Mysore

ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವಲ್ಲಿ ತಂಬಾಕು ಹರಾಜು ಮಂಡಳಿ ವಿಫಲ.. ಬಡಗಲಪುರ ನಾಗೇಂದ್ರ ಆಕ್ರೋಶ!

ಭವಿಷ್ಯದಲ್ಲಿ ತಂಬಾಕು ಬೆಳೆಯುವುದನ್ನೇ ರೈತರು ಬಹಿಷ್ಕರಿಸುವ ಆತಂಕ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಂಬಾಕು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ತಂಬಾಕು ಹರಾಜು ಮಂಡಳಿ ವಿಫಲವಾಗಿದ್ದು, ಇದರಿಂದಾಗಿ ತಂಬಾಕು ಬೆಳೆಗಾರರಿಗೆ ಆರ್ಥಿಕ ನಷ್ಟ ಭೀತಿ ಉಂಟಾಗಿದ್ದು, ಭವಿಷ್ಯದಲ್ಲಿ ತಂಬಾಕು ಬೆಳೆಯುವುದನ್ನೇ ರೈತರು ಬಹಿಷ್ಕರಿಸಲಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿ ರೈತ ಸಂಘ ಮತ್ತು ತಂಬಾಕು ಬೆಳೆಗಾರರ ಸಂಘಗಳು ಬುಧವಾರ ಕರೆದಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ, ‘ಕೇಂದ್ರ ಸರ್ಕಾರ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚು ತೆರಿಗೆ ವಿಧಿಸಿದ್ದು, ಕಂಪನಿಗಳು ತಂಬಾಕು ಮಾರಾಟವನ್ನು ಬಹಿಷ್ಕರಿಸಿವೆ. ತಂಬಾಕು ಬೆಳೆಗಾರರಿಗೆ ನಷ್ಟವಾಗಿದೆ. ಇದಲ್ಲದೆ, ಬೆಳೆಗಾರರಿಗೆ ನಿರೀಕ್ಷಿತ ದರ ಸಿಗದಿದ್ದಾಗಲೂ ಕೇಂದ್ರ ಸರ್ಕಾರ ಯಾವುದೇ ರೀತಿ ಬೆಂಬಲ ನೀಡದೇ ರೈತರನ್ನು ಶೋಷಣೆಗೆ ದೂಡಿದೆ ಎಂದು ದೂರಿದರು.

ಕೂಡಲೇ ತಂಬಾಕು ಮಂಡಳಿಯು ಖರೀದಿದಾರರ ಮತ್ತು ರೈತರ ಸಭೆಯನ್ನು ಕರೆದು ಮಾರುಕಟ್ಟೆಯನ್ನು ಆರಂಭಿಸಬೇಕು. ಇಲ್ಲವಾದಲ್ಲಿ ಮುಂದಿನ ಸಾಲಿನ ಬೆಳೆಗೆ ಈಗಾಗಲೇ ಮಂಡಳಿ ರೈತರಿಂದ ಮುಂಗಡವಾಗಿ ಪಡೆಯುತ್ತಿರುವ ರಸಗೊಬ್ಬರ ಮತ್ತು ಬೀಜ ಖರೀದಿ ಹಣವನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ‘ಬೆಳೆಯನ್ನು ಶಾಶ್ವತವಾಗಿ ರದ್ದು-ಗೊಳಿಸುವುದಾದಲ್ಲಿ ಕೇಂದ್ರ ಸರ್ಕಾರವು ಪ್ರತಿ ಸಿಂಗಲ್ ಲೈಸನ್‌ದಾರರಿಗೆ 25 ಲಕ್ಷ ಪರಿಹಾರ ನೀಡಿ ಪರ್ಯಾಯ ಬೆಳೆಗೆ ಅವಕಾಶ ಕಲ್ಪಿಸಬೇಕು. ರಾಜ್ಯ ಸರ್ಕಾರವೂ ತಂಬಾಕು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸದೆ ಪ್ರತಿಯೊಂದಕ್ಕೂ ಕೇಂದ್ರದತ್ತ ಬೊಟ್ಟು ಮಾಡಿ ಮೌನಕ್ಕೆ ಶರಣಾಗುತ್ತಿರುವುದು ಬೆಳೆಗಾರರಿಗೆ ಮಾಡುತ್ತಿರುವ ಅನ್ಯಾಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ‘ಆಂಧ್ರಪ್ರದೇಶದಲ್ಲಿನ ತಂಬಾಕಿಗೆ ಈ ೪೫೦ ಪ್ರತಿ ಕೆ.ಜಿಗೆ ನೀಡಿ ಖರೀದಿಸಿದ ಕಂಪನಿಗಳು ರಾಜ್ಯದ ತಂಬಾಕಿಗೆ ರೂ. 320 ನೀಡುತ್ತಿವೆ. ತಂಬಾಕು ಉತ್ಪನ್ನಗಳಿಗೆ ಅತ್ಯವಶ್ಯವಾಗಿ ಬೇಕಿರುವ ವರ್ಜೀನಿಯ ತಂಬಾಕು ರಾಜ್ಯದಲ್ಲಿ ಮಾತ್ರ ಬೆಳೆಯು-ತ್ತಿದ್ದರೂ ಕಂಪನಿಗಳ ಕೈವಾಡದಿಂದ ರೈತರು ಆರ್ಥಿಕ ನಷ್ಟ ಎದುರಿಸುವಂತಾಗಿದೆ. ಇದು ತಂಬಾಕು ಹರಾಜು ಮಂಡಳಿಗೆ ತಿಳಿದಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನವಾಗಿರುವುದು ವಿಪರ್ಯಾಸ ಎಂದರು.

ಸಭೆಯಲ್ಲಿ ತಂಬಾಕು ಬೆಳೆಗಾರರ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಉಂಡವಾಡಿ ಚಂದ್ರೇಗೌಡ, ಕಾರ್ಯದರ್ಶಿ ರಾಮೇಗೌಡ, ಅತ್ತಿಕುಪ್ಪೆ ರಾಮಕೃಷ್ಣ, ಮೋದೂರು ಶಿವಣ್ಣ, ಧನಂಜಯ, ಸತೀಶ್, ವಿಷಕಂಠಪ್ಪ, ಚಂದ್ರೇಗೌಡ, ಪರಮೇಶ್, ಹರೀಶ್ ಟಾವೆಲ್, ಕಾಳೇಗೌಡ, ಪ್ರಭಾಕರ್, ರವಿಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want