಹಗಳನ್ನು ಓದಿ
ಇದನ್ನು ಪುಷ್ಟೀಕರಿಸುವಂಥ ವಿವೇಕಾನಂದ ವಾಣಿ:- [1] ಸಾಧನೆ ಮಾಡಲು ಹೊರಡುವ ಹಾದಿಯಲ್ಲಿ ಬೆಕ್ಕುಗಳಿಗಿಂತ ಹೆಚ್ಚಾಗಿ ಜನಗಳೆ ಅಡ್ಡ ಬರುತ್ತಾರೆ. [2] ನಿಮ್ಮನ್ನು ನೀವು ಜಯಿಸಿದಾಗ ಜಗತ್ತೇ ನಿಮ್ಮದಾಗುತ್ತದೆ. [3] ಮಾನವನಲ್ಲಿ ಅಡಗಿರುವ ದೈವತ್ವ ಪ್ರಕಾಶನ ಪಡಿಸುವುದೇ ಧರ್ಮ [4] ಬಡವರು- ಅಶಕ್ತರು- ರೋಗಿಗಳಲ್ಲಿ ಶಿವನನ್ನು ಕಾಣುವವರೇ ನಿಜವಾದ ಶಿವಭಕ್ತರು [5] ಜ್ಞಾನಿಗಳು ಮೊದಲು ತಮ್ಮಲ್ಲಿರುವ ದೋಷವನ್ನು ಕಂಡುಕೊಳ್ಳುವರು.
ಆಶ್ವಯುಜ ಅಮಾವಾಸ್ಯೆ ಹಿಂದಿನ ದಿನ ನರಕಾಸುರನ ಸಂಹಾರಗೈದ ಪ್ರಯುಕ್ತ ‘ನರಕ ಚತುರ್ದಶಿ’ಯಂದು ಕಷ್ಟ ಕಾರ್ಪಣ್ಯ ನಷ್ಟ ನೋವು ಎಂಬ ನರಕಗಳನ್ನು ನಾಶಗೊಳಿಸಿ ದರಿದ್ರ ಲಕ್ಷ್ಮಿಯನ್ನು ಓಡಿಸಿ ಹಳೆ ಕೊಳೆಗಳನ್ನು ತೆಗೆದೊಗೆದು ಮನ-ಮನೆ ಪರಿಶುದ್ಧಗೊಳಿಸಿ ಸುಖ ಸಂತೋಷ ನೆಮ್ಮದಿ ಬರಮಾಡಿಕೊಂಡು ಧನಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಅಮಾವಾಸ್ಯೆ ಮರುದಿನ ಕಾರ್ತಿಕ ಮಾಸದ ಪಾಡ್ಯಮಿಯಂದು ವಿಷ್ಣುವಿನ ಅವತಾರದ ವಾಮನನಿಂದ ವರಪಡೆದ ಬಲಿ ಚಕ್ರವರ್ತಿಯ ಆಸೆಯಂತೆ ಅಜ್ಞಾನ, ಅಹಂಕಾರದ ಅಂಧಕಾರ ಅಳಿಸಿ ಸುಜ್ಞಾನ, ಸದಾಚಾರವೆಂಬ ಬೆಳಕು ಮೂಡಿಸಲು ಪ್ರತಿಯೊಂದು ಮನೆಯ ಒಳ-ಹೊರಗೆ ಹಣತೆಗಳ ಪ್ರಕಾಶದ ಹಬ್ಬವು ಕಣ್ಮನ ಸೂರೆಗೊಳ್ಳುತ್ತದೆ.
ಜಾನಪದ ರೀತಿಯ ಅಥವ ಆದಿನಿವಾಸಿಗಳ ಅಥವ ಸ್ಥಳೀಯ ಪದ್ಧತಿ ಪ್ರಕಾರ 3 ದಿನಗಳ ಹಬ್ಬ… ಮೊದಲದಿನ ಎಲ್ಲ ಬಗೆಯ ಕಸ ಕಲ್ಮಶ ತೆಗೆದು ಬಿಸಾಡುವ ಶುಚಿತ್ವ ದಿನ, ಎರಡನೇ ದಿನ ನೀರು ತುಂಬಿಸಿ ಲಕ್ಷ್ಮಿಯನ್ನು ಬರಮಾಡಿ ಕೊಳ್ಳುವ ದಿನ, 3ನೇ ದಿನ ದೀಪಗಳ ಹಚ್ಚುವ ಮೂಲಕ ನವಜ್ಯೋತಿ ಬೆಳಗಿಸಿ ಹೊಸಬಟ್ಟೆ ಧರಿಸಿ ಸಿಹಿ ತಿಂಡಿ ಹಂಚಿ ಸವಿಮಾತುಗಳನ್ನಾಡಿ ಶುಭ-ಲಾಭ ಕೋರುತ್ತ ಸಂಭ್ರಮಿಸುವ ದಿನ!
