ArticlesLatest

ಕೊಡಗಿನಲ್ಲಿ ಧಾನ್ಯ ಲಕ್ಷ್ಮಿಯನ್ನು ಮನೆಗೆ ಕೊಂಡೊಯ್ದು ಸಂಭ್ರಮಿಸುವ ಹುತ್ತರಿ ಹಬ್ಬ.. ಏನಿದರ ವಿಶೇಷ?

ಕೊಡಗಿನಲ್ಲಿ ಒಂದೆಡೆ ಮಳೆ ಕಡಿಮೆಯಾಗಿ ಸಣ್ಣಗೆ ನಡುಕ ಹುಟ್ಟಿಸುವ ಚಳಿ ಆರಂಭವಾಗಿದೆ. ಮತ್ತೊಂದೆಡೆ ಹಚ್ಚಹಸಿರಾಗಿದ್ದ ಭತ್ತದಗದ್ದೆಯ ಬಯಲುಗಳು ತೆನೆಬಿಟ್ಟು ಹೊಂಬಣ್ಣಕ್ಕೆ ತಿರುಗಿವೆ. ಮನೆ, ಮನಗಳಲ್ಲಿ ಹುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಡಿಸೆಂಬರ್ 4ರಂದು ಕೊಡಗಿನಾದ್ಯಂತ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೊಡಗಿನವರಿಗೆ ಹುತ್ತರಿ ಹಬ್ಬ ಸುಗ್ಗಿ ಹಬ್ಬವಾದರೂ ಇದರಲ್ಲಿ ಇಲ್ಲಿನ ಸಂಸ್ಕೃತಿ, ಸಂಪ್ರದಾಯದ ಲೇಪನ, ಜಾನಪದ ಮಿಳಿತವಾಗಿದೆ. ಗದ್ದೆಯಿಂದ ತೆನೆಯೊಡೆದ ಧಾನ್ಯ(ಭತ್ತ)ವನ್ನು ತಂದು ಅದನ್ನು ಪೂಜಿಸಿ, ಹೊಸ ಅಕ್ಕಿಯ ಪಾಯಸ ಮಾಡಿ ಮನೆಮಂದಿಯೆಲ್ಲಾ ಸೇವಿಸುವ ಮೂಲಕ ವರ್ಷ ಪೂರ್ತಿ ಮನೆಯಲ್ಲಿ ಧಾನ್ಯ ತುಂಬಿರಬೇಕೆಂದು ಪ್ರಾರ್ಥಿಸುವುದು ಹಬ್ಬದ ಆಶಯವಾಗಿದೆ.

ಹಿರಿಯಮನೆ (ಐನ್‌ಮನೆ)ಯಲ್ಲಿ ಸೇರಿ ಮನೆಯ ’ನೆಲ್ಲಕ್ಕಿ’ ನಡುಬಾಡೆಯಲ್ಲಿ ತೂಗು ದೀಪದ ಕೆಳಗೆ ಚಾಪೆ ಹಾಸಿ ಹುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಹಲಸಿನ ಎಲೆ, ಕುಂಬಳಿ ಎಲೆ, ಕಾಡು ಗೇರು ಎಲೆ ಹೀಗೆ ಐದು ತರಹದ ಎಲೆಯನ್ನು ಹಾಗೂ ಕಾಡಿನಲ್ಲಿ ಸಿಗುವ ಅಚ್ಚುನಾರನ್ನು ಇರಿಸಲಾಗುತ್ತದೆ. ಮತ್ತೊಂದು ಕುಕ್ಕೆಯ ತುಂಬ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರಿನಲ್ಲಿ ಅಕ್ಕಿ ತುಂಬಿಡಲಾಗುತ್ತದೆ.  ಹುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡಲಾಗುತ್ತದೆ. ಇದರ ಪಕ್ಕದಲ್ಲಿ ಕುಡುಗೋಲು, ಮುಕ್ಕಾಲಿಯ ಮೇಲೆ ’ತಳಿಯಕ್ಕಿ ಬೊಳ್ಚ’, ಮೂರು ವೀಳ್ಯದೆಲೆ ಹಾಗೂ ಮೂರು ಅಡಿಕೆಯನ್ನು ಇಡಲಾಗುತ್ತದೆ.

