ಹೊಸೂರು(ಸಂಘಟನೆ ಮಂಜುನಾಥ್): ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಶ್ರೀ ಕ್ಷೇತ್ರ ರಾಮಲಿಂಗೇಶ್ವರ ದೇವರ ದರ್ಶನಕ್ಕೆ ಸೋಮವಾರ ಭಕ್ತ ಸಾಗರವೇ ಹರಿದು ಬಂದು ದೇವರ ದರ್ಶನ ಪಡೆದು ಪುಳುಕಿತರಾದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದ ಕಾವೇರಿ ನದಿ ದಡದಲ್ಲಿ ಪ್ರಕೃತಿ ನಿಸರ್ಗದ ನಡುವೆ ನೆಲೆಯಾಗಿರುವ ಇತಿಹಾಸ ಪ್ರಸಿದ್ಧ ಶ್ರೀರಾಮ ಲಿಂಗೇಶ್ವರ ದೇಗುಲಕ್ಕೆ ಶಿವರಾತ್ರಿ ಹಬ್ಬದ ಅಂಗವಾಗಿ ದೇಗುಲಕ್ಕೆಲ್ಲ ವಿದ್ಯುತ್ ದೀಪಗಳಿಂದ ಸಿಂಗಾರ ಮಾಡಿ, ಹರಿಕಥೆ, ಭಜನೆ ಹಾಗೂ ವಿವಿಧ ಧಾರ್ಮಿಕ ಕಾಠ್ಯಕ್ರಮಗಳ ಮೂಲಕ ಭಕ್ತರು ರಾತ್ರಿಯಿಡೀ ಜಾಗರಣೆ ಮಾಡಿದರು.
ದೇವಾಲಯದಲ್ಲಿ ಹೊತ್ತೇರುವ ಮುನ್ನವೇ ಅರ್ಚಕ ವೃಂದ ಶಿವಲಿಂಗಕ್ಕೆ ಕ್ಷೀರಾಭಿಷೇಕ, ಎಳನೀರು, ಮೊಸರು, ಆಶಿಣ-ಕುಂಕುಮ, ರುದ್ರಾಭಿಷೇಕ ಸೇರಿದಂತೆ ಪಂಚಾಭಿಷೇಕ ಮಾಡಿ ಪವಿತ್ರ ಕಾವೇರಿ ನದಿಯ ಜಲದಿಂದ ಜಲಾಭಿಷೇಕ ಮಾಡಲಾಯಿತು. ಬಳಿಕ ಶಿವಲಿಂಗದ ಮೂರ್ತಿಗೆ ಚಿನ್ನದ ಮುಖವಾಡ ಧರಿಸಿ ವಿಶೇಷ ಅರ್ಚನೆ ಹೊಮ-ಹವನ ಹಾಗೂ ಸೇವಾ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿ ಸಿದ ನಂತರ ದೇವರ ಮೂರ್ತಿಗೆ ಬಿಲ್ವಪತ್ರೆ, ನಾನಾ ಬಗೆಯ ಹೂಗಳಿಂದ ಶೃಂಗರಿಸಿದ ಪ್ರಧಾನ ಅರ್ಚಕ ಆನಂತು ಭಕ್ತರ ಸಮ್ಮುಖದಲ್ಲಿ ದೇವರಿಗೆ ನೈವೇದ್ಯ, ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ನೀಡಲಾಯಿತು.

ಇನ್ನು ರಾತ್ರಿ ಜಾಗರಣೆ ಮಾಡಿದ ಭಕ್ತರು ಮುಂಜಾನೆಯ ಶಿವಲಿಂಗಕ್ಕೆ ಅಭೂತಪೂರ್ವ ರಶ್ಮಿಯಂತ ಸೂರ್ಯನ ಕಿರಣದ ದೃಶ್ಯ ಕಾಣಲು ಮುಂಜಾನೆಯಿಂದಲೇ ಕಾವೇರಿ ನದಿಯಲ್ಲಿ ಮಿಂದೆದ್ದ ಸಾವಿರಾರು ಭಕ್ತರು ಮಡಿಯುಟ್ಟ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಕಾತುರದಿಂದ ಕಾದು ಶಿವಲಿಂಗಕ್ಕೆ ಸೂರ್ಯ ಕಿರಣದ ಸ್ಪರ್ಶವನ್ನು ಕಣ್ತುಂಬಿಕೊಂಡರು. ನೆರೆ-ಹೊರೆಯ ಗ್ರಾಮ ಸೇರಿದಂತೆ ಜಿಲ್ಲೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿ ಸಾಲಿನಲ್ಲಿ ನಿಂತು ದೇವರಿಗೆ ಹಣ್ಣುಕಾಯಿ ನೀಡಿ ಶ್ರದ್ದಾ ಭಕ್ತಿಯಿಂದ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿ ಪೂಜಿಸಿದರು. ಭಕ್ತರ ಸಹಯೋಗ ಹಾಗೂ ದೇವಾಲಯದ ವತಿಯಿಂದ ಬರುವ ಭಕ್ತರಿಗೆ ಬೆಳಗ್ಗೆಯಿಂದ ರಾತ್ರಿ ವರೆಗೂ ಅನ್ನ ಸಂತರ್ಪಣೆ ನಡೆಯಿತು.








