CinemaLatest

ಚಂದನವನಕ್ಕೆ ಹೊಸತನ ತಂದ ನಿರ್ದೇಶಕ ಪುಟ್ಟಣ್ಣ ಕಣಗಾಲ್ … ಹೇಗಿತ್ತು ಸಿನಿ ಜರ್ನಿ?

ಕನ್ನಡ ಸಿನಿಮಾರಂಗದಲ್ಲಿ ಪುಟ್ಟಣ್ಣ ಕಣಗಾಲ್ ಅಚ್ಚಳಿಯದ ಹೆಸರು… ಇವರು ಚಂದನವನಕ್ಕೆ ನೀಡಿದ ಸಿನಿಮಾಗಳು ಇವತ್ತಿಗೂ ಜನಪ್ರಿಯ ಸಿನಿಮಾಗಳಾಗಿಯೇ ಉಳಿದು ಹೋಗಿವೆ… ಸಿನಿಮಾರಂಗದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಾ… ಹೊಸ ದಿಗ್ಗಜ ನಟ, ನಟಿಯರನ್ನು  ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ಪುಟ್ಟಣ್ಣ ಕಣಗಾಲ್ ನಮ್ಮಿಂದ ದೂರವಾಗಿ ನಾಲ್ಕು ದಶಕಗಳೇ ಕಳೆದು ಹೋಗಿವೆ.. ಆದರೂ ಅವತ್ತು, ಇವತ್ತು, ನಾಳೆ ಎಂದೆಂದಿಗೂ ಕನ್ನಡದ ಮನಸ್ಸುಗಳಲ್ಲಿ ಗಟ್ಟಿಯಾಗಿಯೆ ಉಳಿದಿದ್ದಾರೆ. ಅವರನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಬರಹದ ಮೂಲಕ  ನೆನಪು ಮಾಡಿಕೊಂಡಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರು ಬಳಿ ಕಣಗಾಲ್ ಗ್ರಾಮದ ಬಡ ಕುಟುಂಬದಲ್ಲಿ 1.12.1933ರಲ್ಲಿ ಜನಿಸಿದರು. ವಿದ್ಯೆ ತಲೆಗೆ ಹತ್ತದ ಕಾರಣ ಹೈಸ್ಕೂಲ್ ವಿದ್ಯಾಭ್ಯಾಸಕ್ಕೇ ತಿಲಾಂಜಲಿ ಕೊಟ್ಟ ಹುಡುಗ ಮೈಸೂರಿನ ಪಾಲಂಜೀಸ್ ಮೋಟಾರ್ ಗ್ಯಾರೇಜಲ್ಲಿ ಅಸಿಸ್ಟೆಂಟ್ ಮೆಕ್ಯಾನಿಕ್ ಚಾಕರಿಗೆ ಸೇರಿದರು. ಈ ಫೀಲ್ಡಲ್ಲಿ ಬಹುಕಾಲ ಉಳಿಯದ ಮತ್ತು ಒಂದೇ ಕಡೆ ನಿಲ್ಲದ ಈ ಯುವಕ ಕಾಲನ ಆಣತಿಯಂತೆ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಇವರ ಅಣ್ಣ ಕಣಗಾಲ ಪ್ರಭಾಕರ ಶಾಸ್ತ್ರೀಯನ್ನ ಅರಸುತ್ತ ಮದ್ರಾಸಿನತ್ತ ಪಯಣ ಬೆಳೆಸಿದನು.