ಮುತೈದೆಯರು ಅಕ್ಕಿ ಹಿಟ್ಟಿನಿಂದ ಹಬ್ಬಾಚರಣೆಗೆ ಇರಿಸಲಾದ ವಸ್ತುಗಳ ಮುಂದೆ ರಂಗೋಲಿ ಇಡುತ್ತಾರೆ. ಬಳಿಕ ದೇವರನ್ನು ಪ್ರಾರ್ಥಿಸುತ್ತಾ ಎಲೆಗಳನ್ನು ಸಂಪ್ರದಾಯದಂತೆ ಒಂದರ ಮೇಲೊಂದು ಇಟ್ಟು ನಾರಿನಿಂದ ಕಟ್ಟಲಾಗುತ್ತದೆ. ಇದನ್ನು ನೆರೆ ಕಟ್ಟುವುದು ಎಂದು ಕರೆಯುತ್ತಾರೆ. ಬಳಿಕ ಬೇಯಿಸಿದ ಹುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ  ತುಪ್ಪದೊಂದಿಗೆ ಸೇರಿಸಿ ಸೇವಿಸುತ್ತಾರೆ. ಜೊತೆಗೆ ಇತರೆ ತಿಂಡಿ ತೀರ್ಥಗಳೂ ಇರುತ್ತವೆ. ಇದನ್ನು ಫಲಹಾರ ಎನ್ನುತ್ತಾರೆ. ಫಲಹಾರದ ಬಳಿಕ ಸಿದ್ದಪಡಿಸಲಾದ ’ಕುತ್ತಿ’ಯನ್ನು ಕುಟುಂಬದ ಹಿರಿಯರೊಬ್ಬರು ಹೊತ್ತು ಊರಿನಲ್ಲಿರುವ ಅಂಬಲ(ಮೈದಾನ)ಕ್ಕೆ ತೆರಳುತ್ತಾರೆ. ಅಲ್ಲಿಗೆ ಸುತ್ತಮುತ್ತಲಿನ ಕುಟುಂಬದವರು, ಸಂಬಂಧಿಕರು ಬರುತ್ತಾರೆ. ಅಲ್ಲಿಂದ ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯಲು ಕುಡುಗೋಲನ್ನು ಕದಿರು ತೆಗೆಯುವವನ ಕೈಗೆ ನೀಡುತ್ತಾರೆ. ಈ ಸಂದರ್ಭ ಮುತೈದೆಯೊಬ್ಬರು ’ತಳಿಯಕ್ಕಿ ಬೊಳ್ಚ’ವನ್ನು ಹಿಡಿದುಕೊಳ್ಳುತ್ತಾರೆ. ಬಳಿಕ ಮನೆಯವರೆಲ್ಲರೂ ಒಡ್ಡೋಲಗದೊಂದಿಗೆ  ಕದಿರು ಕೊಯ್ಯುವ ಗದ್ದೆಯತ್ತ ತೆರಳುತ್ತಾರೆ.

