ಹೊಸೂರು(ಸಂಘಟನೆ ಮಂಜುನಾಥ್): ಬೇಸಿಗೆ ದಿನಗಳಲ್ಲಿ ಜನಜಾನುವಾರುಗಳಿಗೆ ಯಾವುದೇ ರೀತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ಶಾಸಕ ಡಿ.ರವಿಶಂಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಲ್ಲದೆ, ಸ್ವಚ್ಚತೆ, ಆರೋಗ್ಯ ಸೇರಿದಂತೆ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ತಿಳಿಸಿದ್ದಾರೆ.
ಕೆ.ಆರ್.ನಗರ ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕರು ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಚನ್ನಪ್ಪನಕೊಪ್ಪಲು, ಅರೆಕಲ್ಕೊಪ್ಪಲು ಗ್ರಾಮಗಳ ನೀರಿನ ಟ್ಯಾಂಕ್ಗೆ ನೀರು ಹರಿಸುವಂತೆ ಸೂಚಿಸಿದ ಶಾಸಕರು, ಸಿದ್ದನಕೊಪ್ಪಲು, ಹಂಪಾಪುರ, ಮಂಚನಹಳ್ಳಿ, ಅಡಗೂರು, ಮಾರಗೌಡನಹಳ್ಳಿ ಸೇರಿದಂತೆ ನೀರಿನ ಅಭಾವ ಇರುವ ಕಡೆ ಎಲ್ಲ ಕ್ರಮಕೈಗೊಂಡು ನೀರು ಒದಗಿಸುವಂತೆ ಹೇಳಿದರು.
ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಮತ್ತು ಹಬ್ಬ ಹರಿದಿನಗಳು ಪ್ರಾರಂಭವಾಗುತ್ತಿದ್ದು ಸ್ವಚ್ಚತೆಯೊಂದಿಗೆ ಸಮರ್ಪಕ ಕುಡಿಯುವ ನೀರು ಒದಗಿಸಿ ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಕಾಪಾಡುವತ್ತ ಗಮನಹರಿಸುವಂತೆ ಸಲಹೆ ನೀಡಿದರಲ್ಲದೆ, ಅಗತ್ಯವಿರುವ ಕಡೆ ಬೋರ್ವೆಲ್ ತೆಗೆಸಿ ನೀರು ಪೂರೈಸಲು ತುರ್ತು ಕ್ರಮ ಕೈಗೊಳ್ಳುವಂತೆ ಹೇಳಿದರು.
ಜಾನುವಾರು ಆಹಾರ ಹೊರಗಡೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು, ಕಾಲುವೆಗಳಲ್ಲಿ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಿ ಜನಜಾನುವಾರುಗಳಿಗೆ ನೀರು ಒದಗಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅವಳಿ ತಾಲೂಕಿನ ಹಲವು ಆಸ್ಪತ್ರೆಗಳಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳು ಕ್ರಮಕೈಗೊಂಡು ವೈದ್ಯರು ಸಕಾಲಕ್ಕೆ ಆಸ್ಪತ್ರೆಗೆ ಬರುವಂತೆ ನೋಡಿಕೊಳ್ಳುವಂತೆ ಹಾಗೂ ಆಸ್ಪತ್ರೆಗಳಿಗೆ ಬೇಕಾದ ಔಷಧ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ನನ್ನೊಂದಿಗೆ ಚರ್ಚಿಸುವಂತೆ ತಾಲೂಕು ಆರೋಗ್ಯಾಧಿಕಾರಿ ನಟರಾಜ್ಗೆ ಸೂಚಿಸಿದರು.
ಕ್ಷೇತ್ರದಲ್ಲಿ ಜೆಜೆಎಂ ಕಾಮಗಾರಿ ಪೂರ್ಣವಾಗಿಲ್ಲ ಇಂತಹ ಕೆಟ್ಟ ಕಾಮಗಾರಿ ಮತ್ತೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸಿ ಜನತೆಗೆ ಸಮರ್ಪಕ ನೀರು ಒದಗಿಸುವಂತೆ ಕುಡಿಯುವ ನೀರು ಇಲಾಖೆ ಇಇ ಆನಂದ್ ರವರಿಗೆ ಹೇಳಿದರು.
ಸಭೆಯಲ್ಲಿ ತಾ.ಪಂ.ಇಒ ವಿ.ಪಿ.ಕುಲದೀಪ್, ಸಾಲಿಗ್ರಾಮ ತಾ.ಪಂ.ಇಒ ರವಿ, ಕುಡಿಯುವ ನೀರು ಇಲಾಖೆ ಇಇ ಆನಂದ್, ಎಇಮೋಹನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ್, ಸೆಸ್ಕಾಂ ಎಇಇ ಅರ್ಕೇಶ್ವರಮೂರ್ತಿ, ವಲಯ ಅರಣ್ಯಾಧಿಕಾರಿ ಟಿ.ವಿ.ಹರಿಪ್ರಸಾದ್, ಪಶುವೈದ್ಯಾಧಿಕಾರಿ ಡಾ.ಹರೀಶ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ಗೀತಾ, ಶಿರಸ್ತೇದಾರ್ ಎಂ.ಎಸ್.ವೆಂಕಟೇಶ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.