ಕಣಗಾಲ್ ಪ್ರಭಾಕರಶಾಸ್ತ್ರಿರವರ ತಮ್ಮ  ಪುಟ್ಟಣ್ಣ ಕಣಗಾಲ್ ಬಣ್ಣದ ಲೋಕಕ್ಕೆ ಬಂದ ಪ್ರಾರಂಭದಲ್ಲಿ ದಕ್ಷಿಣ ಭಾರತದ ದಿಗ್ಗಜ ಚಿತ್ರೋದ್ಯಮಿ ಬಿ.ಆರ್.ಪಂತುಲು ರವರಿಗೆ ಸಹಾಯಕರಾಗಿ ಹಲವಾರು ಚಿತ್ರಗಳಲ್ಲಿ ದುಡಿಯುವ ಮೂಲಕ ಗಟ್ಟಿ ಅನುಭವ ಗಳಿಸಿದ ನಂತರವೇ ಸಹನಿರ್ದೇಶಕನಾಗಿ ದುಡಿದು ಕ್ರಮೇಣ ಸ್ವತಂತ್ರ ನಿರ್ದೇಶಕನಾಗಿ ತೆರೆಕಂಡ ಇವರ ಪ್ರಥಮ ಚಿತ್ರ ಬೆಳ್ಳಿಮೋಡ. 1967ರಲ್ಲಿ ಪುಟ್ಟಣ್ಣ ಕಣಗಾಲರ ಬೆಳ್ಳಿಮೋಡ ಚಿತ್ರವು ಪೂರ್ಣ ಹೊರಾಂಗಣದಲ್ಲೆ ಚಿತ್ರೀಕರಣಗೊಂಡ ಪ್ರಥಮ ಕನ್ನಡಚಿತ್ರ. ಚಿಕ್ಕಮಗಳೂರಿನ ಕಾಫಿತೋಟ, ಭವ್ಯಬಂಗಲೆ ಮುಂತಾದ ಸುತ್ತಮುತ್ತಲ ಪ್ರಾಕೃತಿಕ ರಮಣೀಯ ಪ್ರದೇಶಗಳಲ್ಲಿ ಇದರ ಬಹುತೇಕ ಚಿತ್ರೀಕರಣ ನಡೆಯುವ ಮೂಲಕ ಕನ್ನಡ ಚಿತ್ರಗಳಿಗೆ ಹೊರಾಂಗಣ ದೃಶ್ಯ ಚಿತ್ರೀಕರಣಕ್ಕೆ ನವಯುಗದ ನಾಂದಿ ಹಾಡಿತು! ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿ ಗಳಿಸಿದ್ದು ಅಂದಿನ ಕಾಲಕ್ಕೆ ವಿಶೇಷ ದಾಖಲೆ!

ಕಾಲಕ್ರಮೇಣ ತಮ್ಮನ್ನುತಾವೆ ಸಾಣೆಹಿಡಿದು ಕೊಳ್ಳುತ್ತ ಪ್ರತಿಭಾಪರ್ವತವೆ ಆದರು ಪುಟ್ಟಣ್ಣ ಕಣಗಾಲ್. “ಒಂದು ಸಿನಿಮದ ಯಶಸ್ಸು ಕೇವಲ ಹೀರೋ ಅಥವ ಹೀರೋಯಿನ್ ಇಂದ ಮಾತ್ರ” ಎಂಬ ನಾಣ್ಣುಡಿಯನ್ನೆ ಬದಲಾಯಿಸಿದ ಧೀರ. ಯಾವುದೇ ಒಂದು ಸಿನಿಮ ಅದರ ನಿರ್ದೇಶಕನಿಂದಲೂ ಹಣ ಕೀರ್ತಿ ಪ್ರಶಸ್ತಿ ಗೌರವ ದೊರಕುತ್ತದೆ ಎಂಬ ಹೊಸ ಸತ್ಯವನ್ನು ರುಜುವಾತು ಪಡಿಸಿದ ಧೀಮಂತ. ಸಿನಿಮ ನಿರ್ದೇಶಕನಿಗೂ ಅಭಿಮಾನಿಗಳು ಹುಟ್ಟಿಕೊಳ್ಳುವಂತೆ ಮಾಡಿದ ಕ್ರಾಂತಿಕಾರ. ಕನ್ನಡ ಚಿತ್ರರಂಗದಲ್ಲೆ ಮೊದಲ ಸಲ “ಡೈರೆಕ್ಟರ್” ಪದಕ್ಕೆ ಅನ್ವರ್ಥ ತಂದು ಕೊಟ್ಟ ಹಾಗೂ ನಿರ್ದೇಶಕನ ಹುದ್ದೆಗೆ ಘನತೆ ಗೌರವ ಬರುವಂತೆ ಸಾಬೀತುಪಡಿಸಿದ ಜಾದೂಗಾರ! ಆದರೆ ಅಹಂನ ಸರ್ದಾರ ಎಂಬುದು ಹತ್ತಿರದಿಂದ ಬಲ್ಲವರ ಒಕ್ಕೊರಲ ಸರ್ವಾನುಮತದ ಅಭಿಪ್ರಾಯ. ಇದೇ ಇವರ ಮೈನಸ್ ಪಾಯಿಂಟ್ ಕೂಡ ಆಗಿತ್ತು?!