ಗದ್ದೆ ತಲುಪಿದ ಬಳಿಕ ಹಾಲುಜೇನು ಮೊದಲಾದುವುಗಳನ್ನು  ಕದಿರಿನ ಬುಡಕ್ಕೆ ಸುರಿಯಲಾಗುತ್ತದೆ. ಹುತ್ತರಿ ಕುಕ್ಕೆಯಲ್ಲಿ ಕೊಂಡೊಯ್ದ ಅಚ್ಚುನಾರಿನಿಂದ ಕಟ್ಟಿದ ಎಲೆಗಳನ್ನೊಳಗೊಂಡ ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಲಾಗುತ್ತದೆ. ಆ ನಂತರ ಹುತ್ತರಿ ಮೂಹೂರ್ತಕ್ಕೆ ಸುಸೂತ್ರವೆನಿಸುವಂತೆ ಗುಂಡೊಂದನ್ನು ಹಾರಿಸಲಾಗುತ್ತದೆ. ಕುತ್ತಿ ಹೊತ್ತ ಕುಟುಂಬದ ಹಿರಿಯ ವ್ಯಕ್ತಿ ದೇವರನ್ನು ಪ್ರಾರ್ಥಿಸಿ, ಕದಿರನ್ನು ಬೆಸ ಸಂಖ್ಯೆಯಲ್ಲಿ ಕೊಯ್ದು ಹುತ್ತರಿ ಕುಕ್ಕೆಯಲ್ಲಿ ಇಡಲಾಗುತ್ತದೆ.  ಈ ಸಂದರ್ಭ ನೆರೆದವರು ’ಪೊಲಿ ಪೊಲಿ ದೇವಾ’ ಎಂದು ಘೋಷಣೆ ಕೂಗುತ್ತಾರೆ. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ.

ಕದಿರು ತುಂಬಿದ ಕುಕ್ಕೆಯನ್ನು ತಲೆಯಲ್ಲಿ ಹೊತ್ತು ’ಪೊಲಿ ಪೊಲಿ ದೇವಾ’ ಎಂದು ಘೋಷಣೆ ಕೂಗುತ್ತಾ ಬರಲಾಗುತ್ತದೆ. ಅಲ್ಲದೆ ಕದಿರನ್ನು ಕೆಲವು ಕುಟುಂಬದವರು ದೇವಸ್ಥಾನಕ್ಕೆ ಅರ್ಪಿಸಿ ಬಳಿಕ ಮನೆಗೆ ತೆರಳಿದರೆ ಇನ್ನು ಕೆಲವರು ನೇರವಾಗಿ ಒಕ್ಕಲು ಕಣಕ್ಕೆ ತೆರಳಿ ಮನೆಗೆ ತೆರಳುತ್ತಾರೆ. ಮನೆಯಲ್ಲಿದ್ದ ಮುತೈದೆ ಕದಿರು ಕೊಯ್ದವನ ಕಾಲು ತೊಳೆದು ಹಾಲು ನೀಡಿ ಧಾನ್ಯ ಲಕ್ಷ್ಮಿಯನ್ನು ಮನೆತುಂಬಿಸಿಕೊಳ್ಳುತ್ತಾರೆ. ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಂಡ ನಂತರ  ಕದಿರನ್ನು ಆಯುಧ, ವಾಹನ ಮುಂತಾದವುಗಳಿಗೆ ಕಟ್ಟಲಾಗುತ್ತದೆ. ಬಳಿಕ ಮನೆಯಲ್ಲಿ ಹೊಸ ಅಕ್ಕಿ ಪಾಯಸ ಮಾಡಿ ಸದಸ್ಯರೆಲ್ಲಾ ಒಂದೆಡೆ ಕುಳಿತು ಊಟ ಮಾಡುತ್ತಾರೆ.

ಹಬ್ಬದ ಕುರಿತಂತೆ ಇತಿಹಾಸವನ್ನು ಮೆಲುಕು ಹಾಕಿದರೆ… ಭತ್ತವೇ ಸರ್ವಸ್ವವಾಗಿದ್ದ ಕಾಲದಲ್ಲಿ ಅದರ ಸುತ್ತಲೂ ಹಬ್ಬ, ಆಚರಣೆಗಳು ಬಂದಿದ್ದು, ಎಲ್ಲಿ ನೀರಿನ ವ್ಯವಸ್ಥೆಯಿದೆಯೋ ಅಲ್ಲೆಲ್ಲ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಗದ್ದೆಗಳನ್ನು ನಿರ್ಮಿಸಿ ಉಳುಮೆ ಮಾಡಿ ಭತ್ತ ಬೆಳೆಯುತ್ತಿದ್ದ ಅವತ್ತಿನ ಕೃಷಿಕರು ಭತ್ತ ಮನೆಯ ಕಣಜವನ್ನು ಸದಾ ತುಂಬಿರಬೇಕೆಂದು ಬಯಸುತ್ತಿದ್ದರು. ಹೀಗಾಗಿ ಹುತ್ತರಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ.. ಕೃಷಿ ಹಿನ್ನಲೆಯಿದೆ..

