ಮಡಿಕೇರಿಯ ರಸ್ತೆಗೆ ಪತ್ರಕರ್ತ ದಿ. ಬಿ.ಎಸ್. ಗೋಪಾಲಕೃಷ್ಣ ರವರ ಹೆಸರು ನಾಮಕರಣ
ಮಾ.4ರಂದು ರಸ್ತೆಗೆ ನಾಮಫಲಕ ಅಳವಡಿಸುವ ಕಾರ್ಯಕ್ರಮ

ಮಡಿಕೇರಿ: ಕಳೆದ ಆರು ದಶಕಗಳಿಂದ ಕೊಡಗಿನ ಮನೆಮಾತಾಗಿರುವ ಶಕ್ತಿದಿನಪತ್ರಿಕೆ ಸ್ಥಾಪಕ ಸಂಪಾದಕ ದಿವಂಗತ ಬಿ.ಎಸ್.ಗೋಪಾಲಕೃಷ್ಣ ಅವರ ಹೆಸರನ್ನು ಮಡಿಕೇರಿಯ ರಸ್ತೆಯೊಂದಕ್ಕೆ ನಾಮಕರಣ ಮಾಡುತ್ತಿರುವುದು ಅವರ ಸಾಧನೆಗೆ ಸಿಕ್ಕ ಗೌರವಾಗಿದೆ. ಇದು ಶಕ್ತಿ ಓದುಗರಿಗೆ ಸಂತಸ ತಂದಿದೆ.
ಮಡಿಕೇರಿಯ ಪತ್ರಿಕಾ ಭವನದಿಂದ ಜಿಲ್ಲಾ ಕೈಗಾರಿಕಾ ಕೇಂದ್ರದವರೆಗಿನ ರಸ್ತೆಗೆ ಶಕ್ತಿ ಗೋಪಾಲಕೃಷ್ಣ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದ್ದು, ಈ ಸಂಬಂಧ ರಸ್ತೆಗೆ ನಾಮಫಲಕ ಅಳವಡಿಸುವ ಕಾರ್ಯಕ್ರಮ ಮಾರ್ಚ್ 4ರಂದು ಬೆಳಿಗ್ಗೆ 10:30 ಗಂಟೆಗೆ ಪತ್ರಿಕಾ ಭವನ ಮುಂಭಾಗ, ಕೈಗಾರಿಕಾ ಬಡಾವಣೆಯಲ್ಲಿ ನಡೆಯಲಿದೆ.

ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ರವರು ನೂತನ ನಾಮಫಲಕ ಅನಾವರಣ ಮಾಡಲಿದ್ದಾರೆ. ನಂತರ ಸಭಾ ಕಾರ್ಯಕ್ರಮ, ರೆಡ್ ಬ್ರಿಕ್ಸ್ ಇನ್ ಸತ್ಕಾರ್ ಸಭಾಂಗಣದಲ್ಲಿ ಮಡಿಕೇರಿ ನಗರಸಭೆಯ ಉಪಾಧ್ಯಕ್ಷರಾದ ಮಹೇಶ್ ಜೈನಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರಾದ ಬಿ. ವೈ ರಾಜೇಶ್ ಯಲ್ಲಪ್ಪ, ನಗರಸಭಾ ಆಯುಕ್ತರಾದ ಎಚ್ ಆರ್ ರಮೇಶ್, ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ ರಾಜೇಂದ್ರ ಉಪಸ್ಥಿತರಿರುತ್ತಾರೆ ಎಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅನಿಲ್.ಎಚ್.ಟಿ ಮಾಹಿತಿ ನೀಡಿದ್ದಾರೆ.