ಈ ತೆರದಲ್ಲಿ ಪ್ರತಿಯೊಬ್ಬ ಮನುಷ್ಯನೂ ಕಳೆದ ಹಳೇ ವರ್ಷದ ದುಃಖ ದುಮ್ಮಾನಗಳನ್ನು ಮಾಯವಾಗಿಸಿ ಮುಂಬರುವ ಹೊಸ ವರ್ಷದಲ್ಲಿ ಹರುಷದ ಹೊನಲು ಹರಿಸುವಂತೆ ದೇವರನ್ನು ಬೇಡುವ ಮತ್ತು ದೀಪದಿಂದ ದೀಪ ಹಚ್ಚುವ ರೀತಿ ಒಬ್ಬರು ಮತ್ತೊಬ್ಬರಿಗೆ ಜಾತಿ-ಮತ-ಧರ್ಮ-ವರ್ಣ ಭೇದ ತೊರೆದು ಕೈಲಾದಷ್ಟು ಸಹಾಯ ಸಹಕಾರ ನೀಡಲು ಪ್ರತಿಜ್ಞೆ ಮಾಡುವ ಹಬ್ಬವೇ ದೀಪಾವಳಿ?!
ಒಳಿತು-ಕೆಡಕುಗಳ ಪರಿಧಿಯಲ್ಲಿ ವಿವೇಕ ಚಿತ್ತರಾಗಿ ಸಹಬಾಳ್ವೆ ನಡೆಸುವ ಬದಲು, ಶಬ್ಧಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯ, ಮುಂತಾದ ಪರಿಸರ ಹಾಳು ಮಾಡುವ ಕಾರ್ಯಗಳ ಜತೆಗೆ ವೃದ್ಧರ, ಮಕ್ಕಳ, ಮಹಿಳೆಯರ, ವಿಶೇಷವಾಗಿ ದುರ್ಬಲ (ಹೃದಯ) ರೋಗಿಗಳ ಸಾವಿಗೂ ಕಾರಣವಾಗುವ ಮಾರಕ ಕೆಲಸಗಳನ್ನು ಕೇವಲ ಟನ್ ಗಟ್ಟ್ಟಲೆ ಪಟಾಕಿ ಸುಡುವ ಮೂಲಕ ಆಚರಿಸುವುದು ಮತ್ತು ವಿಕಾರದ ಅಕಾರ್ಯವನ್ನು ಅಹಂಕಾರದಿಂದ, ಡೌಲು-ಡಂಭಾಚಾರದಿಂದ ಯಾರನ್ನೊ ಮೆಚ್ಚಿಸಲು, ಯಾವುದನ್ನೊ ಬಹಿರಂಗ ಪಡಿಸಲು ಘನಂದಾರಿ ಕೈಂಕರ್ಯ ಕೈಗೊಳ್ಳುವುದು ಎಷ್ಟರ ಮಟ್ಟಿಗೆ ಸರಿ?
ಯಾರು ಯಾರನ್ನು ಯಾವ ಕತ್ತಲೆಯಿಂದ ಯಾವ ಬೆಳಕಿನೆಡೆಗೆ ಕರೆದೊಯ್ದ ಅರ್ಥ ಬರುತ್ತದೆ?! ಶ್ರೀಸಾಮಾನ್ಯನ ಜೀವವಾದ ಗಾಳಿ ನೀರು ಹಸಿರು ಪ್ರಕೃತಿ ಜತೆ ಚೆಲ್ಲಾಟವಾಡುತ್ತ ಎಲ್ಲರ ಸುಖ ಸಂತೋಷ ನೆಮ್ಮದಿ ಹಾಳು ಗೆಡಹುವುದು ಯಾವ ನ್ಯಾಯಕ್ಕೆ, ಯಾರ ಪುರುಷಾರ್ಥಕ್ಕೆ? ಹೀಗೆಲ್ಲ ಮಾಡಲೇಬೇಕೆಂದು ಯಾವ ವೇದೋಪನಿಷತ್-ಧರ್ಮಗ್ರಂಥದಲ್ಲಿ ಬರೆಯಲಾಗಿದೆ?! ಇತ್ತೀಚೆಗಂತೂ ಯುವ ಪೀಳಿಗೆಯು ಹತ್ತು ಹಲವು ಅಡ್ಡದಾರಿ ಹಿಡಿದು ಬೆಳಕಿನಿಂದ ಕತ್ತಲೆಯೆಡೆಗೆ ಹೆಚ್ಚಾಗಿ ಸಾಗುತ್ತಿರುವುದು ಅತ್ಯಂತ ವಿಷಾದ.