1970ರಲ್ಲಿ ಪುಟ್ಟಣ್ಣನವರಿಗೆ“ಗೆಜ್ಜೆಪೂಜೆ” ಚಿತ್ರಕ್ಕೆ ಅಖಿಲ ಭಾರತ ಅತ್ಯುತ್ತಮ ಸ್ಕ್ರೀನ್ ಪ್ಲೇ (ಚಿತ್ರನಾಟಕ) ಪ್ರಶಸ್ತಿ ದೊರಕಿತು! ಇದು ಕನ್ನಡ ಚಿತ್ರವೊಂದಕ್ಕೆ ದೊರೆತ ಪ್ರಪ್ರಥಮ ರಾಷ್ಟ್ರಮಟ್ಟದ ಗೌರವ! ಇದಾದ ನಂತರ ದಕ್ಷಿಣ ಭಾರತ ನಿರ್ದೇಶಕರ ಸಂಘದಿಂದ ‘ದಕ್ಷಿಣ ಭಾರತ ಶ್ರೇಷ್ಠ ನಿರ್ದೇಶಕ’ ಬಹುಮಾನ ಸ್ವೀಕರಿಸಿದ ಮೊಟ್ಟಮೊದಲ ಕನ್ನಡಿಗ! ಇಂತಹ ಅಪ್ರತಿಮನ ವೃತ್ತಿಗುರುಗಳು ಬಿ.ಆರ್. ಪಂತುಲು. ಇದೇ ಕಾಲಘಟ್ಟದಲ್ಲಿ ಪುಟ್ಟಣ್ಣ ನವರಿಗಿಂತ ಹಿರಿಯರಾದ ಅನುಭವಿಗಳೂ ದಿಗ್ಗಜರೂ ಎನಿಸಿದ್ದ ಎನ್.ಲಕ್ಷ್ಮಿನಾರಾಯಣ್, ಹುಣಸೂರು ಕೃಷ್ಣಮೂರ್ತಿ, ವೈ.ಆರ್. ಸ್ವಾಮಿ, ಹೆಚ್.ಎಲ್.ಎನ್. ಸಿಂಹ, ಜಿ.ವಿ. ಅಯ್ಯರ್, ಬಿ.ಎಸ್. ರಂಗ ಅಗ್ರಗಣ್ಯರು.

ಪುಟ್ಟಣ್ಣನವರ ಸಮಕಾಲೀನ ಪ್ರಮುಖರಾದ ಸಿದ್ಧಲಿಂಗಯ್ಯ, ಭಾರ್ಗವ, ಪೇಕೇಟಿಶಿವರಾಂ, ಬಿ.ವಿ.ಕಾರಂತ, ರವಿ, ಗಿರೀಶ್ ಕಾರ್ನಾಡ, ಗಿರೀಶಕಾಸರವಳ್ಳಿ, ದೊರೆ-ಭಗವಾನ್, ರಾಜೇಂದ್ರಸಿಂಗ್ ಬಾಬು, ಕೆ.ವಿ.ಜಯರಾಂ ಮುಂತಾದವರು ಪುಟ್ಟಣ್ಣ ನಂತೆ ಶ್ರೇಷ್ಠ ನಿರ್ದೇಶಕ ಸ್ಥಾನವನ್ನು ತುಂಬಿ ಯಶಸ್ವಿಯಾದರು. ಚಿತ್ರಬ್ರಹ್ಮ ಬಿರುದಾಂಕಿತ ಪುಟ್ಟಣ್ಣಕಣಗಾಲ್ ‘ಬೆಳ್ಳಿಮೋಡ’ದಿಂದ ‘ರಂಗ ನಾಯಕಿ’ವರೆಗೆ 18 ಚಿತ್ರಗಳಲ್ಲಿ ಹೀರೋನನ್ನು ಡಮ್ಮಿಗೊಳಿಸಿ ಅಥವ ನಾಯಕನೇ ಇಲ್ಲದಂತಾಗಿಸಿ, ನಾಯಕಿ ಪ್ರಧಾನ ಸಿನಿಮಾಗಳನ್ನೆ ನೀಡಿದರು.

