ಕುಶಾಲನಗರ (ರಘುಹೆಬ್ಬಾಲೆ): ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆಯ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣಕ್ಕೆ ರೂ.8 ಕೋಟಿ ಅನುದಾನ ಮಂಜೂರುಗೊಂಡಿದ್ದು, ಹೊಸ ವರ್ಷದಲ್ಲಿ ತೂಗು ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ಲೋಕೋಪಯೋಗಿ ಇಲಾಖೆ,ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೋಮವಾರಪೇಟೆ ವತಿಯಿಂದ ನಂಜರಾಯಪಟ್ಟಣ ಗ್ರಾಮದಲ್ಲಿ ರೂ.5.14 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರು ಪರಿಶಿಷ್ಠ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ದುಬಾರೆ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಿಸಬೇಕು ಎಂಬ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಗ ಈಡೇರಿದೆ. ಟೆಂಡರ್ ಪ್ರಕ್ರಿಯೆ ಮಾತ್ರ ಬಾಕಿ ಇದ್ದು, ಹೊಸ ವರ್ಷದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ್ದು, ಉನ್ನತ ಶಿಕ್ಷಣ ದವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಬಾಲಕರ ಹಾಸ್ಟೆಲ್ ನೊಂದಿಗೆ ಬಾಲಕಿಯರ ವಸತಿ ನಿಲಯ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಮತ್ತೊಂದು ಪ್ರವಾಸಿ ತಾಣವಾದ ಚಿಕ್ಲಿಹೊಳೆ ಜಲಾಶಯದ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಲು ರೂ.5 ಕೋಟಿ ಮಂಜೂರುಗೊಂಡಿದೆ.ಮುಖ್ಯಮಂತ್ರಿ ಗಳ ನಿಧಿಯಿಂದ ರೂ.2 ಕೋಟಿ ವೆಚ್ಚದಲ್ಲಿ ಬಾಳುಗೋಡು ರಸ್ತೆ ಅಭಿವೃದ್ಧಿ ಅನುದಾನ ಬಿಡುಗಡೆಗೊಂಡಿದೆ.ಮಾವಿನಹಳ್ಳ ತೋಡು ಅಭಿವೃದ್ಧಿ ರೂ.25 ಲಕ್ಷ ಸೇರಿದಂತೆ ನಂಜರಾಯಪಟ್ಟಣ ಪಂಚಾಯತಿಗೆ ಒಟ್ಟು ರೂ.20 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದರಲ್ಲದೆ, ಹಾಸ್ಟೆಲ್ ಗೆ ಕುಡಿಯುವ ನೀರು, ತಡೆಗೋಡೆಯನ್ನು ನಿರ್ಮಿಸಲು ಸಮಾಜ ಕಲ್ಯಾಣ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಸುನೀತಾ ಮಂಜುನಾಥ್, ನಂಜರಾಯಪಟ್ಟಣ ವಿದ್ಯಾಸಂಸ್ಥೆ ಯತೀಶ್ ಕುಮಾರ್, ಕಾರ್ಯದರ್ಶಿ ಲೋಕನಾಥ್, ಲಿಲಿತ್ಮ ಚಿದಂಬರ್, ಪಿ.ಡಿ. ಅಶೋಕ್, ಪಂಚಾಕ್ಷರಿ, ಪ್ರೇಮನಂದ, ಕಾಳಿಂಗ, ಪಿಡಿಓ ರಾಜಶೇಖರ್, ಲೋಕೋಪಯೋಗಿ ಎಂಜಿನಿಯರ್ ಹರ್ಬಜ್ ಮಹಮ್ಮದ್, ಶಿಕ್ಷಕ ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು.
ಗುಡ್ಡೆಹೊಸೂರು : ರೂ.1.65 ಕೋಟೆಯಲ್ಲಿ ತಡೆಗೋಡೆ ನಿರ್ಮಾಣ
ಕುಶಾಲನಗರ ತಾಲ್ಲೂಕು ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಪ್ಪದಕಂಡಿ ಬಳಿ ರೂ.1.65 ಕೋಟಿ ವೆಚ್ಚದಲ್ಲಿ ನಾಲೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ಈ ಸಂದರ್ಭ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್, ಉಪಾಧ್ಯಕ್ಷೆ ನೇತ್ರಾವತಿ, ಮುಖಂಡರಾದ ಚಂದ್ರಶೇಖರ್, ಮಲ್ಲಿಕಾರ್ಜುನ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಕುಮಾರಸ್ವಾಮಿ, ಗ್ರಾಮದ ಮುಖಂಡರಾದ ದಾಮೋದರ ಹಾಗೂ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.

ಮಾದಪಟ್ಟಣ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರೂ.25 ಲಕ್ಷ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಕಾಲೊನಿ ರಸ್ತೆ ಅಭಿವೃದ್ಧಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು. ಗ್ರಾಮದ ಮುಖಂಡರಾದ ದಾಮೋದರ ಹಾಗೂ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.