ಅವತ್ತಿನ ದಿನಗಳಲ್ಲಿ ಭತ್ತದ ಗದ್ದೆ ಉಳುಮೆ ಮಾಡಿ ನಾಟಿ ನೆಡುವುದು, ಅದನ್ನು ಕುಯ್ಲು ಮಾಡಿ ಮನೆಗೆ ತುಂಬಿಸಿಕೊಳ್ಳುವುದು ಎಲ್ಲದರಲ್ಲೂ ಸಂಭ್ರಮ ಕಾಣುತ್ತಿದ್ದರು. ವರ್ಷ ಪೂರ್ತಿ ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೈತರು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿ ತಮ್ಮ ದುಡಿಮೆಯ ಸುಸ್ತನ್ನು ಮರೆಯುತ್ತಿದ್ದರು. ಅವತ್ತು ಹುತ್ತರಿ ಹಬ್ಬವೆಂದರೆ ಅದೇನೋ ಸಡಗರ, ಸಂಭ್ರಮ ಮನೆಮಾಡುತ್ತಿತ್ತು. ಹಬ್ಬಕ್ಕೆ ತಿಂಗಳು ಇರುವಾಗಲೇ ಮನೆಗೆ ಸುಣ್ಣ, ಬಣ್ಣ ಬಳಿಯುವುದು, ಸೇರಿದಂತೆ ಶುಚಿ ಕಾರ್ಯಮಾಡುತ್ತಾ, ಕಣಕ್ಕೆ ಸೆಗಣಿ ಸಾರಿಸಿ ರಂಗೋಲಿಯಿಟ್ಟು ಹಬ್ಬಕ್ಕೆ ಕಾಯಲಾಗುತ್ತಿತ್ತು.

ಮಕ್ಕಳಿಗೆ ಹಬ್ಬದ ಸಂಭ್ರಮ ಪಟಾಕಿ ಹೊಡೆಯುವ ತವಕ. ಒಟ್ಟಾರೆ ಹುತ್ತರಿ ಎಂದರೆ ಸಂಭ್ರಮ ಸಡಗರ ಎದ್ದು ಕಾಣುತ್ತಿತ್ತು. ಕಾಲಕಾಲಕ್ಕೆ ತಕ್ಕಂತೆ ಮಳೆ, ಬಿಸಿಲು, ಚಳಿ ಎಲ್ಲವೂ ಇದ್ದುದರಿಂದ ಹುತ್ತರಿ ಬರುತ್ತಿದ್ದಂತೆಯೇ ನಡುಕ ಹುಟ್ಟಿಸುವ ಚಳಿ, ಮೈತೋಯ್ದು ಹೋಯಿತೇನೋ ಎಂಬಂತೆ ಸುರಿಯುತ್ತಿದ್ದ ಇಬ್ಬನಿ, ಹಸಿರಾಗಿದ್ದ ಭತ್ತದ ಬೆಳೆ ಹೊಬ್ಬಣ್ಣಕ್ಕೆ ತಿರುಗಿ ತೆನೆ ಬಾಗಿ ಹುತ್ತರಿ ಹಬ್ಬವನ್ನು ಸ್ವಾಗತಿಸಲು ನಿಂತಿದೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಸೇನೆಯಲ್ಲಿದ್ದ  ಯೋಧರು ಹಬ್ಬದ ಸಮಯಕ್ಕೆ ಸರಿಯಾಗಿ ರಜೆ ಪಡೆದು ಬರುವ ಪ್ರಯತ್ನ ಮಾಡುತ್ತಿದ್ದರು. ಕೊಡಗಿನಿಂದ ಹೊರಗಿದ್ದು ದುಡಿಯುವ ಮಂದಿಯೂ ತಪ್ಪದೆ ಬರುತ್ತಿದ್ದರು. ಎಲ್ಲರೂ ಕುಟುಂಬದ ಸದಸ್ಯರೊಂದಿಗೆ ಕಲೆತು ಹಬ್ಬ ಆಚರಿಸುತ್ತಿದ್ದರು.