ದೈವಲೀಲೆ ಎಂಬಂತೆ ಇವರ ಬಹುತೇಕ ಸಿನಿಮಾದ ನಾಯಕಿ ಪಾತ್ರವಹಿಸಿದ್ದವರಲ್ಲಿ ಓರ್ವನಟಿ ಮಾತ್ರ ಇವರ ನಿಜಜೀವನದಲ್ಲೂ ಎಂಟ್ರಿ ಕೊಟ್ಟು ಹಲವು ವರ್ಷ ಜತೆಗಿದ್ದ ನಂತರ ಈತನ ಹೃದಯಕ್ಕೆ ಘಾಸಿಮಾಡಿ ಹೋದರಂತೆ? ಈ ಕಾರಣವನ್ನೆ ಮುಂದಿಟ್ಟು ಏಕ್ದಂ ನಾಯಕ ಪ್ರಧಾನ ಸಿನಿಮ ‘ಮಾನಸ ಸರೋವರ’ ಮೂಲಕ ತಮ್ಮ ಒಳನೋವನ್ನ ತಕ್ಕಮಟ್ಟಿಗೆ ಸುಧಾರಿಸಿಕೊಂಡರಂತೆ.. ಪುಟ್ಟಣ್ಣನ ಜೀವಿತಾವಧಿಯಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂನ ಒಟ್ಟು 32 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಡಾ.ರಾಜ್ ರವರ ಮಲ್ಲಮ್ಮನಪವಾಡ, ಕರುಳಿನಕರೆ, ಸಾಕ್ಷಾತ್ಕಾರ, ಚಿತ್ರಗಳನ್ನೂ ನಿರ್ದೇಶಿಸಿದ್ದರು. ವಿಧಿವಿಲಾಸ ಬಲ್ಲವರಾರು? ಜಿಗುಪ್ಸೆಯಿಂದ ನೊಂದು ಬೆಂದ ಪುಟ್ಟಣ್ಣ 5.6.1985 ರಂದು ದೈವಾಧೀನರಾದ ನಂತರ ಇವರ ನಿರ್ದೇಶನ ದಲ್ಲಿ ಅಪೂರ್ಣವಾಗಿದ್ದ ಸಾವಿರ ಮೆಟ್ಟಿಲು ಮತ್ತು ಮಸಣದ ಹೂವು, ಎರಡೂ ಚಿತ್ರಗಳನ್ನ ಪೂರ್ಣಗೊಳಿಸಿದ್ದು ನಿರ್ದೇಶಕ ರವಿ.(ಕೆ.ಎಸ್.ಎಲ್.ಸ್ವಾಮಿ)

ಸಾವಿರ ಮೆಟ್ಟಿಲು ಗಿನ್ನಿಸ್ ದಾಖಲೆ…  ಪ್ರಪಂಚ ಚಿತ್ರರಂಗದ ಇತಿಹಾಸದಲ್ಲೆ ಶೇ.85ರಷ್ಟು ಚಿತ್ರೀಕರಣ ಮುಕ್ತಾಯಗೊಂಡ 40 ವರ್ಷದ ನಂತರ ಬಿಡುಗಡೆಯಾದ ಏಕೈಕ ಚಿತ್ರ. ಕಲ್ಯಾಣ ಕುಮಾರ್ ಜತೆಗೆ ನಟಿಸಿದ್ದ  ಪಂಡರೀಬಾಯಿ, ವಜ್ರಮುನಿ, ಸಂಗೀತನಿರ್ದೇಶಕ ವಿಜಯ ಭಾಸ್ಕರ್, ಛಾಯಾಗ್ರಾಹಕ ಡಿ.ವಿ.ರಾಜಾರಾಂ, ಸಾಹಿತಿ ಕಣಗಾಲಪ್ರ ಭಾಕರಶಾಸ್ತ್ರಿ, ಮುಂತಾದ ಎಲ್ಲರೂ ನಿಧನರಾಗಿದ್ದರು. ನಾಯಕಿ ಜಯಂ ತಿ ಮತ್ತು ನಿರ್ಮಾಪಕ ಬಸವೇಗೌಡ ಇಬ್ಬರು ಮಾತ್ರ ಬದುಕಿದ್ದರು. ಕಡೆಗೂ ಸಾವಿರ ಮೆಟ್ಟಿಲು ಸಿನಿಮಾದ ಬಾಕಿ ಉಳಿದಿದ್ದ ಚಿತ್ರೀಕರಣ ಹೇಗೋ ಮುಕ್ತಾಯಗೊಂಡು ಪುಟ್ಟಣ್ಣನವರ ಕನಸು ಈಡೇರಿತು. 2006ರಲ್ಲಿ ಸಾವಿರ ಮೆಟ್ಟಿಲು ಚಿತ್ರವು ಬಿಡುಗಡೆಯಾಗಿ “ಗಿನ್ನಿಸ್ ದಾಖಲೆ ಪುಸ್ತಕ” ಸೇರಿತು!