ಹಿರಿಯ ಬರಹಗಾರ ಕುಮಾರಕವಿ ನಟರಾಜ್ ಅವರ ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇಂಥ ದುರಂತಕ್ಕೆ ಕಾರಣವಾದ ಕೆಲವು ಉದಾಹರಣೆಗೆ ಅತಿಯಾದ ಟಿವಿ, ಮೊಬೈಲ್ ಬಳಕೆಯಿಂದ ಯುವಕರಲ್ಲಿ ವ್ಯಸನತೆ, ಮಕ್ಕಳಲ್ಲಿ ಖಿನ್ನತೆ, ದಿನೇ ದಿನೇ ಹೆಚ್ಚಾಗುತ್ತಿರುವುದು? ಹದಿವಯಸ್ಸಲ್ಲೆ ಧೂಮಪಾನ, ಮದ್ಯಪಾನ, ತಂಬಾಕುಸೇವನೆ, ಡ್ರಗ್ಸ್ ಮುಂತಾದ ಅನಿಷ್ಟ ದುಷ್ಟಚಟಕ್ಕೆ ಬಲಿಯಾಗಿ ಅಕಾಲ ಮರಣಕ್ಕೆ, ಆತ್ಮಹತ್ಯೆಗೆ ಶರಣಾಗುತ್ತಿರುವುದು! ಎಲ್ಲಕ್ಕಿಂತ ಮಿಗಿಲಾಗಿ ಭಯೋತ್ಪಾದಕ, ದೇಶದ್ರೋಹದ ಸಂಘ-ಸಂಸ್ಥೆ ಸೇರಿ ತರಬೇತಿ ಪಡೆದು ತನ್ನದೆ ದೇಶ ಭಾಷೆ ಸಂಸ್ಕೃತಿ ಪರಂಪರೆ ಬಂಧು ಬಳಗಕ್ಕೆ ತಾನೇ ಕಂಟಕನಾಗುವುದು? ಇಂಥ ದುಷ್ಕೃತ್ಯಗಳು ಯಾವ ವಿಧದಲ್ಲಿ “ದೀಪದಿಂದ ದೀಪ ಬೆಳಗು” ವಾಕ್ಯಕ್ಕೆ ಅನ್ವರ್ಥವಾಗುತ್ತದೆ?
ಉತ್ತರ ಭಾರತದಲ್ಲಿ ದೀವಾಲಿ ಹೆಸರಲ್ಲಿ ರಾವಣ ಸಂಹಾರ ದಿನವನ್ನಾಗಿ ಆಚರಿಸುವ ಪದ್ಧತಿ ಯುಂಟು?! ರಾವಣ ಒಬ್ಬನನ್ನೇ ಏಕೆ ಟಾರ್ಗೆಟ್ ಮಾಡಬೇಕು? ಹಾಗೆ ನೋಡಿದರೆ ರಾವಣನು ಅತಿಯಾದ ಮಾತೃಭಕ್ತಿ ಉಳ್ಳವನಾಗಿದ್ದ. ತನ್ನ ಕುಟುಂಬದ ಹಾಗು ಪ್ರಜೆಗಳ ಕ್ಷೇಮ ಕಾಪಾಡುವ ಉತ್ತಮ ಚಕ್ರವರ್ತಿಯಾಗಿದ್ದ. ದಶಕಂಠನಿಗಿಂತಲೂ ಕೆಟ್ಟದಾದ ಚಾರಿತ್ರ್ಯವುಳ್ಳ ಕಂಸ, ಜರಾಸಂಧ, ಶಿಶುಪಾಲ, ಮುಂತಾದವರನ್ನ ಹೊರಗಿಟ್ಟಿದ್ದೇಕೆ? “ಮೂರು ಲೋಕಕ್ಕೂ ತಾನೇ ದೇವರು, ತನ್ನನ್ನೇ ಎಲ್ಲರೂ ಪೂಜಿಸುವಂತೆ” ಲೋಕ ಕಂಟಕರಾಗಿದ್ದ ಹಿರಣ್ಯಾಕ್ಷ, ಹಿರಣ್ಯಕಶ್ಯಪ ಸೋದರರ ಪುತ್ಥಳಿ ಸುಡುವ ಪದ್ಧತಿ ಜಾರಿಯಲ್ಲಿ ಇಲ್ಲವೇಕೆ? ಕೇವಲ ರಾವಣನನ್ನೇ ಏಕೆ ಸುಟ್ಟು ಬೂದಿ ಮಾಡುವರು? ಈ ಬಗ್ಗೆ ಅದೇನೇ ತರ್ಕವಿರಲಿ, ಭಾರತೀಯರೆಲ್ಲರೂ ಒಂದಾಗಿ ಬಾಳುತ್ತ ಮಾನವರಾಗಿ ಬದುಕೋಣ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಸಂಕಲ್ಪದಿಂದ ದೀಪಾವಳಿ ಆಚರಿಸೋಣ!
ಅನಂತಾನಂತ ಧನ್ಯವಾದಗಳು ಲವ ಸರ್