ಅವತ್ತಿನ ಹಬ್ಬದ ಸಂಭ್ರಮಕ್ಕೂ ಇವತ್ತಿನ ಹಬ್ಬಕ್ಕೂ ವ್ಯತ್ಯಾಸಗಳಾಗಿದೆ. ಆಧುನಿಕ ಭರಾಟೆ ಹಬ್ಬವನ್ನು ಅದ್ಧೂರಿತನಕ್ಕೆ ಒಳಪಡಿಸಿದೆಯಾದರೂ ನೈಜ ಸಂತೋಷ ಮರೆಯಾಗಿದೆ. ಹಬ್ಬದ ಸಂಪ್ರದಾಯಗಳು ಬದಲಾಗಿ ಒಂದಷ್ಟು ಉಳಿದುಕೊಂಡಿದೆ ಎನ್ನುವುದನ್ನು ಬಿಟ್ಟರೆ ಅದನ್ನು ಮನಸ್ಸುಪೂರ್ತಿ ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲವಾಗಿದೆ.  ಭತ್ತ ಬೆಳೆದು ಅದರಿಂದ ಲಾಭ ಪಡೆಯುವುದು ಸಾಧ್ಯವಿಲ್ಲ ಎಂಬ ಲೆಕ್ಕಚಾರದಿಂದಾಗಿ ನಷ್ಟ ಮಾಡಿಕೊಳ್ಳಲು ತಯಾರಿಲ್ಲದ ಬೆಳೆಗಾರರು ಅದನ್ನು ತೋಟವಾಗಿ ಮಾರ್ಪಡಿಸಿದ್ದಾರೆ. ಜತೆಗೆ ಭತ್ತದ ಬೆಳೆಯತ್ತ ಆಸಕ್ತಿಯೂ ಕಡಿಮೆಯಾಗಿದೆ. ಆಧುನಿಕತೆಯ ಭರಾಟೆ, ವಾಣಿಜ್ಯಬೆಳೆಗಳ ಲಗ್ಗೆ ಸೇರಿದಂತೆ ಹಲವು ವಿದ್ಯಮಾನಗಳಿಂದಾಗಿ ಹುತ್ತರಿ ಹಬ್ಬದ ಆಚರಣೆಯಲ್ಲಿ ಒಂದಷ್ಟು ಬದಲಾವಣೆಯಾಗಿದ್ದರೂ ಹಬ್ಬದ ಬಗೆಗಿನ ಭಾವನಾತ್ಮಕ ಸಂಬಂಧ ಮಾತ್ರ ಕಡಿಮೆಯಾಗಿಲ್ಲ ಎಂಬುದಕ್ಕೆ ತಾವು ಎಲ್ಲಿಯೇ ಇದ್ದರೂ ಹಬ್ಬಕ್ಕಾಗಿ ತವರಿನತ್ತ ಹೊರಡುವ ಕೊಡಗಿನ ಮಂದಿ ಸಾಕ್ಷಿಯಾಗಿದ್ದಾರೆ.

ಕೊಡಗಿನಲ್ಲಿ ಮನೆಮಾಡಿದ ಹುತ್ತರಿ ಸಂಭ್ರಮ… ನೆರೆ ಕಟ್ಟುವುದು.. ಕದಿರು ತೆಗೆಯುವುದು.. ಯಾವ ವೇಳೆಗೆ?

B M Lavakumar

admin
the authoradmin

Leave a Reply