ಕಥಾಸಂಗಮ(1976) (ಹಂಗು+ಅತಿಥಿ+ ಮುನಿತಾಯಿ).. 3 ಪ್ರತ್ಯೇಕ ಕಥೆ-ಚಿತ್ರಕಥೆಗಳನ್ನ ಆಧರಿಸಿ ಮೂರೂ ಬೇರೆ ಬೇರೆ ತಾರಾಗಣ ತಂಡದಿಂದ ತಯಾರಾದ ಭಾರತದ ಪ್ರಪ್ರಥಮ 3-ಇನ್-1 ಸಿನಿಮ. ಈ ಚಿತ್ರದಲ್ಲಿ 28 ಮಂದಿ ಹಳೆ-ಹೊಸ ನಟ-ನಟಿಯರನ್ನ ಪರಿಚಯಿಸಿದ ಕೀರ್ತಿ ನಿರ್ಮಾಪಕ, ನಿರ್ದೇಶಕ ಪುಟ್ಟಣ್ಣ ಕಣಗಾಲರದು! ಇಂಥ ದಿಗ್ಗಜನ ಸಂಸ್ಮರಣೆ ಪ್ರಯುಕ್ತ ಬೆಂಗಳೂರಿನ ಟಾಕೀಸ್ ಒಂದಕ್ಕೆ ‘ಪುಟ್ಟಣ್ಣ ಚಿತ್ರಮಂದಿರ’ ಎಂದು ನಾಮಕರಣ ಮಾಡಲಾಗಿದೆ. ಪ್ರತಿ ವರ್ಷ ಕರ್ನಾಟಕ ಸರ್ಕಾರವು ಕನ್ನಡದ ಶ್ರೇಷ್ಠ ನಿರ್ದೇಶಕನಿಗೆ “ಪುಟ್ಟಣ್ಣ ಕಣಗಾಲ್ ಪ್ರಶಸ್ತಿ” ನೀಡುತ್ತಿರುವುದು ಶ್ಲಾಘನೀಯ! ದಕ್ಷಿಣ ಭಾರತದ ಖ್ಯಾತ ತಮಿಳು ನಿರ್ದೇಶಕ ಕೆ.ಬಾಲಚಂದರ್ ರವರು ಪುಟ್ಟಣ್ಣನವರನ್ನು ‘ಗುರುಗಳೇ’ ಎಂದು ಸಂಬೋಧಿಸುತ್ತಿದ್ದದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ!

ಎಸ್.ಆರ್.ಪುಟ್ಟಣ್ಣಕಣಗಾಲ್ ನಿರ್ದೇಶನದ ಫಿಲಂಸ್ ಗಳ ಬಗ್ಗೆ ನೋಡುವುದಾದರೆ, ಕನ್ನಡ ಚಿತ್ರಗಳು:(ಸಹ-ನಿರ್ದೇಶಕ: ಸತಿಶಕ್ತಿ, ಸ್ಕೂಲ್ ಮಾಸ್ಟರ್) ಬೆಳ್ಳಿಮೋಡ, ಬಿಳೀಹೆಂಡ್ತಿ, ಬೆಕ್ಕಿನಕಣ್ಣು, ಅಮೃತಘಳಿಗೆ, ಧರ್ಮಸೆರೆ, ಧರಣಿಮಂಡಲ ಮಧ್ಯದೊಳಗೆ, ಕಾಲೇಜುರಂಗ, ಗೆಜ್ಜೆಪೂಜೆ, ಕಪ್ಪುಬಿಳುಪು, ಕಥಾಸಂಗಮ, ಎಡಕಲ್ಲು ಗುಡ್ಡದ ಮೇಲೆ, ಮಾನಸ ಸರೋವರ, ಮಸಣದ ಹೂವು, ನಾಗರಹಾವು, ಉಪಾಸನೆ, ಪಡುವಾರಳ್ಳಿ ಪಾಂಡವರು, ಫಲಿತಾಂಶ, ರಂಗನಾಯಕಿ, ಶರಪಂಜರ, ಶುಭಮಂಗಳ, ಮಲ್ಲಮ್ಮನ ಪವಾಡ, ಕರುಳಿನಕರೆ, ಸಾಕ್ಷಾತ್ಕಾರ. ಮಲಯಾಳಂ ಚಿತ್ರಗಳು: ಚಟ್ಟತ್ತಿ, ಕಳಂಜುಕಟ್ಟಿಥಂಗಮ್, ಪೂಚ್ಚಕ್ಕಣ್ಣೀ, ಸ್ವಪ್ನಭೂಮಿ, ಟೀಚರಮ್ಮ. ತಮಿಳು ಚಿತ್ರಗಳು: ಇರುಳುಂ ಒಳಿಯುಂ, ಸುದರುಂ ಸೂರವಳಿಯುಂ, ಟೀಚರಮ್ಮ. ಹಿಂದಿ ಚಿತ್ರಗಳು: ಜಹ್ರಿಲಾಇನ್ಸಾನ್ (ನಾಗರಹಾವು), ಹಂಪಾಂಚ್ (ಪಡುವಾರಳ್ಳಿ ಪಾಂಡವರು).

admin
the authoradmin

Leave a Reply

Translate to any language you want