ಕೆಸ್ತೂರುಕೊಪ್ಪಲಲ್ಲಿ ಶ್ರೀ ಶನೈಶ್ಚರ ಸ್ವಾಮಿ, ಶ್ರೀ ಸುಡುಗಾಡು ಮಹಾಲಕ್ಷ್ಮಿ ದೇಗುಲ ಉದ್ಘಾಟನೆ
ನಂಬುವವನನ್ನು ಭಗವಂತ ಸದಾ ಕಾಯುತ್ತಾನೆ: ಶಾಸಕ ಡಿ. ರವಿಶಂಕರ್

ಹೊಸೂರು(ಸಂಘಟನೆ ಮಂಜುನಾಥ್): ಮಾನವನು ಮನುಷ್ಯತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಅರ್ಥ ಮಾಡಿಕೊಂಡರೆ ಎಲ್ಲರ ಬದುಕು ಸಾರ್ಥಕವಾಗಲಿದ್ದು, ದೇವರನ್ನ ಯಾರು ಮುಗ್ಧವಾಗಿ ನಂಬುತ್ತಾರೋ, ಅವರನ್ನು ಭಗವಂತ ಸದಾ ಕಾಯುತ್ತಾನೆಂದು ಶಾಸಕ ಡಿ. ರವಿಶಂಕರ್ ನುಡಿದರು.

ಕೆ ಆರ್ ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶ್ರೀ ಶನೈಶ್ಚರ ಸ್ವಾಮಿ ಮತ್ತು ಶ್ರೀ ಸುಡುಗಾಡು ಮಹಾಲಕ್ಷ್ಮಿದೇವತೆಯ ದೇಗುಲ ಉದ್ಘಾಟನೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಂದು ವಸ್ತುವಿನಲ್ಲೂ ದೇವರಿದ್ದು, ಭಕ್ತಿ ಭಾವದಿಂದ ಮತ್ತು ಒಳ್ಳೆಯ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿದರೆ ಪ್ರತಿಯೊಬ್ಬರಿಗೂ ಒಳಿತು ಮಾಡಲಿದೆ ಎಂದು ಹೇಳಿದರು.

ದೇವಾಲಯಗಳು ಗ್ರಾಮಗಳಲ್ಲಿ ನಿರ್ಮಾಣವಾದರೆ ಶಾಂತಿ ಹಾಗೂ ನೆಮ್ಮದಿಯನ್ನು ಕಲ್ಪಿಸಿ ಸಾಮರಸ್ಯದಿಂದ ಬದುಕಲು ಸಹಕಾರಿಯಾಗುತ್ತವೆ, ದೇವಾಲಯ ನಿರ್ಮಾಣವಾಗಬೇಕಾದರೆ ಅಲ್ಲಿನ ಸಾತ್ವಿಕ ಶಕ್ತಿಯ ವೃದ್ಧಿಗಾಗಿ ನಿರಂತರವಾಗಿ ಲೋಕೋದ್ಧಾರಕ ಯಾಗ ನಡೆದಿದ್ದು, ಹಲವಾರು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ದೇವಾಲಯವನ್ನು ಭಕ್ತರ ನೆರವಿನೊಂದಿಗೆ ಪುನಶ್ವೇತನಗೊಳಿಸಿ ಲೋಕಾರ್ಪಣೆ ಆಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ದೇವತಾ ಉತ್ಸವ ಹಾಗೂ ದೇಗುಲ ನಿರ್ಮಾಣಗಳು ಪರಸ್ಪರ ಸ್ನೇಹ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿ. ಪ್ರೀತಿ, ಸಹಬಾಳ್ವೆ ಜತೆಗೆ ನಮ್ಮಲಿರುವ ಗುಣ ಮತ್ತು ವ್ಯಕ್ತಿತ್ವದಿಂದಲೇ ಭಗವಂತನನ್ನು ಸಾಕ್ಷಾತ್ಕರಿಸಲು ಸಾಧ್ಯ. ನಾವೆಲ್ಲರೂ ಭಗವಂತನ ಅಂಶವೇ, ಅದನ್ನು ನಾವು ತಿಳಿದುಕೊಳ್ಳಲು ಭಗವಂತ ನೀಡಿದ ಮನುಷ್ಯ ಜನ್ಮ. ಎಲ್ಲರೂ ಒಗ್ಗೂಡಿ ಭವ್ಯ ದೇಗುಲ ನಿರ್ಮಾಣ ಮಾಡಿದ್ದೀರಿ, ದೇವರು ಸಂತೃಪ್ತನಾಗಿ ನಿಮ್ಮೆಲ್ಲರಿಗೂ ಶ್ರೀರಕ್ಷೆಯಾಗಿ ನಿಲ್ಲುತ್ತಾನೆ ಎಂದು ಹೇಳಿದರು.

ಇನ್ನು ಬೆಳಗ್ಗೆಯಿಂದ ಸಂಜೆವರೆಗೂ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಭಕ್ತರು ತಂಡೋಪತಂಡವಾಗಿ ದೇಗುಲಕ್ಕೆ ಭೇಟಿ ನೀಡಿ ಹಣ್ಣು ಕಾಯಿ ನೀಡಿ ಪೂಜಿಸಿ ದೇವರ ದರ್ಶನ ಪಡೆದು ಭಕ್ತಿಭಾವ ಮೆರೆದರು. ದೇಗುಲಕ್ಕೆ ಆಗಮಿಸಿದ ಭಕ್ತರಿಗೆ ದೇಗುಲದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಸುನಿತಾ ಡಿ. ರವಿಶಂಕರ್, ಡಿ. ಪ್ರಶಾಂತ್ ಪ್ರಧನಾ ಅರ್ಚಕ ರಂಗಪ್ಪ, ಗ್ರಾಪಂ ಅಧ್ಯಕ್ಷೆ ಮಂಜುಳಾ ಶ್ರೀನಿವಾಸ್ ಚಿಕ್ಕೇಗೌಡ, ಎಂ. ರಮೇಶ್, ಶ್ರೀಪತಿ, ಲಕ್ಕೆಗೌಡ, ರವಿ, ಯುವರಾಜ್, ಪುನೀತ್, ರಾಜೇಶ್, ದರ್ಶನ್, ಧನು, ದಮ್ಮನಹಳ್ಳಿ ಪಾಲಾಕ್ಷ, ನಾಡಪ್ಪನಹಳ್ಳಿ ಅಶ್ವಥ್, ಚಿಕ್ಕಕೊಪ್ಪಲು ನವೀನ್, ಹೊಸೂರು ಡೈರಿ ಮಾಧು ಸಲೀಂ ರಾಚಪ್ಪ, ರಾಜೇಂದ್ರ, ಹೆಬ್ಬಾಳು ಸೋಮಣ್ಣ, ಕುಮಾರ್ ಸೇರಿದಂತೆ ಗ್ರಾಮಸ್ಥರು ಮತ್ತಿತರರು ಇದ್ದರು.







